Home / ಕವನ / ಕವಿತೆ / ಹಾಲಾಹಲಕ್ಕೆ ನಿಮ್ಮಲ್ಲಿ ಮದ್ದುಂಟೇನು?

ಹಾಲಾಹಲಕ್ಕೆ ನಿಮ್ಮಲ್ಲಿ ಮದ್ದುಂಟೇನು?

ನನ್ನೊಳಗೆ ನಿನ್ನ ಕಾಪಿಟ್ಟುಕೊಳ್ಳುದಕ್ಕೆ
ಪಕ್ಕಾಗಿದ್ದೇನೆ.
ಅನ್ಯಥಾ ನೀರಿನಲೆಗಳ ನಡುವೆ
ಸುಳಿಯ ನರ್ತನಕೆ ಕುಣಿವ ತರಗಲೆಯಲ್ಲ ನಾನು
ಗೋಣು ಅಲ್ಲಾಡಿಸುವುದ ಮರೆತುಬಿಟ್ಟವಳು.
ಸೊಕ್ಕಿನವಳೆಂದು ಜರಿದು ಅನೇಕ ಮೂಗುತಿಗಳು
ನನ್ನೊಂದಿಗೆ ಮಾತುಬಿಟ್ಟವು. ಆದರೂ
ಬಯಲ ಗಾಳಿಗೆ ಬೇಲಿ ಹಾಕಲು ಕಂಬಗಳ
ಜೋಡಿಸುತ್ತಿರುವೆ.
ನನ್ನೊಂದಿಗೆ ನೀವು ಬರುವಿರೇನು?

ನನ್ನೊಂದಿಗೆ ನಿನ್ನುಸಿರ ಬೆಸೆದುಕೊಂಡಿದ್ದೇನೆ.
ಅನ್ಯಥಾ ಕಾಲಬೆರಳಿಂದ ನೆಲವ ಬಗಿಯುತ್ತ
ನಿಂತ ನೀರೆಯರಂತೆ ನಿನ್ನ ಕೆಂಗಣ್ಣಿಗೆ
ನಖಶಿಖಾಂತ ನಡುಕದ ಶಾಲು ಹೊದ್ದುಕೊಳ್ಳಲಾರೆ ನಾನು.
ಉರಿವಾಗ್ನಿಯಾಗೇ ಪ್ರಜ್ವಲಿಸಬಲ್ಲವಳು.
ಗಂಡಿಗಿಲ್ಲದ ಕೊಬ್ಬಿನವಳೆಂದು ಅನೇಕ ಹೂಮುಡಿಗಳು
ಹಂಗಿಸಿ ಮುಖತಿರುವಿದವು. ಆದರೂ
ಮನೆಯ ಜಂತಿಯ ನಾಜೂಕಾಗೇ ಜೋಡಿಸುತಿರುವೆ.
ನನ್ನೊಂದಿಗೆ ನೀವು ಬರುವಿರೇನು?

ನನ್ನ ದೇಹದ ತುಂಬಾ ನಿನ್ನತ್ತರಿನ
ಪರಿಮಳವ ಪೂಸಿಕೊಂಡಿದ್ದೇನೆ.
ಅನ್ಯಥಾ ನಿನ್ನ ಕಣ್ಣೋಟದಂಚಲ್ಲಿಯ
ಅಪರಿಮಿತ ವಿಪರೀತ ವಾಂಛೆಯ ಅರಿಯದೇ
ಕೆರೆಯ ದಂಡೆಯ ಅಲೆಗಳಿಗೆ ಅಳಿಸಿಹೋಗುವ
ಮರಳ ಹೆಜ್ಜೆಯಾಗಲಾರೆ ನಾನು.
ನನ್ನೊಳಗಿನ ಒರತೆಗೆ ನಾನೇ ಸೆಲೆಯಾಗಬಲ್ಲವಳು
ಪ್ರಾಯದ ಹೆಣ್ಣಿನ ಪರಕಾಯ ಪ್ರವೇಶವೆಂದು ಅನೇಕ
ನೆರೆತ ಕೂದಲ ಹೆಪ್ಪುಗಟ್ಟಿದ ಕೈಗಳು
ಕೊಂಕು ನುಡಿದು ಮರೆಯಾದರು. ಆದರೂ
ಉಷ್ಣವಲಯದ ಬಿಸಿಗೆ ಬೆಣ್ಣೆಯ ಕಾಯಲಿಟ್ಟಿರುವೆ
ತುಪ್ಪದ ಘಮ ಬೆರೆಸಲು.
ನನ್ನೊಂದಿಗೆ ನೀವು ಬರುವಿರೇನು?

ನನ್ನ ಹೃದಯರಾಗ ಮೀಟುವ ತಂಬೂರ ನೀನು
ಅನ್ಯಥಾ ನೀರೆ ನಿಯಾಮಕಳಲ್ಲ
ಎಂಬ ನಿನ್ನ ಎತ್ತಿದ ಕಂಠದ ಕುಹಕ ಗಾನಕ್ಕೆ
ಕಿವುಡಾಗಲಾರೆ ನಾನು.
ನಿನಗಾಗೇ ಕಂಚಿನ ಕಂಠವ ಎರವಲು ಪಡೆದವಳು.
ನಯನಾಜೂಕಿನ ನಕಲು ಪಡೆದ ಹೆರಳುಗಳು
ತುಟಿಕೊಂಕಿಸಿ ಬೆನ್ನು ತಿರುವಿದರು. ಆದರೂ
ರಾಗಮಾಲಿಕೆಯ ಮಧುರ ಮಂಜುಳಗಾನಕ್ಕೆ
ತಾಲೀಮು ರಂಗವನ್ನು ಸಿದ್ಧಗೊಳಿಸುತ್ತಿರುವೆ.
ನನ್ನೊಂದಿಗೆ ನೀವು ಬರುವಿರೇನು?

ಕಣ್ಣೊರೆಸುವ ಹಸ್ತಗಳು ಮಸಿಯಲ್ಲಾಡಿಸಿ ಕೈಗಳ
ಮುಖಕ್ಕೆ ಬಳಿಯುತ್ತ ನಗುತ್ತಿವೆ
ಬೆಂಕಿಯನ್ನು ಎದೆಗಿಳಿಸುವುದನ್ನೇ ಕಲಿತು ಬಂದ
ತೊಗಟೆ ಕೈಗಳು ಕುತ್ತಿಗೆ ಹಿಸುಕುತ್ತಿವೆ.
ಮೃದ್ವಂಗಿಯ ಮೆತ್ತಗೆ ಹಿಡಿದು ಹಸ್ತದೊಳಗೆ
ಜೋಪಾನ ಎನ್ನುತ್ತಾ ಅಲ್ಲೆ ಅದುಮಿ ಬಿಡುವ
ಹಸ್ತಗಳದೇ ಭಯ.
ಮೈತುಂಬಾ ಬಿರುಬಿಸಿಲ ನೀರ ಬೊಕ್ಕೆಗಳು.
ತೈಲ ಮಾಲೀಷು ಕೂಡಾ ಶಮನಗೈಯದಂತೆ
ಮೈಮನದ ಹಾಲಾಹಲ ಹೆಚ್ಚುತ್ತಲೇ ಇದೆ.
ಉಪಶಮನಕ್ಕೆ ನಿಮ್ಮಲ್ಲಿ ಮದ್ದುಂಟೇನು?
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...