Home / ಕವನ / ಕವಿತೆ / ಮೌನದ ಗಂಟೆ

ಮೌನದ ಗಂಟೆ

(ಭಾರತದಿಂದ ಗಡೀಪಾರು ಮಾಡಲ್ಪಟ್ಟ ಬೌದ್ಧದರ್‍ಮ ಚೀನಾ, ಜಾಪಾನುಗಳಿಗೆ ವಲಸೆ ಹೋಗಿ ಕ್ರಮೇಣ ಅಲ್ಲಿ ಕವಲೊಡೆದ ಶಾಖೆಗಳಲ್ಲಿ ಪ್ರಮುಖವಾದ ಶಾಖೆಯೆ ‘ಝೆನ್’. ಶೊಯ್‌ಚಿ ಒಬ್ಬ ಝೆನ್ ಧರ್‍ಮಗುರು. ಆತ ತನ್ನ ಶಿಷ್ಯರಿಗೆ ಸೂತ್ರಗಳ ಪಠಣ ಕೈಬಿಟ್ಟು ಕೇವಲ ಧ್ಯಾನದಲ್ಲಿ ನಿರತರಾಗುವಂತೆ ಆದೇಶ ನೀಡುತ್ತಾನೆ. ದೇವಾಲಯ ಹಗಲು ರಾತ್ರಿಯ ಪರಿವೆಯಿಲ್ಲದೆ ಮೌನದಲ್ಲಿ ಮುಳುಗುತ್ತದೆ. ಅದೊಂದು ದಿನ ಇದ್ದಕ್ಕಿದ್ದ ಹಾಗೆ ದೇವಾಲಯದಿಂದ ಸೂತ್ರಗಳ ಪಠಣ ಕೇಳಿ ಬರುತ್ತದೆ. ಗುರುವಿನ ಮರಣವಾರ್‍ತೆ ಆ ಮೂಲಕ ಎಲ್ಲೆಡೆ ಬಿತ್ತರಗೊಳ್ಳುತ್ತದೆ.)

ಅದೊಂದು ದಿನ ಶೊಯ್‌ಚಿ

ಗಂಟೆಗಳಿಗೆ ಮೊಳಗಿದ್ದು ಸಾಕು ಅಂದ
ತಾಳಗಳಿಗೆ ಕುಣಿದದ್ದು ಸಾಕು ಅಂದ
ಮಂತ್ರಗಳಿಗೆ ಪಠಿಸಿದ್ದು ಸಾಕು ಅಂದ.

ಗಂಟೆಗಳಿಗೆ ಒಂದು ಚಣ ಗಾಬರಿಯಾಯಿತು
ತಾಳಗಳು ಕುಣಿತದ ಮಧ್ಯೆ ಕೆರಳಿ ನಿಂತವು
ಮಂತ್ರಗಳು ಮುಖ ಊದಿಸಿಕೊಂಡವು
ಶಿಷ್ಯರು ತಳಮಳಿಸಿದರು.

ಇದೀಗ ಶೊಯ್‌ಚಿ ಎಲ್ಲರಿಗೂ
ಧ್ಯಾನಿಸಲು ಹೇಳಿದ.

ಇಷ್ಟಾನಿಷ್ಟವನೆಲ್ಲ ಮೆಟ್ಟಿ
ಗಂಟೆಗಳು ಗರಬಡಿದು ನಿಂತವು
ತಾಳಗಳು ತಲ್ಲೀನವಾದವು
ಮಂತ್ರಗಳು ಮಗ್ನವಾದವು
ದೇವಾಲಯ ಧ್ಯಾನಸ್ಥವಾಯಿತು.

ಶಿಷ್ಯರು-
ಬುದ್ಧನನ್ನೊಮ್ಮೆ ನೋಡಿದರು
ಮುಗುಳುನಗೆಯನ್ನೂ ನೋಡಿದರು
ಧ್ಯಾನದಲ್ಲಿ ಮುಳುಗಿದರು.

‘ಧ್ಯಾನಿಸಿ’ ಅಂದದ್ದು
ಅಲ್ಲೇ ಭುಸುಗುಡುತ್ತಾ
ಅಡ್ಡಾಡುತ್ತಿದ್ದ ಸೂರ್‍ಯನ
ಕಿವಿಗೂ ಬಿತ್ತು.
ಅಗ್ನಿಪರ್‍ವತದೊಳಗೊಂದು
ಅಂತರ್‍ಗಾಮಿ ನದಿ
ತಣ್ಣಗೆ ಹರಿದು ಹೋಯಿತು.

‘ಧ್ಯಾನಿಸಿ’ ಅಂದದ್ದು
ಅಲ್ಲೇ ಚಿನ್ನಾಟವಾಡುತ್ತಿದ್ದ
ಮರಿಮೋಡಗಳ ಹಿಂಡಿಗೂ ತಟ್ಟಿತು
ಮಿಂಚಿನ ಸೆಳಕೊಂದು
ಮೆರೆದು ಮರೆಯಾಯಿತು.

ಹೀಚು, ಮೊಗ್ಗು, ಹೂವು, ಹಣ್ಣು,
ಕೆಂಪೆಲೆ, ಹಸಿರೆಲೆ, ಹಣ್ಣೆಲೆಗಳ
ಲೆಕ್ಕಾಚಾರದಲ್ಲಿ ಮಗ್ನವಾಗಿದ್ದ
ಹೆಮ್ಮರಿಗಳಿಗೆ ಗಾಳಿಗಿವಿಯೂದಿ
‘ಧ್ಯಾನಿಸಿ’ ಅಂತು.
ಅತ್ತಿಂದಿತ್ತ ಹೊಯ್ದಾಡಿ
ಧ್ಯಾನಕ್ಕೆ ಶರಣಾಯಿತು.

ಧುಮುಧುಮು ಎಂದು
ಧುಮುಗುಡುತ್ತಾ ಧುಮ್ಮಿಕ್ಕಿ
ಹರಿಯುತ್ತಿದ್ದ ನದಿಯ
ಎದೆ ಸುಳಿಯೊಳಗೆ
ದನಿಯೊಂದು ಚಿಮ್ಮಿ
ತಡೆದು ನಿಲ್ಲಿಸಿತು.

ಚಂದ್ರ ಓಡೋಡಿ ಬಂದು
ಇರುಳ ಮನೆಗೆ ದೀಪ ಹಚ್ಚಿದ
ಬೆಳಕು ಸಾಲದು
ಎಂದು ಅವನಿಗೂ ಅನ್ನಿಸಿತು.

ದುಂಬಿಯ ಝೇಂಕಾರದ ಹಾಗೆ
ಹಕ್ಕಿಯ ಹಾಡಿನ ಹಾಗೆ
ಹೂವಿನ ಗಂಧದ ಹಾಗೆ
ಧ್ಯಾನ ಎಲ್ಲರನ್ನೂ ತಬ್ಬುತ್ತಿತ್ತು
ದಟ್ಟವಾಗುತ್ತಿತ್ತು.

ಅದೊಂದು ದಿನ ಶೊಯ್‌ಚಿ
ಇನ್ನಿಲ್ಲವಾದ.

ಸೂರ್‍ಯ ಬೆಂಕಿಯ ನಾಲಗೆ ತೆರೆದು
ನದಿ ಧುಮ್ಮಿಕ್ಕಿ ನಡೆದು
ಶೊಯ್‌ಚಿ ಇನ್ನಿಲ್ಲ ಎಂದು ಸಾರಿದವು.

ಗಂಟೆಗಳು ಮೊಳಗತೊಡಗಿದವು
ತಾಳಗಳು ಕುಣಿಯತೊಡಗಿದವು
ಮಂತ್ರಗಳ ಗರ್‍ಜನೆ ಮುಗಿಲು ಮುಟ್ಟಿತು.

ಯಾರಿಗೋ ಗೊತ್ತಾಯಿತು
ಶೊಯ್‌ಚಿ ಇನ್ನಿಲ್ಲ
ಎಲ್ಲರಿಗೂ ಗೊತ್ತಾಯಿತು-
ಶೊಯ್‌ಚಿ ಇನ್ನಿಲ್ಲ
ಜಗತ್ತೇ ನುಡಿಯಿತು
ಶೊಯ್‌ಚಿ ಇನ್ನಿಲ್ಲ

ಶಿಷ್ಯರು ನೋಡಿದರು
ಸದ್ದುಗದ್ದಲ ಸಂಭ್ರಮದಲ್ಲಿ
ಕರಗುತ್ತಿದ್ದ
ಬುದ್ಧನನ್ನು ನೋಡಿದರು

ದುಂಬಿಯ ಝೇಂಕಾರದಲ್ಲಿ
ಹಕ್ಕಿಯ ಹಾಡಿನಲ್ಲಿ
ಹೂವಿನ ಪರಿಮಳದಲ್ಲಿ
ಕರಗುತ್ತಿದ್ದ
ಮುಗುಳುನಗೆಯನ್ನು ನೋಡಿದರು.

ಧೂಪದ ಹೊಗೆ ಕಣ್ಣ
ಕವಿಯುವ ತನಕ ನೋಡಿದರು.
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...