ಸಿಡಿಲಿನೊಡಲ ಒಡೆದು ಬಂತು ಬೆಳಕ ನೀರು ಭೂಮಿಗೆ
ಸುಡುವ ಕಾಡು ಹಡೆದಿತೊಡನೆ ಜೀವ ಬಂತು ನಾಡಿಗೆ
ಹಳ್ಳಕೊಳ್ಳ ಹೆರಿದು ಸೂಸಿ ಇಳೆಯ ಬೇಗೆ ಆರಿಸಿ
ಬಳ್ಳಿವರಿದು ಕೊರಳ ಹಾರ ಬೆಳಗುತಿತ್ತು ಶೋಭಿಸಿ
ಹಸಿರು ಹಚ್ಚೆ ಇಟ್ಟ ತೆರದಿ ಹರಡಿ ಹಬ್ಬಿ ಸುತ್ತಲು
ರಸವ ಸೂಸಿ ಎಸೆಯುತಿಹುದು ಕಾಡು ಮೇಡೊಳೆತ್ತಲು
ಬನದ ರಾಣಿ ಬನಶಂಕರಿ ಇನಿಯನರಸಿ ಪೋದಿಳೆ
ಹನಿಗೂಡಿದ ಅಲತಿಗೆಯಿಂದೊಪ್ಪಿದೆ ಈ ಚಿಗುರೆಲೆ
ಕಣ್ಣು ಬೀರಿದತ್ತ ಬಣ್ಣ ಬಿಸಿಲ ಹಣ್ಣ ತೂರುತ
ನುಣ್ಣಗಾಗಿ ಹೊನ್ನ ತಳಿಯ ಕಂಡಕಡಗೆ ಹಾಕುತ
ನೆಲದಿ ನಡೆದು ಮರಕೆ ಜಿಗಿದು ಮುಗಿಲಿನಂಚಿನಾಚೆಗೆ
ಚೆಲುವ ಸುರಿಸಿ ಪೋದಳವಳು ಬೆರೆತು ವಿಶ್ಚದೊಂದಿಗೆ
ಮನಸಿನಲ್ಲಿ ಮೂಡಿ ಬಂತು ಮಮತೆಯ ಮೃದು ಭಾವನೆ
ವನವ ತುಂಬಿ ತುಳುಕುತಿತ್ತು ಜೀವ ಜರಿದು ಸಾವನೆ
*****

















