ನೆಲವು ಕಾದು, ಅಂಗಾಲು ಕಾದು, ಮೈ ಕಾದು ಉರಿದು ನೆತ್ತಿ
ಬಿಸಿಲ ಎಣ್ಣೆಯಲಿ ಹೊತ್ತಿ ಆದೆ ನಾ ಬೆಂಕಿಗೊಂಡ ಬತ್ತಿ
ಕಣ್ಣು ಉರಿದು ಕೆಂಗೆಂಡವಾಗಿ ಭಗ ಭಗನೆ ಬಾನ ಭಾಗ
ನೆತ್ತಿಯಲ್ಲಿ ಸುಡುತಿದ್ದ ಸೂರ್ಯ ಕತ್ತೆತ್ತಿ ನೋಡಿದಾಗ.
ಮಣ್ಣು ನೆಲದ ಈ ಅನ್ನಪಿಂಡ ಉರಿಯಾಗೆ ಉಸಿರ ತಿದಿಗೆ
ಬದಿಗೆ ಹರಿಯುತಿದೆ ತಣ್ಣನೀರು ಸುಖವಾಗಿ ಸುಖದ ನದಿಗೆ
ನೀರಿನಲ್ಲಿ ಕಾಲಿಟ್ಟೆ ಮಾತ್ರ ನಾನಂದಿ ನನಗೆ ಹೊರತು
ಜಲಕ್ರೀಡೆಯಾಡುತ್ತಲಿದ್ದ ರವಿ ಕೂಡ ತಾಪ ಮರೆತು.
ತಂಪು ಜೊಂಪು ಏರಿತ್ತು ತಲೆಗು ಹುಟ್ಟಿತ್ತು ಕುಸುಮ ಕಂಪ
ನಾಡಿ ನಾಡಿ ಜುಣುಗುಡುತ ಬಂತು ನಾನಾದೆನೋ ನಿಲಿಂಪ
ಯಾವ ನಾಡೊ ಇದು ಗಾಳಿ ತೀಡುತಿದೆ ಯಾರೂ ಹಾಡಿದಂತೆ
ಉಸಿರ ಪಂಜರವು ಭಗ್ನವಾಗಿ ನಾ ನಗ್ನನಾಗಿ ನಿಂತೆ.
ಏನು ದೇವ! ಓ ನಾನು ದೇವ ಈ ಭಾನು ದೇವ ಸುಡನೇ
ಬಯಲ ಹಾರಹೊಡೆವಿರಲು ಬಯಲು ಬಯಲಾಯ್ತು ಬಯಲಿನೊಡನೆ
ಸುತ್ತಲೆತ್ತಲೂ ಶಮವು ತಮವು, ನಂದಿಸಿತು ನಂಜು ನೋವ
ಗಾಜುಗೊಳವಿಯಲಿ ದೀಪ ಬೆಳಗಿದೊಲು ಬೆಳಗುತಿತ್ತು ಭಾವ.
*****

















