Home / ಕವನ / ಕವಿತೆ / ಹಿಮಾಗಮನ

ಹಿಮಾಗಮನ

ಮೆಯ್ಯಲಿಹ ರಕ್ತವನೆ ಹೆಸ್ಪುಗಟ್ಟಿಸುವಂಥ
ಚಳಿ ಬಂತು, ಜನಜಾತ್ರೆಯೋಡಿಸಿತು, ಕೊನೆಗೊಮ್ಮೆ
ಬರಿದಾದ ಬೀದಿಯಲಿ ನಿಂತ ಹೊಗೆಕಿಂಡೆಯಲಿ
ಭೌಂವೆಂದು ಬೀಸುತ್ತ ಚಳಿಗಾಳಿಯದು ಬಂತು,-
ಅಸಮವಾಗಿಹ ಹಿಮದ ಬರವ ಸಾರಿ!

ಸದ್ದಿಲ್ಲ, ಸುಳಿವಿಲ್ಲ, ಮೊಳಗಿನಬ್ಬರವಿಲ್ಲ;
ಹಿಮಕಣವ ತಡೆಹಿಡಿದ ಗಿಡಗಂಟಿಯಡಿಗೆರಗಿ
ಹುಳವನರಸುವ ಹಕ್ಕಿಗಳ ದನಿಯೆ ಎದ್ದಿಲ್ಲ:
ಮಸಣವಟ್ಟೆಯನಾಳುವಂಥ ಮೌನವ ಹಿಡಿದು
ತೆರಪಿಲ್ಲ, ತಡೆಯಿಲ್ಲ, ಬೀಳುತಿದೆ ಹಿಮವು!

ಮುಗಿಲೆ ಕಳಚಿರುವಂತೆ, ಬೂದಿಬಣ್ಣದ ಮೋಡ
ಉದುರಿ ಹೂವಾದಂತೆ, ದಿಕ್ಕುಗಳ ಕಣ್ಣೆಲ್ಲ
ಬೆಳ್ಳಗಾಗಿರುವಂತೆ; ವಿಸ್ಮಯವಿದೇನೆಲವೊ!
ಭಸ್ಮಾಸುರನ ಬೂದಿ ದಿಕ್ಕುಪಾಲೆಂಬಂತೆ
ಉದುರುತಿದೆ, ಚದರುತಿದೆ ನೋಡು ಹಿಮವು!

ಬೀದಿಯಾಗಿತ್ತಾಗ ಹಿಮಕಣರಣಾಂಗಣವು!
ತಿರುಗುತಿವೆ ಕುಡುಕರಂದದಿ ಮತ್ತೆ ಬೀಳುತಿವೆ
ಕೋಟಿ ಕಣಗಳು ಕೋಟಿ ಯುದ್ಧಗಳನಾಡುತ್ತ
ಬ್ರಹ್ಮಾಂಡವನೆ ವ್ಯಾಪಿಸಿವೆ, ಕೋಪಿಸಿವೆ ನೋಡು
ಭಣಗುಟ್ಟುವಂತೆ ಭೂಮಿ!

ಅಲ್ಲ, ಹಿಮವಲ್ಲವಿದು: ಘನಮಹಿಮನಾ ಮಹಿಮೆ:
ಮುಗಿಲಿನೊಳಗಿಂದುದುರುತಿಹ ಪಾರಿಜಾತಗಳು
ಹಿಮಕಣಗಳಿವು. ನೋಡಿದಲ್ಲೆಲ್ಲ ಧವಲ. ಮನೆ-
ಗಿತ್ತು ಬೆಳ್ಳಿಯ ಹೊದಿಕೆ, ಮರಕೆ ಮಂಜಿನ ಮುಸುಕು,
ನೆಲಕೆ ಬೆಳ್ಳನ್ನ ಮುಡಿಪು!

ಇಲ್ಲಿದ್ದವಾಗ ಹಸಿರೆದ್ದ ಹೊಲಗಳು; ಈಗ
ತುಂಬಿ ತುಳುಕದ ಬೆಳ್ಳಿ ಬಿದ್ದ ಕೊಳವಾಗಿಹವು!
ಮಾರುದ್ದ ಹಿಮ ಬಿದ್ದು ಮುಚ್ಚಿಹೋಗಿದೆ ದಾರಿ.
ಎಲೆಯುದುರಿ ಕೊಂಬೆ ಮಣಿದಿರುವ ಮರಗಳು ಮಾತ್ರ
ನಿಂತಿಹವು ದೇವ್ವವಾಗಿ!

ಇಂಥ ಹಿಮದಲ್ಲಿ ಸಹ ಹುಡುಗರಿಗೆ ಚೆಂಡಾಟ;
ಹಿಮದಿಳಿವು ನಿಂತಾಗ ಮತ್ತೆ ರಾತ್ರಿಯು ಬಂದು
ಮೋಡವಿನಿಸಿಲ್ಲದಾ ಮುಗಿಲಟ್ಟದಲಿ ನಿಂದು
ಬಿದ್ದ ಬೆಳ್ಳಿಯ ತೋರಿ ಮಂದಮೌನಸ್ಮಿತದಿ
ತಾರೆಗಳನಾಡಿಸುವಳು!
*****

Tagged:

Leave a Reply

Your email address will not be published. Required fields are marked *

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...