Home / ಕವನ / ಕವಿತೆ / ಕಲ್ಲಾಯಿತೆ ಎದೆ

ಕಲ್ಲಾಯಿತೆ ಎದೆ

ಯಾಕೆ ತಾಯಿ ಮುಲುಗುತಿರುವಿ
ಕರುಳ ಬಳ್ಳಿಗಳ ಕತ್ತರಿಸಿ ಚಿಲ್ಲಾಪಿಲ್ಲಿಯಾಗಿಸುತ
ನೀನೇ ನುಂಗಿ ನೀರು ಕುಡಿದರೆ ಹೇಗೆ?
ಸುನಾಮಿ ಜಲಪ್ರಳಯದಲಿ ಅವಿತು
ದೈತ್ಯಾಕಾರದಲಿ ಬಂದು
ಕೈಯಾರೆ ಕೊಚ್ಚಿ ಕೊಚ್ಚಿ ಸದೆಬಡೆದು
ಸದ್ದಡಗಿಸುತಿರುವೆಯಲ್ಲ!

ಇನ್ನೂ ಸಾಕಾಗಲಿಲ್ಲವೆ ತಾಯಿ
ಮತ್ತೆ ಮತ್ತೆ ಗರ್ಜಿಸಿ
ಭೂಕಂಪಿಸುತ ಬುಸುಗುಡುತಿರುವಿ
ಕ್ಷಣ ಮಾತ್ರದಲಿ ನೆಲದಡಿಗೆ ಸೇರಿದ
ನಿನ್ನ ಮಕ್ಕಳ ಆಕ್ರಂದನ ಕೇಳುತಿರುವಿಯಾ
ಯಾಕೆ ಜನನಿ ನಿನ್ನೆದೆ ಕಲ್ಲಾಯಿತು
ಕಿವಿ ಕಿವುಡಾಯಿತು!

ಯುದ್ಧ ಭಯೋತ್ಪಾದನೆಗೆ ಕುಮ್ಮಕ್ಕು
ಕೊಡುವ ರಾಕ್ಷಸ ರಾಜಕೀಯ
ಮಕ್ಕಳ ಕಂಡು ಕೆಂಡವಾದೆಯಾ
ವಿಜ್ಞಾನದೊತ್ತಡಕೆ ಪರಿಸರ ಹಾನಿಗೆ
ಎದೆ ಭಾರವಾಯಿತೆ
ಕಣ್ತುಂಬ ಕೆಂಡದುಂಡೆ ಮೈತುಂಬಾ
ಬೆಂಕಿ ಹೊತ್ತು ತತ್ತರಿಸದಿರು ತಾಯಿ
ಅವರವರ ಕರ್ಮಫಲ ಎನದಿರು ಮತ್ತೆ!

ನೀನೇ ಹಡೆದ ನೂರಾರು ಮಕ್ಕಳಿವರು
ಮುದ್ದಿಸಿ ಸಾಕಿ ಸಲುಹಿ ಆಕಾಶದೆತ್ತರಕೆ ಬೆಳೆಸಿದೆ
ಆದರೊಬ್ಬನೂ ಹತ್ತಿರವಿಲ್ಲ ನಿನ್ನ ಕರುಳಿಗೆ
ಸ್ವಾರ್ಥಿ ಮಕ್ಕಳ ಸಹವಾಸ ಸಾಕಾಯಿತೆ
ಮತ್ತೆ ಮತ್ತೆ ಆಚೆಗೆ ದಬ್ಬುತಲೇ ಇರುವೆ
ಹುಲುಮಾನವರ ಹೆತ್ತಿದ್ದಕ್ಕೆ ಹೊತ್ತಿದ್ದಕ್ಕೆ
ಪಶ್ಚಾತ್ತಾಪ ಪಡುತಿರುವೆಯಾ ತಾಯಿ,
ನಿನ್ನ ಉಡಿ ಸ್ಮಶಾನ ಮಾಡದಿರು
ಕ್ಷಮಿಸು ಜಗಜ್ಜನನಿ ಬಹುರೂಪಿಣಿ.
*****

ಪುಸ್ತಕ: ಇರುವಿಕೆ

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...