Home / ಕವನ / ಕವಿತೆ / ಶಕುನ ಕನ್ಯೆ

ಶಕುನ ಕನ್ಯೆ

ಒಬ್ಬಾಕೆ ನನ್ನ ಮನೆಯಂಗಳದಲ್ಲಿ ಬಂದು ನಿಂತಳು
ಹರಕು ಬಟ್ಟೆ ಅವಳ ಮಾನವನ್ನು ಹೇಗೋ ಮುಚ್ಚಿತ್ತು
ಕಾಂತಿವಂತ ಮೈಯನ್ನು ಕಣ್ಣ ಬಾಣಗಳಿಂದ ರಕ್ಷಿಸಲು
ಮುದುಡಿಕೊಂಡು, ಒಡಲನ್ನು ಕೈಯಲ್ಲಿ ಹಿಡಿದುಕೊಂಡು
ತಲೆಗೂದಲಿಗೆ ಧೂಳೆಣ್ಣೆ ಸವರಿ ಕಲ್ಲು ಹೂಮುಡಿದು
ಗಂಡಾಂತರದ ಗಂಟು ತುರಬ ಬಿಗಿದಿದ್ದಳು
ಕಣ್ಣಗವಿಯಿಂದ ಮಿಣುಕು ಬೆಳಕನ್ನು ತೂರುತ್ತ
ಬೇಡುತ್ತಿದ್ದಳು
“ಯಾರಮ್ಮ” ನೀನೆಂದೆ
“ದಿಕ್ಕಿಲ್ಲ ಸ್ವಾಮಿ ಅನ್ನ ಕಾಣದೆಷ್ಟೋ ದಿನವಾದವು
ತುತ್ತನ್ನ ನೀಡಿ ಒಂದಿಷ್ಟಾಸರೆ ಕೊಡಿ”
“ನೋಡಿದರೆ ಕುಲೀನೆಯಾಗಿ ಕಾಣುವಿ ಯಾಕೆ ಹೀಗಾದೆ?”
“ನಾನೂ ಮೆರೆದೆ ಉರಿದೆ ಸ್ವಾಮಿ
ಅರಮನೆ ಸುರಮನೆಗಳ ಹೂಹಾಸಿಗೆಯಲ್ಲಿ
ವಿವಿಧ ಭಂಗಿಗಳಲ್ಲಿ ಕುಣಿದೆ ಬಲ್ಲಿದರ ಬೆಲೆವೆಣ್ಣಾಗಿ,
ದೀನದಲಿತರ ಕೇವಲ ಕನಸಕನ್ನೆಯಾಗಿದ್ದ
ನನ್ನೊಂದು ಕಟಾಕ್ಷಕ್ಕಾಗಿ ಬಾಯಿಬಾಯಿಬಿಡುತ್ತಿದ್ದವರೆಷ್ಟೊ ಮಂದಿ
ಕೆಲವರ ಕನಸಾಗಿ ಹಲವರ ಹಂಬಲವಾಗಿ ಹಾರಾಡುತ್ತಿದ್ದೆ
ಅಯ್ಯೋ ಆ ಗತಕಾಲ ವೈಭವವೆಲ್ಲ ಬಿಡಿ
ನನಗೆ ಶನಿಕಾಲ ಬಂತು
ನಾನು ಕಾಲಿಟ್ಟಲ್ಲೆಲ್ಲಾ ಮಸಣವಾಯಿತು
ನನ್ನ ಮುಟ್ಟಿದವರೆಲ್ಲ ದಟ್ಟ ದರಿದ್ರರಾದರು
ನಾನೊಬ್ಬ ಶಕುನ ಕನ್ನೆಯಾದೆ
ಆದರೂ ಕೆಲವರು ನನ್ನ ಕಂಡು
ನಾಲಗೆ ಚಪ್ಪರಿಸಿ ಚೀಪಿ ಒಗೆಯ ಬೇಕೆನ್ನುತ್ತಾರೆ
ನನ್ನ ಅರೆಮೈಗೆ ಬಾಡಿಗೆ ಬಟ್ಟೆಯುಡಿಸಿ ಮೆರೆಸಬಯಸುತ್ತಾರೆ
ನನ್ನ ಉದರವೋ ಬರಿದು
ನನ್ನ ಮನವರಿತು ಒಲವಿಗೊಲಿದು
ಕೂಡ ಬಲ್ಲ ಕೊಡಬಲ್ಲವರೇ ಇಲ್ಲ
ನೀವಾದರೂ….!” ಎಂದಾಗ
ಮೊದಲು ನಾಲಗೆಯಲೂರಿದ್ದ ನೀರು
ಅಲ್ಲೇ ಇಂಗಿ ಪ್ರೇತ ದರ್ಶನವಾದಂತಾಗಿ ‘ಮುಂದೆ ಹೋಗಿ ಬಾ’
ಎಂದು ಬಾಗಿಲು ಬಡಿದುಕೊಂಡೆ
(೨೨-೮-೭೮)
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...