Home / ಕವನ / ಕವಿತೆ / ಎಲ್ಲಿದೆ ಧರ್ಮ

ಎಲ್ಲಿದೆ ಧರ್ಮ

ಧರ್ಮಾ ಧರ್ಮಾ ಅಂತಾರೋ ಎಲ್ಲಿದೆ ಧರ್ಮಾ ತೋರಿಸರೋ ||ಪ||
ನಮ್ಮದು ಧರ್ಮಾ ನಿಮ್ಮದು ಧರ್ಮಾ ಅವರದು ಧರ್ಮಾ ಅಂತಾರೆ
ಜನಗಳ ನಡುವೆ ಗೋಡೆಗಳೆಬ್ಬಿಸಿ ಆಗಸ ಕಾಣದೆ ನಿಂತಾರೆ ||೧||

ಕೊಂಬಿ ರೆಂಬಿಗಳ ಜೋತು ಬಿದ್ದು ಅವುಗಳೆ ಮರ ಮರ ಅಂತಾರೆ
ಬೊಡ್ಡೆಗೆ ಕೊಡಲಿ ಹಾಕುತಲಿದ್ದು ಕೊಂಬೆ ಚಿಗುರಿದವು ಅಂತಾರೆ ||೨||

ನೆಲದಲಿ ಹುಟ್ಟಿದ ಗಿಡಗಳ ಕಿತ್ತುತ ಅಂತರ ಬೆಂತರ ಬೆಳೆಸ್ಯಾರೆ
ಮಣ್ಣೂ ನೀರೂ ತುಳಿದೂ ಹಳಿದೂ ರೊಕ್ಕದಿ ಗಿಡಗಳ ಇಳಿಸ್ಯಾರೆ ||೩||

ಜೀವನ ಮೂಲದಿ ಹೊಮ್ಮಿದ ನಾದದ ಕೋಗಿಲೆ ಕೊರಳನು ಹಿಚಿಕ್ಯಾರೆ
ಸಮಗ್ರ ಬದುಕಿನ ಸುರ ಸಂಗೀತದ ತಂತು ತಂತುಗಳ ತಿರಿಚ್ಯಾರೆ ||೪||

ಬಯಲು ಆಲಯದ ಹಿಡಿಯದ ಲೀಲೆಯ ಗೂಡುಗಳಲಿ ಹಿಡಿದಿಟ್ಟಾರೆ
ಆಕಾರಿಲ್ಲದ ಅಗಮ್ಯ ಗೂಢಕೆ ತೋಚಿದ ಆಕೃತಿ ಕೊಟ್ಟಾರೆ ||೫||

ಹಾಲೂ ಇಲ್ಲಾ ಬಟ್ಟಲು ಇಲ್ಲಾ ಗೊಟಕ್ಕು ಪೂಜೆಯ ಮಾಡ್ಯಾರೆ
ವೇಷ ಮೋಸಗಳ ಕಳ್ಳ ಬಸಿರುಗಳು ಉಬ್ಬಿದ ಅಬ್ಬರ ಮೆರೆಸ್ಯಾರೆ ||೬||

ಝಣ ಝಣ ರೊಕ್ಕದ ಗಂಟೆ ಭೇರಿಗಳ ನಾದದ ಕೇಳುವ ಧರ್ಮಗಳು
ಹಸಿದ ಕೂಸುಗಳ ನೊಂದ ಜೀವಿಗಳ ಕೂಗು ಕೇಳದಾ ಕಿವುಡುಗಳು ||೭||

ಬಣ್ಣ ಬಟ್ಟೆಗಳು ಮಹಲು ಮೆರಗುಗಳು ಮಾತ್ರ ಕಾಣುವವು ಅವುಗಳಿಗೆ
ಹರಕು ಬಟ್ಟೆಗಳು ದುಡಿವ ರಟ್ಟೆಗಳು ಕಾಣದ ಕುರುಡಿದೆ ಅವುಗಳಿಗೆ ||೮||

***

ನಾಮಾ ವಿಭೂತಿಗಳಲ್ಲಿ ಇರುವುದೇ
ಜನಿವಾರ ಜುಟ್ಟುಗಳಲಿದೆಯೇ?
ಗುಡಿಗೋಪುರದಲಿ ಬಸದಿಯಲಿರುವುದೆ
ಮಸೀದಿ ಗೋಡೆಗಳೊಳಗಿದೆಯೇ? ||೯||

ಗುಡಿಗಳ ಒಳಗಿನ ಕಲ್ಲು ಲೋಹಗಳ
ವಿಧ ವಿಧ ವಿಗ್ರಹಗಳಲಿದೆಯೇ?
ನಾಮ ಪಠಣದಲಿ ಜಪಮಾಲೆಗಳಲಿ
ಯಜ್ಞ ಯಾಗಗಳಲಡಗಿದೆಯೇ? ||೧೦||

ಮಡಿಮೈಲಿಗೆಯಲಿ ವ್ರತನೇಮಗಳಲಿ
ಮೂಡ ಭಕ್ತಿಯಲಿ ಕುಳಿತಿದೆಯೇ?
ಊಹಾ ಮೃಗಜಲ ಪುರಾಣ ಕತೆಗಳ
ಶಾಸ್ತ್ರಗಳಡವಿಗಳೊಳಗಿದೆಯೇ? ||೧೧||

ಮಠಗಳ ಸಿಂಹಾಸನಗಳ ಮೇಲೆ
ಛತ್ರ ಚವರಿಗಳ ತಂಪಿನಲಿ
ಪಲ್ಲಕ್ಕಿಗಳಲಿ ಅಟ್ಟಹಾಸದಲಿ
ಮೆರೆಯುತಲಿದೆಯೇ ಸೊಂಪಿನಲಿ? ||೧೨||

****

ಎಲ್ಲಿದೆ ಧರ್ಮಾ ಯಾವುದು ಧರ್ಮಾ
ಏನದು ಧರ್ಮಾ ತೋರಿಸಿರೊ
ಬೆಳಕನು ಹರಡಲು ಹುಟ್ಟಿದ ಧರ್ಮವು
ಕತ್ತಲೆಯನೆ ಹಬ್ಬಿಸದಿರಲಿ ||೧೩||

ಜ್ಞಾನ ದೀವಿಗೆಯು ಮೌಢ್ಯ ಕಂದಕದಿ
ಉಸಿರು ಕಟ್ಟದೆಯೆ ಬದುಕಿರಲಿ
ಮಾನವರೆಲ್ಲರ ಕೂಡಿಸುವ ಬದಲು
ಭೇದಿಸಿ ಕೊಲ್ಲದ ಹಾಗಿರಲಿ
ಮಾನವತೆಯ ಆ ಮೂಲ ಬೇರಿನಲಿ
ತನ್ನಯ ಸಾರವ ಹೀರಿರಲಿ ||೧೪||
********

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...