Home / ಕವನ / ಕವಿತೆ / ಏಕಾಗಬಾರದು?

ಏಕಾಗಬಾರದು?

ಮೇರುಗಿರಿಯೊಂದು ದಿನ ಗರ್ವದಿಂ ತಲೆಯೆತ್ತಿ
ಕೆಂಗದಿರ ಹೊಂಗದಿರ ಜಿಹ್ವೆಯಲಿ ನುಡಿಯಿತ್ತು
“ಈರೇಳು ಲೋಕಗಳಿಗಾಧಾರವಾಗಿಹೆನು,
ಎಲ್ಲಮಂ ಧರಿಸಿಹೆನು ; ಸೂರ್ಯತಾರೆಗಳೆನ್ನ
ಬಳಿವಿಡಿದು ಸಂಚರಿಸಿ ನಾನಿಟ್ಟ ಶಾಸನವ
ಎಳ್ಳನಿತು ಲಂಘಿಸವು”. ಈ ಕೆಚ್ಚುನುಡಿಗೇಳಿ
ಸಾಗರದ ವಾರಿರಾಶಿಯಲೊಂದು ಹನಿಯೆದ್ದು
“ಎಲೆ ಮೇರುಪರ್ವತವೆ! ಹದಿನಾಲ್ಕು ಲೋಕಗಳ
ಆಧಾರಗೀಧಾರವೆಂಬ ನುಡಿಯಂತಿರಲಿ
ಮುನಿದೆನಾದರೆ ಕೊಚ್ಚಿ ಮುಳುಗಿಸುವೆ ಹೆಸರುಸಿರು
ನಿನಗಿಲ್ಲವೆಂಬಂತೆ, ತಿಳಿಯದೇಂ ಪೌರುಷವು ?”
ಎಂದು ತನ್ನಯ ಬಲುಮೆ ಮಹಿಮೆಗಳನಾಡಿತ್ತು.
ಸೈಕತದ ರಾಶಿಯಲ್ಲಿ ಒಂದು ಕಣ ತಾನೆದ್ದು
“ಲೇಸಾಯ್ತು ನಿನ್ನ ನುಡಿ! ಮುಸಿಯದೆಯೆ ವಿಸ್ತಾರ
ಸಾಗರದ ಹನಿಗಿನಿಯುಮೆನುಮುಂ ಇರದಂತೆ
ಕುಡಿಯುವೆನು, ಪೈಜೆಯಿದೆ ಹೂಡುನೀಂ ಪಂಥವನು”
ಎಂದಾಗ ಸಾಮರ್ಥ್ಯದುನ್ನತಿಯನಾಡಿತ್ತು.
ಪಂಥಗಳ ಪೌರುಷಕೆ ಮನುಜ ಕೋಟೆಯು ನಕ್ಕು
“ಈ ಹುಚ್ಚು ಬಲು ಸೊಗಸು, ಕೇಳ್ವರಿಗೆ ಬಲು ಸೊಗಸು
ಹೆಡ್ಡರಿಗೆ ಹುಚ್ಚು ಹಿಡಿದರೆ ಮಾತು ಸೊಗಸುಂಟು”
ಎಂದವರನೇಳಿಸಿತು. ಆಗ ನಿರ್ದೇಹದಲಿ
ಏಕಾಗಬಾರದೆಂದೊಂದು ದನಿ ನಭದಲ್ಲಿ
ನುಣ್ಣನೆಯ ಸಣ್ಣ ದನಿ ಗೀತಮಂ ಹಾಡಿತ್ತು.

“ಏಕಾಗಬಾರದದು
ಆಗಲೇ ಆಗುವುದು
ಹನಿಯ ನುಡಿ ಕಣದ ನುಡಿ
ದಿಟದ ನುಡಿಯೆನಗೊಪ್ಪು
ನಕ್ಕ ಮಾನವರೆಲ್ಲ
ಅತ್ತು ಹೋಗುವರೀಗ
ಕಣದಲ್ಲಿ ಹನಿಯಲ್ಲಿ
ಇರುವೊಂದು ಪರಮಾಣು
ಕೊಚ್ಚಿ ಬಿಸುಡುವುದೀಗ
ಕುಡಿದು ತೇಗುವುದೀಗ
ಆ ಕಾಲ ಬಂದಿಹುದು
ಈಗಲೇ ಬಂದಿಹುದು.
ಕಣದಂತೆ ಹನಿಯಂತೆ
ತಿಳಿದು ಸಾಧಿಪ ಜನರು
ಎನ್ನೊಳಗೆ ತಪ್ಪದೆಯೆ
ಸಮರಸವ ಹೊಂದುವರು
ಲೋಕಗಳ ಸೃಷ್ಟಿಸರು
ಲೋಕಗಳನಾಳುವರು
ಲೋಕಗಳ ನುಂಗುವರು
ಏಕಾಗಬಾರದದು
ಆಗಲೇ ಆಗುವುದು.”
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...