ಸ್ವಗತ

ಮುಂಜಾವದ ತಂಪೊತ್ತಿನಲ್ಲಿ
ಕೆಂಪು ಹೃದಯದ ಹುಡುಗಿ
ರಸ್ತೆಯಂಚಿನಲ್ಲಿ ನಿಂತಿದ್ದಾಳೆ.
ಯಾಕೆ? ಎಂದು ಕೇಳಬೇಕು,
ಹೇಗೆ ಕೇಳುವುದು?

ನೆಲವನ್ನು ಜಗ್ಗಿ ಹಿಡಿದಿರುವ ಕಾಲು.
ಸೋತು ತೂಗುತ್ತಿರುವ ಕೈಗಳು.
ದಿಟ್ಟಿಸಿ ದಿಟ್ಟಿಸಿ ಆಳಕ್ಕಿಳಿದಿರುವ ಕಣ್ಣು
ಇವಳನ್ನು ಸಂತೈಸಬೇಕು,
ಹೇಗೆ ಸಂತೈಸುವುದು?

ಹೃದಯ ತುಂಬಿ ತುಳುಕುತ್ತಿದೆ.
ಒಂದಾದರೂ ಹನಿ ಹಂಚಿಕೊಳ್ಳಿ
ಎಂದು ಕಂಡವರ ಕಾಡುತ್ತಿದ್ದಾಳೆ.
ಅವರೋ… ಬೆನ್ನಲ್ಲೆ ಮಾರುತ್ತರ
ಕೊಟ್ಟು ಸಾಗುತ್ತಿದ್ದಾರೆ.
ಇವಳಿಗೆ ಹೇಳಬೇಕು,
ಹೇಗೆ ಹೇಳುವುದು?

ಹೋಗು-
ಆ ತಾರೆಯರು ನಿನ್ನನ್ನು
ಅರ್ಥೈಸಿಕೊಳ್ಳುವರು
ಆ ಮರಗಳು ಅವರೆದೆಯೊಳಗೆ
ನಿನ್ನ ಕರೆದುಕೊಳ್ಳುವರು
ಆ ಚಂದಿರ ನಿನಗೆ ಜತೆಯಾದರೂ
ಆಗಬಹುದು ಎಂದು
ಇವಳಿಗೆ ಹೇಳಬೇಕು.
ಹೇಗೆ ಹೇಳುವುದು?

ಹುಡುಗಿ ಮರದಲ್ಲಿ
ಹೂವಾಗಿ ತೂಗುತ್ತಿದ್ದಾಳೆ.
ತಾರೆಯರು, ಚಂದಿರ,
ಮೋಡಗಳ ಮರೆಯಲ್ಲಿ
ಕುಳಿತು ಬಿಕ್ಕಳಿಸುತ್ತಿದ್ದಾರೆ
ದಳದಳ ಉದುರುತ್ತಿರುವ
ಕಣ್ಣೀರಿನಿಂದ ನೆಲ ಒದ್ದೆಯಾಗಿದೆ

ಹೀಗಾಗಬಾರದಿತ್ತು.


Previous post ಕಂತ್ರಿ
Next post ಅಳಿವು-ಉಳಿವು

ಸಣ್ಣ ಕತೆ

  • ರಾಮಿ

    ‘ಸಲಾಮ್ರಿ’ ರೈಲಿನ ಹೊತ್ತಾಗಿದೆ. ವೆಂಕಟೇಶನು ಒಂದೇಸವನೆ ತನ್ನ ಕೈಯಲ್ಲಿಯ ಗಡಿಯಾರವನ್ನು ನೋಡುತ್ತಿದ್ದಾನೆ. ‘ಸಲಾಮ್ರೀಽ ಏಕ ಪೈಸಾ.’ ಆಗ ಮತ್ತೆ ಒದರಿದಳು. ಟಾಂಗಾದ ತುದಿ ಹಿಡಿದು ಕೊಂಡು ಓಡ… Read more…

  • ನಿರಾಳ

    ಮಂಗಳೂರಿನ ಟೌನ್‌ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ. ಜೇಬಿಗೆ ಕೈ ಹಾಕಿ ನೋಡಿದ. ಬರೇ ಇಪ್ಪತ್ತೇಳು… Read more…

  • ಆಮಿಷ

    ರಮಾ ಕುರ್ಚಿಯನ್ನೊರಗಿ ಕುಳಿತಿದ್ದಳು. ದುಃಖವೇ ಮೂರ್ತಿವೆತ್ತಂತೆ ಕುಳಿತಿದ್ದ ಅವಳ ಹೃದಯದಲ್ಲಿ ಭೀಕರ ಕೋಲಾಹಲ ನಡೆದಿತ್ತು. ಕಣ್ಣುಗಳು ಆಳಕ್ಕಿಳಿದಿದ್ದವು. ದೇಹದ ಅಣು ಅಣುವೂ ನೋವಿನಿಂದ ಮಿಡಿಯುತ್ತಿತ್ತು. "ತಾನೇಕೆ ದುಡುಕಿಬಿಟ್ಟೆ?… Read more…

  • ಇನ್ನೊಬ್ಬ

    ದೇವರ ವಿಷಯದಲ್ಲಿ ನಾನು ಅಗ್ನೋಸ್ಟಿಕನೂ ರಾಜಕೀಯದ ವಿಷಯದಲ್ಲಿ ಸೆಂಟ್ರಿಸ್ಟನೂ ಆಗಿದ್ದೇನೆ. ಇವೆರಡೂ ಅಪಾಯವಿಲ್ಲದ ನಿಲುವುಗಳೆಂಬುದು ನನಗೆ ಗೊತ್ತು. ಅಗ್ನೋಸ್ಟಿಕನಾಗಿದ್ದವನನ್ನು ಆಸ್ತಿಕರೂ ನಾಸ್ತಿಕರೊ ಒಂದೇ ತರಹ ಪ್ರೀತಿಯಿಂದ ಕಾಣುತ್ತಾರೆ,… Read more…

  • ಮಲ್ಲೇಶಿಯ ನಲ್ಲೆಯರು

    ಹೇಮರಡ್ಡಿ ಪ್ರಭುಗಳು ಒಂದು ಊರಿನ ದೇಸಾಯರು. ಆ ಗ್ರಾಮದ ಉತ್ಪನ್ನವು ಆರೇಳು ಸಾವಿರ ರೂಪಾಯಿ ಇರುವದಲ್ಲದೆ ದೇಸಾಯರಿಗೆ ತೋಟ ಪಟ್ಟಿ ಮನೆಯ ಒಕ್ಕಲತನಗಳಿಂದಾದರೂ ಪ್ರಾಪ್ತಿಯು ಚನ್ನಾಗಿತ್ತು. ಅವರೊಂದು… Read more…