Home / ಕವನ / ಕವಿತೆ / ರಾಜಾಸನದ ಕಟ್ಟೆಯ ಮೇಗಲಿ

ರಾಜಾಸನದ ಕಟ್ಟೆಯ ಮೇಗಲಿ

ಮಡಿಕೇರೀ ಮಲೆ ಸೃಷ್ಠಿಯ ಕೋಮಲೆ
ಸುತ್ತಲು ಗಿರಿಸಾಲು.
ಬಯಲಿನ ತಪ್ಪಲು ನಿರ್ಝರ ದರಿಗಳು
ನಿಡು ಮರ ಗಿಡ ಸಾಲು,
ಸೃಷ್ಠಿಯ ರಮ್ಯ ಸೌಂದರ್ಯಗಳು

ದೃಷ್ಠಿಯೆ ಬೀಳದ ಆಳದೊಳೆಲ್ಲಿಯು
ಹಚ್ಚನೆ ಹೊಲಸಾಲು
ಸುತ್ತು ದಿಗಂತವ ಅಪ್ಪುತ ನಿಂತಿಹ
ನುಣ್ಣನೆ ಬೆಟ್ಟಗಳು,
ಸುತ್ತಲು ಹಬ್ಬಿದ ಬನಹಸುರು.

ತಪ್ಪಲ ಸಾನುವಲಾಯ್ವವು ದನಗಳು
ಅಂಬಾ-ಅನ್ನುತಲಿ-
ಇನಿವಣ್ ಮೆಲುತಲಿ ಮಿಗಮರಿ ಗಿರಿಯಿಂ
ಪೊದರೊಳು ಸೇರಿದವು
ಸಂಜೆ ವಿಶ್ರಾಂತಿಯ ಹೊಂದುವವು.

ಪಡುವಣ ಮಾರುತದೊಂದಿಗೆ ಹಾರುವ
ಚಿಲಿಪಿಲಿ ಹಕ್ಕಿಗಳು
ಕಣಿವೆಯಿಂದೊಯ್ಯನೆ ಬೆಳೆದಾ ಮರಗಳ
ಗೂಡಿನಲೊರಗುವವು
ಪೀಂ ಪೀಂ ಹಾಡಿನ ತಾಳಗಳು.

ತಪ್ಪಲ ನಿರ್ಝರ ಸುಂದರ ಸುಮಕರ
ದೃಶ್ಯದ ರೂಪವದೊ-
ಕಾಳಾಹಿಯ ತೆರ ಬಳಸೋಡುವ ಹಲ
ರಸ್ತೆಗಳದೊ-ಓಟ
ಬತ್ತದ ತೆನೆಗಳ ಗೆಲು ನೋಟ!

ಪಶ್ಚಿಮ ವಾರಿಧಿ ಸ್ನಾನವನೆಸಗಲು
ರವಿಯದೊ ಇಳಿಯುವನು,
ಕೆಂಗದಿರುಗಳನು ಬಾನ್ ಬಯಲೆಲ್ಲ
ಪಸರಿಸಿ ಇಳಿಯುವನು
ಸಂಜೆಯ ಸೂರ್ಯನು ಮುಳುಗುವನು

ರಾಜಾಸನದಾ ಕಟ್ಟೆಯ ಮೇಗಲಿ-
ಕೇರಿಯ ತರುಣಿಯರು
ರಮ ರಮ ಝಿಮ ಜಿಮ ಸಂವಾದಗಳಾ
ಲೀಲೆಯೊಳ್ ಮುಳುಗಿದರು
ಮರೆತರು ಸುತ್ತಲ ಲೋಕವನು.

ಹಕ್ಕಿಗಳಾಡೂ ಚಂದಿರನುದಯವು
ಗುಂಯ್ ಗುಂಯ್ ತುಂಬಿಗಳಾ
ಚಂಚಲ ಕರೆಯಲಿ, ಕೇಳಿಯ ಮರುಳಲಿ,
ಮನೋಲ್ಲಾಸದಲಿ-
ಕಾಮನ ವಾರ್ತಾವಿಷಯದಲಿ.

ತೆಂಬೆಲರೊಯ್ಯನೆ ತಣ್ಣನೆ ಬೀಸಲು
ಕುಣಿದವು ಕುರುಳುಗಳು-
ಮೊಲೆಕಟ್ಟುಡುಪೂ ಹಿನ್ನಿರಿ ಕುಚ್ಚೂ
ಜರಿ ವಸ್ತ್ರ ತೊಟ್ಟು-
ಮಿನುಗಿತು ಕುಂಕುಮದಾ ಬೊಟ್ಟು.

ಚೆಣಿಕಣಿ ಬಳೆಗಳು ಝಲ್‌ಜಲ್ ನೂಪುರ
ರತ್ನದ ಒಂಟಿಸರ
ತೂಗುವ ಜುಂಕಿಗಳೋಲೆಯನಾಡಿಸಿ
ಕುಲುಕುವರಾ ತಲೆಯ-
ಎದೆ ಮೇಲಿರಿಸುವರಾ ಜಡೆಯ!

ಆಚಿಂದೀಚೆಗೆ ಸರಸದಲಾಡುತ
ಘಮಘಮ ಹೂಗಳನು-
ಕೋಲಿಂ ಬೀಳಿಸಿ ‘ತೇರೆ ಶಿವಾ’ಡುತ-
ಪೋಣಿಸಿದರು ಮಾಲೆ-
ಸಂಪಿಗೆ ಜಾಜಿಗಳೂಮಾಲೆ!

ಕೆಂಪದೊ ಬಾನೂ ಮುಗಿಲೋಳಿಗಳೂ
ವರಿಸುವೆನವನೆನುತ-
ತಂತಮ್ಮ ಕೊರಳೊಳು ಹಾಕುತಮಾಲೆಯ
ಕೈಪರೆಯಾಟದಲಿ-
ನಾಚುವರವರೇ ಗೇಲಿಯಲಿ.

ಸೂರ್ಯನ ಕಾಂತಿಯು ನೀಲಾಕಾಶದಿಂ-
ದೆಲ್ಲಿಯೊ ಹರಿದೋಯ್ತು!
ನಿರ್ಜನ ಭೂಮಿಯದಾಯಿತು-ಸರಿದರು
ಉಳೀಸುತ ಕತ್ತಲನು
ಅನುಭವಿಸುತಲೀ ಹರುಷವನು!
*****

Tagged:

Leave a Reply

Your email address will not be published. Required fields are marked *

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಕೀಲಿಕರಣ: ಕಿಶೋರ್‍ ಚಂದ್ರ