Home / ಕವನ / ಕವಿತೆ / ಗಣಪತಿ

ಗಣಪತಿ

ಹೊಗಳುವರು ಭಟ್ಟಂಗಿಗಳು ನಿನ
ಗಗಣಿತಾರೋಪಗಳ ಮಾಡುತ
ಹಗರಣದ ಕಾಮುಕರು ನಿನ್ನರಿತವರು ಅವರಲ್ಲ

ಸುಗುಣ ನಿರ್‍ಗುಣ ರೂಪ ನೀನೈ
ಜಗಕೆ ಮಂಗಳ ಕಾರಿ ನೀನೈ
ಮಗುಳೆ ನಮ್ಮಲಿ ಹೊಳೆವ ತೇಜವೆ! ಹೊರತೆ ನೀ ಯಮಗೆ

ನೊಂದಿ ಮೈತ್ರಿಯು ತಮದಲಿರುಳಲಿ
ಕಂದರೆಲ್ಲರು, ಕಂದಿ ತಮ್ಮೊಳ
ಗಿಂದು ನೊಂದಿಹರೆನುತ ಗಣಪನು ಗಿರಿಜೆಯೊಡಗೂಡಿ

ಬಂದು ನಿಂದಿಹ ನಿದುಗೊ! ಹೊಸಿಲಲಿ
ಒಂದೂಗೂಡಿಸಿ ನೊಂದ ಕರಗಳ
ಸಂದ ಪ್ರೇಮಾಂಜಲಿಯ ಪುಟದಲಿ ನೀಡಿರರ್ಘ್ಯವನು

ಮಳೆಯ ಕರೆಯಲು ಮೇಘ ಘಟೆಗಳು
ಬಳಲಿ ತೊಳಲಿದ ಧರಣಿ ತಣಿಯಲು
ಹೊಳೆಗಳೇರಲು ನರರು ಹರುಷಿಸೆ! ಪರಿಯನರಿಯದಲೆ

ಎಳೆಯ ಸುಳಿಗಳು ಪೂಗಳರಳಲು
ಇಳೆಯಕೇದಿಗೆ ಬಿರಿದು ಹೊಗಳಲು
ಸುಳಿದು ಸುಯ್ಯನೆ! ಗಾಳಿಯುಸರಿತು ಗಣಪ ಬರತಿಹನು

ಬರಹಗಾರರ ಗುರುವು ನೀನೈ
ಹರನ ಸುತ ಚಿರ ವಟುವು ನೀನೈ
ಹಿರಿದು ಸೇವೆಯ ಮಾಡಲೆಮಗರಿವಿತ್ತು ಸಲಹುತಿರು

ಇರವನಿಡು ಶಿವಸುಖದ ಬೆಳಕಲಿ
ಇರಿದು ಅಂಕುಶದಲ್ಲಿ ಶಂಕೆಯ
ಧರೆಯ ಸುಖಗಳ ಕರಿವೆ ಭಕುತಿಯಲೀವೆ ಮೋದಕವ

ಅರಿತು ನೋಡಲು ನಾಡ ಒಲುಮೆಗೆ
ಹರಿವ ವೀರ್‍ಯಕೆ ಭಾವಿ ಸೌಖ್ಯಕೆ
ಹರನ ಸುತ ಸ್ವಾತಂತ್ರಜೀವಿಗೆ ನೀನೆ ರಕ್ಷಕನು

ಭರತಮಾತೆಯ ಬೆಮರ ಮಣ್ಣೊಳ
ಗುರಿದಮೂರುತಿ ಭರತಗಣಪತಿಯೆ
ಅರಿತುನಿನ್ನನು ಭಜಿಸಿ ನಲಿವೆವು! ಜಗದ ಜನರೆಲ್ಲ

ನಡುವ ಬಿಗಿಯುವೆ ಪಾಶ ಬಂಧದಿ
ಹಿಡೆವನಂಕುಶ ಕೊಲಲು ಶಂಕೆಯ
ಒಡಲ ಕಟ್ಟುವೆ ಪರರ ಸೇವೆಗೆ ಪೊರೆವೆನಾರ್‍ತರನು

ಹಿಡಿವೆ ಲೇಖನಿ ಬರಿವೆ ಭಾರತ
ದೊಡಲ ಬೇಗೆಯ ಭವ್ಯ ಚರಿತೆಯ
ಒಡೆಯ! ಗಣಪನ ಮಾಡಲೆನ್ನನು ಘಳಿಗೆಯೋಲವಿನಲಿ
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...