Home / ಕವನ / ಕವಿತೆ / ಗಡಿಗಳ ಗೆರೆ ಕೊರೆಯಲಾರೆನು

ಗಡಿಗಳ ಗೆರೆ ಕೊರೆಯಲಾರೆನು

ಎಷ್ಟೊಂದು ನಕ್ಷತ್ರಗಳು
ಅಡ್ಡ ಬಂದವು ಸೂರ್ಯನ ಬೆಳಕಿಗೆ
ಕತ್ತಲೆಯನ್ನು ಕತ್ತರಿಸುವ
ಕೋಲ್ ಮಿಂಚನು ತುಂಡರಿಸಬಹುದೆ?
ಎಷ್ಟೊಂದು ಶಬ್ದ ಕಂಪನಗಳಾಗಿವೆ
ಕತ್ತಲೊಡಗಿನ ಭೂಮಿಯ ಗರ್ಭದಲಿ
ಅಂತರಂಗದ ಕತ್ತಲೆಗೆ ಓಡಿಸಲು
ನಿಶ್ಯಬ್ದದೊಳಗಣ ಶಬ್ದ ಚಿತ್ತಾರ
ಶಬ್ದವಿಲ್ಲ ಬೇರು ಬಿಡಲು ಬ್ರಹ್ಮವೃಕ್ಷಕೆ

ಬದುಕು ಧಾನಸ್ಥ ತಪಸ್ಸಿನ ಮಾದರಿ
ಅಂತಃಕರಣ ತುಂಬಿ ಕಣಕಣದಲಿ
ತನ್ನಾಚೆ ದಿಟ್ಟಿಸುವ ಅಕ್ಷಿಪಟಲದ ನೋಟ
ಕಾಲಮಾನದಾಚೆಗೂ ನುಡಿವ ಸಾಕ್ಷಿಭೂತ
ಅಂತರಂಗ ಅರಳಿಸುವ ಮಹಾಗುರು
ಅರಿವಿನ ಜೋಳಿಗೆಯಲಿ ಹಸಿವಿನ ಹಪಹಪಿ
ಅಕ್ಷರಗಳು ಬಿತ್ತರಿಸುವ ವಿಚಾರವಾದದ ಲಹರಿ
ಸಮತಾವಾದದ ಬೆಳಕಿನ ಕಿಂಡಿ.

ಚೆಲ್ಲಾಪಿಲ್ಲಿಯಾದ ಅಕ್ಷರಗಳಿಗೆ ಪದಗಳ ಹಂಗಿಲ್ಲ
ನಿನ್ನ ಬಣ್ಣಿಸುವ ಮಾತಿಗೂ ಹೊಳಪಿಲ್ಲ
ದಾರಿ ಕ್ರಮಿಸಿದೆ ಬಹುದೂರ ದೂರ..
ಬಾಳ ಬಯಲ ಅಂಗಳದಲಿ ನಿಂತು
ಎದೆಯ ಹಣತೆಯ ಮಂದ ಬೆಳಕಿನಲ್ಲಿ
ಕ್ರಮಿಸಿದ ಸುದೀರ್ಘ ಹಾದಿಯ ನೋಟ
ಅಂಕು ಡೊಂಕುಗಳ ಸಿಂಹಾವಲೋಕನ

ಕನ್ನಡದ ಕಂಪು ರಷ್ಯಾದವರೆಗೂ ಹರಡಿ
ರಾಷ್ಟ್ರಗಳ ಸ್ನೇಹ ಸೇತುಗಳ ಬಿಗಿ ಬಂಧ
ಸೋವಿಯತ್ ಲ್ಯಾಂಡಿನ ಗೌರವದ ಧಿರಿಸು
ತಾಯ್ನಾಡಿನ ನೆಹರು ಪ್ರಶಸ್ತಿಗಳ ಮುಡಿಗೇರಿಸಿ
ಅಸಂಖ್ಯಾತ ಶಿಷ್ಯ ಬಳಗದ ಗುರುವಾಗಿ
ಧಾರವಾಡದ ಕರ್ಮಭೂಮಿಯ ಕಿಂಕರವಾಗಿ
ವಟುವೃಕ್ಷದ ಬೇರು ಎಷ್ಟೊಂದು ಆಳ-ನೀರಾಳ

ದೀಪದಿಂದ ದೀಪ ಹಚ್ಚುವ ನೀಲಾಂಜನ
ಬೆಳಕು ಚೆಲ್ಲಿದೆ ಬುದ್ಧಪೂರ್ಣಿಮೆಯ ಬುದ್ಧಣ್ಣ
ಸುತ್ತ ಹರಡಿದೆ ನೋಡು ಪ್ರಚಂಡ ಪ್ರಭೆ
ಬೆಳಕೆಂದರೆ ದೀಪ, ದೀಪವೆಂದರೆ
ಹಿಂಗಮಿರೆಯೆಂಬ ಬೆಳಕಿನ ಸೆಳಕು
ಹಣತೆ, ಕಂದೀಲು, ಬಲ್ಬು, ದೀಪಗಳು
ಸೂರ್ಯ ಬೆಳಕಿಗೆಲ್ಲಿಯ ಸಾಟಿ ಹೇಳು?

ಉದಯರಾಗದಿಂದ ಉದಯಿಸಿದ ಸೂರ್ಯ
ಭೂಮಿಗೀತದಿಂದ ಬೈಲೋರಷ್ಯದವರೆಗೆ
ಹೊಸ ದಿಕ್ಕುಗಳ ಹುಡುಕಿದ ಸರದಾರನಿಗೆ
ದೇಶ, ಗಡಿ, ಭಾಷೆಗಳ ಗೆರೆ ಕೊರೆಯಲಾರೆನು.
ಹರಿವ ನದಿ, ಸುಳಿವ ಗಾಳಿ, ಸುಗಂಧಗಳಿಗೆ
ಬಂಧನದ ಕಟ್ಟುಗಳನು ಬಿಗಿಯಲಾರೆನು
ಸಮತಾವಾದದ ಸಂತ ಸಾಧಕನಿಗೆ
ಭಾಷೆ, ದೇಶ, ಗಡಿಗಳ ಗೆರೆ ಕೊರೆಯಲಾರೆನು
*****
(ಬುದ್ಧಣ್ಣ ಹಿಂಗಮಿರೆಯವರ ಅಭಿನಂದನ ಗ್ರಂಥಕ್ಕಾಗಿ ಬರೆದ ಕವಿತೆ)

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...