Home / ಕವನ / ಕವಿತೆ / ಸಮತಾವಾದ

ಸಮತಾವಾದ

ಭೂಮಿಯ ಒಡೆತನ
ಒಬ್ಬನಿಗಾಗಲು
ಬಾಳಿನ ಬೇಗುದಿ ಒಬ್ಬನಿಗೆ
ಐಸಿರಿಯೊಬ್ಬಗೆ
ಶರಣಾಗಲು ಇಹ
ಲೋಕವೆ ಅಸಮತೆ ಬೀಡಹುದು.

ರಾಜನ ಸಂಪದ
ಸಿರಿವಂತನ ಗೆಲು
ನೋಡುತ ಸಾಸಿರ ಜನವೃಂದ
ಬೆರಗಲಿ ಕುಳಿತೂ
ತಮ್ಮಯ ಪಾಡನು
ನುಂಗುತ ಕರಗುತ ಕಳೆಯುತ್ತ.

ಸಾಹಸ ಬಾಳಿಗೆ
ದೈವಿಕ ಸುಖಕೆ
ಪಾತ್ರರು ಅಲ್ಲವೆ ಜನಕೋಟಿ?
ಕಲ್ಪಿತ ವ್ಯಸನಕೆ
ಮಾಡಿದ ಕರ್ಮಕೆ
ಅಂತ್ಯವು ಇಲ್ಲವೆ ಈ ಜಗದಿ?

ಋತುಗಳು, ಕಾಲವು
ಸೂರ್ಯನು, ಚಂದ್ರನು,
ಪ್ರಕೃತಿಯೆಲ್ಲವು ಸಮವಾಗಿ
ಕ್ರಿಮಿಯಿಂದೊಡಗಿದ
ವಿಶ್ವ ಸರ್‍ವಸ್ವಕೆ
ಒದಗಿದ ಸುಖವನು ಕ್ರಮವಾಗಿ-

ಈಯಲು ಮಾನವ-
ಗಣದಲಿ ಬಹುವಿಧ
ಏತಕೊ ಬಂದಿತು-ಎಲ್ಲಿಂದ?
ಅಸಮಾಧಾನದ
ಮನಸನು ಕೊರೆಯುವ
ಕೀಟವೆ ಇಂದಿನ ಈ ಭೇದ.

ಜನ ಸಮಾಜದಿ
ರಾಜನು ಋಷಿಗಳು
ರಕ್ಕಸ ಬಲ್ಲಿದ ಬಡವನೆಂದು
ರೂಪಿಗೆ ವರ್ಣಕೆ
ಹೋಲುವ ಸ್ಥಿತಿಯಲಿ
ಕೋಟ್ಯಾದಿ ವಿಧ ಜೀವನವು.

ರಷ್ಯಾದೇಶದ
ಭೀಕರ ಕ್ರಾಂತಿಯು
ಫ್ರಾನ್ಸಿನ ವಿಪ್ಲವದಾ ಪರಿಯ
ಹೆಬ್ಬುಲಿ ತನ್ನಯ
ಪ್ರಾಣಕೆ ಹಾರುವ
ತೆರವಿದೊ ಜೀವನದತೃಪ್ತಿ.

ದೇಶದ ಋಣವನು
ರಾಜನ ಹೊಟ್ಟೆಲಿ;
ಕಾಡದು ಬೇಡನ ಬಲೆಯಲ್ಲಿ.
ಬಡವನ ಕೈಗಳು
ಧನಿಕನ ಜೇಬಲಿ
ಕಾಳ್ಗಳು ಹೆಗ್ಗಣ ಬಿಲದಲ್ಲಿ.

ಸುಭಿಕ್ಷಾವಾದವ-
ದಿಲ್ಲದೆ ಲೋಕವು
ಅನ್ನದ ಸಮರವೆ-ಅನ್ಯಾಯ!
ಮಣ್ಣಿನ ಪಾಪವು
ಬ್ರಹ್ಮನ ನೀತಿಯು
ಸುಟ್ಟಂತಾಯಿತು ಈ ಇರವು.

ಹೇಳುವ ನೀತಿಗೆ
ಬಾಯಲಿ ಸ್ಥಾನವು
ಮಿನುಗುವ ಒಡವೆಗೆ ಬೆಲೆಯಿಲ್ಲ!
ಹೊನ್ನು ಹಣಗಳ
ಮೋಹಿಸಿ ನರಳದಿ-
ರೆನ್ನುವ ಹಾಡಿಗೆ ತಾಳವಿಲ್ಲ.

ಸಮತಾವಾದದ
ಕ್ರಾಂತಿಗೆ ಶರಣಾ-
ಗುವೆನಿದೊ ಮನ್ನಿಸಿ ಧರ್ಮವನು.
ಸಮತಾ ಭಾವವು
ಸಮಗುಣ ಐಕ್ಯವು
ಸರ್ವಜನ ಸುಖ ಬೆಳಗಲಿದೊ.
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...