Home / ಕವನ / ಕವಿತೆ / ಇಜಿಪ್ತಿನೆದೆಯಾಳ

ಇಜಿಪ್ತಿನೆದೆಯಾಳ

ಉರಿ‌ಉರಿಬಿಸಿಲು ನೆತ್ತಿಯಮೇಲೆ
ಸುಡುವ ಮರಳು ಕಾಲ್ಕೆಳಗೆ
ಸುಂಯನೆ ಬೀಸುವ ಬಿಸಿ ಬಿರುಗಾಳಿ
ಕೂತೂಹಲದ ಕಣ್ಣುಮನಸುಗಳ ಮೌನ ಮಾತು
ನೋಡಬೇಕೆನ್ನುವ ತವಕ ಪಡದವರಾರು.

ನೋಡಬೇಕು ನೋಡಲೇಬೇಕು
ಏನೆಲ್ಲ ಮಾತನಾಡಬೇಕು ಪುರಾತನ
ನಗರಿಗಳೊಂದಿಗೆ ತೇಲಬೇಕು ಮುಳುಗೇಳಲೇಬೇಕು
ಜೀವನದಿ ನೈಲದೆದೆಯಾಳಕೆ
ಮತ್ತೆ ಜೀವಬಂದಿದೆ ಪರೋಹಗಳಿಗೆ
ಕಾತರಿಸಿರುವರು ಮಮ್ಮಿಗಳು ಮಾತನಾಡಲು
ನೈಲ್ ನದಿಯ ಕಾಲಗರ್ಭ ಬಿಚ್ಚಿಕೊಳ್ಳುತ
ಅದೇನೋ ಸಡಗರ ಮಂದಗಾಮಿನಿ
ಒಮ್ಮೊಮ್ಮೆ ಮದೋನ್ಮತ್ತ ಗಜಗಾಮಿನಿ.

ಪ್ರಾಚೀನ ಇತಿಹಾಸ ನಾಗರಿಕತೆಯ ಭೂಮಿ
ನೈಲ್ ನೀರಿಗೆ ಹೆಮ್ಮೆ ಪುಲಕ
ರಾಜ ರಾಣಿಯರನು ಪಕ್ಕದಲ್ಲಿಟ್ಟುಕೊಂಡ ಪಟ್ಟ
ಫೆರೋಗಳ ಕಾರ್ಯಕ್ಷೇತ್ರದಿ ಮೆರೆದ ಹೆಗ್ಗಳಿಕೆ
ಪೂರ್ವಕೆ ಕಾರ್ನಾಕ್ ಲುಕ್ಸ್‌ರ್ ದೇವಾಲಯಗಳ
ಪಶ್ಚಿಮಕೆ ರಾಜರಾಣಿಯರ ಕಣಿವೆಗಳ ಅಮೋಘ.

ಅರೆರೆರೆ ! ಕಣ್ಣು ಕಟ್ಟಿಕೊಳ್ಳುತಿವೆ
ಸಂಸ್ಕೃತಿಯ ಸಂಕೇತಿಸುವ ಭವ್ಯ

ಸ್ಪಿಂಕ್ಸ್ ಪಿರಾಮಿಡ್ಡುಗಳು, ರಾಮ್ಸೆಸ್, ಟುಟೆಕಾಮುನ್
ಫೆರೋಗಳ ಬಿಗಿದಿಟ್ಟ ಮಮ್ಮಿಗಳು.

ಕಣ್ಣೆದುರಿಗೆ ಬರುತಿವೆ ಹಳೆಯ ಇತಿಹಾಸಪುಟಗಳು
ದೇವಸ್ಥಾನಗಳಿದ್ದವಿಲ್ಲಿ, ರಾ ಓಸೈರಸ್ ಈಸಿಸ್
ದೇವತೆಗಳು ಬ್ರಹ್ಮ ವಿಷ್ಣು ಶಿವರಂತೆ
ದಿನನಿತ್ಯ ಪೂಜೆ ಪುನಸ್ಕಾರ.
ಸಹಸ್ರಾರು ವರುಷಗಳು ಮೆರೆದ ಪುರೋಹಿತಶಾಹಿ
ರಾಜಶಾಹಿ, ಫೆರೋಗಳ ಅಹಂಕಾರದಬ್ಬರ
ಜಗತ್ಪ್ರಸಿದ್ಧ ಪಿರಮಿಡ್ಡುಗಳ ನಿರ್ಮಾಣ.

ಸಮೃದ್ಧನಾಡು ಇಜಿಪ್ತಿನ ಭಾಗ್ಯದ ಬಾಗಿಲಿಗೆ
ಗ್ರೀಕರ ಆಕ್ರಮಣ ನೆಪೊಲಿಯನ್ನನ ವಿಕ್ರಮ
ರಾಜ ರಾಣಿಯರ ಮೆರೆತ
ಗ್ರೀಕ್ ಸುಂದರಿ ಕ್ಲಿಯೋ ಪಾತ್ರಳ ಹೆಸರು ಕೇಳದವರಾರು
ರಾಜವಂಶದ ಕೊನೆಯ ರಾಣಿ, ಜ್ಯೂಲಿಯಸ್ ಸೀಸರನ ಸ್ನೇಹ
ಕಟ್ಟುಮಸ್ತಾದ ಆಳು ರಾಜಕೀಯದಲಿ ಸಹಕಾರ
ಪಾಪ ದುರದೃಷ್ಟೆ ಕ್ಲಿಯೋ ಸೀಸರನ ಕೊಲೆ
~ಆಂತೋನಿಯ ಪ್ರವೇಶ
ರೋಮನ್ ಸಾಮ್ರಾಜ್ಯದ ಕಾಕದೃಷ್ಟಿ ಜೋಡಿ ಕೊಲೆ
ರೋಮಿನ ದರ್ಬಾರು.

ಸಾವಿರ ಸಾವಿರ ವರ್ಷಗಳು ಕಳೆದರೂ
ಹೊರ ಸಾಮ್ರಾಜ್ಯಗಳು ಬಂದು ಉರಳಾಡಿ ಹೋದರೂ
ಉಳಿಸಿಕೊಂಡಿತ್ತು ಇಜಿಪ್ತ ತನ್ನ ನಂಬಿಕೆ
ಪದ್ಧತಿ ಹೆಸರುಗಳನೆಲ್ಲ

ಆರನೆಯ ಶತಮಾನದ ಅರಬ್ಬರ ದಾಳಿ ಆದದ್ದೇ
ಪಿಶಾಚಿಗಳು ಹೊಕ್ಕಂತೆ ಒಂದೊಂದೇ ಉರುಳಿಸಿದವು
ದೇವತಾರಾಧನೆ ನಿಂತು ದೇವಮಂದಿರಗಳು
ಹಾಳು ಬಿದ್ದು ಭಾಷೆ ತುಂಡಾಗಿ
ನುಚ್ಚು ನೂರಾಯಿತು ಸಂಸ್ಕೃತಿ.

ಸುಯೇಜ್ ಕಾಲುವೆಯ ನೂರೈವ್ವತ್ತು ವರ್ಷಗಳಷ್ಟೇ
ಪ್ರೆಂಚ್‌ರ ವಶವಾದದ್ದು ಬ್ರಿಟೀಷರು ಅಧಿಕಾರ ನಡೆಸಿದ್ದು
ಎಲ್ಲವೂ ಒಂದಿಲ್ಲೊಂದು ಆಕ್ರಮಣ ದಬ್ಬಾಳಿಕೆ
ಎದ್ದು ಬಿದ್ದು ಗೆದ್ದು ಸೋತು ಉರುಳಿತಿದೆ ಕಾಲ.

ಮರುಭೂಮಿಯ ಬಿರುಗಾಳಿಯ
ನೈಲ್‌ದೆದೆಯಾಳವ ಹೊಕ್ಕು ಬಗೆಯಬೇಕಷ್ಟೇ
ಇನ್ನೂ ಏನೆಲ್ಲ ಕಥೆಗಳು
ಕೇಳಲೇಬೇಕೆಂದವರು ಹತ್ತಿರ ಹತ್ತಿರ ಹೋಗಬೇಕಷ್ಟೆ
ನೈಲ್ ಮೌನವಾಗಿ ಹರಿಯುತಿದೆ
ಕಣ್ಣು ಹಾಯಿಸುವವರೆಗೂ ಹಚ್ಚ ಹಸಿರು
ರಾತ್ರಿ ಬೆಳ್ಳಂ ಬೆಳದಿಂಗಳ ಚಂದಿರ

ಸುತ್ತೆಲ್ಲ ಏಕಾಂತ ನಕ್ಷತ್ರಗಳು
ಏನು ಕಾಡುತ್ತವೋ ಏನು ಬೇಡುತ್ತವೊ
ಪ್ರತಿಫಲಿಸುವ ನೈಲ್‌ಗೆ ನಗು.

ಅದೇನು ಹುಚ್ಚೊ ಅದೇನು ಕೊಬ್ಬೊ
ರಾಜರುಗಳಿಗೆ ಇದ್ದಾಗಲೂ ದರ್ಬಾರು ಆಳುಕಾಳು
ಸತ್ತ ನಂತರವೂ ಪುರ್ನಜನ್ಮದ ನಂಬಿಕೆ
ಗೋರಿಗೊಂದೊಂದು ಅರಮನೆ ಐಶಾರಾಮಿ
ಬದುಕಿನ ರೂಪ ಒಳಗೆಲ್ಲ
ಹೇಳಿ ಕೇಳಿಯೇ ಮಾಡಿಸಿಕೊಳ್ಳುವ ಇಚ್ಛೆ.

ಹಾಗಾದರೆ ಹೋಯಿತೆಲ್ಲಿ ಹೋದವೆಲ್ಲಿ
ಸಮಾಧಿಯ ಭಂಡಾರ ಉಸುರಿದ್ದೆ
ನೀಲಾ (ನೈಲ್) ನಕ್ಕಳೋ ವಿಷಾದಿಸಿದಳೋ
ಪುರೋಹಿತ ಒಳಜನರೇ ಕಳ್ಳರಿಗೆ ಶಾಮೀಲಾದದ್ದು
ಕಳ್ಳ ಕಾಕರು ದೋಣಿ ಏರಿ ತನ್ನೆದೆಯ ಮೇಲೆಯೇ
ತೇಲಾಡಿ ಸಮಾಧಿಗಳ ಹೆಕ್ಕಿ ದೋಚಿ
ಬೆಳಗಾಗುವದರೊಳಗೆ ದಾಟಿದ್ದು – ಇನ್ನೂ ಇನ್ನೂ
ಎಷ್ಟೊಂದು ಕಾಲಗರ್ಭದ ಕಥೆಗಳು.

ಪಿರಾಮಿಡ್‌ಗಳೊಳಗೆಲ್ಲ ಬಿಸಿಗಾಳಿ
ಬಿಸಿ ಉಸುರಿನ ಬಳುವಳಿಗಳು
ಇವೆಲ್ಲ ಒಮ್ಮೊಮ್ಮೆ ಬೆವರಿನ ಉಪ್ಪಾಗಿ
ನದಿಯ ಸಿಹಿಯಾಗಿ
ಹಳೇ ಮಾರುಕಟ್ಟೆ ನಡುಬೀದಿಯಲಿ
ಪನ್ನೀರಾಗಿ, ಅಬ್ದುಲ್ಲಾನ ಊದು ಗಂಧಗಳ
ಪರಿಮಳವಾಗಿ, ಅಪರೂಪದ ಚಿತ್ರಣಗಳಾಗಿ
ನಮ್ಮೊಂದಿಗೆ ಮಾತನಾಡುತ್ತವೆ
ಪುನರ್ಜನ್ಮವಾಗಿ ಬಂದಿರುವೆ
ಫೆರೋ ನಗುತ್ತಾನೆ ನೆಪ್ರಿಟಿಟಿ
ಬೆಲ್ಲಿ ಡಾನ್ಸ್‌ದಲಿ ಸೆಳೆಯುತ್ತಾಳೆ.
*****

ಪುಸ್ತಕ: ಇರುವಿಕೆ

Tagged:

Leave a Reply

Your email address will not be published. Required fields are marked *

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...

ನನ್ನ ಜನ್ಮ ಗ್ರಾಮಕ್ಕೆ ಹೋಗದೆ ನಾಲ್ಕಾರು ವರುಷಗಳಾಗಿದ್ದವು. ಮೇ ತಿಂಗಳ ಬೆವರನ್ನು ತೋಟದ ಅಬ್ಬಿಯಲ್ಲಿ ತೊಳೆದು ತಂಪಾಗಿ ಒಂದು ಮಾಸ ಕಳೆದು ಬರುವ ಎಂದು ಹಳ್ಳಿಗೆ ಹೋಗಿದ್ದೆ. ಮನೆಗೆ ತಲುಪಿದ ಮರುದಿನವೇ ತಂಗಿಯ ಮನೆಗೆ ಹೋಗುವದು ನನ್ನ ಪದ್ಧತಿ. ನಮ್ಮ ಕೇರಿಯ ಎದುರಿನ ಗುಡ್ಡೆಯನ್ನು ಹತ್...