Home / ಕವನ / ಕವಿತೆ / ಕ್ಷಾಮ

ಕ್ಷಾಮ

ಇತಿಯೋಪಿಯಾದಲ್ಲಿ ಕ್ಷಾಮ ಬಂದು
ಇಡೀ ಒಂದು ಗ್ರಾಮವೇ ಬಲಿಯಾಯಿತೆಂದು
ಬೆಳಗ್ಗಿನ ಕಾಫಿ ಹೀರುತ್ತ
ಪತ್ರಿಕೆಯಲ್ಲಿ ಓದಿ

ಕೇಳಿದೆಯೇನೆ ಸುದ್ದಿ
ಎಂದು ಉದ್ಗರಿಸಲಿಲ್ಲ.
ದೇವರಿಗೆ ದೀಪ ಹಚ್ಚಿ ನೀನು
ಪ್ರಾರ್ಥಿಸುತ್ತಿದ್ದುದು ಏನು
ಎಂದು ಕೇಳಲಿಲ್ಲ.

ಮನೆಯೆದುರಿನ ಆಲದ ಮರದಿಂದ ಕಾಗೆಗಳು
ಹಾರಿ ಹೋದುವು ಸದ್ದಿಲ್ಲದೆ.
ಇದು ಸಂಶೋಧಕರ ಗಮನಕ್ಕೆ ಬಂದಾಗ
ಯಾರೂ ಬದುಕಿರಲಿಲ್ಲ.

ಈ ಗ್ರಾಮ ನೀರಿಲ್ಲದೆ ಸತ್ತಿತು.
ನೀರಿಗಾಗಿ ಹೋದವರು
ದಾರಿಯಲ್ಲಿ ಬಿದ್ದರು.  ಕೊಡಗಳ ಚೂರು
ಅಲ್ಲಲ್ಲಿ ಒಂದೆರಡು ಎಲುಬುಗಳ ತುಂಡು
ಮತ್ತೆ ಇವರ ಕಣ್ಣುಗಳೇನಾದವೋ
ಯಾರಿಗೂ ತಿಳಿಯದು.

ಸೂರ್ಯಕಾಂತಿಗೆ ಮಣ್ಣುನೀರುಬೇಕು
ಅಳುವುದಕ್ಕಾದರೂ ಕಣ್ಣುಬೇಕು
ಬೆಂಗಾಡಿನಲ್ಲೇನು ಸಾವುನೋವು
ಸತ್ತಮೇಲೇನು ಮತ್ತೆ ಸಾವು

ಇದು ಮೊತ್ತಮೊದಲು ವಿಮಾನಪ್ರಯಾಣಿಕರ ದೃಷ್ಟಿಗೆ ಬಿತ್ತು
ಕೆಳಗೆ ಹದ್ದುಗಳು ಎರಗುವುದನ್ನು ಇವರು ಗಮನಿಸಿದರು
ಮರಣದ ವಾಸನೆ ಎಷ್ಟು ದೂರ ಹೊಡೆದೀತು
ಇಡೀ ಗ್ರಾಮವೇ ನಾಶವಾದಮೇಲೆ

ಮುಸುಲೊನಿಯೂ ಒಮ್ಮೆ ಹೀಗೆ ಎರಗಿದ್ದನಲ್ಲ
ಅದೊಂದು ಇತಿಹಾಸ.  ಇದು
ಅದರ ಪರಿಹಾಸ.  ಹೀಗೆ
ಕುರುಡು ರಾಜ್ಯದ ಕಣ್ಣುಗುಂಡಿಗಳಲ್ಲಿ
ಕಂಡುಕಾಣದ ಕತೆಗಳು
ಮರುಕಳಿಸುವ ವ್ಯಥೆಗಳು

ಆದರೆ ಇದೀಗ ಬಿಸಿಲ ಬೇಗೆ ನನ್ನ ಮುಖಕ್ಕೇ ಹೊಡೆಯುತ್ತಿದೆ
ನೋಡಲಾರೆ ಹೊರಕ್ಕೆ
ಹೊರಟಿದ್ದಾಳೆ ಈಕೆ ನೀರಿಗೆಂದು
ದೂರದ ಬಾವಿಗೆ
*****

Tagged:

Leave a Reply

Your email address will not be published. Required fields are marked *

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...

ಮಧುಮಾಸದ ಮೊದಲ ದಿನಗಳು. ಎಲ್ಲಿ ನೋಡಿದರೂ ತಾಯಿಯ ವಿವಿಧ ವಿಲಾಸ……. ಪುಷ್ಪಶೃಂಗಾರ!! ವರ್‍ಣವೈಖರಿ!! ಮಧುಪಾನದಿಂದ ಮೈಮರೆತು ಮೊರೆಯುತಿಹೆ ಉನ್ಮತ್ತ ಭೃಂಗ ಸಂಕುಲದ ಎಣೆಯಿಲ್ಲದ ಪ್ರಣಯ ಕೇಳಿ! ಸಹಸ್ರಸಹಸ್ರ ಖಗಕಂಠಗಳಿಂದೆ ದಿಕ್ಕುದಿಕ್ಕಿಗೆ ಪಸರಿಸುತಿಹ ಸುಮಧುರ ಗಾನ ತರಂಗ...