Home / ಕವನ / ಕವಿತೆ / ಕತ್ತಲ ರಾಣಿ

ಕತ್ತಲ ರಾಣಿ

ನಟ್ಟ ನಡು ಇರುಳಲ್ಲಿ ಅರಳಿದ ಹೂವು
ನೆಟ್ಟ ಬಾವುಟದಲ್ಲಿ ಹೆಪ್ಪೊಡೆದ ನೋವು
ನಡುವೆ ಉರಳುವ ಚಕ್ರ ಚಲನೆ
ಸಾವಯವ ಮೈಮಾಟದಲ್ಲಿ
ಭಾವ ಬುದ್ಧಿಗಳ ಕೂಟದಲ್ಲಿ
ಕತ್ತಲ ರಾಣಿಯ ಮಿಂಚಿನ ಪ್ರತಿಮೆ!

ಕುಶಲವೆ ನನ್ನ ಕತ್ತಲ ರಾಣಿ?
ವಸಾಹತುವಿನ ಹುತ್ತದಲ್ಲಿ
ವಿಷವಿಲ್ಲದ ಚಿತ್ತದಲ್ಲಿ
ಚಿತ್ತಾರ ಬಿಡಿಸಿದ್ದು ಹೇಗೆ ನೀನು!
ಅವರು ಕೊಟ್ಟ ಅಂಗಿ ಎಸೆದು
ಹೊಸ ಹುಟ್ಟಿನ ಪುಂಗಿ ಮಿಡಿದು
ಕಾಯುತ್ತಿದ್ದೆ ನಿನಗಾಗಿ ನಾನು.

ಕತ್ತಲ ಕೋಣೆಯಲ್ಲಿ ಕತ್ತಲದವಳೆ
ಪರಂಗಿಯ ರಂಗಿನಾಟದಿಂದ ಹೊರಬಂದವಳೆ
ಮಿಂಚಲ್ಲಿ ಮಿಂದು ನಗೆಯಲ್ಲಿ ನಿಂದವಳೆ
ನೀ ನಕ್ಕ ಚುಕ್ಕಿ ಚಂದ್ರಮ ನಿನ್ನದೆ?
ನಡು ಬಳಸುವ ಸ್ವಾತಂತ್ರ ನನ್ನದೆ?

ಹೇಳು ಕತ್ತಲ ರಾಣಿ ಹೇಳು
ಸ್ವಾತಂತ್ರ್ಯವೆನ್ನುವುದು ಹುಸಿನಗೆಯ ವಯಾರವೆ?
ನಡುರಾತ್ರಿಯ ಕೃತಕ ಸಂಚಾರವೆ?

ಕಟ್ಟು ಕಳಚಿದ ಕತ್ತಲ ರಾಣಿಗೆ
ಈ ನಾಡ ಒಡೆಯರು ಕಟ್ಟಿದ ಅರಮನೆ
ಕಂಗೊಳಿಸುವ ಕೆಳಮನೆ-ಮೇಲ್ಮನೆ!
ಬೇಡವೆ ನಿನಗೆ ಬೆಳಕಿನ ಬಡ-
ವರ ಮನೆ; ಸಂಕಟದ ಸುಳಿಯಲ್ಲಿ
ಉಕ್ಕುವ ಹಕ್ಕಿನ ಮನ.

ವಸಾಹತು ಹುತ್ತಕ್ಕಿದು ಹೊಸರೂಪವೇ ಗೆಳತಿ?
ನಡುರಾತ್ರಿಯ ಹುಟ್ಟಿಗೆ ಯಾರು ಪತಿ, ಯಾರು ಸತಿ!
ಬೆವರು ಬುಸುಗುಡುತ್ತಿದೆ ಕತ್ತಲಲ್ಲಿ
ನಿನ್ನಂತೆಯೇ ವಿಷವಿಲ್ಲದ ಚಿತ್ತದಲ್ಲಿ.

ಇಂದು ನೆನ್ನೆಗಳ ನಡುವಿನ ಈ ಮುಗಿಲು
ಹಗಲಲ್ಲಿ ಬೆಳಕು ಹುಡುಕುವ ಬದಲು
ನಿನ್ನೊಡಲ ಕಡೆದಾಗ ಕಳೆದೀತು ಬೇಗೆ
ಕತ್ತಲು ಬೆತ್ತಲಾಗದೆ ಬೆಳಕು ಬಂದೀತು ಹೇಗೆ?
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...