Home / ಕವನ / ಕವಿತೆ / ನೀರಿರದ ಮೋಡಕ್ಕೆ

ನೀರಿರದ ಮೋಡಕ್ಕೆ

ಇಲ್ಲಿದ್ದವರೆ ನೀವು
ಹಿಂದೆ ಒಮ್ಮೆ
ಈಗ ಅಲ್ಲಿದ್ದೀರಿ ದೂರ, ಅಷ್ಟೆ
ಎಲ್ಲೋ ಮೇಲಿದ್ದರೂ,
ಇಲ್ಲದ ಗಾಂಬೀರ್‍ಯ, ಹೊತ್ತು ದಿಕ್ಕಿಂದ ದಿಕ್ಕಿಗೆ
ಒಂದೇ ಸಮನೆ ನೀವು
ಠಳಾಯಿಸುತ್ತಿದ್ದರೂ
ನಿಮ್ಮ ಗುರುತಿದೆ ನಮಗೆ ಖಿಚಿತವಾಗಿ
ಹೇಳಬೇಕೆ ಪೂರ್ವಕಥೆಯನೆಲ್ಲ
ಉಚಿತವಾಗಿ ?

ಇಲ್ಲಿದ್ದಾಗ ನೀವು
ತುಂಬಿಕೊಂಡದ್ದು ಹೇಗೆ, ಎಲ್ಲ ಗೊತ್ತಲ್ಲ !
ಎಲ್ಲ ದಿಕ್ಕಿನಿಂದಲೂ ತೊರೆ ಹಳ್ಳ ಕೊಳ್ಳ
ಕೂಡಿ ಹರಿದವು ಒಂದೆ ಮೈಯಾಗಿ ನಿಮ್ಮೆಡೆಗೆ,
ನೀವಿದ್ದ ತಗ್ಗಿಗೆ.
ಬಂದು ತಲುಪಿದ್ದೆಲ್ಲ ನಿಮ್ಮದೆಂದಾಯಿತು,
ಡೊಡ್ಡ ತಗ್ಗಾಗಿದ್ದೆ ನಿಮಗೆ ವರವಾಯಿತು.

ಸಲ್ಲದ್ದು ಬೇಕಾದಷ್ಟಿತ್ತು ನಿಮ್ಮಲ್ಲಿ
ತುಂಬಿಕೊಂಡಿದ್ದರೂ ದೊಡ್ಡಕಡಲಲ್ಲಿ
ಯಾರಿಗೂ ಹನಿ ನೀರು
ಕೊಡಲಾಗಲಿಲ್ಲ
ನೀವು ಇದ್ದದ್ದೆ ಹಾಗೆ, ಕೊಡುವಂತಿರಲಿಲ್ಲ
ಉಪ್ಪುನೀರನ್ನು ಯಾವ ಬೆಪ್ಪ ಕುಡಿದಾನು ?
ಎಷ್ಟೇ ವಿಶಾಲವಾಗಿ ಕಂಡರೂ ಏನಂತೆ
ಚಿಕ್ಕ ಕೆರೆಗಿಂತಲೂ,
ನಲ್ಲಿಬಾಯಲ್ಲಿ ಬರುವ ಕಿರುಬೆರಳ ದಪ್ಪದ
ಜಲಧಾರೆಗಿಂತಲೂ ಕನಿಷ್ಠವಾಗಿದ್ದಿರಿ,
ಬಾಯಾರಿದವರನೂ ತಣಿಸಲಾಗದ ಹಾಗೆ
ಅನಿಷ್ಟವಾಗಿದ್ದಿರಿ.
ಸುತ್ತ ಮುತ್ತ ಎಲ್ಲ ತುರುಗಿಕೊಂಡಿದ್ದರೂ
ಮುಟ್ಟಲಾಗದ ನಿಮ್ಮ
ಉಪ್ಪು ಬದುಕಿಗೆ ಮರುಗಿ
ಕರಗಿದನು ಭಾನು.
ಪ್ರಖರ ಬಿಸಿಲಿನ ಶಾಖ ಬಿದ್ದು ಮೇಲೆದ್ದಿರಿ ;
ಅದೃಷ್ಟವಿದ್ದುದರಿಂದ
ಗಾಳಿಯ ಬೆನ್ನು ಹತ್ತಿ
ನಿಮ್ಮನ್ನೇ ಬೆಚ್ಚಿಸುವ ಬಾರೀ ಎತ್ತರಕೆ
ಯಾರೂ ಕಾಣದ ಹಾಗೆ
ಹೋಗಿ ಸೇರಿದಿರಿ.
ಈಗ ಹರಡಿದ್ದೀರಿ ಆಗಸದ ತುಂಬ
ಆದರೇನು ?
ಬೆರಗಾಗುವರು ಯಾರು ಸುಳ್ಳು ದಂಭಕ್ಕೆ ?
ನೀರೇ ಇಲ್ಲದ ಖಾಲಿ ಮುಗಿಲ ಠೀವಿಯನು
ಬಯ್ಯುವವರೇ ಎಲ್ಲ – “ಏನೆಂದರೇನೂ ಇಲ್ಲ”

ತೇವವಿಲ್ಲದ ಮುಗಿಲು ನೀಲಿ ಬಾಲಿನ ಮೈಗೆ
ತೊನ್ನು ಎನುವಂತಿದೆ.
ಒಳಗೆ ಜಲವಿಲ್ಲ, ಕೊಡುವ ಬಲವಿಲ್ಲ,
ಕೆಳಗೆ ದಡದಡ ಸುರಿದು
ಮಣ್ಣೊಳಗೆ ಇಳಿದು
ಬೆಳೆವ ಕಸುವಿಲ್ಲ.
ಎಳೆಗಾಳಿ, ತೆಳುಗಾಳಿ ಎಂಥ ಕ್ಷುದ್ರವೆ ಇರಲಿ
ಅದು ಎಳೆದ ದಿಕ್ಕಿಗೇ ಇದರ ಓಟ,
ಆಡಿಸುತ್ತಿದ್ದಾರೆ ಎಲ್ಲ ಆಟ!

ಇಲ್ಲದ್ದು ಹೋಗಿ ಇರುವುದೆಂದು ಬಂದೀತೋ
ಎಂದು ಕೊರಗುತ್ತಿದೆ ಕೆಳಗೆ ಜನವೆಲ್ಲ.
ಜಲಸುರಿವ ಮೋಡಕ್ಕೆ ಕಾಯುತ್ತ ನಿಂತಿವೆ
ಬಾಯ್ತೆರೆದುಕೊಂಡಿರುವ ಹಳ್ಳ ಕೊಳ್ಳ!
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...