ರಾಜಾಸನದ ಕಟ್ಟೆಯ ಮೇಗಲಿ

ಮಡಿಕೇರೀ ಮಲೆ ಸೃಷ್ಠಿಯ ಕೋಮಲೆ
ಸುತ್ತಲು ಗಿರಿಸಾಲು.
ಬಯಲಿನ ತಪ್ಪಲು ನಿರ್ಝರ ದರಿಗಳು
ನಿಡು ಮರ ಗಿಡ ಸಾಲು,
ಸೃಷ್ಠಿಯ ರಮ್ಯ ಸೌಂದರ್ಯಗಳು

ದೃಷ್ಠಿಯೆ ಬೀಳದ ಆಳದೊಳೆಲ್ಲಿಯು
ಹಚ್ಚನೆ ಹೊಲಸಾಲು
ಸುತ್ತು ದಿಗಂತವ ಅಪ್ಪುತ ನಿಂತಿಹ
ನುಣ್ಣನೆ ಬೆಟ್ಟಗಳು,
ಸುತ್ತಲು ಹಬ್ಬಿದ ಬನಹಸುರು.

ತಪ್ಪಲ ಸಾನುವಲಾಯ್ವವು ದನಗಳು
ಅಂಬಾ-ಅನ್ನುತಲಿ-
ಇನಿವಣ್ ಮೆಲುತಲಿ ಮಿಗಮರಿ ಗಿರಿಯಿಂ
ಪೊದರೊಳು ಸೇರಿದವು
ಸಂಜೆ ವಿಶ್ರಾಂತಿಯ ಹೊಂದುವವು.

ಪಡುವಣ ಮಾರುತದೊಂದಿಗೆ ಹಾರುವ
ಚಿಲಿಪಿಲಿ ಹಕ್ಕಿಗಳು
ಕಣಿವೆಯಿಂದೊಯ್ಯನೆ ಬೆಳೆದಾ ಮರಗಳ
ಗೂಡಿನಲೊರಗುವವು
ಪೀಂ ಪೀಂ ಹಾಡಿನ ತಾಳಗಳು.

ತಪ್ಪಲ ನಿರ್ಝರ ಸುಂದರ ಸುಮಕರ
ದೃಶ್ಯದ ರೂಪವದೊ-
ಕಾಳಾಹಿಯ ತೆರ ಬಳಸೋಡುವ ಹಲ
ರಸ್ತೆಗಳದೊ-ಓಟ
ಬತ್ತದ ತೆನೆಗಳ ಗೆಲು ನೋಟ!

ಪಶ್ಚಿಮ ವಾರಿಧಿ ಸ್ನಾನವನೆಸಗಲು
ರವಿಯದೊ ಇಳಿಯುವನು,
ಕೆಂಗದಿರುಗಳನು ಬಾನ್ ಬಯಲೆಲ್ಲ
ಪಸರಿಸಿ ಇಳಿಯುವನು
ಸಂಜೆಯ ಸೂರ್ಯನು ಮುಳುಗುವನು

ರಾಜಾಸನದಾ ಕಟ್ಟೆಯ ಮೇಗಲಿ-
ಕೇರಿಯ ತರುಣಿಯರು
ರಮ ರಮ ಝಿಮ ಜಿಮ ಸಂವಾದಗಳಾ
ಲೀಲೆಯೊಳ್ ಮುಳುಗಿದರು
ಮರೆತರು ಸುತ್ತಲ ಲೋಕವನು.

ಹಕ್ಕಿಗಳಾಡೂ ಚಂದಿರನುದಯವು
ಗುಂಯ್ ಗುಂಯ್ ತುಂಬಿಗಳಾ
ಚಂಚಲ ಕರೆಯಲಿ, ಕೇಳಿಯ ಮರುಳಲಿ,
ಮನೋಲ್ಲಾಸದಲಿ-
ಕಾಮನ ವಾರ್ತಾವಿಷಯದಲಿ.

ತೆಂಬೆಲರೊಯ್ಯನೆ ತಣ್ಣನೆ ಬೀಸಲು
ಕುಣಿದವು ಕುರುಳುಗಳು-
ಮೊಲೆಕಟ್ಟುಡುಪೂ ಹಿನ್ನಿರಿ ಕುಚ್ಚೂ
ಜರಿ ವಸ್ತ್ರ ತೊಟ್ಟು-
ಮಿನುಗಿತು ಕುಂಕುಮದಾ ಬೊಟ್ಟು.

ಚೆಣಿಕಣಿ ಬಳೆಗಳು ಝಲ್‌ಜಲ್ ನೂಪುರ
ರತ್ನದ ಒಂಟಿಸರ
ತೂಗುವ ಜುಂಕಿಗಳೋಲೆಯನಾಡಿಸಿ
ಕುಲುಕುವರಾ ತಲೆಯ-
ಎದೆ ಮೇಲಿರಿಸುವರಾ ಜಡೆಯ!

ಆಚಿಂದೀಚೆಗೆ ಸರಸದಲಾಡುತ
ಘಮಘಮ ಹೂಗಳನು-
ಕೋಲಿಂ ಬೀಳಿಸಿ ‘ತೇರೆ ಶಿವಾ’ಡುತ-
ಪೋಣಿಸಿದರು ಮಾಲೆ-
ಸಂಪಿಗೆ ಜಾಜಿಗಳೂಮಾಲೆ!

ಕೆಂಪದೊ ಬಾನೂ ಮುಗಿಲೋಳಿಗಳೂ
ವರಿಸುವೆನವನೆನುತ-
ತಂತಮ್ಮ ಕೊರಳೊಳು ಹಾಕುತಮಾಲೆಯ
ಕೈಪರೆಯಾಟದಲಿ-
ನಾಚುವರವರೇ ಗೇಲಿಯಲಿ.

ಸೂರ್ಯನ ಕಾಂತಿಯು ನೀಲಾಕಾಶದಿಂ-
ದೆಲ್ಲಿಯೊ ಹರಿದೋಯ್ತು!
ನಿರ್ಜನ ಭೂಮಿಯದಾಯಿತು-ಸರಿದರು
ಉಳೀಸುತ ಕತ್ತಲನು
ಅನುಭವಿಸುತಲೀ ಹರುಷವನು!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಲಿಂಗಮ್ಮನ ವಚನಗಳು – ೨೬
Next post ಪಂಪನಿಗೆ

ಸಣ್ಣ ಕತೆ

  • ಸಿಹಿಸುದ್ದಿ

    ಶ್ರೀನಿವಾಸ ದೇವಸ್ಥಾನದಲ್ಲಿ ಎರಡು ಪ್ರದಕ್ಷಿಣೆ ಹಾಕಿ ಮೂರನೇ ಪ್ರದಕ್ಷಿಣೆಗೆ ಹೊರಡುತ್ತಿದ್ದಂತೆಯೇ, ಯಾರೋ ಹಿಂದಿನಿಂದ "ಕಲ್ಯಾಣಿ," ಎಂದು ಕರೆದಂತಾಯಿತು. ಹಿಂತಿರುಗಿ ನೋಡಿದರೆ ಯಾರೋ ಮಧ್ಯ ವಯಸ್ಸಿನ ಮಹಿಳೆ ಬರುತ್ತಿದ್ದರು.… Read more…

  • ಹುಟ್ಟು

    ಶಾದಿ ಮಹಲ್‌ನ ಒಳ ಆವರಣದಲ್ಲಿ ದೊಡ್ಡ ಹಾಲ್‌ನಲ್ಲಿ ಹೆಂಗಸರೆಲ್ಲಾ ಸೇರಿದ್ದರು. ಹೊರಗಡೆ ಹಾಕಿದ್ದ ಶಾಮಿಯಾನದಲ್ಲಿ ಗಂಡಸರು ನೆರೆದಿದ್ದರು. ಒಂದು ಕಡೆಯ ಎತ್ತರವಾದ ವೇದಿಕೆಯ ಮೇಲೆ ಮದುವೆ ಗಂಡು,… Read more…

  • ಒಲವೆ ನಮ್ಮ ಬದುಕು

    "The best of you is he who behaves best towards the members of his family" (The Holy Prophet) ವಾರದ ಸಂತೆ.… Read more…

  • ಇರುವುದೆಲ್ಲವ ಬಿಟ್ಟು

    ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ… Read more…

  • ನಿಂಗನ ನಂಬಿಗೆ

    ಹೊಸಳ್ಳಿ ನೋಡುವದಕ್ಕೆ ಸಣ್ಣದಾದರೂ ಕಣ್ಣಿಗೆ ಅಂದವಾಗಿದೆ. ಬೆಳವಲ ನಾಡಿನಲ್ಲಿ ಬರಿ ಬಯಲೆಂದು ಟೀಕೆ ಮಾಡುವವರಿಗೆ ಹೊಸಳ್ಳಿ ಕೂಗಿ ಹೇಳುತ್ತಿದೆ - ತಾನು ಮಲೆನಾಡ ಮಗಳೆಂದು ! ಊರ… Read more…