Home / ಕವನ / ಕವಿತೆ / ಬೆಳಸು

ಬೆಳಸು


ನನ್ನ ಅಜ್ಜಿಯದು
ತುಂಬು ಸಂಸಾರ
ನನ್ನ ಅವ್ವನಿಗೆ
ನಾಲ್ಕು ಮಂದಿ ಮಕ್ಕಳು
ನನಗೆ-
ಒಬ್ಬಳೇ ಹೆಣ್ಣು ಮಗಳು
ಎಲ್ಲ ನೆನಪಾಗುವುದು-

ನಾನು, ನನ್ನ ತಂಗಿ
ತಮ್ಮಂದಿರು ಹಂಚಿಕೊಂಡೆವು
ಅನ್ನದಂತೆಯೇ ಪ್ರೀತಿಯನ್ನು
ಸಾಧಿಸಿದೆವು ದ್ವೇಷವನ್ನು
ಬಿಟ್ಟುಕೊಟ್ಟವು ಹಠವನ್ನು
ಒಟ್ಟಾಗಿಯೆ ಕಂಡೆವು ಕನಸುಗಳನ್ನು

ಕಿತ್ತಾಡಿದೆವು, ರಾಜಿಯಾದೆವು
ಕರುಬಿದೆವು, ಮರುಗಿದೆವು
ಪರಸ್ಪರ ಜೊತೆಯಾಗಿಯೇ
ಇಟ್ಟೆವು ಹೆಜ್ಜೆಗಳನ್ನು
ಅವ್ವ ನೋಯುವಳೆಂದು
ಬಲಿಕೊಟ್ಟೆವು
ಸಣ್ಣ ಪುಟ್ಟ ಆಕಾಂಕ್ಷೆಗಳನ್ನು

ಅಪ್ಪ ಬಸವಳಿಯದಿರಲಿ
ಎಂದು ಹೆಗಲು ಕೊಟ್ಟೆವು ನೊಗಕ್ಕೆ
ಬಯಸದ ಪ್ರತಿಫಲವನ್ನು
ಕೊಟ್ಟು-ಕೊಂಡೆವು ಪ್ರೀತಿಯ
ಈಜಿ ಪ್ರವಾಹದ ವಿರುದ್ಧ
ಸೇರಿದೆವು ದಡ ಒಟ್ಟಾಗಿ


ಈಗ:
ನನ್ನ ಮಗಳು ಇಡೀ
ಪರಿವಾರದ ಕಣ್ಮಣಿ
ಅಣ್ಣ, ತಂಗಿ, ತಮ್ಮ
ಸಂಬಂಧಗಳ ಒಳಸುಳಿ ಅರಿಯಳು
ರಾಜಿಯಾಗುವುದು, ಹಂಚಿಕೊಳ್ಳುವುದು
ಅವಳಿಗೆ ನಿಘಂಟಿನ ಪದಗಳು

ಅಚ್ಚೆಯ ಕುಂಡದಲ್ಲಿ
ಅವ್ವ ಅಪ್ಪನ ನೆರಳಲ್ಲೇ
ಬೆಳೆದ ಹೂಬಳ್ಳಿ
ಪ್ರಖರ ಸೂರ್‍ಯನನು ಎದುರಿಸಲಾರಳು
ಅಂಜುಕುಳಿ-
ಗಾಳಿಯಾಟಕೂ ಬೆದರುವಳು

ವಿಚಿತ್ರವೆನಿಸುವುದು
ಎಷ್ಟು ಇತ್ತರೂ
ಏನೇ ಇತ್ತರೂ
ಮತ್ತಷ್ಟು ಬಯಸುವಳು
ಭಿಕ್ಷುಕಿಯಂತೆ….

ಇಡೀ ಲೋಕವ
ತಂದು ಸುರಿದರೂ ತುಂಬದವಳ
ಭಿಕ್ಷಾಪಾತ್ರೆ
ಹಸಿವು ಹಸಿವೆಂದು ಚೀರುವಳು


ನನಗೊ ಒಳಗೊಳಗೆ ವೇದನೆ
ಮಮತೆ ಮುಳುವಾಯಿತೆ?
ಅನುಮಾನ-

ನಿದ್ರೆಯಿಲ್ಲದ ರಾತ್ರಿಗಳಲ್ಲಿ
ಕೆಟ್ಟ ಕನಸುಗಳು…

ಶುಭ್ರವಾದ ಆಕಾಶ
ಹಕ್ಕಿಯಾಗಿದ್ದಾಳೆ ನನ್ನ ಮಗಳು
ಅವಳಿಗೆ ರೆಕ್ಕೆಗಳೇ ಇಲ್ಲ!
ನೀಲಿ ಸಮುದ್ರ
ದೋಣಿಯಲ್ಲಿದ್ದಾಳೆ ನನ್ನ ಮಗಳು
ಹುಟ್ಟೇ ಇಲ್ಲ!

ನನೇ ನೆಟ್ಟು ನೀರುಣಿಸಿ
ಬೆಳೆಸಿದ ಸಸಿ
ಭರಭರ ಬೆಳೆದು ಸೊಕ್ಕಿ ನಿಂತಿದೆ
ಮರವಾಗಿ-
ಸ್ವಾರ್ಥವೇ ಅದರ ಫಲವಾಗಿ…

ಎದೆ ಹಾಲು
ಹಾಲಾಹಲವಾಗುವುದೆಂದರೆ…
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...