ಶಕುನ ಕನ್ಯೆ

ಒಬ್ಬಾಕೆ ನನ್ನ ಮನೆಯಂಗಳದಲ್ಲಿ ಬಂದು ನಿಂತಳು
ಹರಕು ಬಟ್ಟೆ ಅವಳ ಮಾನವನ್ನು ಹೇಗೋ ಮುಚ್ಚಿತ್ತು
ಕಾಂತಿವಂತ ಮೈಯನ್ನು ಕಣ್ಣ ಬಾಣಗಳಿಂದ ರಕ್ಷಿಸಲು
ಮುದುಡಿಕೊಂಡು, ಒಡಲನ್ನು ಕೈಯಲ್ಲಿ ಹಿಡಿದುಕೊಂಡು
ತಲೆಗೂದಲಿಗೆ ಧೂಳೆಣ್ಣೆ ಸವರಿ ಕಲ್ಲು ಹೂಮುಡಿದು
ಗಂಡಾಂತರದ ಗಂಟು ತುರಬ ಬಿಗಿದಿದ್ದಳು
ಕಣ್ಣಗವಿಯಿಂದ ಮಿಣುಕು ಬೆಳಕನ್ನು ತೂರುತ್ತ
ಬೇಡುತ್ತಿದ್ದಳು
“ಯಾರಮ್ಮ” ನೀನೆಂದೆ
“ದಿಕ್ಕಿಲ್ಲ ಸ್ವಾಮಿ ಅನ್ನ ಕಾಣದೆಷ್ಟೋ ದಿನವಾದವು
ತುತ್ತನ್ನ ನೀಡಿ ಒಂದಿಷ್ಟಾಸರೆ ಕೊಡಿ”
“ನೋಡಿದರೆ ಕುಲೀನೆಯಾಗಿ ಕಾಣುವಿ ಯಾಕೆ ಹೀಗಾದೆ?”
“ನಾನೂ ಮೆರೆದೆ ಉರಿದೆ ಸ್ವಾಮಿ
ಅರಮನೆ ಸುರಮನೆಗಳ ಹೂಹಾಸಿಗೆಯಲ್ಲಿ
ವಿವಿಧ ಭಂಗಿಗಳಲ್ಲಿ ಕುಣಿದೆ ಬಲ್ಲಿದರ ಬೆಲೆವೆಣ್ಣಾಗಿ,
ದೀನದಲಿತರ ಕೇವಲ ಕನಸಕನ್ನೆಯಾಗಿದ್ದ
ನನ್ನೊಂದು ಕಟಾಕ್ಷಕ್ಕಾಗಿ ಬಾಯಿಬಾಯಿಬಿಡುತ್ತಿದ್ದವರೆಷ್ಟೊ ಮಂದಿ
ಕೆಲವರ ಕನಸಾಗಿ ಹಲವರ ಹಂಬಲವಾಗಿ ಹಾರಾಡುತ್ತಿದ್ದೆ
ಅಯ್ಯೋ ಆ ಗತಕಾಲ ವೈಭವವೆಲ್ಲ ಬಿಡಿ
ನನಗೆ ಶನಿಕಾಲ ಬಂತು
ನಾನು ಕಾಲಿಟ್ಟಲ್ಲೆಲ್ಲಾ ಮಸಣವಾಯಿತು
ನನ್ನ ಮುಟ್ಟಿದವರೆಲ್ಲ ದಟ್ಟ ದರಿದ್ರರಾದರು
ನಾನೊಬ್ಬ ಶಕುನ ಕನ್ನೆಯಾದೆ
ಆದರೂ ಕೆಲವರು ನನ್ನ ಕಂಡು
ನಾಲಗೆ ಚಪ್ಪರಿಸಿ ಚೀಪಿ ಒಗೆಯ ಬೇಕೆನ್ನುತ್ತಾರೆ
ನನ್ನ ಅರೆಮೈಗೆ ಬಾಡಿಗೆ ಬಟ್ಟೆಯುಡಿಸಿ ಮೆರೆಸಬಯಸುತ್ತಾರೆ
ನನ್ನ ಉದರವೋ ಬರಿದು
ನನ್ನ ಮನವರಿತು ಒಲವಿಗೊಲಿದು
ಕೂಡ ಬಲ್ಲ ಕೊಡಬಲ್ಲವರೇ ಇಲ್ಲ
ನೀವಾದರೂ….!” ಎಂದಾಗ
ಮೊದಲು ನಾಲಗೆಯಲೂರಿದ್ದ ನೀರು
ಅಲ್ಲೇ ಇಂಗಿ ಪ್ರೇತ ದರ್ಶನವಾದಂತಾಗಿ ‘ಮುಂದೆ ಹೋಗಿ ಬಾ’
ಎಂದು ಬಾಗಿಲು ಬಡಿದುಕೊಂಡೆ
(೨೨-೮-೭೮)
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ತುತ್ತು ಮತ್ತು ಮುತ್ತು
Next post ವ್ಯರ್ಥ

ಸಣ್ಣ ಕತೆ

  • ಪತ್ರ ಪ್ರೇಮ

    ಅಂಚೆ ಇಲಾಖೆಯ ಅದೊಂದು ಸಮಾರಂಭ. ಇಲಾಖೆಯ ಸಿಬ್ಬಂದಿ ವರ್ಗದ ಕಾರ್ಯದಕ್ಷತೆ ಕುರಿತು ಕೇಂದ್ರ ಕಾರ್ಮಿಕ ಸಚಿವ ಆಸ್ಕರ್‍ ಫರ್ನಾಂಡಿಸ್ ಅಮೆರಿಕಾದಲ್ಲಿ ನಡೆದ ಒಂದು ಸತ್ಯ ಘಟನೆ ಎಂದು… Read more…

  • ಹೃದಯ ವೀಣೆ ಮಿಡಿಯೆ….

    ಒಂದು ವಾರದಿಂದಲೇ ಮನೆಯಲ್ಲಿ ತಯಾರಿ ನಡೆದಿತ್ತು. ತಂಗಿಯನ್ನು ನೋಡಲು ಬೆಂಗಳೂರಿನಿಂದ ವರ ಬರುವವನಿದ್ದ. ಗೋಪಿ ಅವಳನ್ನು ಆ ವರನ ಹೆಸರೆತ್ತಿ ಚುಡಾಯಿಸುತ್ತಿದ್ದ, ರೇಗಿಸುತ್ತಿದ್ದ. ಅವಳ ಕೆನ್ನೆ ಕೆಂಪಗೆ… Read more…

  • ಗಿಣಿಯ ಸಾಕ್ಷಿ

    ಹತ್ತಿರವಿದ್ದ ನೆರೆಹೊರೆಯ ಮನೆಯವರಿಗೆ ಗಿಣಿಯ ಕೀರಲು ಕಿರುಚಾಟ ಕೂಗಾಟ ಸತತವಾಗಿ ಕೇಳಿಬಂದಾಗ ಅವರು ಅಲ್ಲಿಗೆ ಧಾವಿಸಿ ಬಂದಿದ್ದರು. ಗೌರಿಯು ಕಳೇಬರವಾಗಿ ಬಿದ್ದಿರುವುದು ನೋಡಿ ಅವರಿಗೆ ದಿಗ್ಭ್ರಾಂತಿಯಾಯಿತು. ಅವಳ… Read more…

  • ಉಪ್ಪು

    ಸಂಜೆ ಮೆಸ್ಸಿನಲ್ಲಿ ಚಹಾ ಕುಡಿಯುತ್ತಿದ್ದಾಗ ಎದುರು ಕುಳಿತ ಪ್ರೊಫ಼ೆಸರ್ ಬಾನಲಗಿಯವರು ಕೇಳಿದರು : "ಸ್ಟೈಲಿಸ್ಟಿಕ್ಸ್ ಬಗ್ಗೆ ನಿನ್ನ ಅಭಿಪ್ರಾಯ ಏನು?" ಅವರು ಬಿಸಿಯಾದ ಚಹಾದ ನೀರನ್ನು ಜಾಡಿಯಿಂದ… Read more…

  • ವಾಮನ ಮಾಸ್ತರರ ಏಳು ಬೀಳು

    "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…