ಸಾಕು ಮಾಡೋಣ

ಪುರಾಣ ಪುಣ್ಯಕಥೆಗಳ ಮಿಥ್ಯಾಲಾಪಗಳು ಇನ್ನು ಸಾಕು
ಮುಗಿಲ ಮಲ್ಲಿಗೆಗಳ ಮೂಸುವ ಭ್ರಮೆ ಇನ್ನು ಸಾಕು,
ಕಾಣದುದರ ಕೈಕಾಲುಗಳಿಗೆ ಜೋತಾಡಿ
ಕರ್ರಗೆ ಕಲೆಕಲೆ ಮಾಡಿದ್ದ ಕಂತೆಗಳು ಇನ್ನು ಸಾಕು

ಇದೋ ನೋಡಿ ನಿಮ್ಮ ಮುಂದಿರುವುದು
ಪುಣ್ಯ ಗಣ್ಯ ಭೂಮಿ ಭಾರತವಲ್ಲ
ಹಂದೆಗಳ ಹಡೆಯುವ ದಾರಿದ್ರ್ಯ ದಳ್ಳುರಿಯ
ಆತ್ಮಘಾತಕತನದ ಗಟಾರಮತಿಗಳ ಒಣನೆಲವಾಗಿದೆ.
ನಾವೀಗ ನಿಜವನರಿಯದ ಕೂಪಮಂಡೂಕಗಳು
ಹಲವು ಹಲ್ಕಟ್ತನಗಳ ಮುಚ್ಚಿ ಆದರ್ಶ ಹಾಡುವವರು,
ಸಂಪನ್ನ ರಾಮರೊಳಗೆ ಹುದುಗಿರುವ ರಾವಣರು,
ಪತಿವ್ರತಾ ಮೇಕಪ್ಪಿನೊಳಗೆ ಮಿಡುಕುವ ಪತಿತೆಯರು,

ಜಗವನ್ನೇ ಬೆಳಗುವ ರವಿಕಿರಣಗಳು
ಈ ಒಣಕಾಡಿನೆಲೆಗಳಿಗೂ ಸೋಕವು
ನೆಲವ ಬೆಳಗುವುದನ್ನಂತು ಕೇಳಬೇಡ
ಇಲ್ಲಿಯ ಕಾಗೆ ಗೂಗೆಗಳಿಗೆ ಹೊಸಪಾಠ ಕಲಿಸಿದರೆ
ಅವು ಕೂಗುವುದು ಮತ್ತದೇ ಕಾಕಾ ಗೂಗೂ
ಇಲ್ಲಿಯ ನಾಯಿಗಳಿಗೆ ಹೊಸ ಶಾಸ್ತ್ರ ಕಲಿಸಿದರೆ
ಅವು ಊಳಿಡುವುದು ಮತ್ತದೇ ಬೌಬೌ
ನವ ವೇಷ ಭೂಷಣಗಳೊಳಗೆ
ಅದೇ ಪಾಚಿಗಟ್ಟಿದ ಭೂತಬುದ್ಧಿ,

ಯಾವ ಹೊಸಗಾಳಿಗೂ ಮೈತೆರೆಯದ ಹಳಸಲು ಬಾವಿ ಇದು
ಯಾವ ಹೊಸ ಪ್ರಭಾವಗಳಿಗೂ ಪಕ್ಕಾಗದ ಮೋಟು ಮರವಿದು
ಯಾವ ಹೊಸ ಬೀಜವೂ ನಾಟದ ಕಗ್ಗಲ್ಲಿದು
ಇಲ್ಲಿಯವರೆಗೆ ವಿಧಿ ನಿಷೇಧಗಳ
ಋಣಮಾರ್ಗದಲ್ಲಿ ನಡೆದದ್ದಾಯಿತು
ಹುಲಿ ಹಲ್ಲು ಕಿತ್ತು ಆಕಳ ಮಾಡುವ ಯತ್ನ ನಡೆಯಿತು
ಆಡುವ ಬಾಲಕನ ಕೈಕಾಲು ಕಟ್ಟಿ ಮೂಲೆ ಹಿಡಿಸಿದ್ದಾಯಿತು
ಹರಿವ ನಾಲಗೆಯ ಕತ್ತರಿಸಿ, ಉರಿವಗ್ನಿಯ ಮೇಲೆ ತಣ್ಣೀರು
ಸುರುವಿ
ಕಡಿವ ಕತ್ತಿಯನು ಬಂಡೆಗೆ ಹೊಡೆದು ಮೊಂಡಾಗಿಸಿ
ಜೀವಚ್ಛವವಾದೆವು
ಭಕ್ತಿಯ ಬೋಳೆತನ, ಅಹಿಂಸೆಯ ಹೇಡಿತನ, ಸ್ವರ್ಗದ
ದುರ್ಮಾರ್ಗತನ,
ಬ್ರಹ್ಮಚರ್ಯದ ಭಾನಗಡಿತನ, ಯೋಗದ ಗಂಡುಜೋಗತಿತನ,
ಇವನ್ನೆಲ್ಲ ಇನ್ನಾದರೂ ಸಾಕು ಮಾಡೋಣ
ಚೆನ್ನಾಗಿ ಉಳುವ-ಬೆಳೆವ, ಚೆನ್ನಾಗಿ ಉಣ್ಣುವ-ಉಡುವ,
ಮೈತುಂಬ ಕೆಲಸ ತುಂಬಿ ಕಾಯ ಕಲ್ಲಾಗಿಸುವಾ,
ಮನ ತುಂಬ ಸೊಗವುಂಡು ಭಾವಪೂರ ಹರಿಸುವಾ,

ನಮ್ಮ ಬೆನ್ನಿಗಂಟಿದ ಹೊಟ್ಟೆ ತುಂಬಿಸಿ ತೇಗುವ,
ಕಣ್ತುಂಬ ನಿದ್ರಿಸಿ ಪುನರ್ಜನ್ಮವನಣಕಿಸುವ
ಇಹ ಸಾರ್ಥಕತೆಯ ಧನಮಾರ್ಗ ಹಿಡಿಯೋಣ
ಎಲ್ಲಿ ಬೇಡದು ಕೂಡದು ಬಾರದುಗಳು ಬಂಧಿಸವೋ
ಎಲ್ಲಿ ಬೇಕು ಮಾಡು ಕೂಡುನಲಿಯುವಿಕೆಗಳು
ತಂತಾವೇ ಆಳುವುವೋ
ಹಾಗೆಯೇ ಬಾಳೋಣ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹೆಣ್ಣು
Next post ಚಂದ್ರನಿಗೊಂದು ಬುದ್ಧಿವಾದ

ಸಣ್ಣ ಕತೆ

  • ಇರುವುದೆಲ್ಲವ ಬಿಟ್ಟು

    ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ… Read more…

  • ದೇವರೇ ಪಾರುಮಾಡಿದಿ ಕಂಡಿಯಾ

    "Life is as tedious as a twice-told tale" ಧಾರವಾಡದ ಶಾಖೆಯೊಂದಕ್ಕೆ ಸಪ್ತಾಪುರವೆಂಬ ಹೆಸರು, ದೂರ ದೂರಾಗಿ ಕಟ್ಟಿರುವ ಆ ಗ್ರಾಮದ ಮನೆಗಳಲ್ಲಿ ಒಂದು ಮನೆಯು… Read more…

  • ಗಂಗೆ ಅಳೆದ ಗಂಗಮ್ಮ

    ಕನ್ನಡ ನಾಡು ಆರ್ಯದ್ರಾವಿಡ ಸಂಸ್ಕೃತಿಗಳನ್ನು ಅರಗಿಸಿಕೊಂಡು ತನ್ನದಾದ ಒಂದು ಉಚ್ಚ ಸಂಸ್ಕೃತಿಯಿಂದ ಬಹು ಪುರಾತನ ಕಾಲದಿಂದಲೂ ಕೀರ್ತಿಯನ್ನು ಪಡೆದಿದೆ. ಇಂತಹ ನಾಡಿನಲ್ಲಿ ಕಾಣುವ ಅವಶೇಷಗಳು ಒಂದೊಂದು ಹಿರಿಸಂಸ್ಕೃತಿಯ… Read more…

  • ಗದ್ದೆ

    ಅದೊಂದು ಬೆಟ್ಟದ ಊರು. ಪುಟ್ಟ ಪುಟ್ಟ ಗುಡ್ಡಕ್ಕೆ ತಾಗಿಕೊಂಡು ಸಂದಿಯಲ್ಲಿ ಗೊಂದಿಯಲ್ಲಿ ಎದ್ದ ಗುಡಿಸಲುಗಳು ಅರ್ಥಾತ್ ಈ ಜೀವನ ಕಳೆಯೋ ಬಗೆಯಲಿ ಕಟ್ಟಿಕೊಂಡ ಪುಟ್ಟ ಮನೆಗಳು ಹೊತ್ತು… Read more…

  • ಮಿಂಚು

    "ಸಾವಿತ್ರಿ, ಇದು ಏನು? ನನ್ನಾಣೆಯಾಗಿದೆ. ಹೀಗೆ ಮಾಡಬೇಡ! ಇದು ಒಳ್ಳೆಯದಲ್ಲ. ಬಿಡು, ಬಿಡು...! ನಾಲ್ಕು ಜನ ನೋಡಿದರೆ ಏನು ಅಂದಾರು?" ಅನ್ನಲಿ ಏನೇ ಅನ್ನಲಿ ನಾನು ಯಾವ… Read more…