Home / ಕವನ / ಕವಿತೆ / ರಾಜಾಸನದ ಕಟ್ಟೆಯ ಮೇಗಲಿ

ರಾಜಾಸನದ ಕಟ್ಟೆಯ ಮೇಗಲಿ

ಮಡಿಕೇರೀ ಮಲೆ ಸೃಷ್ಠಿಯ ಕೋಮಲೆ
ಸುತ್ತಲು ಗಿರಿಸಾಲು.
ಬಯಲಿನ ತಪ್ಪಲು ನಿರ್ಝರ ದರಿಗಳು
ನಿಡು ಮರ ಗಿಡ ಸಾಲು,
ಸೃಷ್ಠಿಯ ರಮ್ಯ ಸೌಂದರ್ಯಗಳು

ದೃಷ್ಠಿಯೆ ಬೀಳದ ಆಳದೊಳೆಲ್ಲಿಯು
ಹಚ್ಚನೆ ಹೊಲಸಾಲು
ಸುತ್ತು ದಿಗಂತವ ಅಪ್ಪುತ ನಿಂತಿಹ
ನುಣ್ಣನೆ ಬೆಟ್ಟಗಳು,
ಸುತ್ತಲು ಹಬ್ಬಿದ ಬನಹಸುರು.

ತಪ್ಪಲ ಸಾನುವಲಾಯ್ವವು ದನಗಳು
ಅಂಬಾ-ಅನ್ನುತಲಿ-
ಇನಿವಣ್ ಮೆಲುತಲಿ ಮಿಗಮರಿ ಗಿರಿಯಿಂ
ಪೊದರೊಳು ಸೇರಿದವು
ಸಂಜೆ ವಿಶ್ರಾಂತಿಯ ಹೊಂದುವವು.

ಪಡುವಣ ಮಾರುತದೊಂದಿಗೆ ಹಾರುವ
ಚಿಲಿಪಿಲಿ ಹಕ್ಕಿಗಳು
ಕಣಿವೆಯಿಂದೊಯ್ಯನೆ ಬೆಳೆದಾ ಮರಗಳ
ಗೂಡಿನಲೊರಗುವವು
ಪೀಂ ಪೀಂ ಹಾಡಿನ ತಾಳಗಳು.

ತಪ್ಪಲ ನಿರ್ಝರ ಸುಂದರ ಸುಮಕರ
ದೃಶ್ಯದ ರೂಪವದೊ-
ಕಾಳಾಹಿಯ ತೆರ ಬಳಸೋಡುವ ಹಲ
ರಸ್ತೆಗಳದೊ-ಓಟ
ಬತ್ತದ ತೆನೆಗಳ ಗೆಲು ನೋಟ!

ಪಶ್ಚಿಮ ವಾರಿಧಿ ಸ್ನಾನವನೆಸಗಲು
ರವಿಯದೊ ಇಳಿಯುವನು,
ಕೆಂಗದಿರುಗಳನು ಬಾನ್ ಬಯಲೆಲ್ಲ
ಪಸರಿಸಿ ಇಳಿಯುವನು
ಸಂಜೆಯ ಸೂರ್ಯನು ಮುಳುಗುವನು

ರಾಜಾಸನದಾ ಕಟ್ಟೆಯ ಮೇಗಲಿ-
ಕೇರಿಯ ತರುಣಿಯರು
ರಮ ರಮ ಝಿಮ ಜಿಮ ಸಂವಾದಗಳಾ
ಲೀಲೆಯೊಳ್ ಮುಳುಗಿದರು
ಮರೆತರು ಸುತ್ತಲ ಲೋಕವನು.

ಹಕ್ಕಿಗಳಾಡೂ ಚಂದಿರನುದಯವು
ಗುಂಯ್ ಗುಂಯ್ ತುಂಬಿಗಳಾ
ಚಂಚಲ ಕರೆಯಲಿ, ಕೇಳಿಯ ಮರುಳಲಿ,
ಮನೋಲ್ಲಾಸದಲಿ-
ಕಾಮನ ವಾರ್ತಾವಿಷಯದಲಿ.

ತೆಂಬೆಲರೊಯ್ಯನೆ ತಣ್ಣನೆ ಬೀಸಲು
ಕುಣಿದವು ಕುರುಳುಗಳು-
ಮೊಲೆಕಟ್ಟುಡುಪೂ ಹಿನ್ನಿರಿ ಕುಚ್ಚೂ
ಜರಿ ವಸ್ತ್ರ ತೊಟ್ಟು-
ಮಿನುಗಿತು ಕುಂಕುಮದಾ ಬೊಟ್ಟು.

ಚೆಣಿಕಣಿ ಬಳೆಗಳು ಝಲ್‌ಜಲ್ ನೂಪುರ
ರತ್ನದ ಒಂಟಿಸರ
ತೂಗುವ ಜುಂಕಿಗಳೋಲೆಯನಾಡಿಸಿ
ಕುಲುಕುವರಾ ತಲೆಯ-
ಎದೆ ಮೇಲಿರಿಸುವರಾ ಜಡೆಯ!

ಆಚಿಂದೀಚೆಗೆ ಸರಸದಲಾಡುತ
ಘಮಘಮ ಹೂಗಳನು-
ಕೋಲಿಂ ಬೀಳಿಸಿ ‘ತೇರೆ ಶಿವಾ’ಡುತ-
ಪೋಣಿಸಿದರು ಮಾಲೆ-
ಸಂಪಿಗೆ ಜಾಜಿಗಳೂಮಾಲೆ!

ಕೆಂಪದೊ ಬಾನೂ ಮುಗಿಲೋಳಿಗಳೂ
ವರಿಸುವೆನವನೆನುತ-
ತಂತಮ್ಮ ಕೊರಳೊಳು ಹಾಕುತಮಾಲೆಯ
ಕೈಪರೆಯಾಟದಲಿ-
ನಾಚುವರವರೇ ಗೇಲಿಯಲಿ.

ಸೂರ್ಯನ ಕಾಂತಿಯು ನೀಲಾಕಾಶದಿಂ-
ದೆಲ್ಲಿಯೊ ಹರಿದೋಯ್ತು!
ನಿರ್ಜನ ಭೂಮಿಯದಾಯಿತು-ಸರಿದರು
ಉಳೀಸುತ ಕತ್ತಲನು
ಅನುಭವಿಸುತಲೀ ಹರುಷವನು!
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...