Home / ಕವನ / ಕವಿತೆ / ನವಿಲು ಗದ್ದೆ

ನವಿಲು ಗದ್ದೆ

ಯಾರು ಕೊಯ್ದರೊ ಬೆಳೆಯ
ನೆನ್ನೆ ನಗುತ್ತಿದ್ದ ನವಿಲುಗದ್ದೆಯಲ್ಲಿ?
ರೆಪ್ಪೆ ಮುಚ್ಚಿದರಿಲ್ಲಿ ಕಪ್ಪೆ ತುಂಬಿದ ಬಾವಿ
ಸಿಪ್ಪೆ ಸುಲಿಯುತ್ತಿದೆ ನೆನಪು ನಿದ್ದೆಯಲ್ಲಿ.

ಕನಸುಗೊಬ್ಬರದಲ್ಲಿ ತೆನೆಯೊಡೆದ ಮನಸನ್ನು
ನೆತ್ತರಲಿ ತೊಯ್ದವರು ಯಾರೊ ಕಾಣೆ
ಬೆವರು ಬಸಿಯುತ್ತ ಬೆಳೆದಂಥ ಬೆಳಕನ್ನು
ಕತ್ತಲಲಿ ಕದ್ದವರು ಯಾರೊ ಕಾಣೆ.

ಕತ್ತಿಕಾಳಗದಲ್ಲಿ ತತ್ತಿಯಿಟ್ಟಿತು ಸೇಡು
ಸತ್ತುಹೋಯಿತು ಪ್ರೀತಿ ಮಣ್ಣಿನಲ್ಲಿ
ಬೀದಿಬೀದಿಯ ತುಂಬ ಹರಿದು ಬಂದಿತು ನೋವು
ಹೆಪ್ಪುಗಟ್ಟಿತು ಇಲ್ಲಿ ಕಣ್ಣಿನಲ್ಲಿ.

ಹರಿವ ನದಿಯಲ್ಲಿ ಬೆವರು, ಉರಿವ ಬಿಸಿಲಲ್ಲಿ ಬೆವರು
ಕವಿದ ಕತ್ತಲೆಯಲ್ಲಿ, ಸೂರ್ಯ ಬೆತ್ತಲೆಯಲ್ಲಿ
ಎಲ್ಲಿ ನೋಡಿದರಲ್ಲಿ ಬೆವರ ಬರಹ
ಜೀವಸಾಗರವನ್ನು ಕುಡಿವ ದಾಹ.

ಬೆವರು ಬಂದೀತೆಂದು ಬತ್ತಿ ಹೋಗುತ್ತಿದೆ-
ಹತ್ತಿ ಉರಿಯುವ ಹುತ್ತ ಈ ಜೀವಸಾಗರ;
ಒಂದೊಂದು ಅಲೆಯು ಮಿಡಿನಾಗರ!

ಇಲ್ಲ, ಬೆಳಗಿನ ಜಾವಕ್ಕೆ ಕಾಯುವ ಬೆವರಿಗೆ
ಇಲ್ಲಿ ಜೀವ ಕೊಡುವುದಿಲ್ಲ.
ಸೂರ್ಯ ಕಣ್ತೆರೆದು ನೋಡುವುದಿಲ್ಲ;
ಸಮುದ್ರ ಕಡೆಯುವುದಿಲ್ಲ.
ಅಮೃತದ ಹನಿ ಉಕ್ಕುವುದಿಲ್ಲ.
ಕಡೆಗೆ ಬೇಡಿದರೂ ಬರುವುದಿಲ್ಲ-
ಒಂದು ಹನಿ ಕಣ್ಣೀರು;
ಬೆವರ ಬೆತ್ತಲು ಮಾಡಿ
ಕದ ಮುಚ್ಚಿ ಕೂತ ಕತ್ತಲ ಕಾರುಬಾರು.

ಬನ್ನಿ ಗೆಳೆಯರೇ ಕತ್ತಲಲ್ಲೇ ಬೆಳೆಯೋಣ
ನಮ್ಮ ನಮ್ಮ ಮನಸುಗಳನ್ನು
ನಮ್ಮ ನಮ್ಮ ಕನಸುಗಳನ್ನು
ಗಾಯಗೊಂಡ ಹೂವುಗಳನ್ನು
ಸಾಯಗೊಡದ ನೋವುಗಳನ್ನು
ಬೆಳೆಯೋಣ, ಬೆಳೆಯುತ್ತ ಬೆಳೆಯುತ್ತ
ಬೆಳಕಾಗೋಣ-
ನವಿಲುಗದ್ದೆಯ ಗರಿಯಾಗೋಣ.
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...