Home / ಕವನ / ಕವಿತೆ / ಮಾತು ಕೇಳದ ಮಾತುಗಳು

ಮಾತು ಕೇಳದ ಮಾತುಗಳು

ಈ ಮಾತುಗಳು ಮಾತೇ ಕೇಳಲೊಲ್ಲವು
ಮೊಳಕೆ ಒಡೆಯಲೊಲ್ಲವು
ಚಿಗುರಿ ಹೂತು ಕಾತು ಹಣ್ಣಾಗುವುದಂತೂ
ದೂ…ರ

ಷಂಡವಾಗಿವೆ ಮಾತು ಜೊಳ್ಳು ಬೀಜದಂತೆ
ಸಂತಾನ ಶಕ್ತಿಯೇ ಇಲ್ಲ
ಬರೀ ಬೆಂಕಿಯಲ್ಲಿ ತುಪ್ಪ ಹೊಯ್ದು
ಹೊಗೆ ಎಬ್ಬಿಸಿದಂತೆ
ಮಿಥ್ಯಾ ಮಾಯಾಬ್ರಹ್ಮದ ಮಂಜು
ಮೇಲೆ ಮುಚ್ಚಿದಂತೆ
ಹೊಗೆಯಲ್ಲಿ ಸ್ವರ್ಗದ ದೇವತೆಗಳು
ಬ್ರಹ್ಮ ವಿಷ್ಣು ಮಹೇಶ್ವರರು ಅಪ್ಸರೆಯರು
ತೇಲಾಡುತ್ತಿವೆ ಹೆಣ ಮೋಡಗಳಂತೆ

ಭಂಡವಾಗಿವೆ ಮಾತು
ಜೀವ ಇಲ್ಲ ಭಾವ ಇಲ್ಲ
ಗರ್ಭ ಗುಡಿಯಲ್ಲಿ ಹೂತು
ಮಂತ್ರ ಮಣ ಮಣ ಗಂಟೆ ಗಣ ಗಣ
ಗಟ್ಟಿಸಿಕೊಂಡಂತೆ ಬಂಡೆಗೆ ಮಂಡೆ
ಮತ್ತೆ ಮತ್ತೆ ಗುಡಿ ಕಟ್ಟುತ್ತಿವೆ
ಬೊಜ್ಜು ಬೆಳೆಯುತ್ತಿವೆ
ಕಮರುಡೇಗಿನಂತೆ ಮಾತು

ಮೊಂಡಾಗಿವೆ ಮಾತು ಏನನ್ನೂ ಚುಚ್ಚಲಾರವು
ಮರ್ಮಕ್ಕೆ ನಾಟಲಾರವು
ಮತ್ತೆ ಅದೇ ಆದೇ ಸುಪ್ರಭಾತ ಪಾಪ ಪುಣ್ಯ
ಸ್ವರ್ಗ ನರಕ ವೈರಾಗ್ಯ ಭಕ್ತಿ ಮುಕ್ತಿಗಳ
ಹಳೇ ಸವಕಲು ಪ್ಲೇಟು ಕಿರುಚಿದಂತೆ
ದಯೆಯೇ ಧರ್ಮ, ಅಹಿಂಸೆ, ಸತ್ಯಗಳ
ಉರುಳ ಕೊರಳಿಗೆ ಹಾಕಿ ಹಿಚುಕಿದಂತೆ

ಗುಳ್ಳೆಯಾಗಿವೆ ಮಾತು
ಭಾವ ಕವಿಗಳಂತೆ
ದೂರ ದೂರ ನಿಂತು ಪ್ರೀತಿ ಮಾಡುತ್ತವೆ
ಹತ್ತಿರ ಬಂದು ಅಪ್ಪಲಿಲ್ಲ
ಹಿಂಡಿ ರಸ ಹೀರಲಿಲ್ಲ

ಪರದೇಶಿ ಕಫ ಕೆಮ್ಮುಗಳ ವಾಂತಿ ಹರಡಿ
ನವ್ಯವಾದ ಕ್ಯಾನ್ಸರ್ ಏಡ್ಸ್ ರೋಗಗಳು
ಚಿಕನ್ ಗುನ್ಯಾ ಢೆಂಗೆ ಜ್ಜರಗಳು
ಅಕಾಡೆಮಿಗಳಿಗೆ ಏಣಿಯಾಗುತ್ತಿವೆ
ಪ್ರಾಧಿಕಾರ ಪ್ರಶಸ್ತಿಗಳಿಗೆ
ಜ್ಞಾನ ಪೀಠಗಳಿಗೆ ಲಗ್ಗೆ ಹಾಕುತ್ತಿವೆ

ಮಾತಿನಂಗಡಿಗಳು ವಿದ್ಯಾ-ಲಯಗಳಲ್ಲಿ
ತರ್ಕಗಳು ತಿಕ್ಕಾಡಿ ಮಣ್ಣು ಕಸ ಮುಕ್ಕಾಡಿ
ಜಾನಪದ ನೆಕ್ಯಾಡಿ
ತೊಟ್ಟಿಳಲ್ಲಿ ಕಾಗದದ ಉಂಡೆ ಉಂಡೆ
ಅದಕ್ಕೆ ಬೆಂಕಿ ಹಚ್ಚಿ ಕಾಯಿಸಿಕೊಳ್ಳುತ್ತಾರೆ
ಬೇಳೆ ಬೇಯಿಸಿಕೊಳ್ಳುತ್ತಾರೆ ಹಲವರು

ಪೊಳ್ಳಾಗಿವೆ ಮಾತು ರಾಜಕಾರಣಿಗಳಿಗೆ
ದೇಶ ಲೂಟಿ ಮಾಡಿಕೊಳಲು ಹಡದಿ ಹಾಸುತ್ತವೆ
ಹಾದರಕ್ಕೆ ಗುರಿಯಾಗಿವೆ ಮಾತು
ಕಂಡ ಭಂಡರಿಗೆಲ್ಲ ಸೆರಗು ಹಾಸುತ್ತಿವೆ

ಜೊಳ್ಳಾಗಿವೆ ಮಾತು
ನಯವಂಚಕರ ನಮಸ್ಕಾರ ಚಮತ್ಕಾರಗಳ
ಸರ ಪೋಣಿಸಿ ಕೊರಳಿಗೆ ಹಾಕಿಕೊಂಡು
ಲಂಚ ಮಂಚದ ಮೇಲೆ ಹಾಯಾಗಿ
ಮಲಗುತ್ತಿವೆ ಮುಲುಗುತ್ತಿವೆ

ಬಂಡವಾಳವಾಗಿವೆ ಮಾತು
ಬುದ್ಧ, ಬಸವ ಸರ್ವಜ್ಞರನ್ನು
ಗಾಂಧಿ ವಿವೇಕಾನಂದರನ್ನು
ಹರಾಜಿಗೆ ಹಾಕಲು

ಇಷ್ಟಿಷ್ಟೆ ಅವರ ಹರಿದು ತಿನ್ನುತ್ತ
ತಮ್ಮ ಪೀಠಗಳ ಬಲಿಸಿಕೊಳ್ಳಲು
ಕುತ್ತಿಗೆ ಮಟ ಗಳಿಸಿಕೊಳ್ಳಲು

ಆಕ್ರಂದನ ಮಾಡುತ್ತಿವೆ ಮೇಲೆ ಆತ್ಮಗಳು
ಪರದೇಶಿಗಳಾಗಿ
ಇದ್ದ ದೇಶದಲ್ಲೆ – ಈ ದೇಶದಲ್ಲೆ
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...