Home / ಕವನ / ಕವಿತೆ / ಎಲ್ಲಿದೆ ಧರ್ಮ

ಎಲ್ಲಿದೆ ಧರ್ಮ

ಧರ್ಮಾ ಧರ್ಮಾ ಅಂತಾರೋ ಎಲ್ಲಿದೆ ಧರ್ಮಾ ತೋರಿಸರೋ ||ಪ||
ನಮ್ಮದು ಧರ್ಮಾ ನಿಮ್ಮದು ಧರ್ಮಾ ಅವರದು ಧರ್ಮಾ ಅಂತಾರೆ
ಜನಗಳ ನಡುವೆ ಗೋಡೆಗಳೆಬ್ಬಿಸಿ ಆಗಸ ಕಾಣದೆ ನಿಂತಾರೆ ||೧||

ಕೊಂಬಿ ರೆಂಬಿಗಳ ಜೋತು ಬಿದ್ದು ಅವುಗಳೆ ಮರ ಮರ ಅಂತಾರೆ
ಬೊಡ್ಡೆಗೆ ಕೊಡಲಿ ಹಾಕುತಲಿದ್ದು ಕೊಂಬೆ ಚಿಗುರಿದವು ಅಂತಾರೆ ||೨||

ನೆಲದಲಿ ಹುಟ್ಟಿದ ಗಿಡಗಳ ಕಿತ್ತುತ ಅಂತರ ಬೆಂತರ ಬೆಳೆಸ್ಯಾರೆ
ಮಣ್ಣೂ ನೀರೂ ತುಳಿದೂ ಹಳಿದೂ ರೊಕ್ಕದಿ ಗಿಡಗಳ ಇಳಿಸ್ಯಾರೆ ||೩||

ಜೀವನ ಮೂಲದಿ ಹೊಮ್ಮಿದ ನಾದದ ಕೋಗಿಲೆ ಕೊರಳನು ಹಿಚಿಕ್ಯಾರೆ
ಸಮಗ್ರ ಬದುಕಿನ ಸುರ ಸಂಗೀತದ ತಂತು ತಂತುಗಳ ತಿರಿಚ್ಯಾರೆ ||೪||

ಬಯಲು ಆಲಯದ ಹಿಡಿಯದ ಲೀಲೆಯ ಗೂಡುಗಳಲಿ ಹಿಡಿದಿಟ್ಟಾರೆ
ಆಕಾರಿಲ್ಲದ ಅಗಮ್ಯ ಗೂಢಕೆ ತೋಚಿದ ಆಕೃತಿ ಕೊಟ್ಟಾರೆ ||೫||

ಹಾಲೂ ಇಲ್ಲಾ ಬಟ್ಟಲು ಇಲ್ಲಾ ಗೊಟಕ್ಕು ಪೂಜೆಯ ಮಾಡ್ಯಾರೆ
ವೇಷ ಮೋಸಗಳ ಕಳ್ಳ ಬಸಿರುಗಳು ಉಬ್ಬಿದ ಅಬ್ಬರ ಮೆರೆಸ್ಯಾರೆ ||೬||

ಝಣ ಝಣ ರೊಕ್ಕದ ಗಂಟೆ ಭೇರಿಗಳ ನಾದದ ಕೇಳುವ ಧರ್ಮಗಳು
ಹಸಿದ ಕೂಸುಗಳ ನೊಂದ ಜೀವಿಗಳ ಕೂಗು ಕೇಳದಾ ಕಿವುಡುಗಳು ||೭||

ಬಣ್ಣ ಬಟ್ಟೆಗಳು ಮಹಲು ಮೆರಗುಗಳು ಮಾತ್ರ ಕಾಣುವವು ಅವುಗಳಿಗೆ
ಹರಕು ಬಟ್ಟೆಗಳು ದುಡಿವ ರಟ್ಟೆಗಳು ಕಾಣದ ಕುರುಡಿದೆ ಅವುಗಳಿಗೆ ||೮||

***

ನಾಮಾ ವಿಭೂತಿಗಳಲ್ಲಿ ಇರುವುದೇ
ಜನಿವಾರ ಜುಟ್ಟುಗಳಲಿದೆಯೇ?
ಗುಡಿಗೋಪುರದಲಿ ಬಸದಿಯಲಿರುವುದೆ
ಮಸೀದಿ ಗೋಡೆಗಳೊಳಗಿದೆಯೇ? ||೯||

ಗುಡಿಗಳ ಒಳಗಿನ ಕಲ್ಲು ಲೋಹಗಳ
ವಿಧ ವಿಧ ವಿಗ್ರಹಗಳಲಿದೆಯೇ?
ನಾಮ ಪಠಣದಲಿ ಜಪಮಾಲೆಗಳಲಿ
ಯಜ್ಞ ಯಾಗಗಳಲಡಗಿದೆಯೇ? ||೧೦||

ಮಡಿಮೈಲಿಗೆಯಲಿ ವ್ರತನೇಮಗಳಲಿ
ಮೂಡ ಭಕ್ತಿಯಲಿ ಕುಳಿತಿದೆಯೇ?
ಊಹಾ ಮೃಗಜಲ ಪುರಾಣ ಕತೆಗಳ
ಶಾಸ್ತ್ರಗಳಡವಿಗಳೊಳಗಿದೆಯೇ? ||೧೧||

ಮಠಗಳ ಸಿಂಹಾಸನಗಳ ಮೇಲೆ
ಛತ್ರ ಚವರಿಗಳ ತಂಪಿನಲಿ
ಪಲ್ಲಕ್ಕಿಗಳಲಿ ಅಟ್ಟಹಾಸದಲಿ
ಮೆರೆಯುತಲಿದೆಯೇ ಸೊಂಪಿನಲಿ? ||೧೨||

****

ಎಲ್ಲಿದೆ ಧರ್ಮಾ ಯಾವುದು ಧರ್ಮಾ
ಏನದು ಧರ್ಮಾ ತೋರಿಸಿರೊ
ಬೆಳಕನು ಹರಡಲು ಹುಟ್ಟಿದ ಧರ್ಮವು
ಕತ್ತಲೆಯನೆ ಹಬ್ಬಿಸದಿರಲಿ ||೧೩||

ಜ್ಞಾನ ದೀವಿಗೆಯು ಮೌಢ್ಯ ಕಂದಕದಿ
ಉಸಿರು ಕಟ್ಟದೆಯೆ ಬದುಕಿರಲಿ
ಮಾನವರೆಲ್ಲರ ಕೂಡಿಸುವ ಬದಲು
ಭೇದಿಸಿ ಕೊಲ್ಲದ ಹಾಗಿರಲಿ
ಮಾನವತೆಯ ಆ ಮೂಲ ಬೇರಿನಲಿ
ತನ್ನಯ ಸಾರವ ಹೀರಿರಲಿ ||೧೪||
********

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...