Home / ಕವನ / ಕವಿತೆ / ಮನಸೂರಿ

ಮನಸೂರಿ

ಡೆಹರಾಡೂನಿನ ತಪ್ಪಲ ಸೀಮೆಯ
ನೇರುತ ಮುಂದಕೆ ತಳೆಯುತಿರೆ
ದರಿಕಂದರಗಳ ಬನಸಿರಿ ಸುರಿಮಳೆ
ಬೆಳೆಸಿನ ಹೊಲಗಳ ಕಾಣುತಿರೆ
ಕನಸಿಗೆ ಕಾಣಿಸಿ ಕವನವ ಕಲಿಸುವ
ಮನಸಿನ ಮೈಸಿರಿ ಮುಂಚುತಿರೆ
ತನುವನು ಚಣಚಣ ತೊರೆಯುತ ಮನವೇ
ಹಿಮಗಿರಿ ಸೀಮೆ ಮುಸುಕುತಿದೆ
ಕಾಣುವೆನೊಂದೆಡೆ ಕೆಂಪಿನ ಗಿರಿಗಳ
ತರುಗಳ ವಿರಹಿತ ಮುಂದಲೆಯ
ಕಾಣುವೆ ಕಂದರದಿಂಬಿನ ಗಿರಿಗಳ
ತರುಗಳ ಪೂರಿತ ವನಸಿರಿಯ
ಪಾವನ ಗಂಗೆಯ ಜನ್ಮಸ್ಥಳದಿಂ
ಕೇದಾರೇಶ್ವರ ಸೀಮೆಯಲಿ
ಬೆಳ್ಳಿಯ ಬೆಟ್ಟದ ಬೆಳ್ಗೊಡೆ ಕಾಣುತ
ಕನಕರಿಸುತ ನಾ ಮೈ ಮರೆದೆ
ಕಣ್ಣಾಲಿಗಳಂ ಸೋರುವ ಸೀರ್ಪನಿ
ಸೀಮೆಯ ಮೀರಿತು ತಾಪದಲಿ
ಕಣ್ಮನಮೆಲ್ಲವು ನುಣ್ಮರೆಯಾದವು
ಹೃದಯದ ದೇವನ ಸೀಮೆಯಲಿ
ಏಣಿನ ಮೇಲೆಯು ಓರೆಗಳಲ್ಲಿಯು
ಪವಡಿಸಿ ಆಡುವ ಮನೆಗಳವು
ಆಟವಿಕನು ತಾ ಮಾಟದೆ ಗೆಯ್ದಿಹ
ಕೋಟೆಯ ಕೊತ್ತಳ ಕೂಟಗಳೊ !!
ಅರಸರ ಸಿರಿಗರ ಸಿರಿಸೆರೆಮನೆಗಳು
ದರಿಕಂದರದಲಿ ತೇಲುತಿವೆ
ಪುರುಷ ವಿವರ್ಜಿತ ಸದನಗಳೆಲ್ಲವು
ಕುಳಿರಿನ ಕಾಲವ ಕೂಗುತಿವೆ
ಕೆಳಗಿನ ಸೀಮೆಯ ಸೇರಲು ಧನಿಕರ
ತಂಡವು ಮಿಂಡೆದ್ದೋಡುತಿದೆ
ಸಾರುತ ಬರುತಿಹ ಕುಳಿರಿನ ಕಾಟದೆ
ಜಾರುತಲೊಯ್ಯನೆಯೋಡುತಿದೆ
ಪಾತಾಳದ ಬಿಳಿ ಮಿಶನರಿ ಜನಗಳು
ಭೂತಳ ಶಿಖರದೆ ಚರ್ಚುಗಳ
ಯಾತಕೆ ಕಟ್ಟಿಹರೆಂಬುದ ಕಾಣುವೆ
ಋಷಿಮುನಿ ಜನಗಳ ನಾಡಿನಲಿ
೧೦
ಭಾರತ ವರ್ಷದ ಋಷಿಮುನಿ ಜನಗಳ
ವೈದಿಕ ಧರ್ಮವ ತವೆ ತವಿಸೆ
ಪಾತಾಳದ ವಿಷಭೋಗಿಗಳೆಲ್ಲವು
ನಂಜಿಟ್ಟಾಡುವ ನೆಲವನೆಯೊ
೧೧
ಬೀದಿಯೊಳಲೆಯುತ ಮೋದವ ಬೀರುವ
ಪಾಶ್ಚಾತ್ಯರುಗಳ ಪಸುಳೆಯರ
ನಲಿನಲಿದಾಡುವ ನಗೆಮಗನೋಡಲು
ಪ್ರಾಣವು ವೀಣೆಯೊಳಾಡುತಿದೆ
೧೨
ಆಂಗ್ಲರ ನಾಡಿನ ವಿದುಷಿಯರೆನಿಬರೊ
ಬಾಲಕ ವಲಯವನಾವರಿಸಿ
ಮೇಳದೆ ತಾಳದೆ ತಲೆಯತ್ತಲೆಯುವ
ಸೊಬಗಿನ ಸೊಂಪದು ಸೂಸುತಿದೆ
೧೩
ಆಂಗ್ಲ ವಿದುಷಿಯನು ಶಾಲೆಯ ಕೇಳಲು
ಸಿಟ್ಟಿಗೆ ಒಂದಳು ಸಿಡಿದೆದ್ದು
ದೊರೆತನ ಗರುವಿಕೆ ಗುರುತನದಲ್ಲಿಯು
ನೆರೆ ಸೆರೆಗೊಂಬುದು ಧರೆಯಲ್ಲಿ
೧೪
ಆರ್ಯಾವರ್ತದ ಮಹಿಳೆಯರೆನಿಬರೊ
ವೈದಿಕಕಾಲದ ಕುರುಹಿಟ್ಟೊ
ಸರಳತನದ ಸಾಮ್ರಾಜ್ಯವ ಸೂಸುತ
ಬರೆಹವ ಬರೆಸುತ ಒರಿಸುವರು
೧೫
ಚೀನೀ ಜನರೇ ಗಟ್ಟಿಗರೆಂಬೆನು
ಕಾಯದ ಕಷ್ಟವ ತಡೆವುದಕೆ
ಬೆನ್ನೊಳು ಹೊರೆಯನು ಧರಿಸುತ ಶಿಖರವ
ನೇರುವುದು ನೋಡುವೆನು
೧೬
ತಲೆಯಾವರಿಸಿಹ ಗುರ್ಖಜನಂಗಳ
ಬೆಂಕಿಯ ಬಿದಿರಗಿಷ್ಟಿಕೆಯ
ಹೊಲಬನು ತಿಳಿಯಲು ತಲೆಯಲ್ಲಾಡಿಸಿ
ಕೇಳಿದೆ ಪಥಿಕರ ಕೌತುಕದೆ
೧೭
ನಗೆನಗೆಯಾಡುತ ಮೊಗವನು ನೋಡುತ
ತಿಳಿಯದ ಮಾತಿ೦ ಮೂದಲಿಸಿ
ಸಾಗುತ ಕರೆಯುವ ಪಥಿಕರ ನೋಡುತ
ಹೊರಳಿದೆ ಹೋಗುವ ದಿಶೆಗಾಗಿ
೧೮
ಹಿಂದು ಜನಾಂಗದ ಜಾತಿಗಳೆಲ್ಲವು
ಸ೦ದಿದ ನಿಯೋಗ ನಿಯಮವನು
ಇಂದಿಗು ಪಾಲಿಪ ಪರಿಯನು ತಿಳಿಯುತ
ವಿಸ್ಮಿತನಾದೆನು ಮನದಲ್ಲಿ
೧೯
ಓಡುತ ನೋಡಿದೆ ಕುರಡಿ ಬಾಝಾರವ
“ಸೆವಿಯರ ಹೊಟಲಿನ” ಮಾಟವನು
ಸೈನಿಕ ವೈದ್ಯಾಲಯವನ್ನು ನೋಡಿದೆ
ಮಾನವ ಮಮಕಾರಂಗಳನು
೨೦
ಓಡುತ ಡೆಹರಾಡೂನಿನ ಬೀಡಿಗೆ
ಸಾರಿದೆ ಸಂಧ್ಯಾಸಮಯದಲಿ
ಪಡುವಣ ನಿಟ್ಟದು ನೆರೆ ಸೆರೆಗೊಂಡಿತು
ತಪ್ಪಲದೊಪ್ಪಿನ ಸೀಮೆಯಲಿ
೨೧
ಸಂಧ್ಯಾಕಾಲದ ಸಂಜೆಯಗೆಂಪಿನ
ರಮಣೀಯತೆಯಾ ಒನಪನ್ನು
ಕಮಲಜ ಸೃಷ್ಟಿಯ ಕಮನೀಯತೆಯಾ
ಕೋಡಿನ ಕಲ್ಲೆನೆ ಕಾಣುತಿಹೆ
೨೨
ಯಾವುದು ನೋಡಲೊ ಯಾವುದು ಬಿಡಲೋ
ನೋಡುವದೆಲ್ಲವು ನೋಟವದು
ದೇವನ ಮಹಿಮೆಯ ಕಣ್ದೆರೆ ತೋರುವ
ಹಿಮಗಿರಿ ಸೀಮೆಯೆ ಮೋಕ್ಷವದು
*****
Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...