Home / ಕವನ / ಕವಿತೆ / ಕತ್ತಲ ರಾಣಿ

ಕತ್ತಲ ರಾಣಿ

ನಟ್ಟ ನಡು ಇರುಳಲ್ಲಿ ಅರಳಿದ ಹೂವು
ನೆಟ್ಟ ಬಾವುಟದಲ್ಲಿ ಹೆಪ್ಪೊಡೆದ ನೋವು
ನಡುವೆ ಉರಳುವ ಚಕ್ರ ಚಲನೆ
ಸಾವಯವ ಮೈಮಾಟದಲ್ಲಿ
ಭಾವ ಬುದ್ಧಿಗಳ ಕೂಟದಲ್ಲಿ
ಕತ್ತಲ ರಾಣಿಯ ಮಿಂಚಿನ ಪ್ರತಿಮೆ!

ಕುಶಲವೆ ನನ್ನ ಕತ್ತಲ ರಾಣಿ?
ವಸಾಹತುವಿನ ಹುತ್ತದಲ್ಲಿ
ವಿಷವಿಲ್ಲದ ಚಿತ್ತದಲ್ಲಿ
ಚಿತ್ತಾರ ಬಿಡಿಸಿದ್ದು ಹೇಗೆ ನೀನು!
ಅವರು ಕೊಟ್ಟ ಅಂಗಿ ಎಸೆದು
ಹೊಸ ಹುಟ್ಟಿನ ಪುಂಗಿ ಮಿಡಿದು
ಕಾಯುತ್ತಿದ್ದೆ ನಿನಗಾಗಿ ನಾನು.

ಕತ್ತಲ ಕೋಣೆಯಲ್ಲಿ ಕತ್ತಲದವಳೆ
ಪರಂಗಿಯ ರಂಗಿನಾಟದಿಂದ ಹೊರಬಂದವಳೆ
ಮಿಂಚಲ್ಲಿ ಮಿಂದು ನಗೆಯಲ್ಲಿ ನಿಂದವಳೆ
ನೀ ನಕ್ಕ ಚುಕ್ಕಿ ಚಂದ್ರಮ ನಿನ್ನದೆ?
ನಡು ಬಳಸುವ ಸ್ವಾತಂತ್ರ ನನ್ನದೆ?

ಹೇಳು ಕತ್ತಲ ರಾಣಿ ಹೇಳು
ಸ್ವಾತಂತ್ರ್ಯವೆನ್ನುವುದು ಹುಸಿನಗೆಯ ವಯಾರವೆ?
ನಡುರಾತ್ರಿಯ ಕೃತಕ ಸಂಚಾರವೆ?

ಕಟ್ಟು ಕಳಚಿದ ಕತ್ತಲ ರಾಣಿಗೆ
ಈ ನಾಡ ಒಡೆಯರು ಕಟ್ಟಿದ ಅರಮನೆ
ಕಂಗೊಳಿಸುವ ಕೆಳಮನೆ-ಮೇಲ್ಮನೆ!
ಬೇಡವೆ ನಿನಗೆ ಬೆಳಕಿನ ಬಡ-
ವರ ಮನೆ; ಸಂಕಟದ ಸುಳಿಯಲ್ಲಿ
ಉಕ್ಕುವ ಹಕ್ಕಿನ ಮನ.

ವಸಾಹತು ಹುತ್ತಕ್ಕಿದು ಹೊಸರೂಪವೇ ಗೆಳತಿ?
ನಡುರಾತ್ರಿಯ ಹುಟ್ಟಿಗೆ ಯಾರು ಪತಿ, ಯಾರು ಸತಿ!
ಬೆವರು ಬುಸುಗುಡುತ್ತಿದೆ ಕತ್ತಲಲ್ಲಿ
ನಿನ್ನಂತೆಯೇ ವಿಷವಿಲ್ಲದ ಚಿತ್ತದಲ್ಲಿ.

ಇಂದು ನೆನ್ನೆಗಳ ನಡುವಿನ ಈ ಮುಗಿಲು
ಹಗಲಲ್ಲಿ ಬೆಳಕು ಹುಡುಕುವ ಬದಲು
ನಿನ್ನೊಡಲ ಕಡೆದಾಗ ಕಳೆದೀತು ಬೇಗೆ
ಕತ್ತಲು ಬೆತ್ತಲಾಗದೆ ಬೆಳಕು ಬಂದೀತು ಹೇಗೆ?
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...