Home / ಕವನ / ಕವಿತೆ / ಇಲ್ಲ! ಬರಲಿಲ್ಲ!

ಇಲ್ಲ! ಬರಲಿಲ್ಲ!

ಇಲ್ಲ !
ಬರಲಿಲ್ಲ
ಆ ದಿನ ಬರಲಿಲ್ಲ.

ಸಾಲು ಸಾಲು ಮೇಘ, ಮಾರುತಗಳ ಬರಳೊರಳಿಸಿ
ಗುಡುಗು, ಮಿಂಚುಗಳ
ಬಾಣ, ಬಿರುಸಿನ ಮಾಲೆ ಹೊತ್ತಿಸಿ
ಗಿಡ, ಮರಗಳ ಬುಡ ನಡುಗಿಸಿ
ತಲೆ ಕೊಡವಿಸಿ
ಏಕಕಾಲಕೆ ಗಲಿಬಿಲಿ, ಸಂತಸ ಹುಟ್ಟಿಸಿ
ಜನ, ದನ, ಕ್ರಿಮಿ, ಕೀಟ ಪಕ್ಷಿಗಳ ತಾರಾಡಿಸಿ
ಬಾನು, ಭುವಿಯನು ಬೆಸೆವ ಕೆಂದೂಳ ಸೇತುವೆಯನೆಬ್ಬಿಸುವ
ಮಳೆ ಗಾಳಿ ನೀನು ಬರಲಿಲ್ಲ.

ಬಯಲು, ಬೇಲಿ, ತಬ್ಬಿ
ಬಣ್ಣ ಗಂಧವ ರುಬ್ಬಿ
ಕಣ್ಮನಕೆ ಹಬ್ಬ ತರುವ
ಭಾದ್ರಪದ ನೀನು
ಬರಲಿಲ್ಲ

ಪ್ರೇಮ ಚುಂಬನದಿ
ಮಿಂಚು ರೋಮಾಂಚನವ ಸ್ಪುರಿಸಿ
ನವ, ನವ ಭಾವಗಳ ಚಿಗುರು ಉಡಿಸಿ
ಕಣಿವೆ ಕೊಳ್ಳಗಳಲಿ
ಕೋಗಿಲೆಗಳ ಮಧುರ ಗಾನವ ಮೊಳಗಿಸಿ
ಕನಸುಗಳ ತೇಲಿಬಿಡುವ
ಬಾಲ ಗ್ರೀಶ್ಮನು ನೀನು ಬರಲಿಲ್ಲ.

ಮಧುರ ಪರಿಮಳದ
ಮುಂಗಾರು ಮಲ್ಲಿಗೆಯ
ಮೊಗ್ಗಿನ ಮುಖದಲ್ಲಿ
ಮುಗುಳು ನಗೆ ತೇಲಿಸುವ
ಸಂಜೆ ಗಾಳಿ ನೀನು ಬರಲಿಲ್ಲ.

ನನ್ನಾಸೆ ಹೂವುಗಳು
ಕಾಯಾಗಿ ಹೊರೆಯಲು, ಹಣ್ಣಾಗಿ ಮಾಗಲು
ತಹತಹಿಪ
ಅನುರಾಗ ಪರಾಗ ನಿಯೋಗಿ ನೀನು ಬರಲಿಲ್ಲ.

ಹಸಿದು
ಕಂಗಾಲಾಗಿ
ಕೀಚ್ ಕೀಚೆನುತ ತಪಿಸುವ
ಗೂಡಿನ ಮರಿಗಳಿಗೆ
ಜೀವ ಗುಟುಕನು ತರುವ
ತಾಯಿ ಹಕ್ಕಿ ನೀನು
ಬರಲಿಲ್ಲ.

ಜಗವ ಕವಿದಿರುಳ ಮೇಲೆ
ಬೆಳಕ ದಾಳಿ ನಡೆಸಿ
ಸೋತ ತಾರಾ ಕುಲವ
ಮುನ್ನಡೆಸಿ ಗೆಲುವ
ಚಂದ್ರಿಕೆ ನೀನು
ಬರಲಿಲ್ಲ.
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...