Home / ಕವನ / ಕವಿತೆ / ಮಾತು ಕೇಳದ ಮಾತುಗಳು

ಮಾತು ಕೇಳದ ಮಾತುಗಳು

ಈ ಮಾತುಗಳು ಮಾತೇ ಕೇಳಲೊಲ್ಲವು
ಮೊಳಕೆ ಒಡೆಯಲೊಲ್ಲವು
ಚಿಗುರಿ ಹೂತು ಕಾತು ಹಣ್ಣಾಗುವುದಂತೂ
ದೂ…ರ

ಷಂಡವಾಗಿವೆ ಮಾತು ಜೊಳ್ಳು ಬೀಜದಂತೆ
ಸಂತಾನ ಶಕ್ತಿಯೇ ಇಲ್ಲ
ಬರೀ ಬೆಂಕಿಯಲ್ಲಿ ತುಪ್ಪ ಹೊಯ್ದು
ಹೊಗೆ ಎಬ್ಬಿಸಿದಂತೆ
ಮಿಥ್ಯಾ ಮಾಯಾಬ್ರಹ್ಮದ ಮಂಜು
ಮೇಲೆ ಮುಚ್ಚಿದಂತೆ
ಹೊಗೆಯಲ್ಲಿ ಸ್ವರ್ಗದ ದೇವತೆಗಳು
ಬ್ರಹ್ಮ ವಿಷ್ಣು ಮಹೇಶ್ವರರು ಅಪ್ಸರೆಯರು
ತೇಲಾಡುತ್ತಿವೆ ಹೆಣ ಮೋಡಗಳಂತೆ

ಭಂಡವಾಗಿವೆ ಮಾತು
ಜೀವ ಇಲ್ಲ ಭಾವ ಇಲ್ಲ
ಗರ್ಭ ಗುಡಿಯಲ್ಲಿ ಹೂತು
ಮಂತ್ರ ಮಣ ಮಣ ಗಂಟೆ ಗಣ ಗಣ
ಗಟ್ಟಿಸಿಕೊಂಡಂತೆ ಬಂಡೆಗೆ ಮಂಡೆ
ಮತ್ತೆ ಮತ್ತೆ ಗುಡಿ ಕಟ್ಟುತ್ತಿವೆ
ಬೊಜ್ಜು ಬೆಳೆಯುತ್ತಿವೆ
ಕಮರುಡೇಗಿನಂತೆ ಮಾತು

ಮೊಂಡಾಗಿವೆ ಮಾತು ಏನನ್ನೂ ಚುಚ್ಚಲಾರವು
ಮರ್ಮಕ್ಕೆ ನಾಟಲಾರವು
ಮತ್ತೆ ಅದೇ ಆದೇ ಸುಪ್ರಭಾತ ಪಾಪ ಪುಣ್ಯ
ಸ್ವರ್ಗ ನರಕ ವೈರಾಗ್ಯ ಭಕ್ತಿ ಮುಕ್ತಿಗಳ
ಹಳೇ ಸವಕಲು ಪ್ಲೇಟು ಕಿರುಚಿದಂತೆ
ದಯೆಯೇ ಧರ್ಮ, ಅಹಿಂಸೆ, ಸತ್ಯಗಳ
ಉರುಳ ಕೊರಳಿಗೆ ಹಾಕಿ ಹಿಚುಕಿದಂತೆ

ಗುಳ್ಳೆಯಾಗಿವೆ ಮಾತು
ಭಾವ ಕವಿಗಳಂತೆ
ದೂರ ದೂರ ನಿಂತು ಪ್ರೀತಿ ಮಾಡುತ್ತವೆ
ಹತ್ತಿರ ಬಂದು ಅಪ್ಪಲಿಲ್ಲ
ಹಿಂಡಿ ರಸ ಹೀರಲಿಲ್ಲ

ಪರದೇಶಿ ಕಫ ಕೆಮ್ಮುಗಳ ವಾಂತಿ ಹರಡಿ
ನವ್ಯವಾದ ಕ್ಯಾನ್ಸರ್ ಏಡ್ಸ್ ರೋಗಗಳು
ಚಿಕನ್ ಗುನ್ಯಾ ಢೆಂಗೆ ಜ್ಜರಗಳು
ಅಕಾಡೆಮಿಗಳಿಗೆ ಏಣಿಯಾಗುತ್ತಿವೆ
ಪ್ರಾಧಿಕಾರ ಪ್ರಶಸ್ತಿಗಳಿಗೆ
ಜ್ಞಾನ ಪೀಠಗಳಿಗೆ ಲಗ್ಗೆ ಹಾಕುತ್ತಿವೆ

ಮಾತಿನಂಗಡಿಗಳು ವಿದ್ಯಾ-ಲಯಗಳಲ್ಲಿ
ತರ್ಕಗಳು ತಿಕ್ಕಾಡಿ ಮಣ್ಣು ಕಸ ಮುಕ್ಕಾಡಿ
ಜಾನಪದ ನೆಕ್ಯಾಡಿ
ತೊಟ್ಟಿಳಲ್ಲಿ ಕಾಗದದ ಉಂಡೆ ಉಂಡೆ
ಅದಕ್ಕೆ ಬೆಂಕಿ ಹಚ್ಚಿ ಕಾಯಿಸಿಕೊಳ್ಳುತ್ತಾರೆ
ಬೇಳೆ ಬೇಯಿಸಿಕೊಳ್ಳುತ್ತಾರೆ ಹಲವರು

ಪೊಳ್ಳಾಗಿವೆ ಮಾತು ರಾಜಕಾರಣಿಗಳಿಗೆ
ದೇಶ ಲೂಟಿ ಮಾಡಿಕೊಳಲು ಹಡದಿ ಹಾಸುತ್ತವೆ
ಹಾದರಕ್ಕೆ ಗುರಿಯಾಗಿವೆ ಮಾತು
ಕಂಡ ಭಂಡರಿಗೆಲ್ಲ ಸೆರಗು ಹಾಸುತ್ತಿವೆ

ಜೊಳ್ಳಾಗಿವೆ ಮಾತು
ನಯವಂಚಕರ ನಮಸ್ಕಾರ ಚಮತ್ಕಾರಗಳ
ಸರ ಪೋಣಿಸಿ ಕೊರಳಿಗೆ ಹಾಕಿಕೊಂಡು
ಲಂಚ ಮಂಚದ ಮೇಲೆ ಹಾಯಾಗಿ
ಮಲಗುತ್ತಿವೆ ಮುಲುಗುತ್ತಿವೆ

ಬಂಡವಾಳವಾಗಿವೆ ಮಾತು
ಬುದ್ಧ, ಬಸವ ಸರ್ವಜ್ಞರನ್ನು
ಗಾಂಧಿ ವಿವೇಕಾನಂದರನ್ನು
ಹರಾಜಿಗೆ ಹಾಕಲು

ಇಷ್ಟಿಷ್ಟೆ ಅವರ ಹರಿದು ತಿನ್ನುತ್ತ
ತಮ್ಮ ಪೀಠಗಳ ಬಲಿಸಿಕೊಳ್ಳಲು
ಕುತ್ತಿಗೆ ಮಟ ಗಳಿಸಿಕೊಳ್ಳಲು

ಆಕ್ರಂದನ ಮಾಡುತ್ತಿವೆ ಮೇಲೆ ಆತ್ಮಗಳು
ಪರದೇಶಿಗಳಾಗಿ
ಇದ್ದ ದೇಶದಲ್ಲೆ – ಈ ದೇಶದಲ್ಲೆ
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...