Home / ಕವನ / ಕವಿತೆ / ಏಕಾಗಬಾರದು?

ಏಕಾಗಬಾರದು?

ಮೇರುಗಿರಿಯೊಂದು ದಿನ ಗರ್ವದಿಂ ತಲೆಯೆತ್ತಿ
ಕೆಂಗದಿರ ಹೊಂಗದಿರ ಜಿಹ್ವೆಯಲಿ ನುಡಿಯಿತ್ತು
“ಈರೇಳು ಲೋಕಗಳಿಗಾಧಾರವಾಗಿಹೆನು,
ಎಲ್ಲಮಂ ಧರಿಸಿಹೆನು ; ಸೂರ್ಯತಾರೆಗಳೆನ್ನ
ಬಳಿವಿಡಿದು ಸಂಚರಿಸಿ ನಾನಿಟ್ಟ ಶಾಸನವ
ಎಳ್ಳನಿತು ಲಂಘಿಸವು”. ಈ ಕೆಚ್ಚುನುಡಿಗೇಳಿ
ಸಾಗರದ ವಾರಿರಾಶಿಯಲೊಂದು ಹನಿಯೆದ್ದು
“ಎಲೆ ಮೇರುಪರ್ವತವೆ! ಹದಿನಾಲ್ಕು ಲೋಕಗಳ
ಆಧಾರಗೀಧಾರವೆಂಬ ನುಡಿಯಂತಿರಲಿ
ಮುನಿದೆನಾದರೆ ಕೊಚ್ಚಿ ಮುಳುಗಿಸುವೆ ಹೆಸರುಸಿರು
ನಿನಗಿಲ್ಲವೆಂಬಂತೆ, ತಿಳಿಯದೇಂ ಪೌರುಷವು ?”
ಎಂದು ತನ್ನಯ ಬಲುಮೆ ಮಹಿಮೆಗಳನಾಡಿತ್ತು.
ಸೈಕತದ ರಾಶಿಯಲ್ಲಿ ಒಂದು ಕಣ ತಾನೆದ್ದು
“ಲೇಸಾಯ್ತು ನಿನ್ನ ನುಡಿ! ಮುಸಿಯದೆಯೆ ವಿಸ್ತಾರ
ಸಾಗರದ ಹನಿಗಿನಿಯುಮೆನುಮುಂ ಇರದಂತೆ
ಕುಡಿಯುವೆನು, ಪೈಜೆಯಿದೆ ಹೂಡುನೀಂ ಪಂಥವನು”
ಎಂದಾಗ ಸಾಮರ್ಥ್ಯದುನ್ನತಿಯನಾಡಿತ್ತು.
ಪಂಥಗಳ ಪೌರುಷಕೆ ಮನುಜ ಕೋಟೆಯು ನಕ್ಕು
“ಈ ಹುಚ್ಚು ಬಲು ಸೊಗಸು, ಕೇಳ್ವರಿಗೆ ಬಲು ಸೊಗಸು
ಹೆಡ್ಡರಿಗೆ ಹುಚ್ಚು ಹಿಡಿದರೆ ಮಾತು ಸೊಗಸುಂಟು”
ಎಂದವರನೇಳಿಸಿತು. ಆಗ ನಿರ್ದೇಹದಲಿ
ಏಕಾಗಬಾರದೆಂದೊಂದು ದನಿ ನಭದಲ್ಲಿ
ನುಣ್ಣನೆಯ ಸಣ್ಣ ದನಿ ಗೀತಮಂ ಹಾಡಿತ್ತು.

“ಏಕಾಗಬಾರದದು
ಆಗಲೇ ಆಗುವುದು
ಹನಿಯ ನುಡಿ ಕಣದ ನುಡಿ
ದಿಟದ ನುಡಿಯೆನಗೊಪ್ಪು
ನಕ್ಕ ಮಾನವರೆಲ್ಲ
ಅತ್ತು ಹೋಗುವರೀಗ
ಕಣದಲ್ಲಿ ಹನಿಯಲ್ಲಿ
ಇರುವೊಂದು ಪರಮಾಣು
ಕೊಚ್ಚಿ ಬಿಸುಡುವುದೀಗ
ಕುಡಿದು ತೇಗುವುದೀಗ
ಆ ಕಾಲ ಬಂದಿಹುದು
ಈಗಲೇ ಬಂದಿಹುದು.
ಕಣದಂತೆ ಹನಿಯಂತೆ
ತಿಳಿದು ಸಾಧಿಪ ಜನರು
ಎನ್ನೊಳಗೆ ತಪ್ಪದೆಯೆ
ಸಮರಸವ ಹೊಂದುವರು
ಲೋಕಗಳ ಸೃಷ್ಟಿಸರು
ಲೋಕಗಳನಾಳುವರು
ಲೋಕಗಳ ನುಂಗುವರು
ಏಕಾಗಬಾರದದು
ಆಗಲೇ ಆಗುವುದು.”
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...