Home / ಕಥೆ / ಕಿರು ಕಥೆ / ಎಂಜಲು ಬೋರೆ

ಎಂಜಲು ಬೋರೆ

ಶ್ರೀ ರಾಮಚಂದ್ರ ದೇವರು ಶಬರಿಯು ಕೊಟ್ಟ ಎಂಜಲು ಬೋರೆಯನ್ನು ತಿಂದ ಸುದ್ದಿಯು ಆ ಅರಣ್ಯ ಪ್ರದೇಶದಲ್ಲಿ ಕಾಳಿಚ್ಚಿನಂತೆ ಹಬ್ಬಿತು. ಕೇಳುವದೇನು? ಬುಟ್ಟಿ ತುಂಬ ಎಂಜಲು ಬೋರೆಯನ್ನು ಹೊತ್ತು ಬೇಡತಿಯರ ಹಿಂಡೇ ಅವರ ಪರ್ಣಶಾಲೆಗೆ ಬಂದು ಆ ಹಣ್ಣನ್ನು ತಿನ್ನಲು ಪ್ರಾರ್ಥಿಸಿ ಕೊಂಡಿತು. “ಶಬರಿಯು ಕೊಟ್ಟಿದ್ದನ್ನು ಮಾತ್ರ ತಿನ್ನಬೇಕೇ? ನಾವೇನು ಪಾಪಿಗಳೇ?” ಎಂದು ಕೈಜೋಡಿಸಿ ಬೇಡಿಕೊಂಡರು. ರಾಮಚಂದ್ರನಿಗೆ ಏನು ಮಾಡಬೇಕೆಂಬುದೇ ತಿಳಿಯಲಿಲ್ಲ. ಹೇಗಾದರೂ ಅವರನ್ನು ಕಳಿಸುವ ಯತ್ನ ಮಾಡಿದನು.

ಆದರೆ ಬೇಡತಿಯರು ಬಿಡುತ್ತಾರೆಯೇ? “ನೀವು ನಮ್ಮ ಕಾಣಿಕೆಯನ್ನು ಸ್ವೀಕರಿಸದಿದ್ದರೆ ಇಲ್ಲೇ ಸಾಲು ಹಿಡಿದು ಕುಳಿತು ನಿಮ್ಮ ಹೆಸರನ್ನು ಭಜಿಸುತ್ತ ಕಾಲಕಳೆಯುವೆವು” ಎಂದರು.

ಬೋರೆಗಳನ್ನು ಪರ್ಣಶಾಲೆಯೊಳಗೆ ಇಟ್ಟು ಹೋಗುವಂತೆ ಸೀತಾ ಪತಿಯು ಸೂಚಿಸಿದನು.

ಒಬ್ಬೊಬ್ಬರ ಬುಟ್ಟಿಯಿಂದ ಒಂದೊಂದು ಬೋರೆಯನ್ನಾದರೂ ತಿನ್ನಲೇಬೇಕೆಂದು ಬೇಡತಿಯರು ಹಟ ಹಿಡಿದರು.

ಅವರ ಸತ್ಯಾಗ್ರಹಕ್ಕೆ ಸೋತು ದಶರಥ ತನಯನು ಒಂದೊಂದು ಬುಟ್ಟಿಯಿಂದ ಒಂದೊಂದು ಬೋರೆಯನ್ನು ತಿನ್ನಹತ್ತಿದನು.

ಅದನ್ನು ಕಂಡು ಸೀತಾದೇವಿಯು “ಬೇಡ” ಅಂದಳು. ಲಕ್ಷ್ಮಣನೂ ಅದೇ ಅಭಿಪ್ರಾಯ ವ್ಯಕ್ತಪಡಿಸಿದನು. ಆದರೆ ಭಕ್ತವತ್ಸಲನಾದ ರಾಮಚಂದ್ರನು ಕೇಳಲಿಲ್ಲ. ಎಲ್ಲ ಬುಟ್ಟಿಗಳಿಂದಲೂ ಒಂದೊಂದು ಎಂಜಲು ಬೋರೆಯನ್ನು ತಿಂದನು.

ಸಂಜೆಯಹೊತ್ತಿಗೆ ಶ್ರೀ ರಘುಪತಿಯ ಮುಖಕಮಲವು ತುರಿಸಹತ್ತಿತು.

“ನಾವು ಹೇಳಲಿಲ್ಲವೇ?” ಎಂದು ಸೀತಾದೇವಿಯು ಕೇಳಿದಳು.

ಅವುಗಳನ್ನು ತಿಂದುದರಿಂದಲೇ ಹೀಗೆ ತುರಿಸುತ್ತಿವೆಯೆಂದು ನಿಮ್ಮ ಅಭಿಪ್ರಾಯವೇ? ಛೇ! ಆತ್ಮಾರ್ಪಣೆಯ ಭಾವದಿಂದ ನಿರ್ಮಲ ಹೃದಯದ ಬೇಡತಿಯರು ಕೊಟ್ಟ ಹಣ್ಣಿನಿಂದ ಇಂಥ ಅನಿಷ್ಟವಾಗಲು ಸಾಧ್ಯವೇ ಇಲ್ಲ” ಅ೦ದನು ಜಾನಕೀ ವಲ್ಲಭನು.

ಮರುದಿನ ಆತನ ತುಟಿಗಳು ಬಾತು ಅವುಗಳಲ್ಲಿ ಬೊಕ್ಕೆಗಳು ಕಂಡು ಕೊಂಡವು.

ಗಿಡಮೂಲಿಕೆಯೊಂದನ್ನು ಅರೆಯುತ್ತ ಲಕ್ಷ್ಮಣನು ಹೇಳಿದನು “ಬೇಡತಿಯರ ಹೃದಯ ಎಷ್ಟೇ ನಿರ್ಮಲವಿದ್ದರೂ ಅವರ ಎಂಜಲು ಬೋರೆಯು ಮಾತ್ರ…. ಅಂಟುರೋಗವು ಹೃದಯ ನೈರ್ಮಲ್ಯಕ್ಕೆ ಹೆದರುತ್ತದೆಯೇ? ಭಾವನೆಯ ಜತೆಗೆ ಬುದ್ಧಿಯನ್ನೂ…. ”

ಸೀತಾ ಮಾತೆಯು ಈ ಪಾಠವನ್ನು ತನ್ನ ಪತಿದೇವನಿಗೆ ಇರುಳಿನಲ್ಲಿ ‘ಕಾಂತಾ ಸಮ್ಮಿತತಯಾ’ ತಿಳಿಸಿ ಹೇಳಿದಳು. ಅಂದಿನಿಂದ ಶ್ರೀ ರಾಮಚಂದ್ರ ದೇವರು ಭಕ್ತರ ಎಂಜಲು ಗಿಂಜಲು ತಿನ್ನಲಿಲ್ಲ.
*****

Tagged:

Leave a Reply

Your email address will not be published. Required fields are marked *

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...