Home / ಕವನ / ಕವಿತೆ / ನೀರಿರದ ಮೋಡಕ್ಕೆ

ನೀರಿರದ ಮೋಡಕ್ಕೆ

ಇಲ್ಲಿದ್ದವರೆ ನೀವು
ಹಿಂದೆ ಒಮ್ಮೆ
ಈಗ ಅಲ್ಲಿದ್ದೀರಿ ದೂರ, ಅಷ್ಟೆ
ಎಲ್ಲೋ ಮೇಲಿದ್ದರೂ,
ಇಲ್ಲದ ಗಾಂಬೀರ್‍ಯ, ಹೊತ್ತು ದಿಕ್ಕಿಂದ ದಿಕ್ಕಿಗೆ
ಒಂದೇ ಸಮನೆ ನೀವು
ಠಳಾಯಿಸುತ್ತಿದ್ದರೂ
ನಿಮ್ಮ ಗುರುತಿದೆ ನಮಗೆ ಖಿಚಿತವಾಗಿ
ಹೇಳಬೇಕೆ ಪೂರ್ವಕಥೆಯನೆಲ್ಲ
ಉಚಿತವಾಗಿ ?

ಇಲ್ಲಿದ್ದಾಗ ನೀವು
ತುಂಬಿಕೊಂಡದ್ದು ಹೇಗೆ, ಎಲ್ಲ ಗೊತ್ತಲ್ಲ !
ಎಲ್ಲ ದಿಕ್ಕಿನಿಂದಲೂ ತೊರೆ ಹಳ್ಳ ಕೊಳ್ಳ
ಕೂಡಿ ಹರಿದವು ಒಂದೆ ಮೈಯಾಗಿ ನಿಮ್ಮೆಡೆಗೆ,
ನೀವಿದ್ದ ತಗ್ಗಿಗೆ.
ಬಂದು ತಲುಪಿದ್ದೆಲ್ಲ ನಿಮ್ಮದೆಂದಾಯಿತು,
ಡೊಡ್ಡ ತಗ್ಗಾಗಿದ್ದೆ ನಿಮಗೆ ವರವಾಯಿತು.

ಸಲ್ಲದ್ದು ಬೇಕಾದಷ್ಟಿತ್ತು ನಿಮ್ಮಲ್ಲಿ
ತುಂಬಿಕೊಂಡಿದ್ದರೂ ದೊಡ್ಡಕಡಲಲ್ಲಿ
ಯಾರಿಗೂ ಹನಿ ನೀರು
ಕೊಡಲಾಗಲಿಲ್ಲ
ನೀವು ಇದ್ದದ್ದೆ ಹಾಗೆ, ಕೊಡುವಂತಿರಲಿಲ್ಲ
ಉಪ್ಪುನೀರನ್ನು ಯಾವ ಬೆಪ್ಪ ಕುಡಿದಾನು ?
ಎಷ್ಟೇ ವಿಶಾಲವಾಗಿ ಕಂಡರೂ ಏನಂತೆ
ಚಿಕ್ಕ ಕೆರೆಗಿಂತಲೂ,
ನಲ್ಲಿಬಾಯಲ್ಲಿ ಬರುವ ಕಿರುಬೆರಳ ದಪ್ಪದ
ಜಲಧಾರೆಗಿಂತಲೂ ಕನಿಷ್ಠವಾಗಿದ್ದಿರಿ,
ಬಾಯಾರಿದವರನೂ ತಣಿಸಲಾಗದ ಹಾಗೆ
ಅನಿಷ್ಟವಾಗಿದ್ದಿರಿ.
ಸುತ್ತ ಮುತ್ತ ಎಲ್ಲ ತುರುಗಿಕೊಂಡಿದ್ದರೂ
ಮುಟ್ಟಲಾಗದ ನಿಮ್ಮ
ಉಪ್ಪು ಬದುಕಿಗೆ ಮರುಗಿ
ಕರಗಿದನು ಭಾನು.
ಪ್ರಖರ ಬಿಸಿಲಿನ ಶಾಖ ಬಿದ್ದು ಮೇಲೆದ್ದಿರಿ ;
ಅದೃಷ್ಟವಿದ್ದುದರಿಂದ
ಗಾಳಿಯ ಬೆನ್ನು ಹತ್ತಿ
ನಿಮ್ಮನ್ನೇ ಬೆಚ್ಚಿಸುವ ಬಾರೀ ಎತ್ತರಕೆ
ಯಾರೂ ಕಾಣದ ಹಾಗೆ
ಹೋಗಿ ಸೇರಿದಿರಿ.
ಈಗ ಹರಡಿದ್ದೀರಿ ಆಗಸದ ತುಂಬ
ಆದರೇನು ?
ಬೆರಗಾಗುವರು ಯಾರು ಸುಳ್ಳು ದಂಭಕ್ಕೆ ?
ನೀರೇ ಇಲ್ಲದ ಖಾಲಿ ಮುಗಿಲ ಠೀವಿಯನು
ಬಯ್ಯುವವರೇ ಎಲ್ಲ – “ಏನೆಂದರೇನೂ ಇಲ್ಲ”

ತೇವವಿಲ್ಲದ ಮುಗಿಲು ನೀಲಿ ಬಾಲಿನ ಮೈಗೆ
ತೊನ್ನು ಎನುವಂತಿದೆ.
ಒಳಗೆ ಜಲವಿಲ್ಲ, ಕೊಡುವ ಬಲವಿಲ್ಲ,
ಕೆಳಗೆ ದಡದಡ ಸುರಿದು
ಮಣ್ಣೊಳಗೆ ಇಳಿದು
ಬೆಳೆವ ಕಸುವಿಲ್ಲ.
ಎಳೆಗಾಳಿ, ತೆಳುಗಾಳಿ ಎಂಥ ಕ್ಷುದ್ರವೆ ಇರಲಿ
ಅದು ಎಳೆದ ದಿಕ್ಕಿಗೇ ಇದರ ಓಟ,
ಆಡಿಸುತ್ತಿದ್ದಾರೆ ಎಲ್ಲ ಆಟ!

ಇಲ್ಲದ್ದು ಹೋಗಿ ಇರುವುದೆಂದು ಬಂದೀತೋ
ಎಂದು ಕೊರಗುತ್ತಿದೆ ಕೆಳಗೆ ಜನವೆಲ್ಲ.
ಜಲಸುರಿವ ಮೋಡಕ್ಕೆ ಕಾಯುತ್ತ ನಿಂತಿವೆ
ಬಾಯ್ತೆರೆದುಕೊಂಡಿರುವ ಹಳ್ಳ ಕೊಳ್ಳ!
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...