Home / ಕವನ / ಕವಿತೆ / ಹಾಲಾಹಲಕ್ಕೆ ನಿಮ್ಮಲ್ಲಿ ಮದ್ದುಂಟೇನು?

ಹಾಲಾಹಲಕ್ಕೆ ನಿಮ್ಮಲ್ಲಿ ಮದ್ದುಂಟೇನು?

ನನ್ನೊಳಗೆ ನಿನ್ನ ಕಾಪಿಟ್ಟುಕೊಳ್ಳುದಕ್ಕೆ
ಪಕ್ಕಾಗಿದ್ದೇನೆ.
ಅನ್ಯಥಾ ನೀರಿನಲೆಗಳ ನಡುವೆ
ಸುಳಿಯ ನರ್ತನಕೆ ಕುಣಿವ ತರಗಲೆಯಲ್ಲ ನಾನು
ಗೋಣು ಅಲ್ಲಾಡಿಸುವುದ ಮರೆತುಬಿಟ್ಟವಳು.
ಸೊಕ್ಕಿನವಳೆಂದು ಜರಿದು ಅನೇಕ ಮೂಗುತಿಗಳು
ನನ್ನೊಂದಿಗೆ ಮಾತುಬಿಟ್ಟವು. ಆದರೂ
ಬಯಲ ಗಾಳಿಗೆ ಬೇಲಿ ಹಾಕಲು ಕಂಬಗಳ
ಜೋಡಿಸುತ್ತಿರುವೆ.
ನನ್ನೊಂದಿಗೆ ನೀವು ಬರುವಿರೇನು?

ನನ್ನೊಂದಿಗೆ ನಿನ್ನುಸಿರ ಬೆಸೆದುಕೊಂಡಿದ್ದೇನೆ.
ಅನ್ಯಥಾ ಕಾಲಬೆರಳಿಂದ ನೆಲವ ಬಗಿಯುತ್ತ
ನಿಂತ ನೀರೆಯರಂತೆ ನಿನ್ನ ಕೆಂಗಣ್ಣಿಗೆ
ನಖಶಿಖಾಂತ ನಡುಕದ ಶಾಲು ಹೊದ್ದುಕೊಳ್ಳಲಾರೆ ನಾನು.
ಉರಿವಾಗ್ನಿಯಾಗೇ ಪ್ರಜ್ವಲಿಸಬಲ್ಲವಳು.
ಗಂಡಿಗಿಲ್ಲದ ಕೊಬ್ಬಿನವಳೆಂದು ಅನೇಕ ಹೂಮುಡಿಗಳು
ಹಂಗಿಸಿ ಮುಖತಿರುವಿದವು. ಆದರೂ
ಮನೆಯ ಜಂತಿಯ ನಾಜೂಕಾಗೇ ಜೋಡಿಸುತಿರುವೆ.
ನನ್ನೊಂದಿಗೆ ನೀವು ಬರುವಿರೇನು?

ನನ್ನ ದೇಹದ ತುಂಬಾ ನಿನ್ನತ್ತರಿನ
ಪರಿಮಳವ ಪೂಸಿಕೊಂಡಿದ್ದೇನೆ.
ಅನ್ಯಥಾ ನಿನ್ನ ಕಣ್ಣೋಟದಂಚಲ್ಲಿಯ
ಅಪರಿಮಿತ ವಿಪರೀತ ವಾಂಛೆಯ ಅರಿಯದೇ
ಕೆರೆಯ ದಂಡೆಯ ಅಲೆಗಳಿಗೆ ಅಳಿಸಿಹೋಗುವ
ಮರಳ ಹೆಜ್ಜೆಯಾಗಲಾರೆ ನಾನು.
ನನ್ನೊಳಗಿನ ಒರತೆಗೆ ನಾನೇ ಸೆಲೆಯಾಗಬಲ್ಲವಳು
ಪ್ರಾಯದ ಹೆಣ್ಣಿನ ಪರಕಾಯ ಪ್ರವೇಶವೆಂದು ಅನೇಕ
ನೆರೆತ ಕೂದಲ ಹೆಪ್ಪುಗಟ್ಟಿದ ಕೈಗಳು
ಕೊಂಕು ನುಡಿದು ಮರೆಯಾದರು. ಆದರೂ
ಉಷ್ಣವಲಯದ ಬಿಸಿಗೆ ಬೆಣ್ಣೆಯ ಕಾಯಲಿಟ್ಟಿರುವೆ
ತುಪ್ಪದ ಘಮ ಬೆರೆಸಲು.
ನನ್ನೊಂದಿಗೆ ನೀವು ಬರುವಿರೇನು?

ನನ್ನ ಹೃದಯರಾಗ ಮೀಟುವ ತಂಬೂರ ನೀನು
ಅನ್ಯಥಾ ನೀರೆ ನಿಯಾಮಕಳಲ್ಲ
ಎಂಬ ನಿನ್ನ ಎತ್ತಿದ ಕಂಠದ ಕುಹಕ ಗಾನಕ್ಕೆ
ಕಿವುಡಾಗಲಾರೆ ನಾನು.
ನಿನಗಾಗೇ ಕಂಚಿನ ಕಂಠವ ಎರವಲು ಪಡೆದವಳು.
ನಯನಾಜೂಕಿನ ನಕಲು ಪಡೆದ ಹೆರಳುಗಳು
ತುಟಿಕೊಂಕಿಸಿ ಬೆನ್ನು ತಿರುವಿದರು. ಆದರೂ
ರಾಗಮಾಲಿಕೆಯ ಮಧುರ ಮಂಜುಳಗಾನಕ್ಕೆ
ತಾಲೀಮು ರಂಗವನ್ನು ಸಿದ್ಧಗೊಳಿಸುತ್ತಿರುವೆ.
ನನ್ನೊಂದಿಗೆ ನೀವು ಬರುವಿರೇನು?

ಕಣ್ಣೊರೆಸುವ ಹಸ್ತಗಳು ಮಸಿಯಲ್ಲಾಡಿಸಿ ಕೈಗಳ
ಮುಖಕ್ಕೆ ಬಳಿಯುತ್ತ ನಗುತ್ತಿವೆ
ಬೆಂಕಿಯನ್ನು ಎದೆಗಿಳಿಸುವುದನ್ನೇ ಕಲಿತು ಬಂದ
ತೊಗಟೆ ಕೈಗಳು ಕುತ್ತಿಗೆ ಹಿಸುಕುತ್ತಿವೆ.
ಮೃದ್ವಂಗಿಯ ಮೆತ್ತಗೆ ಹಿಡಿದು ಹಸ್ತದೊಳಗೆ
ಜೋಪಾನ ಎನ್ನುತ್ತಾ ಅಲ್ಲೆ ಅದುಮಿ ಬಿಡುವ
ಹಸ್ತಗಳದೇ ಭಯ.
ಮೈತುಂಬಾ ಬಿರುಬಿಸಿಲ ನೀರ ಬೊಕ್ಕೆಗಳು.
ತೈಲ ಮಾಲೀಷು ಕೂಡಾ ಶಮನಗೈಯದಂತೆ
ಮೈಮನದ ಹಾಲಾಹಲ ಹೆಚ್ಚುತ್ತಲೇ ಇದೆ.
ಉಪಶಮನಕ್ಕೆ ನಿಮ್ಮಲ್ಲಿ ಮದ್ದುಂಟೇನು?
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...