Home / ಕವನ / ಕವಿತೆ / ಬದುಕೆಂದರೆ…

ಬದುಕೆಂದರೆ…

ಬದುಕೆಂದರೆ… ಹೀಗೇ…
ಬಳ್ಳಾರಿ ಬಿಸಿಲಿನಾ ಹಾಗೇ…
‘ಉಸ್ಸೆಪ್ಪಾ’,,, ಎಂದರೂ,
ಮುಗ್ಳಾಗ ‘ಜಟ ಜಟ’ ಇಳಿದರೂ ಬಿಡದು!
ಝಣ ಝಣ… ಹಲಗೆ ಬಡಿತದ,
ಬಿಸಿಲಿನ, ಬಿಸಿ ಬಿಸಿ ಹವೆಯ ಸಂಪು!
ಮೈಮನ ಹಾವಿನಂಗೆ,
ಮುಲು ಮುಲು ಹರಿದಾಡುವ, ಬೇವ ಹನಿಯ ಕಂಪು!
ನೆಲಕೆ ಕಾಲಿಟ್ಟರೆ, ಕಮ್ಮಾರನ ತಿದಿಪಂಪು!
*

ಬದುಕೆಂದರೆ… ಹೀಗೇ
ಮುಂಗಾರಿನ ಮಳೆಯ ಹಾಗೇ…
ತೊಯ್ದು ತೊಪ್ಪೆಯೆಂದರೂ…
ಗಢ ಗಢ ಛಳಿಯೆಂದರೂ… ಬಿಡದು!
ಬಿರುಗಾಳಿ, ಗುಡುಗು, ಸಿಡಿಲು, ಮಿಂಚಿನಂತೇ…
ಜುಳು ಜುಳು ಹರಿವ ಸಿಟ್ಟೇರ ಹಳ್ಳದಂತೆ!
ಕರ್‍ಮಾಗಳ ಮುಳುಗಿಸಿ, ಧರ್‍ಮಾಗಳ ತೇಲಿಸೋ…
ನಮ್ಮೂರ ‘ಹುಚ್ಚಾಯಿ’, ತೇರನೆಳೆವ ಹರಕೆಯಂತೆ!!
ಬತ್ತಿ ಹೋದ ಕೆರೆ, ಬಾವಿ, ಹಗರಿಯಂತೆ.
*

ಬದುಕೆಂದರೆ… ಹೀಗೇ
ಚಿಕ್ಕ ಮಕ್ಕಳ ಮದುವೆಯಾಟದಂತೇ…
ನಮ್ಮೂರ, ಸಂತೆ ಮೈದಾನದ ವಹಿವಾಟಿನಂತೆ,
ಬೋರೇಗೌಡ, ಬೆಂಗಳೂರಿಗೆ ಬಂದ, ‘ಪಡಿಪಾಟ್ಲಿ’ನಂತೆ!
ಬಾಳೆಲೆ ಹಾಸುಂಡು, ಬೀಸಿ ಒಗೆದಂತೆ,
ಊರ ದನ ಕಾದು, ಊರಗೌಡ ಎನಿಸಿಕೊಂಡಂತೆ,
ನೀರ ಮೇಲಣ ಗುಳ್ಳೆಯಂತೆ!
*

ಬದುಕೆಂದರೆ… ಹೀಗೇ
ಬಡವರೂ ಬಡವರಾಗಿಯೇ ಇರುವುದು!
ಶ್ರೀಮಂತರೂ… ಇನ್ನೂ ‘ಮಜ್ಹಾ’ ಅನುಭವಿಸುವುದು!
ಕೋತಿ ತಿಂದರೂ… ‘ಮೇಕೆ’ ಪೆಟ್ಟು ತಿನ್ನುವಂತೆ,
ಚಾಡಿ ಮಾತಿಗೆ, ಕೋಡು ಮೂಡಿದಂತೆ,
ಸತ್ಯವಂತರೂ ಜೈಲು ಅನುಭವಿಸುವಂತೆ.
*

ಬದುಕೆಂದರೆ… ವಿಷ ವರ್ತುಲ! ಭಯಂಕರ! ‘ಕಟುಗಲರಟ್ಟಿ…’
ಪಾಂಡವರ… ಕೌರವರ… ಜೂಜಾಟದಂತೆ,
ಕಾಡುಕೋಣಗಳ ಗುದ್ದಾಟದಂತೆ!
ಶಕುನಿ, ದುರ್‍ಯೋಧನ, ಕೃಷ್ಣನ ಕುಟಿಲ ತಂತ್ರದಂತೆ,
ನಿತ್ಯ ಸ್ವಯಂವರವಿಲ್ಲಿ, ಟಗರಿನ ಕಾಳಗಿವಿಲ್ಲಿ…
ಅರಗಿನ ಮನೆಯ ವಾಸವಿಲ್ಲಿ, ಬೆನ್ನಿಗೆ ಚೂರಿ ಈರಿತವಿಲ್ಲಿ…
ವಸ್ತ್ರಾಪಹರಣ… ಕೀಚಕನ ಅಟ್ಟಹಾಸವಿಲ್ಲಿ!
ಆಗಿನ ನಿಯತ್ತು, ಈಗಿನವರತ್ತಿರವೆಲ್ಲಿದೆ?!
ಕತ್ತಲಾದರೆ… ಶಸ್ತ್ರವಿಡಿಯುತ್ತಿರಲಿಲ್ಲ! ರಾಜನೀತಿ…
ಈಗ ಕತ್ತಲಾದ ಮೇಲೆ, ಕತ್ತಿ ಇರಿವ ಜನರಿಲ್ಲಿ!
ರಕ್ತ ನೀತಿ…
*

ಬದುಕೆಂದರೆ… ಹೀಗೇ
ಹೀಗೆಂದು ಹೇಳಲು, ಈ ಕಲಿಯುಗದಲಿ,
ಹೇಗೆ ಸಾಧ್ಯವಿಲ್ಲವೋ ಹಾಗೇ…
ನಿತ್ಯ ಚಕ್ರವ್ಯೂಹ, ಕುರುಕ್ಷೇತ್ರವಿಲ್ಲಿ!
ಕೌರವರು, ಪಾಂಡವರೆಂಬಾಗೆರೆಯಿಲ್ಲ!
ಎಲ್ಲರೂ ಮಾಮರಿಲ್ಲಿ… ಮೃತ್ಯುಂಜಯರಿಲ್ಲಿ…
ಮನೆ, ಮನ, ಕಛೇರಿ, ಗುಡಿ, ಚರ್ಚು, ಮಸೀದಿ, ಯೆಲ್ಲ ರಣರಂಗವಿಲ್ಲಿ!
ಬಡವರ ಒಣ ಒಣ ನೆತ್ತರಿಗೆ, ಎಲ್ಲರೂ ಇಲ್ಲಿ ತಿಗಣೆಗಳೇ…!
*

ಬದುಕೆಂದರೆ… ಹೀಗೇ
ಕಾದ ರೊಟ್ಟಿ ಹೆಂಚು! ನಿಗಿ ನಿಗಿ ಉರಿವ ಕಿಚ್ಚು…
ರಾವಣರ ಸಂಚು, ಕೈಕೆ, ಮಂಥರೆ ಸಂಚು…
ಸೀತೆವನವಾಸಕೆ ಅಟ್ಟಿದಾ ಹಾಗೇ…
ಕಲಿಯುಗದಲ್ಲಿ… ರಾಮಾಯಣ, ಮಹಾಭಾರತ ಒಟ್ಟೊಟ್ಟಿಗೆ!
ತಣ್ಣೀರು ಆರಿಸಿ, ಕುಡಿವ ಕಾಲ!
ಬದುಕೆಂದರೆ… ಬಲು ಭಾರ! ಖಾರ!
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...