Home / ಕವನ / ಕವಿತೆ / ಕರ್‍ಮ ಕಥೆಯು

ಕರ್‍ಮ ಕಥೆಯು

ಆವಕರ್‍ಮದಿ ವಿಧಿಯು ನಿರ್‍ಮಿಪ ದೇಹಗಳ ಕುಂಬಾರನೋಲ್ |
ಆವಕರ್ಮದಿ ಹರಿಯ ಹತ್ತವತಾರಗಳ ತಾ೦ತಾಳಿದಂ ||
ಆವಕರ್ಮದಿ ಹರನು ಜಗಸಂಹಾರಕರ ತಾಂ ನೆನಿವನೋ |
ನಾವು ಕರ್ಮಾಧೀನರೈ ನೇಸರನ ಗಗನದಿ ಚಲಿಪುದೂ || ೧ ||

ರಾಮನನು ಹದಿನಾಲ್ಕು ವರುಷವ ವನಕೆಯಟ್ಟಿತು ಕರ್ಮವು |
ಕಾಮನನು ಹರಕ್ರೊಧದಗ್ನಿಗೆ ಈಡುಮಾಡಿತು ಕರ್ಮವು ||
ವಾಮನನು ತಾ ಬಟುವು ವೇಷದಿ ಬಿಕ್ಕೆಬೇಡಿದ ಕರ್ಮದೋಳ್‌ |
ಕಾಮಧೇನುವು ಅಗ್ವುದದು ತಾ ರಾಮ ನಾಮವ ಜಪಿಸಲೂ || ೨ ||

ಕರ್ಮ ಭೂಮಿಯು ಜಗವು ನಿತ್ಯವು ಕರ್ಮದಿಂದಲೆ ಸುಖವು ಮನುಜಗೆ
ಧರ್ಮ ಬಿಡದಲೆ ಸರ್ವಕಾಲದಿ ಕರ್ಮವನ್ನು ಆಚರಿಸೆ ||
ಕರ್ಮಪಾಶವೆ ಬಿಸುಟಿ ನರತಾ ನಿತ್ಯ ಸುಖವನು ಪಡೆವಜಗದೊಳೂ |
ಮರ್ಮವಿದನೀ೦ ತಿಳಿದು ನಡೆದೊಡೆ ಸುಖಿಯು ನೀನಯ್ಯಾ || ೩ ||

ಕಂತುಪಿತತಾ ಕು೦ತಿ ಪುತ್ರಗೆ ಕಣದಿ ಪೇಳಿದ ಕರ್ಮದಾ |
ಕ೦ತೆಯನು ವಿಸ್ತರದಿ ನರನಿಗೆ ಹುರುಪುಗುಂದಿದ ಚಣದೊಳೆ ||
ಎಂತು ಕರ್ಮವು ನರಗೆ ಬಂಧನಕಾರಿಯಪ್ಪುದು ಜಗದೊಳೂ |
ಸಂತತಂ ಕರ್ಮದೊಳೆ ದೇಹಿಯು ಪಡೆವನಿಹ ಪರ ಸುಖಗಳಾ || ೪ ||

ಕರ್ಮಯೋಗಿಯು ಕರ್ಮಚಂದನ ಸುತನು ಮೋಹನ ಗಾ೦ಧಿಯು |
ಧರ್ಮದಿಂದಲೆ ನಡೆದು ಜಗದೊಳು ಕರ್ಮಮಹತಿಯ ಬೀರಿದ ||
ನರ್ಮಮಾಡಿದ ನಾ೦ಗ್ಲ ರಾಜ್ಯದ ಶಕಟನೆತ್ತರವನ್ನು ಕೆಡಹದೆ |
ಕರ್ಮ ಚಕ್ರವು ಭಾರತಾಂಬೆಗೆ ಭಾಗ್ಯಲಕುಮಿಯ ತೋರಿತು || ೫ ||

ದುಟ್ಟಗ್ರಹಗಳ ಕತದಿ ಕೆಮ್ಮನೆ ದುಟ್ಟನೋರ್ವನು ಶ್ರೇಷ್ಟ ಗಾಂಧಿಯ |
ನಟ್ಟಿದನು ಯಮಸದಕೆ ಭಾರತ ಸೌಖ್ಯವನು ಕಿಡಿಸಿ ||
ಕೆಟ್ಟ ಜನಗಳು ಶ್ರೇಷ್ಠ ಪುರುಷರು ಪಟ್ಟಿ ಸಾಹಸವನ್ನು ಗಣಿಸದೆ |
ಬಿಟ್ಟು ಲಜ್ಜೆಯ ತುಚ್ಛ ಕಾರ್ಯಕೆ ಮನವನಳಿಸುವರೂ || ೬ ||

ಚಿಂತೆಮಾಡಿದಡೇನು ಲಭಿಪುದು ಶಾ೦ತ ಚಿತ್ತದಿ ಕೇಳು ನಭದೋಳು |
ನಿಂತು ಬೋಧಿಪ ಗಾಂಧಿಕರ್ಮವ ಮಾಡಿಮಡಿಯ೦ದೂ |
ಇಂತು ಬೋಧಿಪ ಗಾಂಧಿಮಂತ್ರವ ಪಠಿಸಿ ಭಾರತ ಪಡೆದುಧೈರ್ಯವ
ಕಂತು ಪಿತನಿಚ್ಛೆಯಲಿ ನಡೆಯುತೆ ಮುಂದೆಸಾರುವುದೂ || ೭ ||

ಇಂದು ನಮ್ಮಯದೈವಗತಿಯಿಂ ತುಂಡು ಹೊ೦ದಿತು ನಮ್ಮ ದೇಶವು |
ಹಿಂದು ಮುಸ್ಲಿಮರೊಂದು ಕೂಡದೆ ಕದನಗೈಯ್ಯುತಲಿ ||
ಎಂದಿಗೂ ವಡಗೂಡಿಬಂದಿಹ ಬಂಧುಗಳು ಹಗೆತನದಿ ಮಡಿದರು |
ಹಿ೦ದೆ ಯಾದುದ ಮರೆತು ಜನಗಳನೊ೦ದು ಗೂಡಿಪುದೂ || ೮ ||

ಚಂದ್ರ ಮಂಡಳದೊಳಗೆ ಹೊಳೆವಾ ಚ೦ದತಾರಕೆ ಗಾಂಧಿ ಜೋತಿಯ |
ಹೊಂದಿನಡೆವುದು ಮುಂದೆ ಕೈದೀವಟಿಗೆ ನಮಗಿರಲೂ ||
ಹಿಂದು ಮುಸ್ಲಿಮ ಕ್ರೈಸ್ತ ಬುದ್ದರು ಬ೦ಧುಗಳು ತಾವೆಂದು ತಿಳಿಯುತೆ |
ವಂದುಗೂಡಲು ಗಾ೦ಧಿಶಾ೦ತಿಯ ಹೊಂದಿ ನಲಿಯುವನೂ || ೯ ||

ನಡುಗುವಳು ಭೂಮಾತೆ ದುರುಳರ ತುಳಿತದಿಂದತಿಶಯದಿ ಜಗದೊಳು |
ಗುಡುಗು ಮಿಂಚಿನ ತೆರದಿ ಮುತ್ಸದ್ಧಿಗಳು ಸ್ವಾರ್ಥದಲಿ ||
ಬಿಡದೆ ಬುದ್ದಿಯ ಕಿಡಿಸಿವಿಶ್ವದಿ ರಾಷ್ಟ್ರರಾಷ್ಟ್ರದಿ ಒಡಕು ಬೀರುತೆ |
ಸುಡುವರೈ ಪೂರ್ವಜರುಗಳಿಸಿದ ಶಾಂತಿ ಸಾಮ್ರಾಜ್ಯಾ || ೧೦ ||

ಜಗವೆ ತಾನಾಗಿಹುದು ಪೂರ್ವದಿ ಕುರುಗಳಾಡಿದ ಯುದ್ಧಭೂಮಿಯು |
ಸೊಗಸಿನಿಂದಲಿ ಹರಿಯುಸಾರಥಿ ಗಾಂಧಿ ರೂಪದೊಳೂ ||
ಮೊಗವ ನೀಕ್ಷಿಪನರಗೆ ತಾನತಿ ಕರುಣೆಯಿಂ ಜವಹಿರಗೆ ಬೋಧಿಪ |
ಖಗದರೂಪದ ಗಾಂಧಿವಕ್ಕಿಯು ಕರ್ಮ ಮಹತಿಯನೂ || ೧೧ ||

ಹೊಂದಿಸ್ಫೂರ್ತಿಯ ಗಾಂಧಿಯಿಂ ಜವಹಿರನು ಸಮರದಿ ದೈರ್ಯದಿಂದಲಿ |
ಮುಂದೆ ನಡೆದಿಹ ದುಷ್ಟ ನಿಗ್ರಹ ಶಿಷ್ಟ ಪಾಲನೆಗೆ ||
ಇ೦ದು ಕಾಶ್ಮೀರ ಕದನದೊಳ್ಪಾಕಿಗಳು ನಮ್ಮೊಡೆ ಸಂಧಿಗೈಯ್ಯಲು |
ಬಂದು ತಮ್ಮಹ ಸ್ನೇಹ ಹಸ್ತ ನ ಮುಂದೆ ಚಾಚುವರೂ || ೧೨ ||

ರಾಜ ಸಾಗ್ರಣಿರಜವಿ ರಕ್ಕಸ ರಾಜಸೂತ್ರವ ಶೆಳೆದು ದೊರೆಯಿಂ |
ರಾಜ್ಯದೊಳ್ಕೊಲೆ ಸುಲಿಗೆ ಪಾತಕಗೈಯ್ಯಲಾಚಣದಿ ||
ರಾಜಕಾರಣ ಕುಶಲ ವಲ್ಲಭ ಮಂತ್ರಿ ಕಳುಹಿದ ಸೈನ್ಯ ನೆರವಿಗೆ |
ರಾಜ್ಯ ಸೂತ್ರವಕೊಂಡು ಜನತೆಗೆ ಶಾಂತಿಯನ್ನು ನೀಡಿದನೂ || ೧೩ ||

ರಾಜ್ಯ ಮುಕುಟನು ರಾಜಹಸದನು ರಾಜಕಾರ್ಯದಿ ನುರಿತಮುದುಕನು |
ರಾಜ್ಯ ಶಕಟದ ಭಾರವನು ತಾನೆಗಹಿ ನಿಂತಿಹನೂ ||
ರಾಜ್ಯ ಸಾಮ್ರಾಜ್ಯಗಳ ನಡುವಣ ಸ್ನೇಹಬೆಳಿಸಲುಜಾಳನೀಡುತೆ
ರಾಜ್ಯ ದೊಳ್ಳಾಂತಿಯನು ನೆಲಿಸಲು ಸತತ ದುಡಿಯುವನೂ || ೧೪ ||

ಅಜದ ನಜ್ಜನು ಬಿಜ್ಜೆ ಪ್ರವಹಣ ನಡೆಸುತಿರ್ಪನು ಸರುವದಿಶೆಯಲಿ |
ರಜವನವ ತಾನೆಂದು ಬಯಸನು ಕರ್ಮಗುಂಗಿನಲಿ ||
ಮಝರೆ ಮುದುಕನೆ ನಿನಗೆ ಮುಪ್ಪಿಲಿಹರೆಯುಬಂದಿದೆ ಗಾಂಧಿದಯೆಯಿಂ
ರಜತಧವಳದ ಕೀರ್ತಿ ಬೆಳಗಲಿ ನಿನ್ನ ಮೂಜಗದೀ || ೧೫ ||

ಬಿಳಿಮರಪ್ಪಗಳೆಲ್ಲ ಪ್ರೇಮದಿ ಬಿಡಲು ಭಾರತ ರಾಜ್ಯ ಸೂತ್ರವ |
ಕರಿಯನಪ್ಪನು ಕೊಡಗಿನವ ಸೇನೆಗಳ ಕಡಿವಾಣಾ ||
ವಲೆದು ಕೈಯ್ಯೊಳು ಧರಿಸಿ ನಡೆಸುವ ಸೇನೆಸಾಗರವೆಂಟುದಿಶೆಯಲಿ |
ಒಲವು ಕುಗ್ಗದೆ ಭೂಜಲಾಕಾಶದಲಿ ಮೆರೆಯುವನು || ೧೬ ||

ಮೇಟಿಯಣ್ಣನ ದೈವ ತೆರೆಯಿತು ರಾಟಿಚಕ್ರವ ತಿರುವಿ ಬಿಡುವಿಲಿ |
ಕೋಟಿಜನಕಾಹಾರವನು ನೀ೦ ಬೆಳೆದು ಕೊಡಬೇಕು ||
ರಾಟಿಸೂತ್ರದಿ ನೂಲು ತೆಗೆಯುತೆ ಮಾಟ ಮಗ್ಗದಿ ನೇಯ್ದು ವಸ್ತ್ರವ |
ಥಾಟಿನಿ೦ದಲಿ ಮೆರಿಸೊ ನಿನ್ನಯ ದೇಶಬಾಂಧವರ || ೧೭ ||

ಸಿಂದಿ ಶೆರೆಮೊದಲಾದ ಮಾದಕವಿ೦ದು ಶಾಸನಬ೦ದು ಕೆಡಹುದು |
ಬ೦ದ ದುಡ್ಡಿಲಿ ಸುಖದ ಬಾಳುವೆ ಜನತೆಗೈಯ್ಯುವುದು ||
ಅಂದ ಚಂದದ ವಸ್ತ್ರ ಮೋಹದಿ ದುಂದು ಮಾಡದೆಹಣವನುಳಿಸುತೆ |
ಚಂದದ ಬಾಳುವೆಯು ನಮ್ಮದು ಮು೦ದೆ ಜಗದೊಳಗೇ || ೧೮ ||

ನಮ್ಮದಿದ್ದಿತು ಉಚ್ಚ ಸಂಸ್ಕೃತಿ ನಮ್ಮನಾಡಿದು ದೇವಬೀಡಿದು |
ನಮ್ಮದನು ನಾವ್ಬಿಟ್ಟು, ಹೆರವರ ಮೊಹಕೊಳಗಾಗಿ ||
ನಮ್ಮದಲ್ಲದ ಬಯಸಿ ಕುಣಿದೆವು ನಮ್ಮ ಸಂಸ್ಕೃತಿ ನಾವು ಮರೆತೆವು |
ನಮ್ಮ ನಾಡಿಗೆ ಶ್ರೇಯತರುವದು ನಮ್ಮದೆಂದೆಂದೂ || ೧೯ ||

ನಮ್ಮನಾಯಕ ಬಾಪು ಗಾ೦ಧಿಯ ಕಮ್ಮತತ್ವವ ಜಗದಿಬೀರಲು |
ನಮ್ಮನಿಮ್ಮೆಂಬಗಳ ಭೇದವು ಅಳಿದು ಹೋಗುವದೂ ||
ಬೊಮ್ಮ ನಿರ್ಮಿತ ವಿಶ್ವವೆಲ್ಲವು ಹೆಮ್ಮೆಯಿಂಮೆರೆದಪುದು ಸಂತತ |
ನಮ್ಮದಿದು ಮಾನವ ಕುಟುಂಬವು ನಿತ್ಯಶಾಶ್ವತವೂ ||೨೦||
*****

Tagged:

Leave a Reply

Your email address will not be published. Required fields are marked *

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...

ಮಧುಮಾಸದ ಮೊದಲ ದಿನಗಳು. ಎಲ್ಲಿ ನೋಡಿದರೂ ತಾಯಿಯ ವಿವಿಧ ವಿಲಾಸ……. ಪುಷ್ಪಶೃಂಗಾರ!! ವರ್‍ಣವೈಖರಿ!! ಮಧುಪಾನದಿಂದ ಮೈಮರೆತು ಮೊರೆಯುತಿಹೆ ಉನ್ಮತ್ತ ಭೃಂಗ ಸಂಕುಲದ ಎಣೆಯಿಲ್ಲದ ಪ್ರಣಯ ಕೇಳಿ! ಸಹಸ್ರಸಹಸ್ರ ಖಗಕಂಠಗಳಿಂದೆ ದಿಕ್ಕುದಿಕ್ಕಿಗೆ ಪಸರಿಸುತಿಹ ಸುಮಧುರ ಗಾನ ತರಂಗ...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...