Home / ಕವನ / ಕವಿತೆ / ನನ್ನ ಮಕ್ಕಳು

ನನ್ನ ಮಕ್ಕಳು

ಇವರು ನಮ್ಮ ಮಕ್ಕಳು ನೋಡಿ
ಮನೆತುಂಬಾ ಕೈಯಿಟ್ಟಲ್ಲಿ ಕಾಲಿಟ್ಟಲ್ಲಿ
ಲಲ್ಲೆಗರೆವ ಮಕ್ಕಳು
ಬರೀ ಕೈಹಿಡಿದರೆ ಸಾಲದು
ಎದೆಗಪ್ಪಿಕೋ ಎನ್ನುತ್ತವೆ-ಅಷ್ಟು ಮಾಡಿದರೆ
ಅಲ್ಲಿಂದ ತಲೆ ಮೇಲೆತ್ತಿಕೋ ಎನ್ನುತ್ತವೆ

ಕೆಲವು ಗುಲಾಬಿ, ಸೇಬುಗಳಂತೆ
ಕಂಡವರ ಕಣ್ಣು ಸೆಳೆಯುತ್ತವೆ
ಕೆಲವು ಸುಲಿದ ಬಾಳೆಹಣ್ಣಿನಂತೆ
ಒಲಿವ ಹೆಣ್ಣಿನಂತೆ ಮನವನಪ್ಪುತ್ತವೆ
ಕೆಲವು ರೊಚ್ಚೆ ಹಿಡಿದು ಕಿಚಕಿಚ ತಲೆತಿನ್ನುತ್ತವೆ
ಕೆಲವೆಲ್ಲರ ಕೈಲಾಡುವ ಚೆಂಡುಗಳಂತುಂಡಾಡಿಗಳು
ಆಡಿ ಆಡಿ ಮೈ ಕೈ ತರಚಿಕೊಂಡು
ಚಿಂದಿ ಮಂದಾಗಿ ಮೂಲೆ ಹಿಡಿಯುವವು
ಚಿಕಿತ್ಸೆಗೆ ಮೈತೆರೆದುಕೊಂಡು
ಕೆಲವು ಮಹಾರಾಜ-ರಾಣಿಯರ ಜರ್ಬಿನಿಂದ
ಎಲ್ಲರ ಕಣ್ಣು ಮುಜರೆಗಳಿಂದ ಬೀಗುತ್ತ
ಯಾರ ಕೈಗೂ ನಿಲಕದಷ್ಟೆತ್ತರ
ಸಿಂಹಾಸನದಲ್ಲಾಸೀನವಾಗುತ್ತವೆ

ಇವರನ್ನೆಲ್ಲಾ ನಾನೇ ಹಡೆದಿರುವೆನೆಂದೀರಿ ಮತ್ತೆ
ಕುಟುಂಬ ಯೋಜನೆಯಲ್ಲಾದೇನು ಕತ್ತೆ
ಎಲ್ಲೆಲ್ಲೋ ಹುಟ್ಟಿ ಬಂದು ಬಿದ್ದಿವೆ ನನ್ನ ಮಡಿಲಲ್ಲಿ
ನಾನು ಜತನವಾಗಿ ಸಾಕುವ ಮಕ್ಕಳಿವರು
ಯಾರವಾದರೇನು ನನ್ನ ಕರುಳಿಗಂಟಿ
ರಕ್ತ ಕಣ ಕಣಗಳಾಗಿ ಬೆರೆತು ಹೋಗಿವೆ
ಇವರು ಬೇರೆಯವರಲ್ಲಿ ದುಡಿದು ಬಂದು
ಸೋತು ಮುಖ ಬಾಡಿಸಿಕೊಂಡು ಕೂತಾಗ
ಕಂಡ ನನ್ನ ಕಣ್ಣು ಕೆಂಡವಾಗುತ್ತವೆ
ಮೈತಟ್ಟಿ ಮೂಕವಾಗಿ ರೋದಿಸಿ
ಕಟುಕ ಕರುಳುಗಳನ್ನು ಬೈದುಕೊಂಡು
ಸಮಾಧಾನ ಮಾಡಿಕೊಳ್ಳುತ್ತೇನೆ
ಅವುಗಳು ಮಾಡುವ ಮೌನಾರೋಪಣೆಗಳನ್ನು ಕೇಳಿ ಸುಮ್ಮನೆ
ಸಾಧ್ಯವಾದಷ್ಟು ಬೆಚ್ಚಗೆ ತಟ್ಟಿ ಮಲಗಿಸುತ್ತೇನೆ
(೩-೭-೭೫)
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...