Home / ಕವನ / ಕವಿತೆ / ಎಲ್ಲಿದೆ ಧರ್ಮ

ಎಲ್ಲಿದೆ ಧರ್ಮ

ಧರ್ಮಾ ಧರ್ಮಾ ಅಂತಾರೋ ಎಲ್ಲಿದೆ ಧರ್ಮಾ ತೋರಿಸರೋ ||ಪ||
ನಮ್ಮದು ಧರ್ಮಾ ನಿಮ್ಮದು ಧರ್ಮಾ ಅವರದು ಧರ್ಮಾ ಅಂತಾರೆ
ಜನಗಳ ನಡುವೆ ಗೋಡೆಗಳೆಬ್ಬಿಸಿ ಆಗಸ ಕಾಣದೆ ನಿಂತಾರೆ ||೧||

ಕೊಂಬಿ ರೆಂಬಿಗಳ ಜೋತು ಬಿದ್ದು ಅವುಗಳೆ ಮರ ಮರ ಅಂತಾರೆ
ಬೊಡ್ಡೆಗೆ ಕೊಡಲಿ ಹಾಕುತಲಿದ್ದು ಕೊಂಬೆ ಚಿಗುರಿದವು ಅಂತಾರೆ ||೨||

ನೆಲದಲಿ ಹುಟ್ಟಿದ ಗಿಡಗಳ ಕಿತ್ತುತ ಅಂತರ ಬೆಂತರ ಬೆಳೆಸ್ಯಾರೆ
ಮಣ್ಣೂ ನೀರೂ ತುಳಿದೂ ಹಳಿದೂ ರೊಕ್ಕದಿ ಗಿಡಗಳ ಇಳಿಸ್ಯಾರೆ ||೩||

ಜೀವನ ಮೂಲದಿ ಹೊಮ್ಮಿದ ನಾದದ ಕೋಗಿಲೆ ಕೊರಳನು ಹಿಚಿಕ್ಯಾರೆ
ಸಮಗ್ರ ಬದುಕಿನ ಸುರ ಸಂಗೀತದ ತಂತು ತಂತುಗಳ ತಿರಿಚ್ಯಾರೆ ||೪||

ಬಯಲು ಆಲಯದ ಹಿಡಿಯದ ಲೀಲೆಯ ಗೂಡುಗಳಲಿ ಹಿಡಿದಿಟ್ಟಾರೆ
ಆಕಾರಿಲ್ಲದ ಅಗಮ್ಯ ಗೂಢಕೆ ತೋಚಿದ ಆಕೃತಿ ಕೊಟ್ಟಾರೆ ||೫||

ಹಾಲೂ ಇಲ್ಲಾ ಬಟ್ಟಲು ಇಲ್ಲಾ ಗೊಟಕ್ಕು ಪೂಜೆಯ ಮಾಡ್ಯಾರೆ
ವೇಷ ಮೋಸಗಳ ಕಳ್ಳ ಬಸಿರುಗಳು ಉಬ್ಬಿದ ಅಬ್ಬರ ಮೆರೆಸ್ಯಾರೆ ||೬||

ಝಣ ಝಣ ರೊಕ್ಕದ ಗಂಟೆ ಭೇರಿಗಳ ನಾದದ ಕೇಳುವ ಧರ್ಮಗಳು
ಹಸಿದ ಕೂಸುಗಳ ನೊಂದ ಜೀವಿಗಳ ಕೂಗು ಕೇಳದಾ ಕಿವುಡುಗಳು ||೭||

ಬಣ್ಣ ಬಟ್ಟೆಗಳು ಮಹಲು ಮೆರಗುಗಳು ಮಾತ್ರ ಕಾಣುವವು ಅವುಗಳಿಗೆ
ಹರಕು ಬಟ್ಟೆಗಳು ದುಡಿವ ರಟ್ಟೆಗಳು ಕಾಣದ ಕುರುಡಿದೆ ಅವುಗಳಿಗೆ ||೮||

***

ನಾಮಾ ವಿಭೂತಿಗಳಲ್ಲಿ ಇರುವುದೇ
ಜನಿವಾರ ಜುಟ್ಟುಗಳಲಿದೆಯೇ?
ಗುಡಿಗೋಪುರದಲಿ ಬಸದಿಯಲಿರುವುದೆ
ಮಸೀದಿ ಗೋಡೆಗಳೊಳಗಿದೆಯೇ? ||೯||

ಗುಡಿಗಳ ಒಳಗಿನ ಕಲ್ಲು ಲೋಹಗಳ
ವಿಧ ವಿಧ ವಿಗ್ರಹಗಳಲಿದೆಯೇ?
ನಾಮ ಪಠಣದಲಿ ಜಪಮಾಲೆಗಳಲಿ
ಯಜ್ಞ ಯಾಗಗಳಲಡಗಿದೆಯೇ? ||೧೦||

ಮಡಿಮೈಲಿಗೆಯಲಿ ವ್ರತನೇಮಗಳಲಿ
ಮೂಡ ಭಕ್ತಿಯಲಿ ಕುಳಿತಿದೆಯೇ?
ಊಹಾ ಮೃಗಜಲ ಪುರಾಣ ಕತೆಗಳ
ಶಾಸ್ತ್ರಗಳಡವಿಗಳೊಳಗಿದೆಯೇ? ||೧೧||

ಮಠಗಳ ಸಿಂಹಾಸನಗಳ ಮೇಲೆ
ಛತ್ರ ಚವರಿಗಳ ತಂಪಿನಲಿ
ಪಲ್ಲಕ್ಕಿಗಳಲಿ ಅಟ್ಟಹಾಸದಲಿ
ಮೆರೆಯುತಲಿದೆಯೇ ಸೊಂಪಿನಲಿ? ||೧೨||

****

ಎಲ್ಲಿದೆ ಧರ್ಮಾ ಯಾವುದು ಧರ್ಮಾ
ಏನದು ಧರ್ಮಾ ತೋರಿಸಿರೊ
ಬೆಳಕನು ಹರಡಲು ಹುಟ್ಟಿದ ಧರ್ಮವು
ಕತ್ತಲೆಯನೆ ಹಬ್ಬಿಸದಿರಲಿ ||೧೩||

ಜ್ಞಾನ ದೀವಿಗೆಯು ಮೌಢ್ಯ ಕಂದಕದಿ
ಉಸಿರು ಕಟ್ಟದೆಯೆ ಬದುಕಿರಲಿ
ಮಾನವರೆಲ್ಲರ ಕೂಡಿಸುವ ಬದಲು
ಭೇದಿಸಿ ಕೊಲ್ಲದ ಹಾಗಿರಲಿ
ಮಾನವತೆಯ ಆ ಮೂಲ ಬೇರಿನಲಿ
ತನ್ನಯ ಸಾರವ ಹೀರಿರಲಿ ||೧೪||
********

Tagged:

Leave a Reply

Your email address will not be published. Required fields are marked *

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...