Home / ಕಥೆ / ಕಾದಂಬರಿ / ಮಲ್ಲಿ – ೪೬

ಮಲ್ಲಿ – ೪೬

ರಾಣಿಗೆ ನೋವು ಎತ್ತಿದೆ. ಈಸಲ ಆನಂದಮ್ಮ ಮಲ್ಲಿ ಇಬ್ಬರೂ ಸಿದ್ದರಾಗಿದ್ದಾರೆ. ಹೆಸರಿಗೆ ಡಾಕ್ಟರ್ ಮಿಡ್‌ವೈಫ್ ಇರಬೇಕು. ಇರಲಿ. ಮಿಕ್ಕ ಸರ್ವ ಕಾರ್ಯಗಳನ್ನೂ ತಾನೇ ಮಾಡಬೇಕು ಎಂದು ಗೊತ್ತು ಮಾಡಿಕೊಂಡಿದ್ದಾರೆ. ಆನಂದಮ್ಮನು ವಯಸ್ಸಾದ ಅಜ್ಜಿಯರನ್ನೆಲ್ಲ ಕಂಡು ಮಗು ಹುಟ್ಟುವುದಕ್ಕೆ ಮುಂಚೆ ಏನು ಮಾಡಬೇಕು ಎಂಬು ದನ್ನು ತಿಳಿದುಕೊಂಡು ಬಂದಿದ್ದಾಳೆ. ನೋವು ಎತ್ತಿಡಕೂಡಲೇ ಏನೋ ಕಷಾಯ ಕೊಟ್ಟರು, ನೋವು ಬಲವಾಯಿತು. ಹುಲ್ಲು ಅರಿಶಿನದೆಣ್ಣೆ ಮಂತ್ರಿಸಿಕೊಟ್ಟರು. ಅದು ಕೊಟ್ಟ ಐದು ನಿಮಿಷದಲ್ಲಿ ಜನನವಾಯಿತು. ಡಾಕ್ಟರು ನಾಯಕನಿಗೆ ಸೂಚನೆ ಕೊಟ್ಟಿದ್ದರು. “ವಯಸ್ಸಾದಮೇಲೆ ಆಗಿರುವ ಗರ್ಭ. ಆದಷ್ಟು ಹುಷಾರಾಗಿರ ಬೇಕು” ಎಂದು. ದೇವರ ದಯ. ಗರ್ಭವು ಮೈ ಬಿಟ್ಟು ಸುಖವಾಗಿ ಕಳೆಯಿತು. ಹೂವಿನ ಸರವೆತ್ತಿದಷ್ಟು ಸುಲಭವಾಗಿ ಹೆರಿಗೆಯಾಯಿತು.

ಆನಂದಮ್ಮನು ಮಿಡ್‌ನೈಫ್ ಜೊತೆಯಲ್ಲಿ ರಾಣಿಗೆ ಉಪಚಾರ ಮಾಡುತ್ತಿರುವಾಗ ಇತ್ತ ಮಲ್ಲಿಯು ಮಗುವನ್ನು ನೋಡಿದಳು. ಗಂಡು ಮಗು. ಮುದ್ದಾಗಿದೆ. ಎಲ್ಲಾ ತನ್ನ ಮಗುವಿನ ಪ್ರತಿಬಿಂಬ. ಅವಳಿಗೆ ಬಹು ಸಂತೋಷವಾಗಿದೆ. ಹಾಗೇ ಆ ಮಗುವನ್ನು ತೆಗೆದು ಕೊಂಡು ಹೋಗಿ ಗಂಡನಿಗೆ ತೋರಿಸಬೇಕು ಎಂದು ಅವಸರ. ಆದರೆ ಅದಕ್ಕೆ ಸ್ನಾನಾದಿಗಳು ಆಗಬೇಕಲ್ಲ !

ಮಗುವಿಗೆ ಸ್ನಾನ ಮಾಡಿಸಿ ಅದನ್ನು ಬೆಚ್ಚಗೆ ಮೊರದಲ್ಲಿ ಮಲಗಿಸಿ ಆಯಿತು. ತಾನು ಕೈ ತೊಳೆದುಕೊಂಡು ಒರೆಸಿಕೊಂಡಳು. ಇನ್ನೂ ಟವಲು ಕೈಯನ್ನು ಒರೆಸುತ್ತಿದೆ. ಆಗಲೇ ಗಂಡನನ್ನು ಕೂಗಲು ಹೊರಟಳು. ನಡುಮನೆಯಲ್ಲಿ ಸೋಫಾದ ಮೇಲೆ ನಾಯಕನು ಕುಳಿತು ನಿರೀಕ್ಷಿಸುತ್ತಿದ್ದಾನೆ. ಮಲ್ಲಿಯು ಬಂದು,

“ಬುದ್ಧಿ, ದೇವರು ತಮಗೆ ಮಗನ್ನ ಕೊಟ್ಟಿದ್ದಾನೆ ” ಎಂದಳು.

ನಾಯಕನು ಸಂತೋಷದಲ್ಲಿ ಬರಸೆಳೆದು ಅಪ್ಪಿದನು. ತನ್ನ ಸೌಭಾಗ್ಯದೇವಿಯನ್ನು ಆರಾಧಿಸುವವನಂತೆ ಅವಳ ಮೇಲೆ ಮುತ್ತಿನ ಮಳೆಗರೆದನು. ಅವಳು ಅದಷ್ಟೂ ಆದರದಿಂದ ಸ್ವೀಕರಿಸಿ,

“ಹುಚ್ಚು ದೊರೆ ಇದಿಷ್ಟೂ ದೊಡ್ಡ ಮ್ಮಣ್ಣಿಯವರಿಗೆ ಸಲ್ಲ ಬೇಕಾದ್ದು. ನಿಮ್ಮ ವಂಶದ ರತ್ನದೀಪವನ್ನು ಬೆಳಗಿಸಿದವರು ಆ ಮಹಾ ತಾಯಿ, ಈ ದಾಸಿಯಲ್ಲ.” ಎಂದಳು,

ನಾಯಕನು ಹಾಗೆಯೇ ಆ ದೃಢಾಲಿಂಗನದಲ್ಲಿಯೇ “ಹೌದು ಮಲ್ಲಿ, ರಾಣಿ ಕೊಟ್ಟುದು ವಂಶದ ಭಾಗ್ಯ. ನೀನು ಬಂದುದು ನನ್ನ ಭಾಗ್ಯ. ” ಎಂದು ಮತ್ತೆ ಮುತ್ತಿಟ್ಟು ಕೊಂಡನು.

ಮಲ್ಲಿಯು ನಾಯಕನ ಕೈ ಹಿಡಿದು ಕರೆದುಕೊಂಡು ಬಂದು ಹೆರಿಗೆಯ “ಮನೆಯ ಬಾಗಿಲಲ್ಲಿ ಒಂದು ಕುರ್ಚಿ ಹಾಕಿ ಕುಳ್ಳಿರಿಸಿ ಹೋಗಿ ಮಗುವನ್ನು ತಂದುತೋರಿಸಿದಳು.

ನಾಯಕನಿಗೆ. ಮಗುವನ್ನು ನೋಡಿ ಪರಮ ಹರ್ಷವಾಯಿತು. ಮಗುವನ್ನು ಎತ್ತಿಕೊಳ್ಳಲು ಕೈ ನೀಡಿದನು. ಮಲ್ಲಿಯೂ ಆ ಮಗುವನ್ನು ಹಿಂದಕ್ಕೆ ತೆಗೆದುಕೊಂದು “ಉಂಟಾ [ ಊರಿಗೆಲ್ಲಾ ಸಕ್ಕರೆ ಹಂಚಿ ನನ್ನ ಮುಟ್ಟಬೇಕು.” ಎಂದಳು.

“ಮಗುವಿನ ತಾಯಿ ಹೆಂಗಿದ್ದಾರೆ ?” ನಾಯಕನು ಕೇಳಿದನು.

“ಗಂಜಿ ಬಸಿದ ಅನ್ನದ ಹಂಗೆ ಭೇಷಾಗಿದ್ದಾರೆ” ಮಲ್ಲಿಯೇ ಉತ್ತರ ಹೇಳಿದಳು.

ನಾಯಕನು ಸಂತೋಷದ ಮೂಟೆಯಾಗಿ ಹೊರಗೆ ಬಂದನು.

ಅವನು ಇನ್ನೂ ಬಂದು ಸೋಫಾದಲ್ಲಿ ಕುಳಿತುಕೊಳ್ಳುತ್ತಿದ್ದ ಹಾಗೆಯೇ ನರಸಿಂಹಯ್ಯನು ಬಂದನು. ನಾಯಕನು ಸಂಭ್ರಮದಿಂದ ಆತನನ್ನು ಬರಮಾಡಿಕೊಂಡು, ತಾನೇ ಓಡಿಹೋಗಿ “ಮಲ್ಲಿ, ಮಲ್ಲಿ, ಮೇಷ್ಟು ಬಂದಿದ್ದಾರೆ ಎಂದನು. ಮಲ್ಲಿಯು “ಆಂ ನಿಜವಾಗಿ?” ಎಂದು ಮಗುವನ್ನು ಮಲಗಿಸಿ ಒಡೋಡಿ ಬಂದಳು.

ಅವಳಿಗೆ ನರಸಿಂಹಯ್ಯ ನನ್ನು ನೋಡಿ ಪರಮಾನಂದವಾಯಿತು. ಅದುವರೆಗೂ “ಮೇಷ್ಟ್ರೆ! ಎನ್ನುತ್ತಿದ್ದವಳು, “ಗುರುವೇ ! ಮಹಾನುಭಾವ!” ಎಂದು ಓಡಿಹೋಗಿ ಆತನ ಪಾದಗಳನ್ನು ಹಿಡಿದು ನಮಸ್ಕಾರ ಮಾಡಿದಳು. ನಾಯಕನು ತಾನು ಏಕೆ ಹಾಗೆ ಮಾಡುತ್ತಿರುವೆನು ಎಂಬುದನ್ನು ಅರಿಯದೆಯೇ, ತಾನೂ ನಮಸ್ಕಾರ ಮಾಡಿದನು. ಮಲ್ಲಿಯು ತುಂಟತನದಿಂದ “ಬುದ್ದಿಯವರಿಗೆ ಈಗತಾನೇ ಪುತ್ರೋತ್ಸವ ವಾಯಿತು. ಅದಕ್ಕೆ ತಮ್ಮ ಗುರುಗಳಿಗೆ ಪಾದಪೂಜೆ ಮಾಡುತ್ತಿದ್ದಾರೆ.” ಎಂದು ಕಿಲಕಿಲನೆ ನಕ್ಕಳು.

ನರಸಿಂಹಯ್ಯನು “ಹಾಗೇನು! ಅದರಿಂದಲೇ ಮೇಷ್ಟ್ರು ಮಹಾನುಭಾವನಾದುದು !” ಎಂದು ತಾನೂ ನಕ್ಕನು.

ಮಲ್ಲಿಯು “ಅದಕ್ಕೆ ಉತ್ತರ ಆಮೇಲೆ ಕೊಡುತ್ತೇನೆ, ಗಾಂಧಿ ಯವರು ಹೇಗಿದ್ದಾರೆ ? ಎಲ್ಲಿದ್ದಾರೆ 7? ಎಂದು ಒಂದೇ ಉಸಿರಿನಲ್ಲಿ ಕೇಳಿದಳು.

ನರಗಿಂಹಯ್ಯನು ಹೇಳಿದನು: “ರೋಗಮುಕ್ತರಾಗಿದ್ದಾರೆ. ಆದರೆ ಇನ್ನೂ ನಿಶ್ಯಕ್ತಿ ತಪ್ಪಿಲ್ಲ. ಇನ್ನೂ ಉಪಚಾರವಾಗಬೇಕು. ಮೈಸೂರು ಮಹಾರಾಜರು ದಿವಾನರ ಮೂಲಕ ಅವರಿಗೆ ಆಹ್ವಾನ ಕೊಟ್ಟಿದ್ದಾರೆ. ಅವರೂ ಅಂಗೀಕರಿಸಿದ್ದಾರೆ. ಬಂದು ನಂದಿಯಲ್ಲಿ ಎರಡು ತಿಂಗಳು ಇರುತ್ತಾರೆ ”

ಮಲ್ಲಿಗೆ ಎಲ್ಲೂ ಹಿಡಿಸಲಾರದಷ್ಟು ಆನಂದವಾಯಿತು : “ಬುದ್ಧಿ, ಮಹಾರಾಜರೇ ಕರೆದಿದ್ದಾರೆ ಅಂದಮೇಲೆ ತಾವು ಇನ್ನೂ ನಿರಾತಂಕ ವಾಗಿ ಬರಬಹುದಲ್ಲ. ಅಲ್ಲಿ ನಾವೂ ಒಂದು ಬಂಗಲೆ ತಕೊಂಡು ಇದ್ದು ಬಿಡೋವ” ಎಂದಳು. ನಾಯಕನು “ಸಂತೋಷವಾಗಿ” ಎಂದನು. ಆತನ ದೇಹದ ನರನರವೂ ಆ ಸಂತೋಷವಾಗಿ ಎಂಬ ಮಾತನ್ನು ವೀಣೆ ನುಡಿದಂತೆ ನುಡಿಯಿತು.
*****
ಮುಂದುವರೆಯುವುದು

Tagged:

Leave a Reply

Your email address will not be published. Required fields are marked *

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...