Home / ಕವನ / ಕವಿತೆ / ತೊಟ್ಟು ಕಳಚಿತು.

ತೊಟ್ಟು ಕಳಚಿತು.

ಹಣ್ಣೊಂದು ಇತ್ತು ಮರದಿಂದ ಬಿತ್ತು
ಮಣ್ಣಿನಲಿ ಬಿದ್ದು ಹೋಯ್ತು
ಸಣ್ಣಾಗಿ ಸೋತು ಸುದ್ದಾಗಿ ಮತ್ತೆ
ಕಣ್ಣಿನಲಿ ನೀರು ಬಂತು

ಬೆಳೆದಂತೆ ಕಾಯಿ ತಾ ಭಾರವಾಯ್ತು
ಬೆಳೆದದ್ದೆ ಮುಳುವದಾಯ್ತು
ತಳೆದೀತೆ ಭಾರ ತೆಳ್ಳನೆಯ ತುಂಬು
ಕಳವಳದಿ ತಡೆಯದಾಯ್ತು

ತೊಯ್ದಾಡಿ ತೂಗಿ ಬಯ್ದಾಡಿ ವಿಧಿಯ
ಸುಯ್ದಾಡಿ ಹಗಲುರಾತ್ರಿ
ಕೊಯ್ದಂತೆ ತೊಟ್ಟು, ತಾಯ ಮರ ಬಿಟ್ಟು
ಹೊಯ್ದಾಡಿ ಬಿತ್ತು ಖಾತ್ರಿ

ಅಯ್ಯೋ ಎಂದು ಗೋಳಾಡುತಿತ್ತು
ಚುಯ್ಯೆಂದು ರಸವ ಸೋರಿ
ಬಯ್ಯುವುದು ಯಾರ ತನ್ನನ್ನೆ ತಾನು
ಮೈಯಾರ ನೆಲವ ಸಾರಿ

ದಿನ ತುಂಬಿದಾಗ ತುಂಬಿದ್ದ ಬಾಳು
ಬೇರ್ಪಡುವ ರೀತಿ ಬೇರೆ
ತನು ಮನವು ಬಲಿತು ಹಣ್ಣಾಗಿ ಕೊನೆಗೆ
ಮರ ಬಿಡುವ ರೀತಿ ಬೇರೆ

ಹೊಳೆದಿತ್ತು ತಥ್ಯ ಬಿದ್ದಾಗ ನೆಲಕೆ
ಸದ್ದಾಯ್ತು ಒಳಗೆ ಹೊರಗೆ
ಬಿದ್ದಾಗಲೊಡನೆ ಮರದಿಂದ ಕೆಳಗೆ
ತೆರೆದಿತ್ತು ಮೇಲೆ ಕರೆಗೆ

ವೃಕ್ಷ ಫಲ ಬಂಧ ಶಾಶ್ವತವು ಅಲ್ಲ
ತಕ್ಷಣಕೆ ಬಿಡುವುದಲ್ಲ
ಲಕ್ಷ ವರುಷಗಳ ಸ್ನೇಹವಿದ್ದರೂ
ಲಕ್ಷಣವು ಒಂದೆ ಅಲ್ಲ

ಸೃಷ್ಟಿಯಲಿ ಸಹಜ ಫಲಮರವ ಬಿಟ್ಟು
ಕಷ್ಟದಲಿ ಬೇರೆಯಾಗಿ
ಸೃಷ್ಟಿಸಲೆ ಬೇಕು ಹೊಸಫಲವ ಮತ್ತೆ
ಇಷ್ಟಾನಿಷ್ಟವಾಗಿ
***

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...