ಮಾತು ಕೇಳದ ಮಾತುಗಳು

ಈ ಮಾತುಗಳು ಮಾತೇ ಕೇಳಲೊಲ್ಲವು
ಮೊಳಕೆ ಒಡೆಯಲೊಲ್ಲವು
ಚಿಗುರಿ ಹೂತು ಕಾತು ಹಣ್ಣಾಗುವುದಂತೂ
ದೂ…ರ

ಷಂಡವಾಗಿವೆ ಮಾತು ಜೊಳ್ಳು ಬೀಜದಂತೆ
ಸಂತಾನ ಶಕ್ತಿಯೇ ಇಲ್ಲ
ಬರೀ ಬೆಂಕಿಯಲ್ಲಿ ತುಪ್ಪ ಹೊಯ್ದು
ಹೊಗೆ ಎಬ್ಬಿಸಿದಂತೆ
ಮಿಥ್ಯಾ ಮಾಯಾಬ್ರಹ್ಮದ ಮಂಜು
ಮೇಲೆ ಮುಚ್ಚಿದಂತೆ
ಹೊಗೆಯಲ್ಲಿ ಸ್ವರ್ಗದ ದೇವತೆಗಳು
ಬ್ರಹ್ಮ ವಿಷ್ಣು ಮಹೇಶ್ವರರು ಅಪ್ಸರೆಯರು
ತೇಲಾಡುತ್ತಿವೆ ಹೆಣ ಮೋಡಗಳಂತೆ

ಭಂಡವಾಗಿವೆ ಮಾತು
ಜೀವ ಇಲ್ಲ ಭಾವ ಇಲ್ಲ
ಗರ್ಭ ಗುಡಿಯಲ್ಲಿ ಹೂತು
ಮಂತ್ರ ಮಣ ಮಣ ಗಂಟೆ ಗಣ ಗಣ
ಗಟ್ಟಿಸಿಕೊಂಡಂತೆ ಬಂಡೆಗೆ ಮಂಡೆ
ಮತ್ತೆ ಮತ್ತೆ ಗುಡಿ ಕಟ್ಟುತ್ತಿವೆ
ಬೊಜ್ಜು ಬೆಳೆಯುತ್ತಿವೆ
ಕಮರುಡೇಗಿನಂತೆ ಮಾತು

ಮೊಂಡಾಗಿವೆ ಮಾತು ಏನನ್ನೂ ಚುಚ್ಚಲಾರವು
ಮರ್ಮಕ್ಕೆ ನಾಟಲಾರವು
ಮತ್ತೆ ಅದೇ ಆದೇ ಸುಪ್ರಭಾತ ಪಾಪ ಪುಣ್ಯ
ಸ್ವರ್ಗ ನರಕ ವೈರಾಗ್ಯ ಭಕ್ತಿ ಮುಕ್ತಿಗಳ
ಹಳೇ ಸವಕಲು ಪ್ಲೇಟು ಕಿರುಚಿದಂತೆ
ದಯೆಯೇ ಧರ್ಮ, ಅಹಿಂಸೆ, ಸತ್ಯಗಳ
ಉರುಳ ಕೊರಳಿಗೆ ಹಾಕಿ ಹಿಚುಕಿದಂತೆ

ಗುಳ್ಳೆಯಾಗಿವೆ ಮಾತು
ಭಾವ ಕವಿಗಳಂತೆ
ದೂರ ದೂರ ನಿಂತು ಪ್ರೀತಿ ಮಾಡುತ್ತವೆ
ಹತ್ತಿರ ಬಂದು ಅಪ್ಪಲಿಲ್ಲ
ಹಿಂಡಿ ರಸ ಹೀರಲಿಲ್ಲ

ಪರದೇಶಿ ಕಫ ಕೆಮ್ಮುಗಳ ವಾಂತಿ ಹರಡಿ
ನವ್ಯವಾದ ಕ್ಯಾನ್ಸರ್ ಏಡ್ಸ್ ರೋಗಗಳು
ಚಿಕನ್ ಗುನ್ಯಾ ಢೆಂಗೆ ಜ್ಜರಗಳು
ಅಕಾಡೆಮಿಗಳಿಗೆ ಏಣಿಯಾಗುತ್ತಿವೆ
ಪ್ರಾಧಿಕಾರ ಪ್ರಶಸ್ತಿಗಳಿಗೆ
ಜ್ಞಾನ ಪೀಠಗಳಿಗೆ ಲಗ್ಗೆ ಹಾಕುತ್ತಿವೆ

ಮಾತಿನಂಗಡಿಗಳು ವಿದ್ಯಾ-ಲಯಗಳಲ್ಲಿ
ತರ್ಕಗಳು ತಿಕ್ಕಾಡಿ ಮಣ್ಣು ಕಸ ಮುಕ್ಕಾಡಿ
ಜಾನಪದ ನೆಕ್ಯಾಡಿ
ತೊಟ್ಟಿಳಲ್ಲಿ ಕಾಗದದ ಉಂಡೆ ಉಂಡೆ
ಅದಕ್ಕೆ ಬೆಂಕಿ ಹಚ್ಚಿ ಕಾಯಿಸಿಕೊಳ್ಳುತ್ತಾರೆ
ಬೇಳೆ ಬೇಯಿಸಿಕೊಳ್ಳುತ್ತಾರೆ ಹಲವರು

ಪೊಳ್ಳಾಗಿವೆ ಮಾತು ರಾಜಕಾರಣಿಗಳಿಗೆ
ದೇಶ ಲೂಟಿ ಮಾಡಿಕೊಳಲು ಹಡದಿ ಹಾಸುತ್ತವೆ
ಹಾದರಕ್ಕೆ ಗುರಿಯಾಗಿವೆ ಮಾತು
ಕಂಡ ಭಂಡರಿಗೆಲ್ಲ ಸೆರಗು ಹಾಸುತ್ತಿವೆ

ಜೊಳ್ಳಾಗಿವೆ ಮಾತು
ನಯವಂಚಕರ ನಮಸ್ಕಾರ ಚಮತ್ಕಾರಗಳ
ಸರ ಪೋಣಿಸಿ ಕೊರಳಿಗೆ ಹಾಕಿಕೊಂಡು
ಲಂಚ ಮಂಚದ ಮೇಲೆ ಹಾಯಾಗಿ
ಮಲಗುತ್ತಿವೆ ಮುಲುಗುತ್ತಿವೆ

ಬಂಡವಾಳವಾಗಿವೆ ಮಾತು
ಬುದ್ಧ, ಬಸವ ಸರ್ವಜ್ಞರನ್ನು
ಗಾಂಧಿ ವಿವೇಕಾನಂದರನ್ನು
ಹರಾಜಿಗೆ ಹಾಕಲು

ಇಷ್ಟಿಷ್ಟೆ ಅವರ ಹರಿದು ತಿನ್ನುತ್ತ
ತಮ್ಮ ಪೀಠಗಳ ಬಲಿಸಿಕೊಳ್ಳಲು
ಕುತ್ತಿಗೆ ಮಟ ಗಳಿಸಿಕೊಳ್ಳಲು

ಆಕ್ರಂದನ ಮಾಡುತ್ತಿವೆ ಮೇಲೆ ಆತ್ಮಗಳು
ಪರದೇಶಿಗಳಾಗಿ
ಇದ್ದ ದೇಶದಲ್ಲೆ – ಈ ದೇಶದಲ್ಲೆ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಭಂಡ
Next post ವೈದೇಹಿ-ಜರಗನಹಳ್ಳಿ

ಸಣ್ಣ ಕತೆ

  • ಕೊಳಲು ಉಳಿದಿದೆ

    ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…

  • ಪತ್ರ ಪ್ರೇಮ

    ಅಂಚೆ ಇಲಾಖೆಯ ಅದೊಂದು ಸಮಾರಂಭ. ಇಲಾಖೆಯ ಸಿಬ್ಬಂದಿ ವರ್ಗದ ಕಾರ್ಯದಕ್ಷತೆ ಕುರಿತು ಕೇಂದ್ರ ಕಾರ್ಮಿಕ ಸಚಿವ ಆಸ್ಕರ್‍ ಫರ್ನಾಂಡಿಸ್ ಅಮೆರಿಕಾದಲ್ಲಿ ನಡೆದ ಒಂದು ಸತ್ಯ ಘಟನೆ ಎಂದು… Read more…

  • ಎಪ್ರಿಲ್ ಒಂದು

    ಒಮ್ಮೆಲೇ ಅವನಿಗೆ ಮದುವೆಯಾಗಿಬಿಡಬೇಕೆಂಬ ವಿಚಾರ ಬಂತು. ಮದುವೆಯಾಗುವದೆಂದರೆ ಒಂದು ಸಹಜವಾದ ವಿಚಾರವೆಂದು ಕೆಲವರಿಗೆ ಅನಿಸಬಹುದು. ಆದರೆ ಅವನದು ಮಾತ್ರ ಹಾಗಿರಲಿಲ್ಲ. ಎಲ್ಲರೂ ಅವನಿಗೆ ‘ಆಜನ್ಮ ಬ್ರಹ್ಮಚಾರಿ’ ಎಂಬ… Read more…

  • ಪ್ರಕೃತಿಬಲ

    ಮಕರ ಸಂಕ್ರಮಣದ ಮಹೋತ್ಸವದ ದಿವಸವದು, ಸೂರ್ಯನಾರಾಯಣನು ಉತ್ತರಾಯಣನಾಗಿ ಸೃಷ್ಟಿಶೋಭೆಯೆಂಬ ಮಹಾಪ್ರದರ್ಶನ ಸಮಾರಂಭವನ್ನು ಜಗತ್ತಿಗೆ ತೋರಿಸುವನಾದನು. ಈ ಅದ್ವಿತೀಯವಾದ ಪ್ರದರ್ಶನವನ್ನು ನೋಡಲಪೇಕ್ಷಿಸುವವರು ಪರಮ ರಮಣೀಯವಾದ ಬೆಂಗಳೂರು ಪಟ್ಟಣಕ್ಕೆ ಬಂದು… Read more…

  • ಕಲ್ಪನಾ

    ಚಿತ್ರ: ಟಾಮ್ ಬಿ ಇದು ಇಪ್ಪತ್ತು ವರ್ಷಗಳ ಹಿಂದಿನ ಕಥೆ! ಮಾತನಾಡುವ ಸಿನಿಮಾ ಪ್ರಪಂಚ ಅದೇ ಆಗ ದಕ್ಷಿಣ ಭಾರತದಲ್ಲಿ ತಲೆಯೆತ್ತಿದ್ದಿತು! ಸಿನಿಮಾದಲ್ಲಿ ಪಾತ್ರವಹಿಸುವ ನಟಿನಟಿಯರನ್ನು ಅಚ್ಚರಿಯ… Read more…