Home / ಕವನ / ಕವಿತೆ / ರಾಜಾಸನದ ಕಟ್ಟೆಯ ಮೇಗಲಿ

ರಾಜಾಸನದ ಕಟ್ಟೆಯ ಮೇಗಲಿ

ಮಡಿಕೇರೀ ಮಲೆ ಸೃಷ್ಠಿಯ ಕೋಮಲೆ
ಸುತ್ತಲು ಗಿರಿಸಾಲು.
ಬಯಲಿನ ತಪ್ಪಲು ನಿರ್ಝರ ದರಿಗಳು
ನಿಡು ಮರ ಗಿಡ ಸಾಲು,
ಸೃಷ್ಠಿಯ ರಮ್ಯ ಸೌಂದರ್ಯಗಳು

ದೃಷ್ಠಿಯೆ ಬೀಳದ ಆಳದೊಳೆಲ್ಲಿಯು
ಹಚ್ಚನೆ ಹೊಲಸಾಲು
ಸುತ್ತು ದಿಗಂತವ ಅಪ್ಪುತ ನಿಂತಿಹ
ನುಣ್ಣನೆ ಬೆಟ್ಟಗಳು,
ಸುತ್ತಲು ಹಬ್ಬಿದ ಬನಹಸುರು.

ತಪ್ಪಲ ಸಾನುವಲಾಯ್ವವು ದನಗಳು
ಅಂಬಾ-ಅನ್ನುತಲಿ-
ಇನಿವಣ್ ಮೆಲುತಲಿ ಮಿಗಮರಿ ಗಿರಿಯಿಂ
ಪೊದರೊಳು ಸೇರಿದವು
ಸಂಜೆ ವಿಶ್ರಾಂತಿಯ ಹೊಂದುವವು.

ಪಡುವಣ ಮಾರುತದೊಂದಿಗೆ ಹಾರುವ
ಚಿಲಿಪಿಲಿ ಹಕ್ಕಿಗಳು
ಕಣಿವೆಯಿಂದೊಯ್ಯನೆ ಬೆಳೆದಾ ಮರಗಳ
ಗೂಡಿನಲೊರಗುವವು
ಪೀಂ ಪೀಂ ಹಾಡಿನ ತಾಳಗಳು.

ತಪ್ಪಲ ನಿರ್ಝರ ಸುಂದರ ಸುಮಕರ
ದೃಶ್ಯದ ರೂಪವದೊ-
ಕಾಳಾಹಿಯ ತೆರ ಬಳಸೋಡುವ ಹಲ
ರಸ್ತೆಗಳದೊ-ಓಟ
ಬತ್ತದ ತೆನೆಗಳ ಗೆಲು ನೋಟ!

ಪಶ್ಚಿಮ ವಾರಿಧಿ ಸ್ನಾನವನೆಸಗಲು
ರವಿಯದೊ ಇಳಿಯುವನು,
ಕೆಂಗದಿರುಗಳನು ಬಾನ್ ಬಯಲೆಲ್ಲ
ಪಸರಿಸಿ ಇಳಿಯುವನು
ಸಂಜೆಯ ಸೂರ್ಯನು ಮುಳುಗುವನು

ರಾಜಾಸನದಾ ಕಟ್ಟೆಯ ಮೇಗಲಿ-
ಕೇರಿಯ ತರುಣಿಯರು
ರಮ ರಮ ಝಿಮ ಜಿಮ ಸಂವಾದಗಳಾ
ಲೀಲೆಯೊಳ್ ಮುಳುಗಿದರು
ಮರೆತರು ಸುತ್ತಲ ಲೋಕವನು.

ಹಕ್ಕಿಗಳಾಡೂ ಚಂದಿರನುದಯವು
ಗುಂಯ್ ಗುಂಯ್ ತುಂಬಿಗಳಾ
ಚಂಚಲ ಕರೆಯಲಿ, ಕೇಳಿಯ ಮರುಳಲಿ,
ಮನೋಲ್ಲಾಸದಲಿ-
ಕಾಮನ ವಾರ್ತಾವಿಷಯದಲಿ.

ತೆಂಬೆಲರೊಯ್ಯನೆ ತಣ್ಣನೆ ಬೀಸಲು
ಕುಣಿದವು ಕುರುಳುಗಳು-
ಮೊಲೆಕಟ್ಟುಡುಪೂ ಹಿನ್ನಿರಿ ಕುಚ್ಚೂ
ಜರಿ ವಸ್ತ್ರ ತೊಟ್ಟು-
ಮಿನುಗಿತು ಕುಂಕುಮದಾ ಬೊಟ್ಟು.

ಚೆಣಿಕಣಿ ಬಳೆಗಳು ಝಲ್‌ಜಲ್ ನೂಪುರ
ರತ್ನದ ಒಂಟಿಸರ
ತೂಗುವ ಜುಂಕಿಗಳೋಲೆಯನಾಡಿಸಿ
ಕುಲುಕುವರಾ ತಲೆಯ-
ಎದೆ ಮೇಲಿರಿಸುವರಾ ಜಡೆಯ!

ಆಚಿಂದೀಚೆಗೆ ಸರಸದಲಾಡುತ
ಘಮಘಮ ಹೂಗಳನು-
ಕೋಲಿಂ ಬೀಳಿಸಿ ‘ತೇರೆ ಶಿವಾ’ಡುತ-
ಪೋಣಿಸಿದರು ಮಾಲೆ-
ಸಂಪಿಗೆ ಜಾಜಿಗಳೂಮಾಲೆ!

ಕೆಂಪದೊ ಬಾನೂ ಮುಗಿಲೋಳಿಗಳೂ
ವರಿಸುವೆನವನೆನುತ-
ತಂತಮ್ಮ ಕೊರಳೊಳು ಹಾಕುತಮಾಲೆಯ
ಕೈಪರೆಯಾಟದಲಿ-
ನಾಚುವರವರೇ ಗೇಲಿಯಲಿ.

ಸೂರ್ಯನ ಕಾಂತಿಯು ನೀಲಾಕಾಶದಿಂ-
ದೆಲ್ಲಿಯೊ ಹರಿದೋಯ್ತು!
ನಿರ್ಜನ ಭೂಮಿಯದಾಯಿತು-ಸರಿದರು
ಉಳೀಸುತ ಕತ್ತಲನು
ಅನುಭವಿಸುತಲೀ ಹರುಷವನು!
*****

Tagged:

Leave a Reply

Your email address will not be published. Required fields are marked *

“ಸುಭದ್ರೆ, ನೀನು ಎಂದು….” ದೈನ್ಯವಾಣಿಯಿಂದ ಕೇಳಿಕೊಂಡ ಶ್ರೀಧರ. “ತಡೆ ಶ್ರೀಧರ. ಹ್ಞ. ಹತ್ತಿರ ಬರಬೇಡ. ಪ್ರತಿಯೊಂದು ಕಾರ್ಯಕ್ಕೂ ಮುಹೂರ್ತ ಬರಬೇಕು; ಸ್ವಲ್ಪ ಕಾಲ ತಡೆ. ಒಮ್ಮೆ ಹೇಳಿದೆ: ನಾನು ನಿನ್ನವಳೆಂದು, ನಂಬಿಕೊ.” “ಎಷ್ಟು ದಿನ ಈ ನ...

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...