Home / ಕವನ / ಕವಿತೆ / ಮಧ್ಯಂತರ ೧: ಮೈಖೆಲೇಂಜೆಲೊ

ಮಧ್ಯಂತರ ೧: ಮೈಖೆಲೇಂಜೆಲೊ

ಯಾವ ಶಿಲೆಗಳಲ್ಲಿ ಯಾವ ಪ್ರತಿಮೆಗಳು ? –
ಮೈಖೆಲೇಂಜೆಲೊ ಹೇಳು, ಎಲ್ಲ ತಿಳಿದವನು ನೀನು
ಒಂಟಿಯಾಗಿ ಈ ಬೆಟ್ಟ ಸುತ್ತಿದವನು
ಬರಿಗಾಲಲ್ಲಿ ಬಂಡೆಯಿಂದ ಬಂಡೆಗೆ ಜಿಗಿದವನು
ಅವುಗಳ ಮೈಯ ಮುಂಜಾನೆಯ ತಂಪು
ಮಧ್ಯಾಹ್ನದ ಬೇಗೆ ಸಂಜೆಯ ಬಿಸಿ
ಕೈಯಲ್ಲಿ ಸ್ಪರ್ಶಿಸಿದವನು
ಆಹ! ಅದೆಂಥ ಸಂಗೀತ
ಎಲ್ಲರೂ ಮಲಗಿರುವ ಹೊತ್ತು,
ಸಮುದ್ರದೊಳಗಿಂದ ಬೀಸಿದ ಗಾಳಿ
ಹುಲ್ಲು ಹೂವುಗಳ ನಡುನಡುವೆ ಸುಳಿದು
ಎಬ್ಬಿಸುವುದೇನು ಕಚಗುಳಿ
ತಿಂಗಳ ಬೆಳಕು ನೀರಲಿ ಬಿದ್ದು
ತಳತಳಿಸುತಿರುವಾಗ
ಎಚ್ಚರಾದವರೆಷ್ಟು ಎದ್ದು ಕುಳಿತವರೆಷ್ಟು
ಮೈಖೆಲೇಂಜೆಲೊ ಹೇಳು ಎಲ್ಲ ತಿಳಿದವನು ನೀನು

ಶಬ್ದಗಳ ಹುಡುಕುತ್ತ ನಾನು
ಇಷ್ಟು ದೂರವು ಬಂದೆ
ಇನ್ನು ಇಲ್ಲಿಂದ ಮುಂದರಿಯಲಾರೆ–
ಮುಂದರಿಯದಿರಲಾರೆ ಎನ್ನುತ್ತಲೇ
ನಿನ್ನ ಗುರುತನು ಕಂಡೆ
ಶತಮಾನಗಳು ಕಳೆದುದು ನಿಜ
ಬಿಸಿಲು ಮಳೆಗಳು ಬಂದು ಹೋದುದು ನಿಜ
ಈ ಸಮುದ್ರವೂ ಮೊರೆಯಿತು
ಅದಷ್ಟೋ ಬಾರಿ
ಕಾದು ನಿನ್ನ ದಾರಿ-
ನನ್ನ ತೀರಗಳು ಬೇರೆ
ನನ್ನ ಮಳಲಿನ ಬಣ್ಣ ಬೇರೆ
ನನ್ನ ಶಿಲಾರೂಪಗಳು ಬೇರೆ
ಆದರೇನಾಯಿತು
ಮೈಖೆಲೇಂಜೆಲೊ ಹೇಳು, ಎಲ್ಲ ತಿಳಿದವನು ನೀನು
ಕಾಲದಿಂದ ಕಾಲಕ್ಕೆ ದೇಶದಿಂದ ದೇಶಕ್ಕೆ
ಹರ್ಷ ಬದಲಾಗುವುದೆ
ಯಾರಲ್ಲೂ ಹೇಳದಂಥ ಸಂ-
ಘರ್ಷ ಬದಲಾಗುವುದೇ
ಅಹ! ಶಬ್ದಗಳ ಹುಡುಕುತ್ತಲೇ
ಕೇಳಿಸುವುದೇನು ಶಬ್ಧ!
ಅಂಬಿಗನ ಹಾಡೆ
ಕಮ್ಮಾರನ ಹೊಡೆತವೆ
ಅತಿ ನಸುಕಿಗೇ ಎದ್ದ
ಬೆಸ್ತನೊಬ್ಬನ ನಡೆತವೆ
ನನ್ನದೇ ಎದೆ ಬಡಿತದ
ಯಾವ ಶಬ್ದಗಳಲ್ಲಿ ಯಾವ ಅರ್ಥಗಳು
ಮೈಖೆಲೇಂಜೆಲೊ ಹೇಳು
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...