Home / ಕವನ / ಕವಿತೆ / ಹರಿದ ಜೋಳಿಗೆ ತುಂಬ

ಹರಿದ ಜೋಳಿಗೆ ತುಂಬ

ಮಸಿ ಬಟ್ಟೆ ಆ ಹುಡುಗ
ಆ ಹುಡುಗ ಮಸಿ ಬಟ್ಟೆ
ಬರಿಗಾಲಲಿ
ಬೀದಿ ಬೀದಿ ಸುತ್ತುತ್ತಾ
‘ಸಾಕು’
ಎಂದೆಸೆದದ್ದ
ಎತ್ತಿಕೊಳ್ಳುತ್ತಾನೆ ಹುಡುಕಿ
ತುತ್ತಿನಂತೆ

ಕುಡಿದು ಬಿಸುಟ ಖಾಲಿ
ಬಾಟಲು
ಕತ್ತರಿಸಿ ಒಗೆದ ‘ಡೈರಿ’
ಹಾಲಿನ ಪಾಕೆಟ್ಟು
ತುಕ್ಕು ಹಿಡಿದ ಸೈಕಲ್ಲಿನ
‘ಮಡ್‌ಗಾರ್ಡು’
ಒಡೆದು ಹೋದ ‘ಪ್ಲಾಸ್ಪಿಕ್ಕು
ಜಗ್ಗು ಬಕೆಟ್ಟು’
ಆಡಿ ಎಸೆದ ಮುರಿದ
ಗೊಂಬೆಗಳು
ರಟ್ಟಿನ ಡಬ್ಬಿ
ಹಿಟ್ಟಿನ ಪುಟ್ಟಿ
ಸುದ್ದಿ ಹೇಳುವ ಹಾಳೆ…
ಅವನ ಹಸಿದ
ಹರಕು
ಜೋಳಿಗೆಗೆ ಅಂದು ಮೃಷ್ಟಾನ್ನ

ವಿಷಣ್ಣ ವದನದ ಎರಡು
ಸೋಡಾ ಗೋಲಿಯಲಿ
ಆಟೋಗೆ ಜೋತು ಬಿದ್ದು
ತೂಗುವ
ಅಮ್ಮನ ಕಿರುಬೆರಳು ಹಿಡಿದು
ಜಗ್ಗುವ
ಸ್ಕೂಟರನೇರಿ ಬೆನ್ನು ಬಳಸಿ
ಕುಳಿತ
ಗೆಳೆಯರ ಕೈ ಹಿಡಿದು
ಹಾರಿ ಬರುವ
ಹಿಂಡು ಗುಬ್ಬಿಗಳ
ಬೆನ್ನ ಮೇಲೆ
ಕನಸು
ತುಂಬಿದ ಪಾಟಿ ಚೀಲ.

ಅರೆಕ್ಷಣ ಮೈ ಮರೆತು
ನಿಂತಲ್ಲೇ
ನಿಟ್ಟುಸಿರೊಂದು ಹಾದು
ಕಣ್ಣು ಕೊಳವಾಗುವದು

ನಿಂತರೆ ಕೆಡುವುದು ಕೆಲಸ
ನಡೆ
ನಾಲ್ಕು ಬೈಗಳು
ಇರಿವ ಕಣ್ಣೋಟಗಳ ನಡುವೆ
ಹುಡುಕು
ಸಂದಿಗೊಂದಿಯ ತಿರುಗು
ಮನೆಯ ಹಿತ್ತಲಲಿ ಚೂರು
ಕಬ್ಬಿಣ
ಮುರುಕು ತಗಡು
ಹರಕು ಚಪಲಿ
ಬಾಯೊಳಗೊಂದು ಬಳಸಿದ
ಕಾಂಡೋಮ್
ಉಬ್ಬಿದ ಬಲೂನಿನ ತುದಿಗೆ
ತುಣುಕು ಸೂರ್ಯ
ಒಣಗಿದ ಗಂಟಲಿಗೆ ಬೊಗಸೆ ನೀರು
ಸೋತ ಕಾಲ್ಗಳಿಗೆ ಬೀದಿ ಬದಿಯ
‘ಗುಲ್ಮೊಹರ್’ ನೆರಳು

ಕತ್ತಲಾಗುವ ಮುನ್ನ
ಪುಟ್ಟ
ಗುಡಿಸಲ ಮಿಣುಕು ದೀಪ
ಹಚ್ಚಬೇಕು ಒಲೆ
ತಣಿಸಬೇಕು ಹಸಿದ ಒಡಲು

ಮರುದಿನ
ಸೂರ್ಯ
ಹರಿದ ಜೋಳಿಗೆ
ಹೆಕ್ಕಿ ತುಂಬಬೇಕು ಕನಸುಗಳ…

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...