Home / ಕವನ / ಕವಿತೆ / ಕನ್ನಡಿ ಕೊಳವೆ (ಕಲೀಡೋಸ್ಕೋಪ್)

ಕನ್ನಡಿ ಕೊಳವೆ (ಕಲೀಡೋಸ್ಕೋಪ್)

ಕ್ಷಣ ಕ್ಷಣಕೂ ಏರುಬ್ಬರವಾಗಿ
ಭಗ್ನವಾಗುವ ಕನಸುಗಳ ಎಸೆಯದಿರಿ
ತುಂಬು ಕತ್ತಲೆಯ ಹೆಜ್ಜೆಗಳಿಗೆ
ಚುಕ್ಕೆಗಳ ಭರವಸೆಯ ಮಾತುಗಳು
ಗಜಿಬಿಜಿ ಹಾದಿಯಲ್ಲೂ
ಕುರುಡನಿಗೆ ಕೋಲು, ನಿರಾಳ ಉಸಿರು

ಅಂತರಂಗದ ಮಾತುಗಳು
ಮೂಕ ಕುರುಡು ಹೆಳವುಗಳೆಂದು
ನಿರಾಶರಾದರೆ ಹೇಗೆ?
ಮೌನ ಮುರಿದು ಮಾತು ಚಿಗಿತು
ಕಣ್ಣಂಚಿನ ಹನಿಗಳು
ಗಲ್ಲ ಸ್ಪರ್ಶಿಸಿ ಮುಂಗೈಗೆ ಬಿದ್ದದ್ದೇ
ಹೃದಯ ಹಗುರು ಸಂತೃಪ್ತ ಉಸಿರು

ವರ್ತಮಾನ ಭವಿಷ್ಯವೆಲ್ಲಾ
ಅರ್ಥವಿಲ್ಲದ್ದು ಎಂದಿರಾ !
ಹುಷಾರು, ಕಸಕಡ್ಡಿ ಬೆಳೆದು
ಬರಡಾದೀತು ಮನಸು
ಸುಟ್ಟು ಸುಣ್ಣವಾದಾವು ಕನಸುಗಳು,
ಮೇಲೆ ಕಟ್ಟಿಬಿಟ್ಟಾರು ಸಮಾಧಿ-
ನೋಡಿ ಆಕಾಶದಂಗಳ
ತೆರ ತೆರನಾದ ಬೆಳ್ಳಿಮೋಡಗಳ
ಕ್ಷಣ ಕ್ಷಣದ ಸಂತಸ
ಇದ್ದರೆ ಇರಲಿ ಏನಂತೆ ನಡುವೆ
ಕಪ್ಪು ಹಳದಿ ಮೋಡಗಳೂ-
ಕೆನ್ನೆ ಮೇಲಿನ ಗುಳಿಯಂತೆ.

ಬಿಸಿಲು ಬೇಗೆ
ಎಲ್ಲೆಲ್ಲೂ ದಾವಾನಲ, ನೀರಡಿಕೆ
ಎದುರಿಗೆ ಸಮುದ್ರದ ಭೋರ್ಗರೆತ
ಸಮುದ್ರಕ್ಕೆ ಬಾಯಿಹಚ್ಚಿ
ತಣಿಯುವ ತವಕ
ಆದರೆ, ಉಪ್ಪುಪ್ಪು ಜಿಗುಟು ಎಂದರೆ ಹೇಗೆ?
ಇರಲಿ, ಮುಖದ ಮೇಲಾದರೂ
ನೀರು ಚಿಮುಕಿಸಿಕೊಳ್ಳಿ
ಕಡಲಿನಲಿ ಕಾಲಾದರೂ ಎದ್ದಿ
ತಂಪಡರೀತು ಮೈಮನ.

ಬಿಡಿ ಆತ್ಮ ನಿಂದನೆ
ಮನದಾಳದ ಮೌನ, ನಿರಾಶೆ
ಒಂದೊಂದೆ ಒಡಲಾಳಕ್ಕೆ (ಕಲೀಡೋಸ್ಕೋಪ್) ಇಳಿಸಿ.

ಆಹಾ !!
ಎಷ್ಟೊಂದು ಮಾತುಗಳು
ಎಷ್ಟೊಂದು ಚಿತ್ರಗಳು
ಎಷ್ಟೊಂದು ಅರ್ಥಗಳು
ಈ ಮಗ್ಗಲು ಆ ಮಗ್ಗಲು
ಮತ್ತೊಂದು ಮಗ್ಗಲು ಇನ್ನೊಂದು ಮಗ್ಗಲು
ಹಾಗೇ ಮತ್ತೆ ಮತ್ತೆ
ತಡಕಾಟ ಹುಡುಕಾಟ

ಏನಿದು ಸಂಭ್ರಮ
ಬಿರಿದ ನೆಲಕೆ ಮಳೆ ಹನಿಯ ಸ್ಪರ್ಶ
ಮೊಗ್ಗೊಡೆದು ಘಮ್ಮೆನ್ನುವ ಸಮಯ.
*****
ಪುಸ್ತಕ: ಇರುವಿಕೆ

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...