Home / ಕವನ / ಕವಿತೆ / ನವಿಲು ಗದ್ದೆ

ನವಿಲು ಗದ್ದೆ

ಯಾರು ಕೊಯ್ದರೊ ಬೆಳೆಯ
ನೆನ್ನೆ ನಗುತ್ತಿದ್ದ ನವಿಲುಗದ್ದೆಯಲ್ಲಿ?
ರೆಪ್ಪೆ ಮುಚ್ಚಿದರಿಲ್ಲಿ ಕಪ್ಪೆ ತುಂಬಿದ ಬಾವಿ
ಸಿಪ್ಪೆ ಸುಲಿಯುತ್ತಿದೆ ನೆನಪು ನಿದ್ದೆಯಲ್ಲಿ.

ಕನಸುಗೊಬ್ಬರದಲ್ಲಿ ತೆನೆಯೊಡೆದ ಮನಸನ್ನು
ನೆತ್ತರಲಿ ತೊಯ್ದವರು ಯಾರೊ ಕಾಣೆ
ಬೆವರು ಬಸಿಯುತ್ತ ಬೆಳೆದಂಥ ಬೆಳಕನ್ನು
ಕತ್ತಲಲಿ ಕದ್ದವರು ಯಾರೊ ಕಾಣೆ.

ಕತ್ತಿಕಾಳಗದಲ್ಲಿ ತತ್ತಿಯಿಟ್ಟಿತು ಸೇಡು
ಸತ್ತುಹೋಯಿತು ಪ್ರೀತಿ ಮಣ್ಣಿನಲ್ಲಿ
ಬೀದಿಬೀದಿಯ ತುಂಬ ಹರಿದು ಬಂದಿತು ನೋವು
ಹೆಪ್ಪುಗಟ್ಟಿತು ಇಲ್ಲಿ ಕಣ್ಣಿನಲ್ಲಿ.

ಹರಿವ ನದಿಯಲ್ಲಿ ಬೆವರು, ಉರಿವ ಬಿಸಿಲಲ್ಲಿ ಬೆವರು
ಕವಿದ ಕತ್ತಲೆಯಲ್ಲಿ, ಸೂರ್ಯ ಬೆತ್ತಲೆಯಲ್ಲಿ
ಎಲ್ಲಿ ನೋಡಿದರಲ್ಲಿ ಬೆವರ ಬರಹ
ಜೀವಸಾಗರವನ್ನು ಕುಡಿವ ದಾಹ.

ಬೆವರು ಬಂದೀತೆಂದು ಬತ್ತಿ ಹೋಗುತ್ತಿದೆ-
ಹತ್ತಿ ಉರಿಯುವ ಹುತ್ತ ಈ ಜೀವಸಾಗರ;
ಒಂದೊಂದು ಅಲೆಯು ಮಿಡಿನಾಗರ!

ಇಲ್ಲ, ಬೆಳಗಿನ ಜಾವಕ್ಕೆ ಕಾಯುವ ಬೆವರಿಗೆ
ಇಲ್ಲಿ ಜೀವ ಕೊಡುವುದಿಲ್ಲ.
ಸೂರ್ಯ ಕಣ್ತೆರೆದು ನೋಡುವುದಿಲ್ಲ;
ಸಮುದ್ರ ಕಡೆಯುವುದಿಲ್ಲ.
ಅಮೃತದ ಹನಿ ಉಕ್ಕುವುದಿಲ್ಲ.
ಕಡೆಗೆ ಬೇಡಿದರೂ ಬರುವುದಿಲ್ಲ-
ಒಂದು ಹನಿ ಕಣ್ಣೀರು;
ಬೆವರ ಬೆತ್ತಲು ಮಾಡಿ
ಕದ ಮುಚ್ಚಿ ಕೂತ ಕತ್ತಲ ಕಾರುಬಾರು.

ಬನ್ನಿ ಗೆಳೆಯರೇ ಕತ್ತಲಲ್ಲೇ ಬೆಳೆಯೋಣ
ನಮ್ಮ ನಮ್ಮ ಮನಸುಗಳನ್ನು
ನಮ್ಮ ನಮ್ಮ ಕನಸುಗಳನ್ನು
ಗಾಯಗೊಂಡ ಹೂವುಗಳನ್ನು
ಸಾಯಗೊಡದ ನೋವುಗಳನ್ನು
ಬೆಳೆಯೋಣ, ಬೆಳೆಯುತ್ತ ಬೆಳೆಯುತ್ತ
ಬೆಳಕಾಗೋಣ-
ನವಿಲುಗದ್ದೆಯ ಗರಿಯಾಗೋಣ.
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...