Home / ಕವನ / ಕವಿತೆ / ಭಿನ್ನ ಭೇದವ ಮಾಡಬ್ಯಾಡಿರಿ (ಬೀದಿ ನಾಟಕದ ಹಾಡು)

ಭಿನ್ನ ಭೇದವ ಮಾಡಬ್ಯಾಡಿರಿ (ಬೀದಿ ನಾಟಕದ ಹಾಡು)

ಹಾಡು – ೧

ಹೇಳಿರಣ್ಣ ಹೇಳಿರೊ
ಬುದ್ಧಿವಂತ ಜನಗಳೆ
ಕೇಳಿರಣ್ಣ ಕೇಳಿರೊ
ಮನಸುಳ್ಳ ಜನಗಳೆ ||

ಹೇಳಿರಣ್ಣ ಹೇಳಿರೊ
ಹೆಣ್ಣೆಚ್ಚೊ ಗಂಡಚ್ಚೊ ||

ಹೆಣ್ಣೆಚ್ಚು ಎಂಬುವರು
ಕಾರಣವ ತಿಳಿಯಿರೊ
ಗಂಡೆಚ್ಚು ಎಂಬುವರು
ಕಾರಣವ ಹೇಳಿರೊ ||

ಮಗುವಾಗಿ ಹುಟ್ಟಿದ್ದು
ಹೆಣ್ಣೇಗೆ ಆಯಿತು ?
ಮಗುವಾಗಿ ಹುಟ್ಟಿದ್ದು
ಗಂಡ್ಹೇಗೆ ಆಯಿತು? ||

ಹೆಣ್ಣೋಗಿ ಗಂಡ್ಹೋಗಿ
ಮಗುವಾಗೋದ್ಯಾವಾಗ
ಮನುಷ್ಯನ ಮನಸೋಗಿ
ಮಗು ಮನಸ್ಯಾವಾಗ ||

ಹಾಡು – ೨

ಕೇಳ್ರಯ್ಯ ಗಂಡುಸ್ರೆ
ಕೇಳ್ರಯ್ಯ ||

ಹೆಣ್ಣಿನ ಮಾತ್ವವ
ಕೇಳ್ರಯ್ಯ ||

ನಿಮಿಗೆ ಜನ್ಮ ಕೊಟ್ಟವಳು | ಹೆಣ್ಣಲ್ಲವೆ
ಹೆತ್ತು ಹೊತ್ತು ಸಾಕಿದವಳು | ಹೆಣ್ಣಲ್ಲವೆ
ಎದೆ ಹಾಲು ನಿಡಿದವಳು | ಹೆಣ್ಣಲ್ಲವೆ
ಕೈತುತ್ತು ತಿನಿಸಿದವಳು | ಹೆಣ್ಣಲ್ಲವೆ
ತಾಯಾಗಿ ಮರುಗಿದವಳು | ಹೆಣ್ಣಲ್ಲವೆ
ಅಕ್ಕ ತಂಗಿಯಾದವಳು | ಹೆಣ್ಣಲ್ಲವೆ
ಅತ್ತೆ ಸೊಸೆಯಾದವಳು | ಹೆಣ್ಣಲ್ಲವೆ
ಜೀವನ ಸಂಗಾತಿಯಾದವಳು | ಹೆಣ್ಣಲ್ಲವೆ
ಅತ್ತು ಮರುಗುದಿವಳು | ಹೆಣ್ಣಲ್ಲವೆ
ಮಮತೆಯ ಮಡಿಲಾದವಳು | ಹೆಣ್ಣಲ್ಲವೆ
ಕೇಳ್ರಯ್ಯ ಗಂಡುಸ್ರೆ
ಕೇಳ್ರಯ್ಯ ||
ಹೆಣ್ಣಿನ ಮಾತ್ವವ
ಕೇಳ್ರಯ್ಯ ||

ಹಾಡು – ೩

ಮಕ್ಕಳು ನಮ್ಮ ಮಕ್ಕಳಣ್ಣ
ಗಂಡು ಹೆಣ್ಣು ಅಂತೆಲ್ಲ
ಭಿನ್ನ ಭೇದ ತರವಲ್ಲಣ್ಣ ||

ಗಂಡಾಗಿ ಹೆಚ್ಚೇನು
ಹೆಣ್ಣಾಗಿ ಕೀಳೇನು
ನಮ್ಮ ಮನದ ವಿಕಾರವು
ಆಗುವುದೆಂದು ನಾಶವು ||

ಹೆಣ್ಣೆಂದು ಅಬಲೆಯಳು
ಎಂಬುದೇ ಅಜ್ಞಾನ
ಏನೆಲ್ಲ ಸಾಧಿಸಲುಳು
ಬೇಕು ಸಮಾನತೆಯು ||

ಹಾಡು – ೪

ಹೆಣ್ಣೆಂಬುದು ಕೇಳಣ್ಣ
ಗಂಡು ಮಾಡಿದ ರಾಜಕೀಯ ||

ವಿದ್ಯೆ ಕೊಡಲಿಲ್ಲ
ಬುದ್ಧಿ ಹೇಳಿಲಿಲ್ಲ
ಅವಳ ಬುದ್ಧಿಗೆ ಮೊದಲು
ಬೆಲೆಯ ಕೊಡಲಿಲ್ಲ ||

ಮಾತಿಗೆ ಮುನ್ನ ಬಾಯಿ ಮುಚ್ಚಿಸಿ
ತಲೆ ತುಂಬಾ ಚಿಂತೆ ಹೆಚ್ಚಿಸಿ
ಬಲವಿದ್ದೂ ಹೀನಳ ಮಾಡಿ
ಸುತ್ತಲು ತೊಡಿಸಿ ಬೇಡಿ ||

ಮೊದಲ ಸ್ಥಾನಕೆ ಬರದಂತೆ
ಸದಾ ಮಾಡುತ ಕುತಂತ್ರ
ಜಗದಲೆಲ್ಲ ಎರಡನೆ ದರ್ಜೆಗೆ
ಬಾಳುವಂತಾಯಿತೆ ಹೆಣ್ಣಿಗೆ ||

ಹಾಡು – ೫

ಭಿನ್ನ ಭೇದವ ಮಾಡಬ್ಯಾಡಿರಿ
ಗಂಡೆಚ್ಚೊ ಹೆಣ್ಣೆಚ್ಚೊ ಅನ್ನಬ್ಯಾಡಿರಿ ||

ಗಂಡಿಗೆ ಹೆಣ್ಣು ಹೆಣ್ಣಿಗೆ ಗಂಡು
ಬಿಟ್ಟಿರದ ಬಂಧಾನ ನಡಕಂಡು
ಬಂದೈತೆ ಅನಂತ ರಗಳೆ ಯಾಕಂತ
ಚನ್ನಾಗಿ ತಿಳಿ ನೀನು ಮತಿವಂತ ||

ರೂಪಕೆ ಸೋಲಬ್ಯಾಡ
ಗುಣವಾ ಮರಿಬ್ಯಾಡ
ಹೆಣ್ಣು ನಿನ್ನ ಸುಖದಾ
ಕಣ್ಣಾ ಗೊಂಬೇನು ||

ದುಡ್ಡೀನ ಕಾಲಕೆ ದೊಡ್ಡವನಾಗಿ
ಬಡ್ಡಿಯ ಕಾಲಕೆ ಗಿಡ್ಡವನಾಗಿ
ಹೆಣ್ಣಿನ ಪ್ರೀತಿಯೆ ಚಿಗುರಾಗಿ
ಬೆಳೆಯುವೆ ಹೆಮ್ಮರವಾಗಿ ||

*****

 

Tagged:

Leave a Reply

Your email address will not be published. Required fields are marked *

ನಾನು ಕೂಡಾ ಕೊಂಚ ಕೊಂಚವಾಗಿ ಸಾಯುತ್ತಿದ್ದೇನೆ ಎಂದು ಆ ಹಣ್ಣು ಮುದುಕನಿಗೆ ಅನಿಸತೊಡಗಿದ್ದೇ ಅವನ ಕೆಲವು ಗೆಳೆಯರು ಸತ್ತಾಗಲೇ. “ತೇಹಿನೋ ದಿವಸಾ ಗತಾಃ”. ಅಂತಹ ಮಧುರ ನೆನಪುಗಳ ದಿನಗಳು ಕಳೆದು ಹೋಗಿ ಎಷ್ಟೋ ದಶಮಾನಗಳು ಅವನೆದುರು ಜೀವಂತವಾಗಿ ಕರಗಿ ಹೋಗಿವೆ. ಅವನು ತನ್ನನ...

೧೭೩೪ರಲ್ಲಿ ಚಾಮರಾಜ ಒಡೆಯರನ್ನು ಹಿಡಿದು ಕಬ್ಬಾಳ ದುರ್ಗಕ್ಕೆ ಕಳುಹಿಸಿ ರಾಜದ್ರೋಹವನ್ನು ಮಾಡಿದವರು ಇಬ್ಬರು ಜ್ಞಾತಿಗಳು-ದಳವಾಯಿ ದೇವರಾಜಯ್ಯ ಮತ್ತು ಸರ್ವಾಧಿಕಾರಿ ನಂಜರಾಜಯ್ಯ. ಬಾಲಕರಾದ ಇಮ್ಮಡಿ ಕೃಷ್ಣರಾಜ ಒಡೆಯರನ್ನು ಪಟ್ಟದಲ್ಲಿ ಕೂರಿಸಿದ ಮೇಲೆ ಈರ್ವರೂ ಪ್ರಧಾನಿಯ ಕೆಲಸದಲ್ಲಿದ್ದ...

ಅಮ್ಮಾ! ಹಾಲಿಗೆ ತೊಡಿ ನೀರ ಕಮ್ಮಿ ಹಾಕೇ, ನೀರ ರಾಶಿ ಕುಡಿತಿದೇ ನಿಮ್ಮೆಮ್ಮೆ ಅಂತೇ ಡೇರಿ ಸಾತಕ್ಕ ದಿನಾ ಹೀಂಯಾಳಿಸ್ತಿದ. ಇಲ್ಲದಿರೆ ನಾ ಹಾಲ ಕುಡುಕೆ ಹೋಗುಲಾ ನೋಡ್ ಅಳುಮುಂಜಿ ಮುಖದಲ್ಲಿ ಪರಿಮಳ ಕೂಗುತ್ತಾ ಬರುವುದ ಕಂಡ ಭವಾನಿ, ಸಾಕ್ ಸುಮ್ನೀರೇ! ನಿನ್ನ ನೋಡೆ ಹೇಳ್ತಿದ ಅದ. ಬಾಯ್ಮು...

ದೊಡ್ಡ ಕೃಷ್ಣರಾಜ ಒಡೆಯರಿಗೆ ಮಕ್ಕಳಿರಲಿಲ್ಲ. ಅವರು ತೀರಿಹೋದ ತರುವಾಯ ಅವರ ಹಿರಿಯರಸಿ ದೇವಾಜಮ್ಮಣ್ಣಿಯವರು ಮುಖ್ಯಾಧಿಕಾರಿಗಳಾಗಿದ್ದ ದಳವಾಯಿ ದೇವರಾಜಯ್ಯ, ಸರ್ವಾಧಿಕಾರಿ ನಂಜರಾಜಯ್ಯಂದಿರನ್ನು ಕರೆಯಿಸಿ “ನಮ್ಮ ಜ್ಞಾತಿಯಾದ ಅಂಕನಹಳ್ಳಿ ದೇವರಾಜೇ ಅರಸಿನವರ ಪುತ್ರ ೨೮ ವರ್ಷ ವಯಸ...

ಚಿಕ್ಕದೇವರಾಜ ಒಡೆಯರ ತರುವಾಯ ಅವರ ಪುತ್ರ ಕಂಠೀರವ ನರಸರಾಜರೆಂಬುವರು ಪಟ್ಟವನ್ನೇರಿದರು. ಇವರು ಜನ್ಮತಃ ಮೂಕರಾಗಿದ್ದರು. ತಂದೆಗೆ ಆಪ್ತನಾಗಿ ಮಂತ್ರಿ ಪದವಿಯಲ್ಲಿದ್ದ ತಿರುಮಲಾರ್ಯನು ಇರುವವರೆಗೂ ಆಡಳಿತವು ಭದ್ರವಾಗಿತ್ತು. ಆತನು ತೀರಿಹೋದ ಮೇಲೆ ಆಡಳಿತದಲ್ಲಿ ಬಿಗಿತಪ್ಪಿತು. ಮೂಕರಸರು ...

ಬೆಳಿಗ್ಗೆ ಎಂದಿಗಿಂತ ಬೇಗ ಎಚ್ಚರವಾಯ್ತು ಆಕೆಗೆ. ಇವತ್ತು ಎಲೆಕ್ಷನ್ ಟ್ರೇನಿಂಗು. ಹತ್ತು ಗಂಟೆಗೆಲ್ಲಾ ಅಲ್ಲಿರಬೇಕು. ನಿನ್ನೆಯ ಎಲ್ಲ ಪಾತ್ರೆಗಳ ಸಿಂಕನಲ್ಲಿ ಎತ್ತಿ ಹಾಕಿ ನೀರು ಬಿಟ್ಟಳು. ಪಾತ್ರಗಳ ಜೋರು ಸದ್ದು ಆಕೆಯ ಕೈ ಬಳೆಯ ಜೊತೆ ಸ್ಪರ್ಧೆಗಿಳಿದಂತೆ ಠಂಠಂ ಕಿಣಿಕಿಣಿ ಕೇಳಿಬರುತ್...