Home / ಕವನ / ಕವಿತೆ / ಹಾಲಾಹಲಕ್ಕೆ ನಿಮ್ಮಲ್ಲಿ ಮದ್ದುಂಟೇನು?

ಹಾಲಾಹಲಕ್ಕೆ ನಿಮ್ಮಲ್ಲಿ ಮದ್ದುಂಟೇನು?

ನನ್ನೊಳಗೆ ನಿನ್ನ ಕಾಪಿಟ್ಟುಕೊಳ್ಳುದಕ್ಕೆ
ಪಕ್ಕಾಗಿದ್ದೇನೆ.
ಅನ್ಯಥಾ ನೀರಿನಲೆಗಳ ನಡುವೆ
ಸುಳಿಯ ನರ್ತನಕೆ ಕುಣಿವ ತರಗಲೆಯಲ್ಲ ನಾನು
ಗೋಣು ಅಲ್ಲಾಡಿಸುವುದ ಮರೆತುಬಿಟ್ಟವಳು.
ಸೊಕ್ಕಿನವಳೆಂದು ಜರಿದು ಅನೇಕ ಮೂಗುತಿಗಳು
ನನ್ನೊಂದಿಗೆ ಮಾತುಬಿಟ್ಟವು. ಆದರೂ
ಬಯಲ ಗಾಳಿಗೆ ಬೇಲಿ ಹಾಕಲು ಕಂಬಗಳ
ಜೋಡಿಸುತ್ತಿರುವೆ.
ನನ್ನೊಂದಿಗೆ ನೀವು ಬರುವಿರೇನು?

ನನ್ನೊಂದಿಗೆ ನಿನ್ನುಸಿರ ಬೆಸೆದುಕೊಂಡಿದ್ದೇನೆ.
ಅನ್ಯಥಾ ಕಾಲಬೆರಳಿಂದ ನೆಲವ ಬಗಿಯುತ್ತ
ನಿಂತ ನೀರೆಯರಂತೆ ನಿನ್ನ ಕೆಂಗಣ್ಣಿಗೆ
ನಖಶಿಖಾಂತ ನಡುಕದ ಶಾಲು ಹೊದ್ದುಕೊಳ್ಳಲಾರೆ ನಾನು.
ಉರಿವಾಗ್ನಿಯಾಗೇ ಪ್ರಜ್ವಲಿಸಬಲ್ಲವಳು.
ಗಂಡಿಗಿಲ್ಲದ ಕೊಬ್ಬಿನವಳೆಂದು ಅನೇಕ ಹೂಮುಡಿಗಳು
ಹಂಗಿಸಿ ಮುಖತಿರುವಿದವು. ಆದರೂ
ಮನೆಯ ಜಂತಿಯ ನಾಜೂಕಾಗೇ ಜೋಡಿಸುತಿರುವೆ.
ನನ್ನೊಂದಿಗೆ ನೀವು ಬರುವಿರೇನು?

ನನ್ನ ದೇಹದ ತುಂಬಾ ನಿನ್ನತ್ತರಿನ
ಪರಿಮಳವ ಪೂಸಿಕೊಂಡಿದ್ದೇನೆ.
ಅನ್ಯಥಾ ನಿನ್ನ ಕಣ್ಣೋಟದಂಚಲ್ಲಿಯ
ಅಪರಿಮಿತ ವಿಪರೀತ ವಾಂಛೆಯ ಅರಿಯದೇ
ಕೆರೆಯ ದಂಡೆಯ ಅಲೆಗಳಿಗೆ ಅಳಿಸಿಹೋಗುವ
ಮರಳ ಹೆಜ್ಜೆಯಾಗಲಾರೆ ನಾನು.
ನನ್ನೊಳಗಿನ ಒರತೆಗೆ ನಾನೇ ಸೆಲೆಯಾಗಬಲ್ಲವಳು
ಪ್ರಾಯದ ಹೆಣ್ಣಿನ ಪರಕಾಯ ಪ್ರವೇಶವೆಂದು ಅನೇಕ
ನೆರೆತ ಕೂದಲ ಹೆಪ್ಪುಗಟ್ಟಿದ ಕೈಗಳು
ಕೊಂಕು ನುಡಿದು ಮರೆಯಾದರು. ಆದರೂ
ಉಷ್ಣವಲಯದ ಬಿಸಿಗೆ ಬೆಣ್ಣೆಯ ಕಾಯಲಿಟ್ಟಿರುವೆ
ತುಪ್ಪದ ಘಮ ಬೆರೆಸಲು.
ನನ್ನೊಂದಿಗೆ ನೀವು ಬರುವಿರೇನು?

ನನ್ನ ಹೃದಯರಾಗ ಮೀಟುವ ತಂಬೂರ ನೀನು
ಅನ್ಯಥಾ ನೀರೆ ನಿಯಾಮಕಳಲ್ಲ
ಎಂಬ ನಿನ್ನ ಎತ್ತಿದ ಕಂಠದ ಕುಹಕ ಗಾನಕ್ಕೆ
ಕಿವುಡಾಗಲಾರೆ ನಾನು.
ನಿನಗಾಗೇ ಕಂಚಿನ ಕಂಠವ ಎರವಲು ಪಡೆದವಳು.
ನಯನಾಜೂಕಿನ ನಕಲು ಪಡೆದ ಹೆರಳುಗಳು
ತುಟಿಕೊಂಕಿಸಿ ಬೆನ್ನು ತಿರುವಿದರು. ಆದರೂ
ರಾಗಮಾಲಿಕೆಯ ಮಧುರ ಮಂಜುಳಗಾನಕ್ಕೆ
ತಾಲೀಮು ರಂಗವನ್ನು ಸಿದ್ಧಗೊಳಿಸುತ್ತಿರುವೆ.
ನನ್ನೊಂದಿಗೆ ನೀವು ಬರುವಿರೇನು?

ಕಣ್ಣೊರೆಸುವ ಹಸ್ತಗಳು ಮಸಿಯಲ್ಲಾಡಿಸಿ ಕೈಗಳ
ಮುಖಕ್ಕೆ ಬಳಿಯುತ್ತ ನಗುತ್ತಿವೆ
ಬೆಂಕಿಯನ್ನು ಎದೆಗಿಳಿಸುವುದನ್ನೇ ಕಲಿತು ಬಂದ
ತೊಗಟೆ ಕೈಗಳು ಕುತ್ತಿಗೆ ಹಿಸುಕುತ್ತಿವೆ.
ಮೃದ್ವಂಗಿಯ ಮೆತ್ತಗೆ ಹಿಡಿದು ಹಸ್ತದೊಳಗೆ
ಜೋಪಾನ ಎನ್ನುತ್ತಾ ಅಲ್ಲೆ ಅದುಮಿ ಬಿಡುವ
ಹಸ್ತಗಳದೇ ಭಯ.
ಮೈತುಂಬಾ ಬಿರುಬಿಸಿಲ ನೀರ ಬೊಕ್ಕೆಗಳು.
ತೈಲ ಮಾಲೀಷು ಕೂಡಾ ಶಮನಗೈಯದಂತೆ
ಮೈಮನದ ಹಾಲಾಹಲ ಹೆಚ್ಚುತ್ತಲೇ ಇದೆ.
ಉಪಶಮನಕ್ಕೆ ನಿಮ್ಮಲ್ಲಿ ಮದ್ದುಂಟೇನು?
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...