Home / ಕವನ / ಕವಿತೆ / ಶಕುನ ಕನ್ಯೆ

ಶಕುನ ಕನ್ಯೆ

ಒಬ್ಬಾಕೆ ನನ್ನ ಮನೆಯಂಗಳದಲ್ಲಿ ಬಂದು ನಿಂತಳು
ಹರಕು ಬಟ್ಟೆ ಅವಳ ಮಾನವನ್ನು ಹೇಗೋ ಮುಚ್ಚಿತ್ತು
ಕಾಂತಿವಂತ ಮೈಯನ್ನು ಕಣ್ಣ ಬಾಣಗಳಿಂದ ರಕ್ಷಿಸಲು
ಮುದುಡಿಕೊಂಡು, ಒಡಲನ್ನು ಕೈಯಲ್ಲಿ ಹಿಡಿದುಕೊಂಡು
ತಲೆಗೂದಲಿಗೆ ಧೂಳೆಣ್ಣೆ ಸವರಿ ಕಲ್ಲು ಹೂಮುಡಿದು
ಗಂಡಾಂತರದ ಗಂಟು ತುರಬ ಬಿಗಿದಿದ್ದಳು
ಕಣ್ಣಗವಿಯಿಂದ ಮಿಣುಕು ಬೆಳಕನ್ನು ತೂರುತ್ತ
ಬೇಡುತ್ತಿದ್ದಳು
“ಯಾರಮ್ಮ” ನೀನೆಂದೆ
“ದಿಕ್ಕಿಲ್ಲ ಸ್ವಾಮಿ ಅನ್ನ ಕಾಣದೆಷ್ಟೋ ದಿನವಾದವು
ತುತ್ತನ್ನ ನೀಡಿ ಒಂದಿಷ್ಟಾಸರೆ ಕೊಡಿ”
“ನೋಡಿದರೆ ಕುಲೀನೆಯಾಗಿ ಕಾಣುವಿ ಯಾಕೆ ಹೀಗಾದೆ?”
“ನಾನೂ ಮೆರೆದೆ ಉರಿದೆ ಸ್ವಾಮಿ
ಅರಮನೆ ಸುರಮನೆಗಳ ಹೂಹಾಸಿಗೆಯಲ್ಲಿ
ವಿವಿಧ ಭಂಗಿಗಳಲ್ಲಿ ಕುಣಿದೆ ಬಲ್ಲಿದರ ಬೆಲೆವೆಣ್ಣಾಗಿ,
ದೀನದಲಿತರ ಕೇವಲ ಕನಸಕನ್ನೆಯಾಗಿದ್ದ
ನನ್ನೊಂದು ಕಟಾಕ್ಷಕ್ಕಾಗಿ ಬಾಯಿಬಾಯಿಬಿಡುತ್ತಿದ್ದವರೆಷ್ಟೊ ಮಂದಿ
ಕೆಲವರ ಕನಸಾಗಿ ಹಲವರ ಹಂಬಲವಾಗಿ ಹಾರಾಡುತ್ತಿದ್ದೆ
ಅಯ್ಯೋ ಆ ಗತಕಾಲ ವೈಭವವೆಲ್ಲ ಬಿಡಿ
ನನಗೆ ಶನಿಕಾಲ ಬಂತು
ನಾನು ಕಾಲಿಟ್ಟಲ್ಲೆಲ್ಲಾ ಮಸಣವಾಯಿತು
ನನ್ನ ಮುಟ್ಟಿದವರೆಲ್ಲ ದಟ್ಟ ದರಿದ್ರರಾದರು
ನಾನೊಬ್ಬ ಶಕುನ ಕನ್ನೆಯಾದೆ
ಆದರೂ ಕೆಲವರು ನನ್ನ ಕಂಡು
ನಾಲಗೆ ಚಪ್ಪರಿಸಿ ಚೀಪಿ ಒಗೆಯ ಬೇಕೆನ್ನುತ್ತಾರೆ
ನನ್ನ ಅರೆಮೈಗೆ ಬಾಡಿಗೆ ಬಟ್ಟೆಯುಡಿಸಿ ಮೆರೆಸಬಯಸುತ್ತಾರೆ
ನನ್ನ ಉದರವೋ ಬರಿದು
ನನ್ನ ಮನವರಿತು ಒಲವಿಗೊಲಿದು
ಕೂಡ ಬಲ್ಲ ಕೊಡಬಲ್ಲವರೇ ಇಲ್ಲ
ನೀವಾದರೂ….!” ಎಂದಾಗ
ಮೊದಲು ನಾಲಗೆಯಲೂರಿದ್ದ ನೀರು
ಅಲ್ಲೇ ಇಂಗಿ ಪ್ರೇತ ದರ್ಶನವಾದಂತಾಗಿ ‘ಮುಂದೆ ಹೋಗಿ ಬಾ’
ಎಂದು ಬಾಗಿಲು ಬಡಿದುಕೊಂಡೆ
(೨೨-೮-೭೮)
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...