Home / ಕಥೆ / ಜನಪದ / ಕೊಂಡು ತಂದ ಮಾತು

ಕೊಂಡು ತಂದ ಮಾತು

ಚಿತ್ರ: ಅಪೂರ್ವ ಅಪರಿಮಿತ
ಚಿತ್ರ: ಅಪೂರ್ವ ಅಪರಿಮಿತ

ಚಿಕ್ಕ ಹಳ್ಳಿಯೊಂದರಲ್ಲಿ ಸಮಗಾರ ಗಂಡಹೆಂಡಿರಿದ್ದರು. ಗಂಡನು ಹಳೆಯ ಕಾಲ್ಮರೆಗಳನ್ನು ಗಟ್ಟಿಮಾಡಿಕೊಡುವ ಕೆಲಸಮಾಡುತ್ತಿದ್ದನು. ಇಡಿಯವಾರ ದುಡಿದರೂ ಅವನಿಗೆ ಒಂದು ರೂಪಾಯಿಗಿಂತ ಹೆಚ್ಚು ಗಳಿಕೆ ಆಗುತ್ತಿದ್ದಿಲ್ಲ.

ನೆರೆಯೂರಿನ ಸಂತೆಗೆ ಹೋಗಿ ಉಪ್ಪು – ಮೆಣಸಿನಕಾಯಿ ಮೊದಲಾದವುಗಳನ್ನು ಕೊಂಡುತರುವದಕ್ಕಾಗಿ ಹೆಂಡತಿಯು ಹನ್ನರಡಾಣೆ ಹಣವನ್ನು ಗಂಡನ ಕೈಗಿತ್ತಳು. ಹಸಿವೆಯಾದಾಗ ಉಣ್ಣಲೆಂದು ಒಂದೆರಡು ರೊಟ್ಟಿಗಳನ್ನೂ ಕಟ್ಟಿದಳು.

ಸಮಗಾರನು ದಾರಿ ಹಿಡಿದು ಸಾಗುತ್ತಿರಲು ಅವನಿಗೆ ಕುದುರೆಯ ಮೇಲೆ ಕುಳಿತು ಸಂತೆಗೆ ಹೊರಟವನು ಚೊತೆಯಾದನು. ಅವನನ್ನು ಕುರಿತು ಸಮಗಾರನು – “ಅಪ್ಪಾ, ಏನಾದರೊಂದು ಮಾತು ಹೇಳಿರಿ. ಅಂದರೆ ದಾರಿಸಾಗುತ್ತದೆ” ಎಂದನು.

“ಮಾತೆಂದರೆ ಸುಮ್ಮನೇ ಬರುವವೇ ? ಮಾತಿಗೆ ರೊಕ್ಕ ಬೀಳುತ್ತವೆ” ಎಂದನು ಕುದುರೆಯವನು.

“ಒಂದು ಮಾತಿನ ಬೆಲೆ ಎಷ್ಟು?” ಸಮಗಾರನ ಪ್ರಶ್ನೆ.

“ನಾಲ್ಕಾಣೆಗೊಂದು ಮಾತು.”

ಹೆಂಡತಿ ಸಂತೆಗಾಗಿ ಕೊಟ್ಟ ಹನ್ನರಡಾಣೆಗಳಲ್ಲಿ ನಾಲ್ಕಾಣೆಕೊಟ್ಟು ಒಂದು ಮಾತು ಕೊಂಡರಾಗುತ್ತದೆ. ಕೊಂಡಮಾತು ಎಂಥವಿರುತ್ತವೆಯೋ ನೋಡೋಣ – ಎಂದುಕೊಂಡು, ಕಿಸೆಯೊಳಗಿನ ನಾಲ್ಕಾಣೆ ರೊಕ್ಕ ತೆಗೆದು ಕುದುರೆಯವನ ಕೈಯಲ್ಲಿಟ್ಟು – “ಒಂದು ಮಾತು ಹೇಳಿರಿ” ಅಂದನು.

“ಸತ್ತವನನ್ನು ಹೊತ್ತು ಹಾಕಬೇಕು.”

“ಇಷ್ಟಕ್ಕೇ ನಾಲ್ಕಾಣೆ ಕೊಟ್ಟಂತಾಯಿತು. ಆಗಲಿ. ಇನ್ನೊಂದು ಮಾತು ಹೇಳಿ. ಇಕೊಳ್ಳಿರಿ, ನಾಲ್ಕಾಣೆ” ಸಮಗಾರನು ಅನ್ನಲು “ಸರಕಾರದ ಮುಂದೆ ಸುಳ್ಳು ಹೇಳಬಾರದು” ಇದು ಕುದುರೆಯವನು ಹೇಳಿದ ಎರಡನೇಮಾತು. ಸಮಗಾರನಿಗೆ ಅನಿಸಿತು – “ಇನ್ನುಳಿದ ನಾಲ್ಕಾಣೆಯಿಂದ ಸಂತೆಯಲ್ಲಿ ಏನುಕೊಳ್ಳಲಿಕ್ಕಾಗುತ್ತದೆ? ಇನ್ನೊಂದು ಮಾತನ್ನೇ ಕೊಂಡರಾಯಿತು” ಕುದುರೆಯವನಿಗೆ ಮತ್ತೆ ನಾಲ್ಕಾಣೆಕೊಟ್ಟು ಮೂರನೇ ಮಾತು ಕೇಳಿದನು-

“ಹೆಂಡತಿಯ ಮುಂದೆ ನಿಜ ಹೇಳಬಾರದು” ಇದೇ ಆತನು ಹೇಳಿಕೊಟ್ಟ ಮೂರನೇಮಾತು. ಸುಮಗಾರನಿಗೆ ಸಂತೆಯಲ್ಲಿ ಮಾಡಬೇಕಾದ ಯುವಕೆಲಸವೂ ಇರಲಿಲ್ಲ,- ನೇರವಾಗಿ ಹಳ್ಳಕ್ಕೆ ಹೋಗಿ ಹೆಂಡತಿಕಟ್ಟಿಕೊಟ್ಟ ಎರಡು ರೊಟ್ಟಿಗಳನ್ನು ತಿಂದು ಊರ ಚಾವಡಿ ಮುಂದಿನ ಕಟ್ಟಿಯಮೇಲೆ ಕುಳಿತುಕೊಂಡನು. ಅ ಅಷ್ಟರಲ್ಲಿ ಓಲೆಕಾರನು ಬಂದು – “ನಿನ್ನನ್ನು ಗೌಡರು ಕರೆಯುತ್ತಾರೆ” ಎನ್ನಲು ಸಮಗಾರನು ಗೌಡನ ಬಳಿಗೆ ಹೋದನು. ಗೌಡ ಹೇಳಿದನು ಆತನಿಗೆ – “ಇಗೋ, ಇಲ್ಲಿ ಯಾವ ಊರಿನವನೋ ಏನೋ, ಮಲಗಿಕೊಂಡಲ್ಲಿಯೇ ಸತ್ತಿದ್ದಾನೆ. ಆತನನ್ನು ಹೊತ್ತೊಯ್ದು ಹುಗಿದು ಬಾ, ಎರಡು ರೂಪಾಯಿ ಕೊಡುತ್ತೇನೆ.”

ಸಮಗಾರನಿಗನಿಸಿತು – ನಾಲ್ಕಾಣೆಗೆ ಕೊಂಡ ಒಂದು ಮಾತು ಎರಡು ರೂಪಾಯಿ ಗಳಿಸಿಕೊಡುತ್ತಿರುವಾಗ ಒಲ್ಲೆನೆನ್ನಬಾರದು. ಗೌಡನಿಂದ ಎರಡು ರೂಪಾಯಿ ಇಸಗೊಂಡು ಮಲಗಿದವನ ಬಳಿಗೆ ಹೋಗಿ, ಅವನನ್ನು ಎತ್ತಿ ಕುಳ್ಳಿರಿಸುವಷ್ಟರಲ್ಲಿ ಒಂದು ಹಮ್ಮಿಣಿಯೇ ಸಿಕ್ಕಿತು. ಅದನ್ನು ಭದ್ರವಾಗಿರಿಸಿಕೊಂಡು ಹೆಣವನ್ನು ಹೊತ್ತು ಹುಗಿದುಬಂದನು ಸಂತೆಗೆ.

ಜೀವ ಬೇಡಿದ್ದನ್ನು ಮೊದಲು ಕೊಂಡು ತಿಂದು, ಆ ಬಳಿಕ ಒಂದು ಕುದುರೆಯನ್ನು ಕೊಂಡು ಅದರ ಮೇಲೆ ಕುಳಿತುಕೊಂಡು ತನ್ನೂರ ಹಾದಿ ಹಿಡಿದನು- ದಾರಿ ನೋಡುತ್ತ ಕುಳಿತ ಹೆಂಡತಿಯು ದೂರದಿಂದಲೇ ಗಂಡನನ್ನು ಗುರುತಿಸಿ, “ಕುದುರೆ ಎಲ್ಲಿಂದ ತಂದಿ” ಎಂದು ಕೇಳಿದಳು. “ತಡೆ, ಹೇಳುತ್ತೇನೆ” ಎಂದು ಕುದುರ ಕಟ್ಟಿ ಹಾಕಿ ಒಳಗೆ ಹೋಗಿ ಹೆಂಡತಿಯ ಕೈಯಲ್ಲಿ ಹಮ್ಮೀಣಿಕೊಟ್ಟು ತೆಗೆದು ಇಡಲು ಹೇಳಿದನು.

“ಇದೆಲ್ಲಿ ಸಿಕ್ಕಿತು ?” ಹೆಂಡತಿಯ ಪ್ರಶ್ನೆ.
‘ನೀನು ಕಟ್ಟಿಕೊಟ್ಟ ಎರಡು ರೊಟ್ಟಿಯಿಂದ ಹೊಟ್ಟಿತುಂಬಲಿಲ್ಲ. ಒಂದು ಎಕ್ಕಲೆ ಗಿಡದ ಬಳಿಗೆ ಹೋಗಿ ಅದರ ಹಾಲು ತೆಗೆದುಕೊಂಡು ಕುಳಿತಾಗ ಈ ಹಮ್ಮೀಣಿ ಕಾಣಿಸಿತು” ಎಂದು ಸುಳ್ಳುಸುಳ್ಳು ಹೇಳಿದೆನು. ಹೆಂಡತಿಯ ಮುಂದೆ ನಿಜ ಹೇಳಬಾರದು – ಎಂಬ ಮಾತು ಕೊಂಡಿದ್ದನಲ್ಲವೇ ?

ಹಮ್ಮೀಣಿಯ ಸಹಾಯದಿಂದ ಸುಮಗಾರಮ ಹೊಸಮನೆ ಕಟ್ಟಿಸಿದನು.
ಎತ್ತುಗಳನ್ನು ಕೊಂಡನು. ಗಾಡಿ ಮಾಡಿಸಿದನು. ಹಯನಿಗೆ ಎಮ್ಮೆ ಕಟ್ಟಿದನು.
ಹೆಂಡತಿಗೆ ಒಳ್ಳೊಳ್ಳೆಯ ಸೀರ ಕುಪ್ಪಸ ಕೊಟ್ಟನು. ಆಭರಣಗಳನ್ನು ತಂದನು..
ಅದನ್ನೆಲ್ಲ ಕಂಡು ನೆರೆಹೊರೆಯವರಿಗೆ ಆಶ್ಚರ್ಯವೆನಿಸಿತು.

ಸಮಾಗಾರನ ಹೆಂಡತಿಯನ್ನು ಒತ್ತಟ್ಟಿಗೆ ಕರೆದು, ನೆರೆಮನೆಯ ಹೆಣ್ಣುಮಗಳು ಕೇಳಿದಳು – “ಇದೆಲ್ಲ ಐಶ್ವರ್ಯ ಎಲ್ಲಿಂದ ಬಂತು ?”

“ಸಂತೆಗೆ ಹೋದಾಗ ನನ್ನ ಗಂಡನು ಹೊಟ್ಟೆತುಂಬಲಿಲ್ಲವೆಂದು ಎಕ್ಕೆಲೆಯ ಹಾಲು ಕುಡಿದು, ಕುಳಿತಾಗ ರೊಕ್ಕದ ಹಮ್ಮೀಣಿಯೇ ಕಾಣಿಸಿತಂತೆ” ಎಂದು
ಸಮಗಾರತಿ ಹೇಳಿದಳು.

ನೆರೆಮನೆಯ ಹೆಂಗಸು ತನ್ನ ಗಂಡನನ್ನು ಸಂತೆಗೆ ಕಳಿಸುವ ಎತ್ತುಗಡೆ ಮಾಡಿದಳು. ಎಕ್ಕೆಲೆಯ ಹಾಲು ಕುಡಿಯುವ ರಹಸ್ಯವನ್ನು ಹೇಳಿಕೊಟ್ಟಳು. ಕೈಯಲ್ಲಿ ಹನ್ನೆರಡಾಣೆ ರೊಕ್ಕ ಕೊಟ್ಟಳು.

ಶ್ರೀಮಂತನಾಗಬೇಕೆಂಬ ಹವ್ಯಾಸದಿಂದ ಹೆಂಡತಿಯ ಮಾತು ಕೇಳಿ, ಎಕ್ಕಲೆಯ ಹಾಲು ಕುಡಿದು, ಹೊಟ್ಟಿಯುರಿಯುವದೆಂದು ಮನೆಗೆ ಬಂದು ಆ ಗೃಹಸ್ಥನು ಸತ್ತೇಹೋದನು. ಆತನ ಹೆಂಡತಿ ಸಮಗಾರ್ತಿಯ ಮಾತು ಕೇಳಿದ್ದರಿಂದ ಹೀಗಾಯಿತೆಂದು ಬೊಬ್ಬಿಟ್ಟಳು.

ಸರ್ಕಾರದವರು ಸಮಗಾರ್ತಿಯನ್ನು ಕರೆಸಿ ಕೇಳಿದರೆ ಆಕೆ ತನ್ನ ಗಂಡನ ಹೆಸರು ಹೇಳಿದಳು. ಸಮಗಾರನನ್ನು ಕರೆಯಿಸಲು, ಸರ್ಕಾರದ ಮುಂದೆ ಸುಳ್ಳು ಹೇಳಬಾರದು – ಎಂಬ ಮಾತು ನೆನಪಿಗೆ ಬಂತು. ನಡೆದ ಸಂಗತಿಯನ್ನೆಲ್ಲ ಹೇಳಿದನು. ಹೆಂಡತಿಯ ಮುಂದೆ ನಿಜ ಹೇಳಬಾರದು – ಎಂಬ ಮಾತಿನ ಪ್ರಕಾರ ನಾನು ಆಕೆಗೆ ಎಕ್ಕಲೆಯ ಕಥೆಯನ್ನು ಹುಟ್ಟಿಸಿಕೊಂಡು ಹೇಳಿದೆನೆಂದೂ ನುಡಿದನು.

“ಎಕ್ಕಲೆಯ ಹಾಲು ಕುಡಿದರೆ ಹೊಟ್ಟೆಯಲ್ಲಿ ಉರುಪುಬಿಟ್ಟು ಸಾಯುವರು” ಎಂಬುದು ನಿನ್ನ ಗಂಡನಿಗೆ ತಿಳಿಯಲಿಲ್ಲವೇ ? ಹೋಗು. ಸಮಗಾರ್ತಿಯದಾಗಲಿ ಸಮಗಾರನದಾಗಲಿ ಏನೂ ತಪ್ಪಿಲ್ಲ. ನಿನ್ನದೇ ತಪ್ಪು. ಮಾಡಿದ್ದನ್ನು ಭೋಗಿಸು” ಎಂದರು ಸರ್ಕಾರದವರು ಆಕೆಗೆ.
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...