Home / ಕವನ / ಕವಿತೆ / ಅಪ್ಪ ಕೊಡಿಸಿದ ಅಂಗಿ

ಅಪ್ಪ ಕೊಡಿಸಿದ ಅಂಗಿ

ಅದು ನನ್ನದಲ್ಲದ ಅಂಗಿ
ಅದರೆ ಇಂಚಿಂಚೂ ಮೆಚ್ಚುಗೆ ಆದದ್ದು ಸುಳ್ಳಲ್ಲ.
ಬಯಸಿದ್ದು ಕನವರಿಸಿದ್ದು ಅದಕ್ಕಾಗೇ
ಇಲ್ಲ, ಬಿಟ್ಟುಬಿಡು, ನಿನ್ನ ಮೈಬಣ್ಣಕ್ಕೆ ಒಪ್ಪಿಗೆಯಾಗದು
ಅಮ್ಮನ ತಕರಾರು.
ಮುನಿಸಿಕೊಂಡೆ, ಮಾತು ಬಿಟ್ಟೆ, ಮತ್ತೆ ಮತ್ತೆ ನೋಡಿಬಂದೆ.
ಕಿವಿಗಿಳಿದರೂ ಕಾದ ಸೀಸ.

ಬಣ್ಣದ ಅಂಗಿಯ ಮೋಹ ಬೇಡ
ಎನ್ನುತ್ತ ಲಗುಬಗೆಯಿಂದ ಅಪ್ಪ ನನಗೆಂದೇ
ಒಂದಂಗಿ ಕೊಡಿಸಿಬಿಟ್ಟರು.
ಬಾಳಿಕೆಗೆ ಬರವಿಲ್ಲ
ಕಾಲಕ್ಕೂ ಕಷ್ಟಕ್ಕೂ ಜೊತೆಯಾಗಿ
ನನ್ನ ಮೈಗಂಟಿಕೊಂಡೆ ಕಾಯುತ್ತದೆ ಎಂದೆನ್ನುತ.

ಬರಬರುತ್ತ ಅಂಗಿ ಮೇಲೆ ಆಸೆ ತಾನೆ ತಾನೆ ನನಗೂ
ಒಮ್ಮೆ ತೊಟ್ಟರೂ ಮತ್ತೆ ಮತ್ತೆ ತೊಡುವಾಸೆ
ಆ ಅಂಗಿ ಬಿಟ್ಟರೆ ಬೇರೆ ಗತಿಯಿಲ್ಲ
ನನ್ನ ತೊಗಲಿಗೆ ಅಂಟಿಕೊಂಡಂತೆ ಅಂಗಿ.

ಅಂಗಿಗೂ ನಾನೆಂದರೆ ಅಷ್ಟಕಷ್ಟೆ ಮೊದಮೊದಲು
ದಿಕ್ಕೆಟ್ಟ ದರ್ಪದ ಧಿಮಾಕು
ಕಳಚಿ ಇಟ್ಟಾಗಲೆಲ್ಲ ಸ್ವಚ್ಛಂದ ಹಾರಾಟ.

ಈಗೀಗ ಅದಕ್ಕೂ ಏನೋ ಅನುಬಂಧ
ನನ್ನ ಮೈಗಂಟಿಕೊಂಡೆ ಇರುತ್ತದೆ
ಒಳಗೊಳಗೆ ಕಚಗುಳಿ ಇಡುತ್ತ, ನನ್ನನ್ನೆ ಮೆಚ್ಚುತ್ತ
ಅಂಗಿಗೆ ನನ್ನೆಲ್ಲವನ್ನೂ ಒಳಗೊಳ್ಳುವ ತಾಕತ್ತಿದೆ.
ಒಳಹರವು ಚೆನ್ನಾಗಿದೆ. ಸಣ್ಣಪುಟ್ಟ ಮಳೆಗೆ ಧೃತಿಗೆಡದು.
ಬಿಸಿಲಿಗೆ ಬಣ್ಣಗೆಡದು.

ಕಾಯ್ದುಕೋ ಕಾಳಜಿಯಿಂದ
ಅಸಡ್ಡೆ ಮಾಡಿದರೆ, ಬೇಕೆಂದರಲ್ಲಿ ಕಳಚಿ ಇಟ್ಟರೆ
ಹಾರಿಹೋದೀತು ಎಚ್ಚರಿಸಿದ್ದಳು ಅಮ್ಮ
ಈಗ ನಾನೂ ಅಷ್ಟೇ
ಬೆಲೆಬಾಳುವ ಬಣ್ಣದ ಅಂಗಿಗಳಿಗಿಂತ
ದೀರ್ಘಬಾಳಿಕೆಯ ಇಂತಹ ಅಂಗಿಯ
ಹುಡುಕಾಟದಲ್ಲಿದ್ದೇನೆ ನನ್ನ ಮಗಳಿಗೂ.
*****

Tagged:

Leave a Reply

Your email address will not be published. Required fields are marked *

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...