ಸಮತಾವಾದ

ಭೂಮಿಯ ಒಡೆತನ
ಒಬ್ಬನಿಗಾಗಲು
ಬಾಳಿನ ಬೇಗುದಿ ಒಬ್ಬನಿಗೆ
ಐಸಿರಿಯೊಬ್ಬಗೆ
ಶರಣಾಗಲು ಇಹ
ಲೋಕವೆ ಅಸಮತೆ ಬೀಡಹುದು.

ರಾಜನ ಸಂಪದ
ಸಿರಿವಂತನ ಗೆಲು
ನೋಡುತ ಸಾಸಿರ ಜನವೃಂದ
ಬೆರಗಲಿ ಕುಳಿತೂ
ತಮ್ಮಯ ಪಾಡನು
ನುಂಗುತ ಕರಗುತ ಕಳೆಯುತ್ತ.

ಸಾಹಸ ಬಾಳಿಗೆ
ದೈವಿಕ ಸುಖಕೆ
ಪಾತ್ರರು ಅಲ್ಲವೆ ಜನಕೋಟಿ?
ಕಲ್ಪಿತ ವ್ಯಸನಕೆ
ಮಾಡಿದ ಕರ್ಮಕೆ
ಅಂತ್ಯವು ಇಲ್ಲವೆ ಈ ಜಗದಿ?

ಋತುಗಳು, ಕಾಲವು
ಸೂರ್ಯನು, ಚಂದ್ರನು,
ಪ್ರಕೃತಿಯೆಲ್ಲವು ಸಮವಾಗಿ
ಕ್ರಿಮಿಯಿಂದೊಡಗಿದ
ವಿಶ್ವ ಸರ್‍ವಸ್ವಕೆ
ಒದಗಿದ ಸುಖವನು ಕ್ರಮವಾಗಿ-

ಈಯಲು ಮಾನವ-
ಗಣದಲಿ ಬಹುವಿಧ
ಏತಕೊ ಬಂದಿತು-ಎಲ್ಲಿಂದ?
ಅಸಮಾಧಾನದ
ಮನಸನು ಕೊರೆಯುವ
ಕೀಟವೆ ಇಂದಿನ ಈ ಭೇದ.

ಜನ ಸಮಾಜದಿ
ರಾಜನು ಋಷಿಗಳು
ರಕ್ಕಸ ಬಲ್ಲಿದ ಬಡವನೆಂದು
ರೂಪಿಗೆ ವರ್ಣಕೆ
ಹೋಲುವ ಸ್ಥಿತಿಯಲಿ
ಕೋಟ್ಯಾದಿ ವಿಧ ಜೀವನವು.

ರಷ್ಯಾದೇಶದ
ಭೀಕರ ಕ್ರಾಂತಿಯು
ಫ್ರಾನ್ಸಿನ ವಿಪ್ಲವದಾ ಪರಿಯ
ಹೆಬ್ಬುಲಿ ತನ್ನಯ
ಪ್ರಾಣಕೆ ಹಾರುವ
ತೆರವಿದೊ ಜೀವನದತೃಪ್ತಿ.

ದೇಶದ ಋಣವನು
ರಾಜನ ಹೊಟ್ಟೆಲಿ;
ಕಾಡದು ಬೇಡನ ಬಲೆಯಲ್ಲಿ.
ಬಡವನ ಕೈಗಳು
ಧನಿಕನ ಜೇಬಲಿ
ಕಾಳ್ಗಳು ಹೆಗ್ಗಣ ಬಿಲದಲ್ಲಿ.

ಸುಭಿಕ್ಷಾವಾದವ-
ದಿಲ್ಲದೆ ಲೋಕವು
ಅನ್ನದ ಸಮರವೆ-ಅನ್ಯಾಯ!
ಮಣ್ಣಿನ ಪಾಪವು
ಬ್ರಹ್ಮನ ನೀತಿಯು
ಸುಟ್ಟಂತಾಯಿತು ಈ ಇರವು.

ಹೇಳುವ ನೀತಿಗೆ
ಬಾಯಲಿ ಸ್ಥಾನವು
ಮಿನುಗುವ ಒಡವೆಗೆ ಬೆಲೆಯಿಲ್ಲ!
ಹೊನ್ನು ಹಣಗಳ
ಮೋಹಿಸಿ ನರಳದಿ-
ರೆನ್ನುವ ಹಾಡಿಗೆ ತಾಳವಿಲ್ಲ.

ಸಮತಾವಾದದ
ಕ್ರಾಂತಿಗೆ ಶರಣಾ-
ಗುವೆನಿದೊ ಮನ್ನಿಸಿ ಧರ್ಮವನು.
ಸಮತಾ ಭಾವವು
ಸಮಗುಣ ಐಕ್ಯವು
ಸರ್ವಜನ ಸುಖ ಬೆಳಗಲಿದೊ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಲಿಂಗಮ್ಮನ ವಚನಗಳು – ೧೨
Next post ಬೆಳೆಗಿನ ತೋಟದಲ್ಲಿ

ಸಣ್ಣ ಕತೆ

  • ಬಿರುಕು

    ಚಂಪಾ ಹಾಲು ತುಂಬಿದ ಲೋಟ ಕೈಯಲ್ಲಿ ಹಿಡಿದು ಒಳಗೆ ಬಂದಳು. ಎಂದಿನಂತೆ ಮೇಜಿನ ಮೇಲಿಟ್ಟು ಮಾತಿಲ್ಲದೆ ಹೊರಟು ಹೋಗುತ್ತಿದ್ದ ಅವಳು ಹೊರಡುವ ಸೂಚನೆಯನ್ನೇ ತೋರದಿದ್ದಾಗ ಮೂರ್‍ತಿ ಬೆಚ್ಚಿ… Read more…

  • ತೊಳೆದ ಮುತ್ತು

    ಕರ್ನಾಟಕದಲ್ಲಿ ನಮ್ಮ ಮನೆತನವು ಪ್ರತಿಷ್ಠಿತವಾದದ್ದು. ವರ್ಷಾ ನಮಗೆ ಇನಾಮು ಭೂಮಿಗಳಿಂದ ಎರಡು- ಮೂರು ಸಾವಿರ ರೂಪಾಯಿಗಳ ಉತ್ಪನ್ನ. ನಮ್ಮ ತಂದೆಯವರಾದ ರಾವಬಹಾದ್ದೂರ ಅನಂತರಾಯರು ಡೆಪುಟಿ ಕಲೆಕ್ಟರರಾಗಿ ಪೆನ್ಶನ್ನ… Read more…

  • ಕಲ್ಪನಾ

    ಚಿತ್ರ: ಟಾಮ್ ಬಿ ಇದು ಇಪ್ಪತ್ತು ವರ್ಷಗಳ ಹಿಂದಿನ ಕಥೆ! ಮಾತನಾಡುವ ಸಿನಿಮಾ ಪ್ರಪಂಚ ಅದೇ ಆಗ ದಕ್ಷಿಣ ಭಾರತದಲ್ಲಿ ತಲೆಯೆತ್ತಿದ್ದಿತು! ಸಿನಿಮಾದಲ್ಲಿ ಪಾತ್ರವಹಿಸುವ ನಟಿನಟಿಯರನ್ನು ಅಚ್ಚರಿಯ… Read more…

  • ದುರಾಶಾ ದುರ್ವಿಪಾಕ

    "ಒಳ್ಳೇದು, ಅವನನ್ನು ಒಳಗೆ ಬರಹೇಳು" ಎಂದು ಪ್ರೇಮಚಂದನು- ಘನವಾದ ವ್ಯಾಪಾರಸ್ಥನು- ಆಢ್ಯತೆಯಿಂದ, ತಾನು ಆಡುವ ಒಂದೊಂದು ಶಬ್ದವನ್ನು ತೂಕಮಾಡಿ ಚಲ್ಲುವಂತೆ ಸಾವಕಾಶವಾಗಿ ನುಡಿದನು. ಬಾಗಿಲಲ್ಲಿ ನಿಂತಿದ್ದ ವೃದ್ಧ… Read more…

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…