ನೀರಿರದ ಮೋಡಕ್ಕೆ

ಇಲ್ಲಿದ್ದವರೆ ನೀವು
ಹಿಂದೆ ಒಮ್ಮೆ
ಈಗ ಅಲ್ಲಿದ್ದೀರಿ ದೂರ, ಅಷ್ಟೆ
ಎಲ್ಲೋ ಮೇಲಿದ್ದರೂ,
ಇಲ್ಲದ ಗಾಂಬೀರ್‍ಯ, ಹೊತ್ತು ದಿಕ್ಕಿಂದ ದಿಕ್ಕಿಗೆ
ಒಂದೇ ಸಮನೆ ನೀವು
ಠಳಾಯಿಸುತ್ತಿದ್ದರೂ
ನಿಮ್ಮ ಗುರುತಿದೆ ನಮಗೆ ಖಿಚಿತವಾಗಿ
ಹೇಳಬೇಕೆ ಪೂರ್ವಕಥೆಯನೆಲ್ಲ
ಉಚಿತವಾಗಿ ?

ಇಲ್ಲಿದ್ದಾಗ ನೀವು
ತುಂಬಿಕೊಂಡದ್ದು ಹೇಗೆ, ಎಲ್ಲ ಗೊತ್ತಲ್ಲ !
ಎಲ್ಲ ದಿಕ್ಕಿನಿಂದಲೂ ತೊರೆ ಹಳ್ಳ ಕೊಳ್ಳ
ಕೂಡಿ ಹರಿದವು ಒಂದೆ ಮೈಯಾಗಿ ನಿಮ್ಮೆಡೆಗೆ,
ನೀವಿದ್ದ ತಗ್ಗಿಗೆ.
ಬಂದು ತಲುಪಿದ್ದೆಲ್ಲ ನಿಮ್ಮದೆಂದಾಯಿತು,
ಡೊಡ್ಡ ತಗ್ಗಾಗಿದ್ದೆ ನಿಮಗೆ ವರವಾಯಿತು.

ಸಲ್ಲದ್ದು ಬೇಕಾದಷ್ಟಿತ್ತು ನಿಮ್ಮಲ್ಲಿ
ತುಂಬಿಕೊಂಡಿದ್ದರೂ ದೊಡ್ಡಕಡಲಲ್ಲಿ
ಯಾರಿಗೂ ಹನಿ ನೀರು
ಕೊಡಲಾಗಲಿಲ್ಲ
ನೀವು ಇದ್ದದ್ದೆ ಹಾಗೆ, ಕೊಡುವಂತಿರಲಿಲ್ಲ
ಉಪ್ಪುನೀರನ್ನು ಯಾವ ಬೆಪ್ಪ ಕುಡಿದಾನು ?
ಎಷ್ಟೇ ವಿಶಾಲವಾಗಿ ಕಂಡರೂ ಏನಂತೆ
ಚಿಕ್ಕ ಕೆರೆಗಿಂತಲೂ,
ನಲ್ಲಿಬಾಯಲ್ಲಿ ಬರುವ ಕಿರುಬೆರಳ ದಪ್ಪದ
ಜಲಧಾರೆಗಿಂತಲೂ ಕನಿಷ್ಠವಾಗಿದ್ದಿರಿ,
ಬಾಯಾರಿದವರನೂ ತಣಿಸಲಾಗದ ಹಾಗೆ
ಅನಿಷ್ಟವಾಗಿದ್ದಿರಿ.
ಸುತ್ತ ಮುತ್ತ ಎಲ್ಲ ತುರುಗಿಕೊಂಡಿದ್ದರೂ
ಮುಟ್ಟಲಾಗದ ನಿಮ್ಮ
ಉಪ್ಪು ಬದುಕಿಗೆ ಮರುಗಿ
ಕರಗಿದನು ಭಾನು.
ಪ್ರಖರ ಬಿಸಿಲಿನ ಶಾಖ ಬಿದ್ದು ಮೇಲೆದ್ದಿರಿ ;
ಅದೃಷ್ಟವಿದ್ದುದರಿಂದ
ಗಾಳಿಯ ಬೆನ್ನು ಹತ್ತಿ
ನಿಮ್ಮನ್ನೇ ಬೆಚ್ಚಿಸುವ ಬಾರೀ ಎತ್ತರಕೆ
ಯಾರೂ ಕಾಣದ ಹಾಗೆ
ಹೋಗಿ ಸೇರಿದಿರಿ.
ಈಗ ಹರಡಿದ್ದೀರಿ ಆಗಸದ ತುಂಬ
ಆದರೇನು ?
ಬೆರಗಾಗುವರು ಯಾರು ಸುಳ್ಳು ದಂಭಕ್ಕೆ ?
ನೀರೇ ಇಲ್ಲದ ಖಾಲಿ ಮುಗಿಲ ಠೀವಿಯನು
ಬಯ್ಯುವವರೇ ಎಲ್ಲ – “ಏನೆಂದರೇನೂ ಇಲ್ಲ”

ತೇವವಿಲ್ಲದ ಮುಗಿಲು ನೀಲಿ ಬಾಲಿನ ಮೈಗೆ
ತೊನ್ನು ಎನುವಂತಿದೆ.
ಒಳಗೆ ಜಲವಿಲ್ಲ, ಕೊಡುವ ಬಲವಿಲ್ಲ,
ಕೆಳಗೆ ದಡದಡ ಸುರಿದು
ಮಣ್ಣೊಳಗೆ ಇಳಿದು
ಬೆಳೆವ ಕಸುವಿಲ್ಲ.
ಎಳೆಗಾಳಿ, ತೆಳುಗಾಳಿ ಎಂಥ ಕ್ಷುದ್ರವೆ ಇರಲಿ
ಅದು ಎಳೆದ ದಿಕ್ಕಿಗೇ ಇದರ ಓಟ,
ಆಡಿಸುತ್ತಿದ್ದಾರೆ ಎಲ್ಲ ಆಟ!

ಇಲ್ಲದ್ದು ಹೋಗಿ ಇರುವುದೆಂದು ಬಂದೀತೋ
ಎಂದು ಕೊರಗುತ್ತಿದೆ ಕೆಳಗೆ ಜನವೆಲ್ಲ.
ಜಲಸುರಿವ ಮೋಡಕ್ಕೆ ಕಾಯುತ್ತ ನಿಂತಿವೆ
ಬಾಯ್ತೆರೆದುಕೊಂಡಿರುವ ಹಳ್ಳ ಕೊಳ್ಳ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ತೆರಿಗೆ ಮತ್ತು ತೇರು
Next post ನೂರು ನೋವ

ಸಣ್ಣ ಕತೆ

  • ಸ್ವಯಂಪ್ರಕಾಶ

    ಇಸ್ತ್ರೀ ಇಲ್ಲದ ಸೀರೆ, ಬಾಚದ ತಲೆ... ಕೈಯಲ್ಲಿ ಚೀಲದ ತುಂಬ ತರ್ಕಾರಿಗಳೊಂದಿಗೆ ಮಾರುಕಟ್ಟೆಯಿಂದ ಹೊರಗೆ ಬರುವುದು ಭ್ರಮರೆ’ಯೇ... ಕಂಡು ತುಂಬಾ ಆಶ್ಚರ್ಯವಾಯಿತು. ರೋಡಿನ ಈ ಕಡೆ ಕಾರು… Read more…

  • ವ್ಯವಸ್ಥೆ

    ಮಗಳ ಮದುವೆ ಪಿಕ್ಸ್ ಆಗಿದ್ದರಿಂದ ದೊಡ್ಡ ತಲೆ ಭಾರ ಇಳಿದಂತಾಗಿತ್ತು. ಮದುವೆ ಮುಂದಿನ ತಿಂಗಳ ಕೊನೆಯ ವಾರವೆಂದು ದಿನಾಂಕವನ್ನೂ ನಿಗದಿಪಡಿಸಲಾಗಿತ್ತು. ಗಂಡಿನವರ ತರಾತುರಿಗೆ ಒಪ್ಪಲೇಬೇಕಾದ ಪರಿಸ್ಥಿತಿ ನನ್ನದು.… Read more…

  • ಕೊಳಲು ಉಳಿದಿದೆ

    ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…

  • ಎರಡು…. ದೃಷ್ಟಿ!

    ದೀಪಾವಳಿಯು ಸಮೀಪಿಸಿದ್ದಿತು. ದೀಪಾವಳಿಯನ್ನು ನಾವು ಪಂಚಾಗ ನೋಡದೆ ತಿಳಿದುಕೊಳ್ಳಬಹುದು. ಅದು ಹೇಗೆ? ದೀಪಾವಳಿ ಪೂರ್ವರಂಗದ ಸುಳಿವು ನಮಗೇ ಗೊತ್ತೇ ಆಗುವದು. ಮನೆಯಲ್ಲಿ ಕರಚೀ ಕಾಯಿ, ಚಿರೋಟಿಗಳನ್ನು ಕರಿಯುವ… Read more…

  • ಮೇಷ್ಟ್ರು ವೆಂಕಟಸುಬ್ಬಯ್ಯ

    ಪ್ರಕರಣ ೧೨ ಜನಾರ್ದನಪುರಕ್ಕೆ ರಂಗಣ್ಣ ಹಿಂದಿರುಗಿದ್ದಾಯಿತು. ತಿಮ್ಮರಾಯಪ್ಪ ಹೇಳಿ ಕೊಟ್ಟಿದ್ದ ಹಾಗೆ ಕಲ್ಲೇಗೌಡರಿಗೆ ಕಾಗದಗಳನ್ನು ಬರೆದದ್ದೂ ಆಯಿತು. ಕಡೆಗೆ ರಿಜಿಸ್ಟರ್ಡ್ ಕಾಗದವನ್ನೂ ಅದಕ್ಕೆ ಒಂದು ಜ್ಞಾಪಕದೋಲೆಯನ್ನೂ ಕಳಿಸಿದ್ದಾಯಿತು.… Read more…