Home / ಕವನ / ಕವಿತೆ / ಏಕಾಗಬಾರದು?

ಏಕಾಗಬಾರದು?

ಮೇರುಗಿರಿಯೊಂದು ದಿನ ಗರ್ವದಿಂ ತಲೆಯೆತ್ತಿ
ಕೆಂಗದಿರ ಹೊಂಗದಿರ ಜಿಹ್ವೆಯಲಿ ನುಡಿಯಿತ್ತು
“ಈರೇಳು ಲೋಕಗಳಿಗಾಧಾರವಾಗಿಹೆನು,
ಎಲ್ಲಮಂ ಧರಿಸಿಹೆನು ; ಸೂರ್ಯತಾರೆಗಳೆನ್ನ
ಬಳಿವಿಡಿದು ಸಂಚರಿಸಿ ನಾನಿಟ್ಟ ಶಾಸನವ
ಎಳ್ಳನಿತು ಲಂಘಿಸವು”. ಈ ಕೆಚ್ಚುನುಡಿಗೇಳಿ
ಸಾಗರದ ವಾರಿರಾಶಿಯಲೊಂದು ಹನಿಯೆದ್ದು
“ಎಲೆ ಮೇರುಪರ್ವತವೆ! ಹದಿನಾಲ್ಕು ಲೋಕಗಳ
ಆಧಾರಗೀಧಾರವೆಂಬ ನುಡಿಯಂತಿರಲಿ
ಮುನಿದೆನಾದರೆ ಕೊಚ್ಚಿ ಮುಳುಗಿಸುವೆ ಹೆಸರುಸಿರು
ನಿನಗಿಲ್ಲವೆಂಬಂತೆ, ತಿಳಿಯದೇಂ ಪೌರುಷವು ?”
ಎಂದು ತನ್ನಯ ಬಲುಮೆ ಮಹಿಮೆಗಳನಾಡಿತ್ತು.
ಸೈಕತದ ರಾಶಿಯಲ್ಲಿ ಒಂದು ಕಣ ತಾನೆದ್ದು
“ಲೇಸಾಯ್ತು ನಿನ್ನ ನುಡಿ! ಮುಸಿಯದೆಯೆ ವಿಸ್ತಾರ
ಸಾಗರದ ಹನಿಗಿನಿಯುಮೆನುಮುಂ ಇರದಂತೆ
ಕುಡಿಯುವೆನು, ಪೈಜೆಯಿದೆ ಹೂಡುನೀಂ ಪಂಥವನು”
ಎಂದಾಗ ಸಾಮರ್ಥ್ಯದುನ್ನತಿಯನಾಡಿತ್ತು.
ಪಂಥಗಳ ಪೌರುಷಕೆ ಮನುಜ ಕೋಟೆಯು ನಕ್ಕು
“ಈ ಹುಚ್ಚು ಬಲು ಸೊಗಸು, ಕೇಳ್ವರಿಗೆ ಬಲು ಸೊಗಸು
ಹೆಡ್ಡರಿಗೆ ಹುಚ್ಚು ಹಿಡಿದರೆ ಮಾತು ಸೊಗಸುಂಟು”
ಎಂದವರನೇಳಿಸಿತು. ಆಗ ನಿರ್ದೇಹದಲಿ
ಏಕಾಗಬಾರದೆಂದೊಂದು ದನಿ ನಭದಲ್ಲಿ
ನುಣ್ಣನೆಯ ಸಣ್ಣ ದನಿ ಗೀತಮಂ ಹಾಡಿತ್ತು.

“ಏಕಾಗಬಾರದದು
ಆಗಲೇ ಆಗುವುದು
ಹನಿಯ ನುಡಿ ಕಣದ ನುಡಿ
ದಿಟದ ನುಡಿಯೆನಗೊಪ್ಪು
ನಕ್ಕ ಮಾನವರೆಲ್ಲ
ಅತ್ತು ಹೋಗುವರೀಗ
ಕಣದಲ್ಲಿ ಹನಿಯಲ್ಲಿ
ಇರುವೊಂದು ಪರಮಾಣು
ಕೊಚ್ಚಿ ಬಿಸುಡುವುದೀಗ
ಕುಡಿದು ತೇಗುವುದೀಗ
ಆ ಕಾಲ ಬಂದಿಹುದು
ಈಗಲೇ ಬಂದಿಹುದು.
ಕಣದಂತೆ ಹನಿಯಂತೆ
ತಿಳಿದು ಸಾಧಿಪ ಜನರು
ಎನ್ನೊಳಗೆ ತಪ್ಪದೆಯೆ
ಸಮರಸವ ಹೊಂದುವರು
ಲೋಕಗಳ ಸೃಷ್ಟಿಸರು
ಲೋಕಗಳನಾಳುವರು
ಲೋಕಗಳ ನುಂಗುವರು
ಏಕಾಗಬಾರದದು
ಆಗಲೇ ಆಗುವುದು.”
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...