
ಇರುವೆ ಇರುವೆ ಬಾ ಇಲ್ಲಿ
ಯಾವ್ಯಾವ್ ಊರು ನೋಡಿದ್ದೀ?
ಯಾವ್ಯಾವ್ ಊರ್ನಲ್ ಏನೇನ್ ಕಂಡಿ,
ಈಗ ಎಲ್ಲಿಗ್ ಹೊರಟಿದ್ದೀ?
ಬಾಗಿಲ ಸಂದು, ಗೋಡೆ ಬಿರುಕು
ಬೆಲ್ಲದ ಡಬ್ಬ, ಹಿತ್ಲು
ತಿಂಡೀ ಇರೋ ಹುಡುಗನ ಜೇಬು,
ಹಾಲಿನ ಪಾತ್ರೇ ಸುತ್ಲೂ.
ಒಂದೊಂದ್ ಊರೂ ಒಂದೊಂದ್ ಥರ.
ಬಸ್ಸೇ ಇಲ್ಲದ ಊರ್ಗೆ
ನಡಕೊಂಡ್ಹೋಗೋಗೇ ಬಂದಿದೀನಿ
ಚಪ್ಲಿ ಇಲ್ದೇ ಕಾಲ್ಗೆ!
ಸಕ್ಕರೆ ಬಂಡೆ, ಬೆಲ್ಲದ ಬೆಟ್ಟ
ಹಾಲಿನ ಲೋಟದ ಬಾವಿ
ಸುತ್ತಿ ಈಗ ಹಿಡಿದಿದ್ದೀನಿ
ಮತ್ತೆ ಮನೇ ಹಾದಿ.
*****
ಲಕ್ಷ್ಮೀನಾರಾಯಣ ಭಟ್ಟರು ಕನ್ನಡ ಕಾವ್ಯದ ಜೀವಂತಿಕೆಯನ್ನು ಹೆಚ್ಚಿಸುತ್ತ ಆಧುನಿಕ ಕನ್ನಡ ಕಾವ್ಯವನ್ನು ಬೆಳೆಸುತ್ತ ಬಂದಿರುವ ಪ್ರಮುಖ ಕವಿಗಳಲ್ಲಿ ಒಬ್ಬರು. ಅವರ ಅನುವಾದಗಳು ಕನ್ನಡ ಕಾವ್ಯಕ್ಕೆ ಕೊಟ್ಟ ಬೆಲೆಬಾಳುವ ಉಡುಗೊರೆಗಳು ಮಾತ್ರವಾಗಿರದೆ ಸ್ವಂತಕ್ಕೆ ಪಡೆದ ರಕ್ತದಾನವೂ ಆಗಿದೆ. ಸ್ವಂತ ಪ್ರತಿಭೆ, ಶ್ರೇಷ್ಠಕವಿಗಳ ಆಪ್ತ ಅಧ್ಯಯನ ಎರಡೂ ಅವರನ್ನೂ ಎತ್ತರಕ್ಕೆ ಹತ್ತಿಸಿವೆ. ಅಧ್ಯಯನ, ಚಿಂತನೆ ಇವು ಅವರಲ್ಲಿ ಹಾಸು ಹೊಕ್ಕಾಗಿ ಒಂದನ್ನು ಮತ್ತೊಂದು ಬಲಗೊಳಿಸುತ್ತ ಬಂದಿವೆ.