Home / ಕವನ / ಕವಿತೆ / ಅಪ್ಪ ಕೊಡಿಸಿದ ಅಂಗಿ

ಅಪ್ಪ ಕೊಡಿಸಿದ ಅಂಗಿ

ಅದು ನನ್ನದಲ್ಲದ ಅಂಗಿ
ಅದರೆ ಇಂಚಿಂಚೂ ಮೆಚ್ಚುಗೆ ಆದದ್ದು ಸುಳ್ಳಲ್ಲ.
ಬಯಸಿದ್ದು ಕನವರಿಸಿದ್ದು ಅದಕ್ಕಾಗೇ
ಇಲ್ಲ, ಬಿಟ್ಟುಬಿಡು, ನಿನ್ನ ಮೈಬಣ್ಣಕ್ಕೆ ಒಪ್ಪಿಗೆಯಾಗದು
ಅಮ್ಮನ ತಕರಾರು.
ಮುನಿಸಿಕೊಂಡೆ, ಮಾತು ಬಿಟ್ಟೆ, ಮತ್ತೆ ಮತ್ತೆ ನೋಡಿಬಂದೆ.
ಕಿವಿಗಿಳಿದರೂ ಕಾದ ಸೀಸ.

ಬಣ್ಣದ ಅಂಗಿಯ ಮೋಹ ಬೇಡ
ಎನ್ನುತ್ತ ಲಗುಬಗೆಯಿಂದ ಅಪ್ಪ ನನಗೆಂದೇ
ಒಂದಂಗಿ ಕೊಡಿಸಿಬಿಟ್ಟರು.
ಬಾಳಿಕೆಗೆ ಬರವಿಲ್ಲ
ಕಾಲಕ್ಕೂ ಕಷ್ಟಕ್ಕೂ ಜೊತೆಯಾಗಿ
ನನ್ನ ಮೈಗಂಟಿಕೊಂಡೆ ಕಾಯುತ್ತದೆ ಎಂದೆನ್ನುತ.

ಬರಬರುತ್ತ ಅಂಗಿ ಮೇಲೆ ಆಸೆ ತಾನೆ ತಾನೆ ನನಗೂ
ಒಮ್ಮೆ ತೊಟ್ಟರೂ ಮತ್ತೆ ಮತ್ತೆ ತೊಡುವಾಸೆ
ಆ ಅಂಗಿ ಬಿಟ್ಟರೆ ಬೇರೆ ಗತಿಯಿಲ್ಲ
ನನ್ನ ತೊಗಲಿಗೆ ಅಂಟಿಕೊಂಡಂತೆ ಅಂಗಿ.

ಅಂಗಿಗೂ ನಾನೆಂದರೆ ಅಷ್ಟಕಷ್ಟೆ ಮೊದಮೊದಲು
ದಿಕ್ಕೆಟ್ಟ ದರ್ಪದ ಧಿಮಾಕು
ಕಳಚಿ ಇಟ್ಟಾಗಲೆಲ್ಲ ಸ್ವಚ್ಛಂದ ಹಾರಾಟ.

ಈಗೀಗ ಅದಕ್ಕೂ ಏನೋ ಅನುಬಂಧ
ನನ್ನ ಮೈಗಂಟಿಕೊಂಡೆ ಇರುತ್ತದೆ
ಒಳಗೊಳಗೆ ಕಚಗುಳಿ ಇಡುತ್ತ, ನನ್ನನ್ನೆ ಮೆಚ್ಚುತ್ತ
ಅಂಗಿಗೆ ನನ್ನೆಲ್ಲವನ್ನೂ ಒಳಗೊಳ್ಳುವ ತಾಕತ್ತಿದೆ.
ಒಳಹರವು ಚೆನ್ನಾಗಿದೆ. ಸಣ್ಣಪುಟ್ಟ ಮಳೆಗೆ ಧೃತಿಗೆಡದು.
ಬಿಸಿಲಿಗೆ ಬಣ್ಣಗೆಡದು.

ಕಾಯ್ದುಕೋ ಕಾಳಜಿಯಿಂದ
ಅಸಡ್ಡೆ ಮಾಡಿದರೆ, ಬೇಕೆಂದರಲ್ಲಿ ಕಳಚಿ ಇಟ್ಟರೆ
ಹಾರಿಹೋದೀತು ಎಚ್ಚರಿಸಿದ್ದಳು ಅಮ್ಮ
ಈಗ ನಾನೂ ಅಷ್ಟೇ
ಬೆಲೆಬಾಳುವ ಬಣ್ಣದ ಅಂಗಿಗಳಿಗಿಂತ
ದೀರ್ಘಬಾಳಿಕೆಯ ಇಂತಹ ಅಂಗಿಯ
ಹುಡುಕಾಟದಲ್ಲಿದ್ದೇನೆ ನನ್ನ ಮಗಳಿಗೂ.
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...