Home / ಕವನ / ಕವಿತೆ / ಕಲ್ಲು ಬಿದ್ದ ಕೊಳ

ಕಲ್ಲು ಬಿದ್ದ ಕೊಳ

ಕೂತಲ್ಲಿ ಕೂಡಲಾರದ
ನಿಂತಲ್ಲಿ ನಿಲಲಾರದ ಮನವೀಗ
ಕಲ್ಲು ಬಿದ್ದ ಕೊಳ
ಅವನನ್ನು ಹಾಗೆ ನೋಡಿದ್ದೇ ತಪ್ಪಾಯಿತೆ?
ಆ ಕಣ್ಣುಗಳಲ್ಲಿ ಚಾಕು ಚೂರಿಗಳಿದ್ದದ್ದು
ನನಗಾದರೂ ಏನು ಗೊತ್ತಿತ್ತು…?

ಗೋಡೆಗಳು ಕೇಳಿಸಿಕೊಳ್ಳುವುದು
ಹಲ್ಲಿಗಳು ಮಾತನಾಡುವುದು
ಅದನ್ನೇ ಸಾಕ್ಷಿಯೆಂದು ನಂಬುವುದು
ರಸ್ತೆಗಳೇ ಕಟಕಟೆಗಳಾಗುವುದು
ಕಣ್ಣಿದ್ದವರೆಲ್ಲಾ ಜಾಣ ಕುರುಡರಾಗಿರುವುದು
ನಟನೆಯೇ ಬದುಕಾಗಿರುವುದು
ಎಲ್ಲಾ ಹೆಣ್ಣಿಗೆ ಬರೆದ ಸಂವಿಧಾನ?

ಕಟ್ಟಿಕೊಂಡವ
ಕಾದ ಹೆಂಚಿನ ಮೇಲೆ
ನಾಲ್ಕು ಹನಿ
ಹಲ್ಲಿಯಂತೆ ಹೊಯ್ಯದೇ
ಉತ್ತರೆಯ ಮಳೆಯಾಗಿದ್ದರೆ….?
ಯಾರದೋ ಮುತ್ತು
ಈ ಒಡಲ ಚಿಪ್ಪಿನೊಳಗೆ ಫಳ್ ಅಂತ
ಹೊಳೆದು
ರಾಡಿ ರಂಪ ಎಬ್ಬಿಸುತ್ತಿರಲಿಲ್ಲ

ಕುಂತಿ ಗಾಂಧಾರಿಯರು
ಬೇಡವೆಂದರೂ ನೆನಪಾಗುತ್ತಾರೆ
ಕಣ್ಣು ಹೊರಳಿಸಿದ ಕಡೆ ನಿಂತು
ಸೆರಗು ಬಾಯಲಿ ಕಚ್ಚಿ
ನಗುತ್ತಾರೆ
ನನಗೋ ಕಣ್ಣು ತುಂಬಾ
ಉಪ್ಪು ಕಡಲು

ಕತ್ತಲ ರಾತ್ರಿಗಳ ಹೆರುವ
ನಾಳೆಗಳು
‘ಅಮ್ಮಾಽಽಽ’ ಎಂದರೆ
ತುಂಬಿದೊಡಲ ಮೇಲೆ ಅರಿವಿಲ್ಲದೇ
ಹರಿವ ನಡುಗುವ ಕೈಗಳು
ಮಿಸುಕಾಡುವ ಎಳೆಯ ಕನಸು ತಾಕಿ
ಹಣೆಯ ಮೇಲೆ ಬೆವರ ಸಾಲು

ಅವುಗಳನ್ನೂ ಯಾರಾದರೂ ಮುತ್ತೆಂದು
ಕರೆದುಬಿಟ್ಟರೆ?
ಛೆ! ಎಂಥ ರೂಪಕ
ಎಂದು ನಕ್ಕು ಸುಮ್ಮನಾಗಲೇ
ಅಥವಾ ಅತ್ತು ಕೂಗಲೇ
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...