Home / ಕವನ / ಕವಿತೆ / ಮಧ್ಯಂತರ ೧: ಮೈಖೆಲೇಂಜೆಲೊ

ಮಧ್ಯಂತರ ೧: ಮೈಖೆಲೇಂಜೆಲೊ

ಯಾವ ಶಿಲೆಗಳಲ್ಲಿ ಯಾವ ಪ್ರತಿಮೆಗಳು ? –
ಮೈಖೆಲೇಂಜೆಲೊ ಹೇಳು, ಎಲ್ಲ ತಿಳಿದವನು ನೀನು
ಒಂಟಿಯಾಗಿ ಈ ಬೆಟ್ಟ ಸುತ್ತಿದವನು
ಬರಿಗಾಲಲ್ಲಿ ಬಂಡೆಯಿಂದ ಬಂಡೆಗೆ ಜಿಗಿದವನು
ಅವುಗಳ ಮೈಯ ಮುಂಜಾನೆಯ ತಂಪು
ಮಧ್ಯಾಹ್ನದ ಬೇಗೆ ಸಂಜೆಯ ಬಿಸಿ
ಕೈಯಲ್ಲಿ ಸ್ಪರ್ಶಿಸಿದವನು
ಆಹ! ಅದೆಂಥ ಸಂಗೀತ
ಎಲ್ಲರೂ ಮಲಗಿರುವ ಹೊತ್ತು,
ಸಮುದ್ರದೊಳಗಿಂದ ಬೀಸಿದ ಗಾಳಿ
ಹುಲ್ಲು ಹೂವುಗಳ ನಡುನಡುವೆ ಸುಳಿದು
ಎಬ್ಬಿಸುವುದೇನು ಕಚಗುಳಿ
ತಿಂಗಳ ಬೆಳಕು ನೀರಲಿ ಬಿದ್ದು
ತಳತಳಿಸುತಿರುವಾಗ
ಎಚ್ಚರಾದವರೆಷ್ಟು ಎದ್ದು ಕುಳಿತವರೆಷ್ಟು
ಮೈಖೆಲೇಂಜೆಲೊ ಹೇಳು ಎಲ್ಲ ತಿಳಿದವನು ನೀನು

ಶಬ್ದಗಳ ಹುಡುಕುತ್ತ ನಾನು
ಇಷ್ಟು ದೂರವು ಬಂದೆ
ಇನ್ನು ಇಲ್ಲಿಂದ ಮುಂದರಿಯಲಾರೆ–
ಮುಂದರಿಯದಿರಲಾರೆ ಎನ್ನುತ್ತಲೇ
ನಿನ್ನ ಗುರುತನು ಕಂಡೆ
ಶತಮಾನಗಳು ಕಳೆದುದು ನಿಜ
ಬಿಸಿಲು ಮಳೆಗಳು ಬಂದು ಹೋದುದು ನಿಜ
ಈ ಸಮುದ್ರವೂ ಮೊರೆಯಿತು
ಅದಷ್ಟೋ ಬಾರಿ
ಕಾದು ನಿನ್ನ ದಾರಿ-
ನನ್ನ ತೀರಗಳು ಬೇರೆ
ನನ್ನ ಮಳಲಿನ ಬಣ್ಣ ಬೇರೆ
ನನ್ನ ಶಿಲಾರೂಪಗಳು ಬೇರೆ
ಆದರೇನಾಯಿತು
ಮೈಖೆಲೇಂಜೆಲೊ ಹೇಳು, ಎಲ್ಲ ತಿಳಿದವನು ನೀನು
ಕಾಲದಿಂದ ಕಾಲಕ್ಕೆ ದೇಶದಿಂದ ದೇಶಕ್ಕೆ
ಹರ್ಷ ಬದಲಾಗುವುದೆ
ಯಾರಲ್ಲೂ ಹೇಳದಂಥ ಸಂ-
ಘರ್ಷ ಬದಲಾಗುವುದೇ
ಅಹ! ಶಬ್ದಗಳ ಹುಡುಕುತ್ತಲೇ
ಕೇಳಿಸುವುದೇನು ಶಬ್ಧ!
ಅಂಬಿಗನ ಹಾಡೆ
ಕಮ್ಮಾರನ ಹೊಡೆತವೆ
ಅತಿ ನಸುಕಿಗೇ ಎದ್ದ
ಬೆಸ್ತನೊಬ್ಬನ ನಡೆತವೆ
ನನ್ನದೇ ಎದೆ ಬಡಿತದ
ಯಾವ ಶಬ್ದಗಳಲ್ಲಿ ಯಾವ ಅರ್ಥಗಳು
ಮೈಖೆಲೇಂಜೆಲೊ ಹೇಳು
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...