Home / ಕವನ / ಕವಿತೆ / ಮನಸೂರಿ

ಮನಸೂರಿ

ಡೆಹರಾಡೂನಿನ ತಪ್ಪಲ ಸೀಮೆಯ
ನೇರುತ ಮುಂದಕೆ ತಳೆಯುತಿರೆ
ದರಿಕಂದರಗಳ ಬನಸಿರಿ ಸುರಿಮಳೆ
ಬೆಳೆಸಿನ ಹೊಲಗಳ ಕಾಣುತಿರೆ
ಕನಸಿಗೆ ಕಾಣಿಸಿ ಕವನವ ಕಲಿಸುವ
ಮನಸಿನ ಮೈಸಿರಿ ಮುಂಚುತಿರೆ
ತನುವನು ಚಣಚಣ ತೊರೆಯುತ ಮನವೇ
ಹಿಮಗಿರಿ ಸೀಮೆ ಮುಸುಕುತಿದೆ
ಕಾಣುವೆನೊಂದೆಡೆ ಕೆಂಪಿನ ಗಿರಿಗಳ
ತರುಗಳ ವಿರಹಿತ ಮುಂದಲೆಯ
ಕಾಣುವೆ ಕಂದರದಿಂಬಿನ ಗಿರಿಗಳ
ತರುಗಳ ಪೂರಿತ ವನಸಿರಿಯ
ಪಾವನ ಗಂಗೆಯ ಜನ್ಮಸ್ಥಳದಿಂ
ಕೇದಾರೇಶ್ವರ ಸೀಮೆಯಲಿ
ಬೆಳ್ಳಿಯ ಬೆಟ್ಟದ ಬೆಳ್ಗೊಡೆ ಕಾಣುತ
ಕನಕರಿಸುತ ನಾ ಮೈ ಮರೆದೆ
ಕಣ್ಣಾಲಿಗಳಂ ಸೋರುವ ಸೀರ್ಪನಿ
ಸೀಮೆಯ ಮೀರಿತು ತಾಪದಲಿ
ಕಣ್ಮನಮೆಲ್ಲವು ನುಣ್ಮರೆಯಾದವು
ಹೃದಯದ ದೇವನ ಸೀಮೆಯಲಿ
ಏಣಿನ ಮೇಲೆಯು ಓರೆಗಳಲ್ಲಿಯು
ಪವಡಿಸಿ ಆಡುವ ಮನೆಗಳವು
ಆಟವಿಕನು ತಾ ಮಾಟದೆ ಗೆಯ್ದಿಹ
ಕೋಟೆಯ ಕೊತ್ತಳ ಕೂಟಗಳೊ !!
ಅರಸರ ಸಿರಿಗರ ಸಿರಿಸೆರೆಮನೆಗಳು
ದರಿಕಂದರದಲಿ ತೇಲುತಿವೆ
ಪುರುಷ ವಿವರ್ಜಿತ ಸದನಗಳೆಲ್ಲವು
ಕುಳಿರಿನ ಕಾಲವ ಕೂಗುತಿವೆ
ಕೆಳಗಿನ ಸೀಮೆಯ ಸೇರಲು ಧನಿಕರ
ತಂಡವು ಮಿಂಡೆದ್ದೋಡುತಿದೆ
ಸಾರುತ ಬರುತಿಹ ಕುಳಿರಿನ ಕಾಟದೆ
ಜಾರುತಲೊಯ್ಯನೆಯೋಡುತಿದೆ
ಪಾತಾಳದ ಬಿಳಿ ಮಿಶನರಿ ಜನಗಳು
ಭೂತಳ ಶಿಖರದೆ ಚರ್ಚುಗಳ
ಯಾತಕೆ ಕಟ್ಟಿಹರೆಂಬುದ ಕಾಣುವೆ
ಋಷಿಮುನಿ ಜನಗಳ ನಾಡಿನಲಿ
೧೦
ಭಾರತ ವರ್ಷದ ಋಷಿಮುನಿ ಜನಗಳ
ವೈದಿಕ ಧರ್ಮವ ತವೆ ತವಿಸೆ
ಪಾತಾಳದ ವಿಷಭೋಗಿಗಳೆಲ್ಲವು
ನಂಜಿಟ್ಟಾಡುವ ನೆಲವನೆಯೊ
೧೧
ಬೀದಿಯೊಳಲೆಯುತ ಮೋದವ ಬೀರುವ
ಪಾಶ್ಚಾತ್ಯರುಗಳ ಪಸುಳೆಯರ
ನಲಿನಲಿದಾಡುವ ನಗೆಮಗನೋಡಲು
ಪ್ರಾಣವು ವೀಣೆಯೊಳಾಡುತಿದೆ
೧೨
ಆಂಗ್ಲರ ನಾಡಿನ ವಿದುಷಿಯರೆನಿಬರೊ
ಬಾಲಕ ವಲಯವನಾವರಿಸಿ
ಮೇಳದೆ ತಾಳದೆ ತಲೆಯತ್ತಲೆಯುವ
ಸೊಬಗಿನ ಸೊಂಪದು ಸೂಸುತಿದೆ
೧೩
ಆಂಗ್ಲ ವಿದುಷಿಯನು ಶಾಲೆಯ ಕೇಳಲು
ಸಿಟ್ಟಿಗೆ ಒಂದಳು ಸಿಡಿದೆದ್ದು
ದೊರೆತನ ಗರುವಿಕೆ ಗುರುತನದಲ್ಲಿಯು
ನೆರೆ ಸೆರೆಗೊಂಬುದು ಧರೆಯಲ್ಲಿ
೧೪
ಆರ್ಯಾವರ್ತದ ಮಹಿಳೆಯರೆನಿಬರೊ
ವೈದಿಕಕಾಲದ ಕುರುಹಿಟ್ಟೊ
ಸರಳತನದ ಸಾಮ್ರಾಜ್ಯವ ಸೂಸುತ
ಬರೆಹವ ಬರೆಸುತ ಒರಿಸುವರು
೧೫
ಚೀನೀ ಜನರೇ ಗಟ್ಟಿಗರೆಂಬೆನು
ಕಾಯದ ಕಷ್ಟವ ತಡೆವುದಕೆ
ಬೆನ್ನೊಳು ಹೊರೆಯನು ಧರಿಸುತ ಶಿಖರವ
ನೇರುವುದು ನೋಡುವೆನು
೧೬
ತಲೆಯಾವರಿಸಿಹ ಗುರ್ಖಜನಂಗಳ
ಬೆಂಕಿಯ ಬಿದಿರಗಿಷ್ಟಿಕೆಯ
ಹೊಲಬನು ತಿಳಿಯಲು ತಲೆಯಲ್ಲಾಡಿಸಿ
ಕೇಳಿದೆ ಪಥಿಕರ ಕೌತುಕದೆ
೧೭
ನಗೆನಗೆಯಾಡುತ ಮೊಗವನು ನೋಡುತ
ತಿಳಿಯದ ಮಾತಿ೦ ಮೂದಲಿಸಿ
ಸಾಗುತ ಕರೆಯುವ ಪಥಿಕರ ನೋಡುತ
ಹೊರಳಿದೆ ಹೋಗುವ ದಿಶೆಗಾಗಿ
೧೮
ಹಿಂದು ಜನಾಂಗದ ಜಾತಿಗಳೆಲ್ಲವು
ಸ೦ದಿದ ನಿಯೋಗ ನಿಯಮವನು
ಇಂದಿಗು ಪಾಲಿಪ ಪರಿಯನು ತಿಳಿಯುತ
ವಿಸ್ಮಿತನಾದೆನು ಮನದಲ್ಲಿ
೧೯
ಓಡುತ ನೋಡಿದೆ ಕುರಡಿ ಬಾಝಾರವ
“ಸೆವಿಯರ ಹೊಟಲಿನ” ಮಾಟವನು
ಸೈನಿಕ ವೈದ್ಯಾಲಯವನ್ನು ನೋಡಿದೆ
ಮಾನವ ಮಮಕಾರಂಗಳನು
೨೦
ಓಡುತ ಡೆಹರಾಡೂನಿನ ಬೀಡಿಗೆ
ಸಾರಿದೆ ಸಂಧ್ಯಾಸಮಯದಲಿ
ಪಡುವಣ ನಿಟ್ಟದು ನೆರೆ ಸೆರೆಗೊಂಡಿತು
ತಪ್ಪಲದೊಪ್ಪಿನ ಸೀಮೆಯಲಿ
೨೧
ಸಂಧ್ಯಾಕಾಲದ ಸಂಜೆಯಗೆಂಪಿನ
ರಮಣೀಯತೆಯಾ ಒನಪನ್ನು
ಕಮಲಜ ಸೃಷ್ಟಿಯ ಕಮನೀಯತೆಯಾ
ಕೋಡಿನ ಕಲ್ಲೆನೆ ಕಾಣುತಿಹೆ
೨೨
ಯಾವುದು ನೋಡಲೊ ಯಾವುದು ಬಿಡಲೋ
ನೋಡುವದೆಲ್ಲವು ನೋಟವದು
ದೇವನ ಮಹಿಮೆಯ ಕಣ್ದೆರೆ ತೋರುವ
ಹಿಮಗಿರಿ ಸೀಮೆಯೆ ಮೋಕ್ಷವದು
*****
Tagged:

Leave a Reply

Your email address will not be published. Required fields are marked *

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...