Home / ಕವನ / ಕವಿತೆ / ಎಲ್ಲಿ ಹೋದಳು ನಮ್ಮ ಅಡಗೂಲಜ್ಜಿ?

ಎಲ್ಲಿ ಹೋದಳು ನಮ್ಮ ಅಡಗೂಲಜ್ಜಿ?

ಎಲ್ಲಿ ಹೋದಳು ನಮ್ಮ ಅಡಗೂಲಜ್ಜಿ
ಎಲ್ಲಿ ಗುರುತುಗಳನು ಒಮ್ಮಲೆ ಉಜ್ಜಿ

ನಡೆದರು ಮುಗಿಯದ ಕಾಡಿನ ಹಾದಿ
ಕಾಣಿಸಿತೊಂದು ಗುಡಿಸಲ ಬಿಡದಿ

ಮೀಯಲು ಬೆಚ್ಚನೆ ಬಿಸಿ ನೀರಿತ್ತು
ಕುಡಿಯಲು ಪನ್ನೀರಿನ ಷರಬತ್ತು

ಒಲೆಯ ಮೇಲೊಂದು ಮಾಯಾ ಗಡಿಗೆ
ಬಯಸಿದ ತಕ್ಷಣ ಪಾಯಸದಡಿಗೆ

ಆ ದಿನ ಅಲ್ಲೇ ನಮ್ಮ ಠಿಕಾಣಿ
ದಿಂಬಿನ ಬದಿಗೇ ನೂಲಿನ ಏಣಿ

ಮಲಗಿರಲೇನದು ಯಾರೋ ಎದ್ದು
ಮನೆಯೊಳಗೆಲ್ಲೋ ನಡೆಯುವ ಸದ್ದು

ಕನಸೋ ನೆನಸೊ ಯಾರಿಗೆ ಗೊತ್ತು
ರಾತ್ರಿ ತುಂಬಾ ಹೊತ್ತಾಗಿತ್ತು

ಅಜ್ಜೀ ಅಜ್ಜೀ ಏನಜ್ಜೀ
ನಡೆಯುವ ಸದ್ದು ಯಾರಜ್ಜೀ

ಬಂದಿಲ್ಲವೆ ಮಕ್ಕಳೆ ಇನ್ನೂ ನಿದ್ದೆ
ಬಂದಿದೆಯೆಂದೇ ನಾ ತಿಳಿದಿದ್ದೆ

ಹೇಳುವೆನೊಂದು ಸುದ್ದಿಯ ನಿಮಗೆ
ಕಣ್ಣಿಗೆ ಮಂಪರು ಹತ್ತುವವರೆಗೆ

ತುಂಬಾ ಚೆಲುವೆ ರಾಜನ ಮಗಳು
ಕಾಲಿನವರೆಗೂ ಇಳಿಯುವ ಹೆರಳು

ಆದರೆ ಒಬ್ಬ ಮಾಂತ್ರಿಕ ಬಂದು
ಪೀಡಿಸುತಿರುವನು ಆಕೆಯನಿಂದು

ತಾನೇ ಹಿಡಿದು ಆಕೆಯ ಕೈಯ
ರಾಜ್ಯವ ಪಡೆವುದು ಅವನ ಉಪಾಯ

ನಾಳೆ ಹೇಳುವೆ ಇನ್ನುಳಿದದ್ದು
ಮಲಗಿರಿ ಈಗ ಕಂಬಳಿ ಹೊದ್ದು

ಅಜ್ಜೀ ಅಜ್ಜೀ ಹೇಳಜ್ಜೀ
ಆತನ ಕೊಲುವುದು ಹೇಗಜ್ಜೀ

ಬಂದಿಲ್ಲವೆ ಮಕ್ಕಳೆ ಇನ್ನೂ ನಿದ್ದೆ
ಬಂದಿದೆಯೆಂದೇ ನಾ ತಿಳಿದಿದ್ದೆ

ಏಳು ಸಮುದ್ರಗಳಾಚೆಗೆ ದ್ವೀಪ
ಉರಿಯುವುದಲ್ಲಿ ನಂದಾದೀಪ

ಅಲ್ಲೇ ಇರುವುದು ಮಾಂತ್ರಿಕ ಜೀವ
ಆರಿಸಲೆಂದೇ ಆತನು ಸಾವ

ಆದರೆ ಮಾತ್ರ ದ್ವೀಪದ ಸುತ್ತಲು
ರಕ್ಕಸನೊಬ್ಬ ಇರುವನು ಕಾವಲು

ನಾಳೆ ಹೇಳುವೆ ಆತನ ಗುಟ್ಟು
ಮಲಗಿರಿ ಈಗ ಗಾಬರಿ ಬಿಟ್ಟು

ಭಾರೀ ನಿದ್ದೆಯೆ ಬಿದ್ದಿರಬೇಕು
ಎಚ್ಚರವಾಗಲು ಸೂರ್ಯನ ಬೆಳಕು

ಸುತ್ತ ನೋಡಿದರೆ ಉರಿಗಣ್ಣುಜ್ಜಿ
ಎಲ್ಲೂ ಇಲ್ಲದ ಅಡಗೂಲಜ್ಜಿ

ಎಲ್ಲಿ ಹೋದಳು ನಮ್ಮ ಅಡಗೂಲಜ್ಜಿ
ಎಲ್ಲ ಗುರುತುಗಳನು ಒಮ್ಮೆಲೆ ಉಜ್ಜಿ
*****

Tagged:

Leave a Reply

Your email address will not be published. Required fields are marked *

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...