ಶ್ರೀ ರಾಮಚಂದ್ರ ದೇವರು ಶಬರಿಯು ಕೊಟ್ಟ ಎಂಜಲು ಬೋರೆಯನ್ನು ತಿಂದ ಸುದ್ದಿಯು ಆ ಅರಣ್ಯ ಪ್ರದೇಶದಲ್ಲಿ ಕಾಳಿಚ್ಚಿನಂತೆ ಹಬ್ಬಿತು. ಕೇಳುವದೇನು? ಬುಟ್ಟಿ ತುಂಬ ಎಂಜಲು ಬೋರೆಯನ್ನು ಹೊತ್ತು ಬೇಡತಿಯರ ಹಿಂಡೇ ಅವರ ಪರ್ಣಶಾಲೆಗೆ ಬಂದು ಆ ಹಣ್ಣನ್ನು ತಿನ್ನಲು ಪ್ರಾರ್ಥಿಸಿ ಕೊಂಡಿತು. “ಶಬರಿಯು ಕೊಟ್ಟಿದ್ದನ್ನು ಮಾತ್ರ ತಿನ್ನಬೇಕೇ? ನಾವೇನು ಪಾಪಿಗಳೇ?” ಎಂದು ಕೈಜೋಡಿಸಿ ಬೇಡಿಕೊಂಡರು. ರಾಮಚಂದ್ರನಿಗೆ ಏನು ಮಾಡಬೇಕೆಂಬುದೇ ತಿಳಿಯಲಿಲ್ಲ. ಹೇಗಾದರೂ ಅವರನ್ನು ಕಳಿಸುವ ಯತ್ನ ಮಾಡಿದನು.
ಆದರೆ ಬೇಡತಿಯರು ಬಿಡುತ್ತಾರೆಯೇ? “ನೀವು ನಮ್ಮ ಕಾಣಿಕೆಯನ್ನು ಸ್ವೀಕರಿಸದಿದ್ದರೆ ಇಲ್ಲೇ ಸಾಲು ಹಿಡಿದು ಕುಳಿತು ನಿಮ್ಮ ಹೆಸರನ್ನು ಭಜಿಸುತ್ತ ಕಾಲಕಳೆಯುವೆವು” ಎಂದರು.
ಬೋರೆಗಳನ್ನು ಪರ್ಣಶಾಲೆಯೊಳಗೆ ಇಟ್ಟು ಹೋಗುವಂತೆ ಸೀತಾ ಪತಿಯು ಸೂಚಿಸಿದನು.
ಒಬ್ಬೊಬ್ಬರ ಬುಟ್ಟಿಯಿಂದ ಒಂದೊಂದು ಬೋರೆಯನ್ನಾದರೂ ತಿನ್ನಲೇಬೇಕೆಂದು ಬೇಡತಿಯರು ಹಟ ಹಿಡಿದರು.
ಅವರ ಸತ್ಯಾಗ್ರಹಕ್ಕೆ ಸೋತು ದಶರಥ ತನಯನು ಒಂದೊಂದು ಬುಟ್ಟಿಯಿಂದ ಒಂದೊಂದು ಬೋರೆಯನ್ನು ತಿನ್ನಹತ್ತಿದನು.
ಅದನ್ನು ಕಂಡು ಸೀತಾದೇವಿಯು “ಬೇಡ” ಅಂದಳು. ಲಕ್ಷ್ಮಣನೂ ಅದೇ ಅಭಿಪ್ರಾಯ ವ್ಯಕ್ತಪಡಿಸಿದನು. ಆದರೆ ಭಕ್ತವತ್ಸಲನಾದ ರಾಮಚಂದ್ರನು ಕೇಳಲಿಲ್ಲ. ಎಲ್ಲ ಬುಟ್ಟಿಗಳಿಂದಲೂ ಒಂದೊಂದು ಎಂಜಲು ಬೋರೆಯನ್ನು ತಿಂದನು.
ಸಂಜೆಯಹೊತ್ತಿಗೆ ಶ್ರೀ ರಘುಪತಿಯ ಮುಖಕಮಲವು ತುರಿಸಹತ್ತಿತು.
“ನಾವು ಹೇಳಲಿಲ್ಲವೇ?” ಎಂದು ಸೀತಾದೇವಿಯು ಕೇಳಿದಳು.
ಅವುಗಳನ್ನು ತಿಂದುದರಿಂದಲೇ ಹೀಗೆ ತುರಿಸುತ್ತಿವೆಯೆಂದು ನಿಮ್ಮ ಅಭಿಪ್ರಾಯವೇ? ಛೇ! ಆತ್ಮಾರ್ಪಣೆಯ ಭಾವದಿಂದ ನಿರ್ಮಲ ಹೃದಯದ ಬೇಡತಿಯರು ಕೊಟ್ಟ ಹಣ್ಣಿನಿಂದ ಇಂಥ ಅನಿಷ್ಟವಾಗಲು ಸಾಧ್ಯವೇ ಇಲ್ಲ” ಅ೦ದನು ಜಾನಕೀ ವಲ್ಲಭನು.
ಮರುದಿನ ಆತನ ತುಟಿಗಳು ಬಾತು ಅವುಗಳಲ್ಲಿ ಬೊಕ್ಕೆಗಳು ಕಂಡು ಕೊಂಡವು.
ಗಿಡಮೂಲಿಕೆಯೊಂದನ್ನು ಅರೆಯುತ್ತ ಲಕ್ಷ್ಮಣನು ಹೇಳಿದನು “ಬೇಡತಿಯರ ಹೃದಯ ಎಷ್ಟೇ ನಿರ್ಮಲವಿದ್ದರೂ ಅವರ ಎಂಜಲು ಬೋರೆಯು ಮಾತ್ರ…. ಅಂಟುರೋಗವು ಹೃದಯ ನೈರ್ಮಲ್ಯಕ್ಕೆ ಹೆದರುತ್ತದೆಯೇ? ಭಾವನೆಯ ಜತೆಗೆ ಬುದ್ಧಿಯನ್ನೂ…. ”
ಸೀತಾ ಮಾತೆಯು ಈ ಪಾಠವನ್ನು ತನ್ನ ಪತಿದೇವನಿಗೆ ಇರುಳಿನಲ್ಲಿ ‘ಕಾಂತಾ ಸಮ್ಮಿತತಯಾ’ ತಿಳಿಸಿ ಹೇಳಿದಳು. ಅಂದಿನಿಂದ ಶ್ರೀ ರಾಮಚಂದ್ರ ದೇವರು ಭಕ್ತರ ಎಂಜಲು ಗಿಂಜಲು ತಿನ್ನಲಿಲ್ಲ.
*****

















