Home / ಕವನ / ಕವಿತೆ / ಹಾಲಾಹಲಕ್ಕೆ ನಿಮ್ಮಲ್ಲಿ ಮದ್ದುಂಟೇನು?

ಹಾಲಾಹಲಕ್ಕೆ ನಿಮ್ಮಲ್ಲಿ ಮದ್ದುಂಟೇನು?

ನನ್ನೊಳಗೆ ನಿನ್ನ ಕಾಪಿಟ್ಟುಕೊಳ್ಳುದಕ್ಕೆ
ಪಕ್ಕಾಗಿದ್ದೇನೆ.
ಅನ್ಯಥಾ ನೀರಿನಲೆಗಳ ನಡುವೆ
ಸುಳಿಯ ನರ್ತನಕೆ ಕುಣಿವ ತರಗಲೆಯಲ್ಲ ನಾನು
ಗೋಣು ಅಲ್ಲಾಡಿಸುವುದ ಮರೆತುಬಿಟ್ಟವಳು.
ಸೊಕ್ಕಿನವಳೆಂದು ಜರಿದು ಅನೇಕ ಮೂಗುತಿಗಳು
ನನ್ನೊಂದಿಗೆ ಮಾತುಬಿಟ್ಟವು. ಆದರೂ
ಬಯಲ ಗಾಳಿಗೆ ಬೇಲಿ ಹಾಕಲು ಕಂಬಗಳ
ಜೋಡಿಸುತ್ತಿರುವೆ.
ನನ್ನೊಂದಿಗೆ ನೀವು ಬರುವಿರೇನು?

ನನ್ನೊಂದಿಗೆ ನಿನ್ನುಸಿರ ಬೆಸೆದುಕೊಂಡಿದ್ದೇನೆ.
ಅನ್ಯಥಾ ಕಾಲಬೆರಳಿಂದ ನೆಲವ ಬಗಿಯುತ್ತ
ನಿಂತ ನೀರೆಯರಂತೆ ನಿನ್ನ ಕೆಂಗಣ್ಣಿಗೆ
ನಖಶಿಖಾಂತ ನಡುಕದ ಶಾಲು ಹೊದ್ದುಕೊಳ್ಳಲಾರೆ ನಾನು.
ಉರಿವಾಗ್ನಿಯಾಗೇ ಪ್ರಜ್ವಲಿಸಬಲ್ಲವಳು.
ಗಂಡಿಗಿಲ್ಲದ ಕೊಬ್ಬಿನವಳೆಂದು ಅನೇಕ ಹೂಮುಡಿಗಳು
ಹಂಗಿಸಿ ಮುಖತಿರುವಿದವು. ಆದರೂ
ಮನೆಯ ಜಂತಿಯ ನಾಜೂಕಾಗೇ ಜೋಡಿಸುತಿರುವೆ.
ನನ್ನೊಂದಿಗೆ ನೀವು ಬರುವಿರೇನು?

ನನ್ನ ದೇಹದ ತುಂಬಾ ನಿನ್ನತ್ತರಿನ
ಪರಿಮಳವ ಪೂಸಿಕೊಂಡಿದ್ದೇನೆ.
ಅನ್ಯಥಾ ನಿನ್ನ ಕಣ್ಣೋಟದಂಚಲ್ಲಿಯ
ಅಪರಿಮಿತ ವಿಪರೀತ ವಾಂಛೆಯ ಅರಿಯದೇ
ಕೆರೆಯ ದಂಡೆಯ ಅಲೆಗಳಿಗೆ ಅಳಿಸಿಹೋಗುವ
ಮರಳ ಹೆಜ್ಜೆಯಾಗಲಾರೆ ನಾನು.
ನನ್ನೊಳಗಿನ ಒರತೆಗೆ ನಾನೇ ಸೆಲೆಯಾಗಬಲ್ಲವಳು
ಪ್ರಾಯದ ಹೆಣ್ಣಿನ ಪರಕಾಯ ಪ್ರವೇಶವೆಂದು ಅನೇಕ
ನೆರೆತ ಕೂದಲ ಹೆಪ್ಪುಗಟ್ಟಿದ ಕೈಗಳು
ಕೊಂಕು ನುಡಿದು ಮರೆಯಾದರು. ಆದರೂ
ಉಷ್ಣವಲಯದ ಬಿಸಿಗೆ ಬೆಣ್ಣೆಯ ಕಾಯಲಿಟ್ಟಿರುವೆ
ತುಪ್ಪದ ಘಮ ಬೆರೆಸಲು.
ನನ್ನೊಂದಿಗೆ ನೀವು ಬರುವಿರೇನು?

ನನ್ನ ಹೃದಯರಾಗ ಮೀಟುವ ತಂಬೂರ ನೀನು
ಅನ್ಯಥಾ ನೀರೆ ನಿಯಾಮಕಳಲ್ಲ
ಎಂಬ ನಿನ್ನ ಎತ್ತಿದ ಕಂಠದ ಕುಹಕ ಗಾನಕ್ಕೆ
ಕಿವುಡಾಗಲಾರೆ ನಾನು.
ನಿನಗಾಗೇ ಕಂಚಿನ ಕಂಠವ ಎರವಲು ಪಡೆದವಳು.
ನಯನಾಜೂಕಿನ ನಕಲು ಪಡೆದ ಹೆರಳುಗಳು
ತುಟಿಕೊಂಕಿಸಿ ಬೆನ್ನು ತಿರುವಿದರು. ಆದರೂ
ರಾಗಮಾಲಿಕೆಯ ಮಧುರ ಮಂಜುಳಗಾನಕ್ಕೆ
ತಾಲೀಮು ರಂಗವನ್ನು ಸಿದ್ಧಗೊಳಿಸುತ್ತಿರುವೆ.
ನನ್ನೊಂದಿಗೆ ನೀವು ಬರುವಿರೇನು?

ಕಣ್ಣೊರೆಸುವ ಹಸ್ತಗಳು ಮಸಿಯಲ್ಲಾಡಿಸಿ ಕೈಗಳ
ಮುಖಕ್ಕೆ ಬಳಿಯುತ್ತ ನಗುತ್ತಿವೆ
ಬೆಂಕಿಯನ್ನು ಎದೆಗಿಳಿಸುವುದನ್ನೇ ಕಲಿತು ಬಂದ
ತೊಗಟೆ ಕೈಗಳು ಕುತ್ತಿಗೆ ಹಿಸುಕುತ್ತಿವೆ.
ಮೃದ್ವಂಗಿಯ ಮೆತ್ತಗೆ ಹಿಡಿದು ಹಸ್ತದೊಳಗೆ
ಜೋಪಾನ ಎನ್ನುತ್ತಾ ಅಲ್ಲೆ ಅದುಮಿ ಬಿಡುವ
ಹಸ್ತಗಳದೇ ಭಯ.
ಮೈತುಂಬಾ ಬಿರುಬಿಸಿಲ ನೀರ ಬೊಕ್ಕೆಗಳು.
ತೈಲ ಮಾಲೀಷು ಕೂಡಾ ಶಮನಗೈಯದಂತೆ
ಮೈಮನದ ಹಾಲಾಹಲ ಹೆಚ್ಚುತ್ತಲೇ ಇದೆ.
ಉಪಶಮನಕ್ಕೆ ನಿಮ್ಮಲ್ಲಿ ಮದ್ದುಂಟೇನು?
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...