Home / ಕವನ / ಕವಿತೆ / ಸಾಕು ಮಾಡೋಣ

ಸಾಕು ಮಾಡೋಣ

ಪುರಾಣ ಪುಣ್ಯಕಥೆಗಳ ಮಿಥ್ಯಾಲಾಪಗಳು ಇನ್ನು ಸಾಕು
ಮುಗಿಲ ಮಲ್ಲಿಗೆಗಳ ಮೂಸುವ ಭ್ರಮೆ ಇನ್ನು ಸಾಕು,
ಕಾಣದುದರ ಕೈಕಾಲುಗಳಿಗೆ ಜೋತಾಡಿ
ಕರ್ರಗೆ ಕಲೆಕಲೆ ಮಾಡಿದ್ದ ಕಂತೆಗಳು ಇನ್ನು ಸಾಕು

ಇದೋ ನೋಡಿ ನಿಮ್ಮ ಮುಂದಿರುವುದು
ಪುಣ್ಯ ಗಣ್ಯ ಭೂಮಿ ಭಾರತವಲ್ಲ
ಹಂದೆಗಳ ಹಡೆಯುವ ದಾರಿದ್ರ್ಯ ದಳ್ಳುರಿಯ
ಆತ್ಮಘಾತಕತನದ ಗಟಾರಮತಿಗಳ ಒಣನೆಲವಾಗಿದೆ.
ನಾವೀಗ ನಿಜವನರಿಯದ ಕೂಪಮಂಡೂಕಗಳು
ಹಲವು ಹಲ್ಕಟ್ತನಗಳ ಮುಚ್ಚಿ ಆದರ್ಶ ಹಾಡುವವರು,
ಸಂಪನ್ನ ರಾಮರೊಳಗೆ ಹುದುಗಿರುವ ರಾವಣರು,
ಪತಿವ್ರತಾ ಮೇಕಪ್ಪಿನೊಳಗೆ ಮಿಡುಕುವ ಪತಿತೆಯರು,

ಜಗವನ್ನೇ ಬೆಳಗುವ ರವಿಕಿರಣಗಳು
ಈ ಒಣಕಾಡಿನೆಲೆಗಳಿಗೂ ಸೋಕವು
ನೆಲವ ಬೆಳಗುವುದನ್ನಂತು ಕೇಳಬೇಡ
ಇಲ್ಲಿಯ ಕಾಗೆ ಗೂಗೆಗಳಿಗೆ ಹೊಸಪಾಠ ಕಲಿಸಿದರೆ
ಅವು ಕೂಗುವುದು ಮತ್ತದೇ ಕಾಕಾ ಗೂಗೂ
ಇಲ್ಲಿಯ ನಾಯಿಗಳಿಗೆ ಹೊಸ ಶಾಸ್ತ್ರ ಕಲಿಸಿದರೆ
ಅವು ಊಳಿಡುವುದು ಮತ್ತದೇ ಬೌಬೌ
ನವ ವೇಷ ಭೂಷಣಗಳೊಳಗೆ
ಅದೇ ಪಾಚಿಗಟ್ಟಿದ ಭೂತಬುದ್ಧಿ,

ಯಾವ ಹೊಸಗಾಳಿಗೂ ಮೈತೆರೆಯದ ಹಳಸಲು ಬಾವಿ ಇದು
ಯಾವ ಹೊಸ ಪ್ರಭಾವಗಳಿಗೂ ಪಕ್ಕಾಗದ ಮೋಟು ಮರವಿದು
ಯಾವ ಹೊಸ ಬೀಜವೂ ನಾಟದ ಕಗ್ಗಲ್ಲಿದು
ಇಲ್ಲಿಯವರೆಗೆ ವಿಧಿ ನಿಷೇಧಗಳ
ಋಣಮಾರ್ಗದಲ್ಲಿ ನಡೆದದ್ದಾಯಿತು
ಹುಲಿ ಹಲ್ಲು ಕಿತ್ತು ಆಕಳ ಮಾಡುವ ಯತ್ನ ನಡೆಯಿತು
ಆಡುವ ಬಾಲಕನ ಕೈಕಾಲು ಕಟ್ಟಿ ಮೂಲೆ ಹಿಡಿಸಿದ್ದಾಯಿತು
ಹರಿವ ನಾಲಗೆಯ ಕತ್ತರಿಸಿ, ಉರಿವಗ್ನಿಯ ಮೇಲೆ ತಣ್ಣೀರು
ಸುರುವಿ
ಕಡಿವ ಕತ್ತಿಯನು ಬಂಡೆಗೆ ಹೊಡೆದು ಮೊಂಡಾಗಿಸಿ
ಜೀವಚ್ಛವವಾದೆವು
ಭಕ್ತಿಯ ಬೋಳೆತನ, ಅಹಿಂಸೆಯ ಹೇಡಿತನ, ಸ್ವರ್ಗದ
ದುರ್ಮಾರ್ಗತನ,
ಬ್ರಹ್ಮಚರ್ಯದ ಭಾನಗಡಿತನ, ಯೋಗದ ಗಂಡುಜೋಗತಿತನ,
ಇವನ್ನೆಲ್ಲ ಇನ್ನಾದರೂ ಸಾಕು ಮಾಡೋಣ
ಚೆನ್ನಾಗಿ ಉಳುವ-ಬೆಳೆವ, ಚೆನ್ನಾಗಿ ಉಣ್ಣುವ-ಉಡುವ,
ಮೈತುಂಬ ಕೆಲಸ ತುಂಬಿ ಕಾಯ ಕಲ್ಲಾಗಿಸುವಾ,
ಮನ ತುಂಬ ಸೊಗವುಂಡು ಭಾವಪೂರ ಹರಿಸುವಾ,

ನಮ್ಮ ಬೆನ್ನಿಗಂಟಿದ ಹೊಟ್ಟೆ ತುಂಬಿಸಿ ತೇಗುವ,
ಕಣ್ತುಂಬ ನಿದ್ರಿಸಿ ಪುನರ್ಜನ್ಮವನಣಕಿಸುವ
ಇಹ ಸಾರ್ಥಕತೆಯ ಧನಮಾರ್ಗ ಹಿಡಿಯೋಣ
ಎಲ್ಲಿ ಬೇಡದು ಕೂಡದು ಬಾರದುಗಳು ಬಂಧಿಸವೋ
ಎಲ್ಲಿ ಬೇಕು ಮಾಡು ಕೂಡುನಲಿಯುವಿಕೆಗಳು
ತಂತಾವೇ ಆಳುವುವೋ
ಹಾಗೆಯೇ ಬಾಳೋಣ.
*****

Tagged:

Leave a Reply

Your email address will not be published. Required fields are marked *

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಕೀಲಿಕರಣ: ಎಂ ಎನ್ ಎಸ್ ರಾವ್