Home / ಕವನ / ಕವಿತೆ / ಎಲ್ಲಿ ಹೋದಳು ನಮ್ಮ ಅಡಗೂಲಜ್ಜಿ?

ಎಲ್ಲಿ ಹೋದಳು ನಮ್ಮ ಅಡಗೂಲಜ್ಜಿ?

ಎಲ್ಲಿ ಹೋದಳು ನಮ್ಮ ಅಡಗೂಲಜ್ಜಿ
ಎಲ್ಲಿ ಗುರುತುಗಳನು ಒಮ್ಮಲೆ ಉಜ್ಜಿ

ನಡೆದರು ಮುಗಿಯದ ಕಾಡಿನ ಹಾದಿ
ಕಾಣಿಸಿತೊಂದು ಗುಡಿಸಲ ಬಿಡದಿ

ಮೀಯಲು ಬೆಚ್ಚನೆ ಬಿಸಿ ನೀರಿತ್ತು
ಕುಡಿಯಲು ಪನ್ನೀರಿನ ಷರಬತ್ತು

ಒಲೆಯ ಮೇಲೊಂದು ಮಾಯಾ ಗಡಿಗೆ
ಬಯಸಿದ ತಕ್ಷಣ ಪಾಯಸದಡಿಗೆ

ಆ ದಿನ ಅಲ್ಲೇ ನಮ್ಮ ಠಿಕಾಣಿ
ದಿಂಬಿನ ಬದಿಗೇ ನೂಲಿನ ಏಣಿ

ಮಲಗಿರಲೇನದು ಯಾರೋ ಎದ್ದು
ಮನೆಯೊಳಗೆಲ್ಲೋ ನಡೆಯುವ ಸದ್ದು

ಕನಸೋ ನೆನಸೊ ಯಾರಿಗೆ ಗೊತ್ತು
ರಾತ್ರಿ ತುಂಬಾ ಹೊತ್ತಾಗಿತ್ತು

ಅಜ್ಜೀ ಅಜ್ಜೀ ಏನಜ್ಜೀ
ನಡೆಯುವ ಸದ್ದು ಯಾರಜ್ಜೀ

ಬಂದಿಲ್ಲವೆ ಮಕ್ಕಳೆ ಇನ್ನೂ ನಿದ್ದೆ
ಬಂದಿದೆಯೆಂದೇ ನಾ ತಿಳಿದಿದ್ದೆ

ಹೇಳುವೆನೊಂದು ಸುದ್ದಿಯ ನಿಮಗೆ
ಕಣ್ಣಿಗೆ ಮಂಪರು ಹತ್ತುವವರೆಗೆ

ತುಂಬಾ ಚೆಲುವೆ ರಾಜನ ಮಗಳು
ಕಾಲಿನವರೆಗೂ ಇಳಿಯುವ ಹೆರಳು

ಆದರೆ ಒಬ್ಬ ಮಾಂತ್ರಿಕ ಬಂದು
ಪೀಡಿಸುತಿರುವನು ಆಕೆಯನಿಂದು

ತಾನೇ ಹಿಡಿದು ಆಕೆಯ ಕೈಯ
ರಾಜ್ಯವ ಪಡೆವುದು ಅವನ ಉಪಾಯ

ನಾಳೆ ಹೇಳುವೆ ಇನ್ನುಳಿದದ್ದು
ಮಲಗಿರಿ ಈಗ ಕಂಬಳಿ ಹೊದ್ದು

ಅಜ್ಜೀ ಅಜ್ಜೀ ಹೇಳಜ್ಜೀ
ಆತನ ಕೊಲುವುದು ಹೇಗಜ್ಜೀ

ಬಂದಿಲ್ಲವೆ ಮಕ್ಕಳೆ ಇನ್ನೂ ನಿದ್ದೆ
ಬಂದಿದೆಯೆಂದೇ ನಾ ತಿಳಿದಿದ್ದೆ

ಏಳು ಸಮುದ್ರಗಳಾಚೆಗೆ ದ್ವೀಪ
ಉರಿಯುವುದಲ್ಲಿ ನಂದಾದೀಪ

ಅಲ್ಲೇ ಇರುವುದು ಮಾಂತ್ರಿಕ ಜೀವ
ಆರಿಸಲೆಂದೇ ಆತನು ಸಾವ

ಆದರೆ ಮಾತ್ರ ದ್ವೀಪದ ಸುತ್ತಲು
ರಕ್ಕಸನೊಬ್ಬ ಇರುವನು ಕಾವಲು

ನಾಳೆ ಹೇಳುವೆ ಆತನ ಗುಟ್ಟು
ಮಲಗಿರಿ ಈಗ ಗಾಬರಿ ಬಿಟ್ಟು

ಭಾರೀ ನಿದ್ದೆಯೆ ಬಿದ್ದಿರಬೇಕು
ಎಚ್ಚರವಾಗಲು ಸೂರ್ಯನ ಬೆಳಕು

ಸುತ್ತ ನೋಡಿದರೆ ಉರಿಗಣ್ಣುಜ್ಜಿ
ಎಲ್ಲೂ ಇಲ್ಲದ ಅಡಗೂಲಜ್ಜಿ

ಎಲ್ಲಿ ಹೋದಳು ನಮ್ಮ ಅಡಗೂಲಜ್ಜಿ
ಎಲ್ಲ ಗುರುತುಗಳನು ಒಮ್ಮೆಲೆ ಉಜ್ಜಿ
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...