Home / ಕವನ / ಕವಿತೆ / ಮೌನದ ಗಂಟೆ

ಮೌನದ ಗಂಟೆ

(ಭಾರತದಿಂದ ಗಡೀಪಾರು ಮಾಡಲ್ಪಟ್ಟ ಬೌದ್ಧದರ್‍ಮ ಚೀನಾ, ಜಾಪಾನುಗಳಿಗೆ ವಲಸೆ ಹೋಗಿ ಕ್ರಮೇಣ ಅಲ್ಲಿ ಕವಲೊಡೆದ ಶಾಖೆಗಳಲ್ಲಿ ಪ್ರಮುಖವಾದ ಶಾಖೆಯೆ ‘ಝೆನ್’. ಶೊಯ್‌ಚಿ ಒಬ್ಬ ಝೆನ್ ಧರ್‍ಮಗುರು. ಆತ ತನ್ನ ಶಿಷ್ಯರಿಗೆ ಸೂತ್ರಗಳ ಪಠಣ ಕೈಬಿಟ್ಟು ಕೇವಲ ಧ್ಯಾನದಲ್ಲಿ ನಿರತರಾಗುವಂತೆ ಆದೇಶ ನೀಡುತ್ತಾನೆ. ದೇವಾಲಯ ಹಗಲು ರಾತ್ರಿಯ ಪರಿವೆಯಿಲ್ಲದೆ ಮೌನದಲ್ಲಿ ಮುಳುಗುತ್ತದೆ. ಅದೊಂದು ದಿನ ಇದ್ದಕ್ಕಿದ್ದ ಹಾಗೆ ದೇವಾಲಯದಿಂದ ಸೂತ್ರಗಳ ಪಠಣ ಕೇಳಿ ಬರುತ್ತದೆ. ಗುರುವಿನ ಮರಣವಾರ್‍ತೆ ಆ ಮೂಲಕ ಎಲ್ಲೆಡೆ ಬಿತ್ತರಗೊಳ್ಳುತ್ತದೆ.)

ಅದೊಂದು ದಿನ ಶೊಯ್‌ಚಿ

ಗಂಟೆಗಳಿಗೆ ಮೊಳಗಿದ್ದು ಸಾಕು ಅಂದ
ತಾಳಗಳಿಗೆ ಕುಣಿದದ್ದು ಸಾಕು ಅಂದ
ಮಂತ್ರಗಳಿಗೆ ಪಠಿಸಿದ್ದು ಸಾಕು ಅಂದ.

ಗಂಟೆಗಳಿಗೆ ಒಂದು ಚಣ ಗಾಬರಿಯಾಯಿತು
ತಾಳಗಳು ಕುಣಿತದ ಮಧ್ಯೆ ಕೆರಳಿ ನಿಂತವು
ಮಂತ್ರಗಳು ಮುಖ ಊದಿಸಿಕೊಂಡವು
ಶಿಷ್ಯರು ತಳಮಳಿಸಿದರು.

ಇದೀಗ ಶೊಯ್‌ಚಿ ಎಲ್ಲರಿಗೂ
ಧ್ಯಾನಿಸಲು ಹೇಳಿದ.

ಇಷ್ಟಾನಿಷ್ಟವನೆಲ್ಲ ಮೆಟ್ಟಿ
ಗಂಟೆಗಳು ಗರಬಡಿದು ನಿಂತವು
ತಾಳಗಳು ತಲ್ಲೀನವಾದವು
ಮಂತ್ರಗಳು ಮಗ್ನವಾದವು
ದೇವಾಲಯ ಧ್ಯಾನಸ್ಥವಾಯಿತು.

ಶಿಷ್ಯರು-
ಬುದ್ಧನನ್ನೊಮ್ಮೆ ನೋಡಿದರು
ಮುಗುಳುನಗೆಯನ್ನೂ ನೋಡಿದರು
ಧ್ಯಾನದಲ್ಲಿ ಮುಳುಗಿದರು.

‘ಧ್ಯಾನಿಸಿ’ ಅಂದದ್ದು
ಅಲ್ಲೇ ಭುಸುಗುಡುತ್ತಾ
ಅಡ್ಡಾಡುತ್ತಿದ್ದ ಸೂರ್‍ಯನ
ಕಿವಿಗೂ ಬಿತ್ತು.
ಅಗ್ನಿಪರ್‍ವತದೊಳಗೊಂದು
ಅಂತರ್‍ಗಾಮಿ ನದಿ
ತಣ್ಣಗೆ ಹರಿದು ಹೋಯಿತು.

‘ಧ್ಯಾನಿಸಿ’ ಅಂದದ್ದು
ಅಲ್ಲೇ ಚಿನ್ನಾಟವಾಡುತ್ತಿದ್ದ
ಮರಿಮೋಡಗಳ ಹಿಂಡಿಗೂ ತಟ್ಟಿತು
ಮಿಂಚಿನ ಸೆಳಕೊಂದು
ಮೆರೆದು ಮರೆಯಾಯಿತು.

ಹೀಚು, ಮೊಗ್ಗು, ಹೂವು, ಹಣ್ಣು,
ಕೆಂಪೆಲೆ, ಹಸಿರೆಲೆ, ಹಣ್ಣೆಲೆಗಳ
ಲೆಕ್ಕಾಚಾರದಲ್ಲಿ ಮಗ್ನವಾಗಿದ್ದ
ಹೆಮ್ಮರಿಗಳಿಗೆ ಗಾಳಿಗಿವಿಯೂದಿ
‘ಧ್ಯಾನಿಸಿ’ ಅಂತು.
ಅತ್ತಿಂದಿತ್ತ ಹೊಯ್ದಾಡಿ
ಧ್ಯಾನಕ್ಕೆ ಶರಣಾಯಿತು.

ಧುಮುಧುಮು ಎಂದು
ಧುಮುಗುಡುತ್ತಾ ಧುಮ್ಮಿಕ್ಕಿ
ಹರಿಯುತ್ತಿದ್ದ ನದಿಯ
ಎದೆ ಸುಳಿಯೊಳಗೆ
ದನಿಯೊಂದು ಚಿಮ್ಮಿ
ತಡೆದು ನಿಲ್ಲಿಸಿತು.

ಚಂದ್ರ ಓಡೋಡಿ ಬಂದು
ಇರುಳ ಮನೆಗೆ ದೀಪ ಹಚ್ಚಿದ
ಬೆಳಕು ಸಾಲದು
ಎಂದು ಅವನಿಗೂ ಅನ್ನಿಸಿತು.

ದುಂಬಿಯ ಝೇಂಕಾರದ ಹಾಗೆ
ಹಕ್ಕಿಯ ಹಾಡಿನ ಹಾಗೆ
ಹೂವಿನ ಗಂಧದ ಹಾಗೆ
ಧ್ಯಾನ ಎಲ್ಲರನ್ನೂ ತಬ್ಬುತ್ತಿತ್ತು
ದಟ್ಟವಾಗುತ್ತಿತ್ತು.

ಅದೊಂದು ದಿನ ಶೊಯ್‌ಚಿ
ಇನ್ನಿಲ್ಲವಾದ.

ಸೂರ್‍ಯ ಬೆಂಕಿಯ ನಾಲಗೆ ತೆರೆದು
ನದಿ ಧುಮ್ಮಿಕ್ಕಿ ನಡೆದು
ಶೊಯ್‌ಚಿ ಇನ್ನಿಲ್ಲ ಎಂದು ಸಾರಿದವು.

ಗಂಟೆಗಳು ಮೊಳಗತೊಡಗಿದವು
ತಾಳಗಳು ಕುಣಿಯತೊಡಗಿದವು
ಮಂತ್ರಗಳ ಗರ್‍ಜನೆ ಮುಗಿಲು ಮುಟ್ಟಿತು.

ಯಾರಿಗೋ ಗೊತ್ತಾಯಿತು
ಶೊಯ್‌ಚಿ ಇನ್ನಿಲ್ಲ
ಎಲ್ಲರಿಗೂ ಗೊತ್ತಾಯಿತು-
ಶೊಯ್‌ಚಿ ಇನ್ನಿಲ್ಲ
ಜಗತ್ತೇ ನುಡಿಯಿತು
ಶೊಯ್‌ಚಿ ಇನ್ನಿಲ್ಲ

ಶಿಷ್ಯರು ನೋಡಿದರು
ಸದ್ದುಗದ್ದಲ ಸಂಭ್ರಮದಲ್ಲಿ
ಕರಗುತ್ತಿದ್ದ
ಬುದ್ಧನನ್ನು ನೋಡಿದರು

ದುಂಬಿಯ ಝೇಂಕಾರದಲ್ಲಿ
ಹಕ್ಕಿಯ ಹಾಡಿನಲ್ಲಿ
ಹೂವಿನ ಪರಿಮಳದಲ್ಲಿ
ಕರಗುತ್ತಿದ್ದ
ಮುಗುಳುನಗೆಯನ್ನು ನೋಡಿದರು.

ಧೂಪದ ಹೊಗೆ ಕಣ್ಣ
ಕವಿಯುವ ತನಕ ನೋಡಿದರು.
*****

Tagged:

Leave a Reply

Your email address will not be published. Required fields are marked *

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...

ನನ್ನ ಜನ್ಮ ಗ್ರಾಮಕ್ಕೆ ಹೋಗದೆ ನಾಲ್ಕಾರು ವರುಷಗಳಾಗಿದ್ದವು. ಮೇ ತಿಂಗಳ ಬೆವರನ್ನು ತೋಟದ ಅಬ್ಬಿಯಲ್ಲಿ ತೊಳೆದು ತಂಪಾಗಿ ಒಂದು ಮಾಸ ಕಳೆದು ಬರುವ ಎಂದು ಹಳ್ಳಿಗೆ ಹೋಗಿದ್ದೆ. ಮನೆಗೆ ತಲುಪಿದ ಮರುದಿನವೇ ತಂಗಿಯ ಮನೆಗೆ ಹೋಗುವದು ನನ್ನ ಪದ್ಧತಿ. ನಮ್ಮ ಕೇರಿಯ ಎದುರಿನ ಗುಡ್ಡೆಯನ್ನು ಹತ್...