ಈ ಆಗಸ ಈ ತಾರೆ – ಜುಳು
ಜುಳನೆ ಹರಿವ ಜಲಧಾರೆ
ಮುಗಿಲ ಮಲೆಯೆ ಸಾಲೇ-ಆಹಾ
ಯಾರದೊ ಈ ಬಗೆ ಲೀಲೆ!
ಬೆಳಗ ಕಾಯ್ದ ಹಿಮವೋ – ಹಿಮವ
ಮೆಲ್ಲನೆ ನೇಯುವ ತಮವೋ
ತಮವ ಕಳೆದು ಹಿಮ ಓಡಿಸುವ
ಬೆಚ್ಚನೆ ಬಿಸಿಲಿನ ಕ್ರಮವೋ!
ಹೆಣ್ಣಿನ ಕಣ್ಣಿನ ದೀಪ
ಉರಿಸಿದೆ ರೂಪ ಪ್ರತಾಪ
ರೂಪದೀಪದಾಲಾಪದಿ ಪರಿ-
ಮಳಿಸಿದೆ ರಾಗದ ಧೂಪ
ಗಾಳಿಯೆ ಉರಿಯೇ ಜಲವೇ
ನಭವೇ ಅಡಿಗಿಹ ನೆಲವೇ?
ಯಾರು ಮಾಡಿ ಎಸೆದ ಬೊಂಬೆ ನಾವು
ಯಾರದು ಈ ಲೀಲೆ?
*****
ಲಕ್ಷ್ಮೀನಾರಾಯಣ ಭಟ್ಟರು ಕನ್ನಡ ಕಾವ್ಯದ ಜೀವಂತಿಕೆಯನ್ನು ಹೆಚ್ಚಿಸುತ್ತ ಆಧುನಿಕ ಕನ್ನಡ ಕಾವ್ಯವನ್ನು ಬೆಳೆಸುತ್ತ ಬಂದಿರುವ ಪ್ರಮುಖ ಕವಿಗಳಲ್ಲಿ ಒಬ್ಬರು. ಅವರ ಅನುವಾದಗಳು ಕನ್ನಡ ಕಾವ್ಯಕ್ಕೆ ಕೊಟ್ಟ ಬೆಲೆಬಾಳುವ ಉಡುಗೊರೆಗಳು ಮಾತ್ರವಾಗಿರದೆ ಸ್ವಂತಕ್ಕೆ ಪಡೆದ ರಕ್ತದಾನವೂ ಆಗಿದೆ. ಸ್ವಂತ ಪ್ರತಿಭೆ, ಶ್ರೇಷ್ಠಕವಿಗಳ ಆಪ್ತ ಅಧ್ಯಯನ ಎರಡೂ ಅವರನ್ನೂ ಎತ್ತರಕ್ಕೆ ಹತ್ತಿಸಿವೆ. ಅಧ್ಯಯನ, ಚಿಂತನೆ ಇವು ಅವರಲ್ಲಿ ಹಾಸು ಹೊಕ್ಕಾಗಿ ಒಂದನ್ನು ಮತ್ತೊಂದು ಬಲಗೊಳಿಸುತ್ತ ಬಂದಿವೆ.