Home / ಕಥೆ / ಜನಪದ / ಕೊಂಡು ತಂದ ಮಾತು

ಕೊಂಡು ತಂದ ಮಾತು

ಚಿತ್ರ: ಅಪೂರ್ವ ಅಪರಿಮಿತ
ಚಿತ್ರ: ಅಪೂರ್ವ ಅಪರಿಮಿತ

ಚಿಕ್ಕ ಹಳ್ಳಿಯೊಂದರಲ್ಲಿ ಸಮಗಾರ ಗಂಡಹೆಂಡಿರಿದ್ದರು. ಗಂಡನು ಹಳೆಯ ಕಾಲ್ಮರೆಗಳನ್ನು ಗಟ್ಟಿಮಾಡಿಕೊಡುವ ಕೆಲಸಮಾಡುತ್ತಿದ್ದನು. ಇಡಿಯವಾರ ದುಡಿದರೂ ಅವನಿಗೆ ಒಂದು ರೂಪಾಯಿಗಿಂತ ಹೆಚ್ಚು ಗಳಿಕೆ ಆಗುತ್ತಿದ್ದಿಲ್ಲ.

ನೆರೆಯೂರಿನ ಸಂತೆಗೆ ಹೋಗಿ ಉಪ್ಪು – ಮೆಣಸಿನಕಾಯಿ ಮೊದಲಾದವುಗಳನ್ನು ಕೊಂಡುತರುವದಕ್ಕಾಗಿ ಹೆಂಡತಿಯು ಹನ್ನರಡಾಣೆ ಹಣವನ್ನು ಗಂಡನ ಕೈಗಿತ್ತಳು. ಹಸಿವೆಯಾದಾಗ ಉಣ್ಣಲೆಂದು ಒಂದೆರಡು ರೊಟ್ಟಿಗಳನ್ನೂ ಕಟ್ಟಿದಳು.

ಸಮಗಾರನು ದಾರಿ ಹಿಡಿದು ಸಾಗುತ್ತಿರಲು ಅವನಿಗೆ ಕುದುರೆಯ ಮೇಲೆ ಕುಳಿತು ಸಂತೆಗೆ ಹೊರಟವನು ಚೊತೆಯಾದನು. ಅವನನ್ನು ಕುರಿತು ಸಮಗಾರನು – “ಅಪ್ಪಾ, ಏನಾದರೊಂದು ಮಾತು ಹೇಳಿರಿ. ಅಂದರೆ ದಾರಿಸಾಗುತ್ತದೆ” ಎಂದನು.

“ಮಾತೆಂದರೆ ಸುಮ್ಮನೇ ಬರುವವೇ ? ಮಾತಿಗೆ ರೊಕ್ಕ ಬೀಳುತ್ತವೆ” ಎಂದನು ಕುದುರೆಯವನು.

“ಒಂದು ಮಾತಿನ ಬೆಲೆ ಎಷ್ಟು?” ಸಮಗಾರನ ಪ್ರಶ್ನೆ.

“ನಾಲ್ಕಾಣೆಗೊಂದು ಮಾತು.”

ಹೆಂಡತಿ ಸಂತೆಗಾಗಿ ಕೊಟ್ಟ ಹನ್ನರಡಾಣೆಗಳಲ್ಲಿ ನಾಲ್ಕಾಣೆಕೊಟ್ಟು ಒಂದು ಮಾತು ಕೊಂಡರಾಗುತ್ತದೆ. ಕೊಂಡಮಾತು ಎಂಥವಿರುತ್ತವೆಯೋ ನೋಡೋಣ – ಎಂದುಕೊಂಡು, ಕಿಸೆಯೊಳಗಿನ ನಾಲ್ಕಾಣೆ ರೊಕ್ಕ ತೆಗೆದು ಕುದುರೆಯವನ ಕೈಯಲ್ಲಿಟ್ಟು – “ಒಂದು ಮಾತು ಹೇಳಿರಿ” ಅಂದನು.

“ಸತ್ತವನನ್ನು ಹೊತ್ತು ಹಾಕಬೇಕು.”

“ಇಷ್ಟಕ್ಕೇ ನಾಲ್ಕಾಣೆ ಕೊಟ್ಟಂತಾಯಿತು. ಆಗಲಿ. ಇನ್ನೊಂದು ಮಾತು ಹೇಳಿ. ಇಕೊಳ್ಳಿರಿ, ನಾಲ್ಕಾಣೆ” ಸಮಗಾರನು ಅನ್ನಲು “ಸರಕಾರದ ಮುಂದೆ ಸುಳ್ಳು ಹೇಳಬಾರದು” ಇದು ಕುದುರೆಯವನು ಹೇಳಿದ ಎರಡನೇಮಾತು. ಸಮಗಾರನಿಗೆ ಅನಿಸಿತು – “ಇನ್ನುಳಿದ ನಾಲ್ಕಾಣೆಯಿಂದ ಸಂತೆಯಲ್ಲಿ ಏನುಕೊಳ್ಳಲಿಕ್ಕಾಗುತ್ತದೆ? ಇನ್ನೊಂದು ಮಾತನ್ನೇ ಕೊಂಡರಾಯಿತು” ಕುದುರೆಯವನಿಗೆ ಮತ್ತೆ ನಾಲ್ಕಾಣೆಕೊಟ್ಟು ಮೂರನೇ ಮಾತು ಕೇಳಿದನು-

“ಹೆಂಡತಿಯ ಮುಂದೆ ನಿಜ ಹೇಳಬಾರದು” ಇದೇ ಆತನು ಹೇಳಿಕೊಟ್ಟ ಮೂರನೇಮಾತು. ಸುಮಗಾರನಿಗೆ ಸಂತೆಯಲ್ಲಿ ಮಾಡಬೇಕಾದ ಯುವಕೆಲಸವೂ ಇರಲಿಲ್ಲ,- ನೇರವಾಗಿ ಹಳ್ಳಕ್ಕೆ ಹೋಗಿ ಹೆಂಡತಿಕಟ್ಟಿಕೊಟ್ಟ ಎರಡು ರೊಟ್ಟಿಗಳನ್ನು ತಿಂದು ಊರ ಚಾವಡಿ ಮುಂದಿನ ಕಟ್ಟಿಯಮೇಲೆ ಕುಳಿತುಕೊಂಡನು. ಅ ಅಷ್ಟರಲ್ಲಿ ಓಲೆಕಾರನು ಬಂದು – “ನಿನ್ನನ್ನು ಗೌಡರು ಕರೆಯುತ್ತಾರೆ” ಎನ್ನಲು ಸಮಗಾರನು ಗೌಡನ ಬಳಿಗೆ ಹೋದನು. ಗೌಡ ಹೇಳಿದನು ಆತನಿಗೆ – “ಇಗೋ, ಇಲ್ಲಿ ಯಾವ ಊರಿನವನೋ ಏನೋ, ಮಲಗಿಕೊಂಡಲ್ಲಿಯೇ ಸತ್ತಿದ್ದಾನೆ. ಆತನನ್ನು ಹೊತ್ತೊಯ್ದು ಹುಗಿದು ಬಾ, ಎರಡು ರೂಪಾಯಿ ಕೊಡುತ್ತೇನೆ.”

ಸಮಗಾರನಿಗನಿಸಿತು – ನಾಲ್ಕಾಣೆಗೆ ಕೊಂಡ ಒಂದು ಮಾತು ಎರಡು ರೂಪಾಯಿ ಗಳಿಸಿಕೊಡುತ್ತಿರುವಾಗ ಒಲ್ಲೆನೆನ್ನಬಾರದು. ಗೌಡನಿಂದ ಎರಡು ರೂಪಾಯಿ ಇಸಗೊಂಡು ಮಲಗಿದವನ ಬಳಿಗೆ ಹೋಗಿ, ಅವನನ್ನು ಎತ್ತಿ ಕುಳ್ಳಿರಿಸುವಷ್ಟರಲ್ಲಿ ಒಂದು ಹಮ್ಮಿಣಿಯೇ ಸಿಕ್ಕಿತು. ಅದನ್ನು ಭದ್ರವಾಗಿರಿಸಿಕೊಂಡು ಹೆಣವನ್ನು ಹೊತ್ತು ಹುಗಿದುಬಂದನು ಸಂತೆಗೆ.

ಜೀವ ಬೇಡಿದ್ದನ್ನು ಮೊದಲು ಕೊಂಡು ತಿಂದು, ಆ ಬಳಿಕ ಒಂದು ಕುದುರೆಯನ್ನು ಕೊಂಡು ಅದರ ಮೇಲೆ ಕುಳಿತುಕೊಂಡು ತನ್ನೂರ ಹಾದಿ ಹಿಡಿದನು- ದಾರಿ ನೋಡುತ್ತ ಕುಳಿತ ಹೆಂಡತಿಯು ದೂರದಿಂದಲೇ ಗಂಡನನ್ನು ಗುರುತಿಸಿ, “ಕುದುರೆ ಎಲ್ಲಿಂದ ತಂದಿ” ಎಂದು ಕೇಳಿದಳು. “ತಡೆ, ಹೇಳುತ್ತೇನೆ” ಎಂದು ಕುದುರ ಕಟ್ಟಿ ಹಾಕಿ ಒಳಗೆ ಹೋಗಿ ಹೆಂಡತಿಯ ಕೈಯಲ್ಲಿ ಹಮ್ಮೀಣಿಕೊಟ್ಟು ತೆಗೆದು ಇಡಲು ಹೇಳಿದನು.

“ಇದೆಲ್ಲಿ ಸಿಕ್ಕಿತು ?” ಹೆಂಡತಿಯ ಪ್ರಶ್ನೆ.
‘ನೀನು ಕಟ್ಟಿಕೊಟ್ಟ ಎರಡು ರೊಟ್ಟಿಯಿಂದ ಹೊಟ್ಟಿತುಂಬಲಿಲ್ಲ. ಒಂದು ಎಕ್ಕಲೆ ಗಿಡದ ಬಳಿಗೆ ಹೋಗಿ ಅದರ ಹಾಲು ತೆಗೆದುಕೊಂಡು ಕುಳಿತಾಗ ಈ ಹಮ್ಮೀಣಿ ಕಾಣಿಸಿತು” ಎಂದು ಸುಳ್ಳುಸುಳ್ಳು ಹೇಳಿದೆನು. ಹೆಂಡತಿಯ ಮುಂದೆ ನಿಜ ಹೇಳಬಾರದು – ಎಂಬ ಮಾತು ಕೊಂಡಿದ್ದನಲ್ಲವೇ ?

ಹಮ್ಮೀಣಿಯ ಸಹಾಯದಿಂದ ಸುಮಗಾರಮ ಹೊಸಮನೆ ಕಟ್ಟಿಸಿದನು.
ಎತ್ತುಗಳನ್ನು ಕೊಂಡನು. ಗಾಡಿ ಮಾಡಿಸಿದನು. ಹಯನಿಗೆ ಎಮ್ಮೆ ಕಟ್ಟಿದನು.
ಹೆಂಡತಿಗೆ ಒಳ್ಳೊಳ್ಳೆಯ ಸೀರ ಕುಪ್ಪಸ ಕೊಟ್ಟನು. ಆಭರಣಗಳನ್ನು ತಂದನು..
ಅದನ್ನೆಲ್ಲ ಕಂಡು ನೆರೆಹೊರೆಯವರಿಗೆ ಆಶ್ಚರ್ಯವೆನಿಸಿತು.

ಸಮಾಗಾರನ ಹೆಂಡತಿಯನ್ನು ಒತ್ತಟ್ಟಿಗೆ ಕರೆದು, ನೆರೆಮನೆಯ ಹೆಣ್ಣುಮಗಳು ಕೇಳಿದಳು – “ಇದೆಲ್ಲ ಐಶ್ವರ್ಯ ಎಲ್ಲಿಂದ ಬಂತು ?”

“ಸಂತೆಗೆ ಹೋದಾಗ ನನ್ನ ಗಂಡನು ಹೊಟ್ಟೆತುಂಬಲಿಲ್ಲವೆಂದು ಎಕ್ಕೆಲೆಯ ಹಾಲು ಕುಡಿದು, ಕುಳಿತಾಗ ರೊಕ್ಕದ ಹಮ್ಮೀಣಿಯೇ ಕಾಣಿಸಿತಂತೆ” ಎಂದು
ಸಮಗಾರತಿ ಹೇಳಿದಳು.

ನೆರೆಮನೆಯ ಹೆಂಗಸು ತನ್ನ ಗಂಡನನ್ನು ಸಂತೆಗೆ ಕಳಿಸುವ ಎತ್ತುಗಡೆ ಮಾಡಿದಳು. ಎಕ್ಕೆಲೆಯ ಹಾಲು ಕುಡಿಯುವ ರಹಸ್ಯವನ್ನು ಹೇಳಿಕೊಟ್ಟಳು. ಕೈಯಲ್ಲಿ ಹನ್ನೆರಡಾಣೆ ರೊಕ್ಕ ಕೊಟ್ಟಳು.

ಶ್ರೀಮಂತನಾಗಬೇಕೆಂಬ ಹವ್ಯಾಸದಿಂದ ಹೆಂಡತಿಯ ಮಾತು ಕೇಳಿ, ಎಕ್ಕಲೆಯ ಹಾಲು ಕುಡಿದು, ಹೊಟ್ಟಿಯುರಿಯುವದೆಂದು ಮನೆಗೆ ಬಂದು ಆ ಗೃಹಸ್ಥನು ಸತ್ತೇಹೋದನು. ಆತನ ಹೆಂಡತಿ ಸಮಗಾರ್ತಿಯ ಮಾತು ಕೇಳಿದ್ದರಿಂದ ಹೀಗಾಯಿತೆಂದು ಬೊಬ್ಬಿಟ್ಟಳು.

ಸರ್ಕಾರದವರು ಸಮಗಾರ್ತಿಯನ್ನು ಕರೆಸಿ ಕೇಳಿದರೆ ಆಕೆ ತನ್ನ ಗಂಡನ ಹೆಸರು ಹೇಳಿದಳು. ಸಮಗಾರನನ್ನು ಕರೆಯಿಸಲು, ಸರ್ಕಾರದ ಮುಂದೆ ಸುಳ್ಳು ಹೇಳಬಾರದು – ಎಂಬ ಮಾತು ನೆನಪಿಗೆ ಬಂತು. ನಡೆದ ಸಂಗತಿಯನ್ನೆಲ್ಲ ಹೇಳಿದನು. ಹೆಂಡತಿಯ ಮುಂದೆ ನಿಜ ಹೇಳಬಾರದು – ಎಂಬ ಮಾತಿನ ಪ್ರಕಾರ ನಾನು ಆಕೆಗೆ ಎಕ್ಕಲೆಯ ಕಥೆಯನ್ನು ಹುಟ್ಟಿಸಿಕೊಂಡು ಹೇಳಿದೆನೆಂದೂ ನುಡಿದನು.

“ಎಕ್ಕಲೆಯ ಹಾಲು ಕುಡಿದರೆ ಹೊಟ್ಟೆಯಲ್ಲಿ ಉರುಪುಬಿಟ್ಟು ಸಾಯುವರು” ಎಂಬುದು ನಿನ್ನ ಗಂಡನಿಗೆ ತಿಳಿಯಲಿಲ್ಲವೇ ? ಹೋಗು. ಸಮಗಾರ್ತಿಯದಾಗಲಿ ಸಮಗಾರನದಾಗಲಿ ಏನೂ ತಪ್ಪಿಲ್ಲ. ನಿನ್ನದೇ ತಪ್ಪು. ಮಾಡಿದ್ದನ್ನು ಭೋಗಿಸು” ಎಂದರು ಸರ್ಕಾರದವರು ಆಕೆಗೆ.
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...