ಕೊಡು ನಿನ್ನ ದುಃಖ

ನನ್ನ ಸೌಂದರ್ಯವನ್ನು
ಮೆಚ್ಚಿಕೊಂಡ ಜನ
ನನ್ನ ಸರಳತೆಯನ್ನು
ಮೆಚ್ಚಿಕೊಂಡ ಜನ
ನನ್ನ ದುಃಖ ಎಷ್ಟೆಂದು ಕೇಳಲಿಲ್ಲ.

ನನ್ನನ್ನು ಪ್ರೀತಿಸಿದ ತಂದೆ
ನನ್ನನ್ನು ಸಲಹಿದ ತಾಯಿ
ನನ್ನ ಆಸೆಗಳೇನು
ಎಂದು ಕೇಳಲಿಲ್ಲ.

ನಾನು ನೀಲಿ ನಕಾಶೆಯೊಳಗೆ
ಹೊಳೆಯುವ ಕನಸುಗಳನ್ನು
ಗುರುತಿಸುತ್ತಿರುವಾಗ
ನನ್ನ ಜೀವದ ಹುಡುಗ
‘ನೀನೆಷ್ಟು ಮುಗುದೆ’
ಎಂದು ವಿಷಾದದಿಂದ ನಕ್ಕ.

ಆವತ್ತೆ ನನಗೆ ಗೊತ್ತಾಯಿತು,
ಈ ಜಗತ್ತಿನಲ್ಲಿರುವುದು
ಕೊಳೆತ ಹೃದಯಗಳು ಮಾತ್ರ.
ಈ ಜಗತ್ತಿನಲ್ಲಿರುವುದು ಹುಳಿತ ಕಣ್ಣುಗಳು ಮಾತ್ರ.

ಅಂದಿನಿಂದಲೆ ನಾನು
ಎಲ್ಲರ ಬಳಿ ಕಣ್ಣೀರು
ಬೇಡಲು ಶುರುಮಾಡಿದೆ.
ಎಲ್ಲರ ಕನಸುಗಳನ್ನು
ಕುತೂಹಲಿಯಾಗಿ ನೋಡಿದೆ.

ನನ್ನೆದೆಯೊಳಗೆ
ಹರಳುಗಟ್ಟುತ್ತಿತ್ತು ದುಃಖ
ಬೆಟ್ಟವಾಗುತ್ತಿತ್ತು ದುಃಖ
ನಾನು ಎಲ್ಲರಿಗೂ ಕೂಗಿ ಹೇಳುತ್ತಿದ್ದೆ
ನೋಡಿ-
ಈ ಬೆಟ್ಟ ಕಣ್ಣೀರಿನದು
ನನ್ನದು ಹಾಗು ನಿಮ್ಮದು.

ಬೆಟ್ಟ ಕರಗಿ ಪ್ರವಾಹವಾಗಿ
ಹರಿಯುತ್ತಿತ್ತು ದುಃಖ.
ನಾನು ಎಲ್ಲರಿಗೂ ಕೂಗಿ ಹೇಳುತ್ತಿದ್ದೆ
ನೋಡಿ-
ಈ ಪ್ರವಾಹ ಕಣ್ಣೀರಿನದು, ನನ್ನದು ಹಾಗೂ ನಿಮ್ಮದು.

ಎಲ್ಲ ನಕ್ಕರು, ಹೊರಟೇ ಹೋದರು.
ನಾನೊಬ್ಬಳೆ ಆಗಿದ್ದೆ
ಜೊತೆಗೆ ಬೆಟ್ಟ-ಪ್ರವಾಹ.

ಕೊನೆಗೂ ನೆನಪಾಯಿತು
ಹೌದು
ಅದು ಅವನದೆ ಮುಖ.
ಅದು ಕೇಳುತ್ತಿತ್ತು
ಕೊಡು ನಿನ್ನ ದುಃಖ
ಕೊಡು ನಿನ್ನ ದುಃಖ.


Previous post ಹೊಸ ವರ್ಷಗಳು
Next post ಪೊಸಗಾರ

ಸಣ್ಣ ಕತೆ

  • ಎಪ್ರಿಲ್ ಒಂದು

    ಒಮ್ಮೆಲೇ ಅವನಿಗೆ ಮದುವೆಯಾಗಿಬಿಡಬೇಕೆಂಬ ವಿಚಾರ ಬಂತು. ಮದುವೆಯಾಗುವದೆಂದರೆ ಒಂದು ಸಹಜವಾದ ವಿಚಾರವೆಂದು ಕೆಲವರಿಗೆ ಅನಿಸಬಹುದು. ಆದರೆ ಅವನದು ಮಾತ್ರ ಹಾಗಿರಲಿಲ್ಲ. ಎಲ್ಲರೂ ಅವನಿಗೆ ‘ಆಜನ್ಮ ಬ್ರಹ್ಮಚಾರಿ’ ಎಂಬ… Read more…

  • ನಂಟಿನ ಕೊನೆಯ ಬಲ್ಲವರಾರು?

    ಕುಳಿತವನು ಅಲುಗದಂತೆ ತದೇಕ ಚಿತ್ತದಿಂದ ಕಡಲನ್ನು ನೋಡುತ್ತಿದ್ದ. ಹಾಗೇ ಕುಳಿತು ಅರ್ಧಗಂಟೆ ಕಳೆದಿತ್ತು. ಮೊಲದ ಬಾರಿಗೆ ಕಡಲ ಕಂಡವನ ಚಿತ್ತ ಕಲಕುವುದೇಕೆಂದು ಕುಳಿತಲ್ಲೇ ಅವನನ್ನು ಬಿಟ್ಟು ತಿರುಗಾಡಿ… Read more…

  • ಕರಿಗಾಲಿನ ಗಿರಿರಾಯರು

    ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…

  • ತೊಳೆದ ಮುತ್ತು

    ಕರ್ನಾಟಕದಲ್ಲಿ ನಮ್ಮ ಮನೆತನವು ಪ್ರತಿಷ್ಠಿತವಾದದ್ದು. ವರ್ಷಾ ನಮಗೆ ಇನಾಮು ಭೂಮಿಗಳಿಂದ ಎರಡು- ಮೂರು ಸಾವಿರ ರೂಪಾಯಿಗಳ ಉತ್ಪನ್ನ. ನಮ್ಮ ತಂದೆಯವರಾದ ರಾವಬಹಾದ್ದೂರ ಅನಂತರಾಯರು ಡೆಪುಟಿ ಕಲೆಕ್ಟರರಾಗಿ ಪೆನ್ಶನ್ನ… Read more…

  • ಇನ್ನೊಬ್ಬ

    ದೇವರ ವಿಷಯದಲ್ಲಿ ನಾನು ಅಗ್ನೋಸ್ಟಿಕನೂ ರಾಜಕೀಯದ ವಿಷಯದಲ್ಲಿ ಸೆಂಟ್ರಿಸ್ಟನೂ ಆಗಿದ್ದೇನೆ. ಇವೆರಡೂ ಅಪಾಯವಿಲ್ಲದ ನಿಲುವುಗಳೆಂಬುದು ನನಗೆ ಗೊತ್ತು. ಅಗ್ನೋಸ್ಟಿಕನಾಗಿದ್ದವನನ್ನು ಆಸ್ತಿಕರೂ ನಾಸ್ತಿಕರೊ ಒಂದೇ ತರಹ ಪ್ರೀತಿಯಿಂದ ಕಾಣುತ್ತಾರೆ,… Read more…