Home / ಕವನ / ಕವಿತೆ / ಬುದ್ಧನ ಹುಡುಕಾಟ

ಬುದ್ಧನ ಹುಡುಕಾಟ

ಬುದ್ಧನ ಹುಡುಕಿದೆ.
ಉಸಿರುಗಟ್ಟಿಸುವ ನಾಗರೀಕ ತಾಣಗಳಲ್ಲಿ
ಚಿತ್ರಹಿಂಸೆಯ ಗ್ಯಾಸ್ ಛೇಂಬರ್‌ಗಳಲ್ಲಿ
ತೊಟ್ಟಿಲಲ್ಲಿ ಮಲಗಿದ ಮುದ್ದು ಕಂದನ
ಮುಗ್ಧ ಮುಗುಳು ನಗೆಯ ಬೆಳಕಲ್ಲಿ
ದ್ವೇಷವಿಲ್ಲ, ಮಗುವಿನ ಮುಗ್ಧತೆಯಲ್ಲಿ.

ಬುದ್ಧನ ಹುಡುಕಿದೆ.
ಬೆಳಗು ಮುಂಜಾವಿನ ಬಿದ್ದ ಕನಸಿನಲಿ
ಹುಲ್ಲ ಮೇಲಿನ ಇಬ್ಬನಿ ಕರಗಿ ಮೋಡವಾಗುವಲ್ಲಿ
ಅಕ್ಷರಗಳು ಅಜ್ಞಾನ ಸುಡುವ ಸಾಕ್ಷಿ -ಪ್ರಜ್ಞೆ ಅರಳುವಲ್ಲಿ
ಅಹಮ್ಮನ್ನು ಅಗ್ನಿಗರ್‍ಪಿಸಿದ ಆತ್ಮದ ಪ್ರಭೆಯಲ್ಲಿ.

ಬುದ್ಧನ ಹುಡುಕಿದೆ
ಶಬ್ದ ಸಂತೆಯಲ್ಲಿ ನಿಶಬ್ಧ ಗೂಡುಗಳಲ್ಲಿ
ಮಹಾ ಮೌನದ ಘನತೆಯ ನಡೆಯಲ್ಲಿ
ನೆಲದ ತುಂಬ ಬೆಳಕಿನ ಬೀಜ ಬಿತ್ತುವಲ್ಲಿ
ಶಾಂತಿ ಪ್ರಭೆಯ ಚಿಗುರು ಮೊಳೆಯುವಲ್ಲಿ.

ಬುದ್ಧನ ಹುಡುಕಿದೆ.
ಬೋಧಿವೃಕ್ಷದ ನೆರಳಿನಲ್ಲಿ ಜ್ಞಾನ ಬೆಳಕಿಲ್ಲಿ
ಬುದ್ಧಗಯಾದ ಎಲೆ ಮೇಲಿನ ಇಬ್ಬನಿಯಲ್ಲಿ
ಕೋಗಿಲೆಯ ಇಂಪಾದ ಶಾಂತಿ ಸಂದೇಶದಲ್ಲಿ
ಉದಾತ್ತ ನಿಲುವಿನ ಆ ಭವ್ಯ ಭಂಗಿಯಲ್ಲಿ

ಬುದ್ಧನ ಹುಡುಕಿದೆ.
ಊರು ಕೇರಿಯ ವಧಾಸ್ಥಾನಗಳಲ್ಲಿ
ಚಿತ್ತಕ್ಕೆ ಹತ್ತಿದ ಬೆಂಕಿ ಉರಿಯುವಲ್ಲಿ
ಪ್ರೀತಿ ಲೋಕದ ಬೀಜ ಮೊಳೆಯುವಲ್ಲಿ
ಮನದ ಕೋಣೆಯಲಿ ಮಬ್ಬು ಪ್ರಜ್ವಲಿಸುವಲ್ಲಿ
ಕರುಣಾರಸದಲ್ಲಿ ತೊಯ್ದ ಅದ್ದಿದ ಭಾವಗಳಲಿ.

ಬುದ್ಧನ ಹುಡುಕಿದೆ.
ನಿದ್ದೆಯಿಂದೆದ್ದು ನಡೆದ ಬರಿಗಾಲು ನಡಿಗೆಯಲ್ಲಿ
ನಾಡ ತುಂಬ ಮೂಡಿದ ಹೆಜ್ಜೆ ಗುರುತುಗಳಲ್ಲಿ
ಬತ್ತಿಹೋದ ಕರುಳ ಬಳ್ಳಿಯ ಸಂಬಂಧಗಳಲ್ಲಿ
ಇಬ್ಬನಿ ಹನಿಗೆ ಅಮರತ್ವದ ಆಸೆ ಚಿಗುರುವಲ್ಲಿ.

ಬುದ್ಧನ ಹುಡುಕಿದೆ.
ರಸ್ತೆಗಂಟಿದ ರಕ್ತ ಕಲೆಗಳ ತೊಳೆವ ಮಳೆ ಹನಿಗಳಲ್ಲಿ
ಕ್ರೌರ್‍ಯತುಂಬಿರುವಲ್ಲಿ, ಪ್ರೀತಿಯ ಸಾಗರಗಳಲ್ಲಿ
ಟಾರು ರಸ್ತೆಯ ಕಲೆಗಳೇನೋ ತೊಳೆದು ಹೋದವು
ಬಿದ್ದ ಹನಿಗಳ ಹೀರಿಕೊಳ್ಳಲು ನೆಲವೇ ಇಲ್ಲವಲ್ಲ
ಬರೀ ಹಾರ್‍ನು, ಸಿಗ್ನಲ್ಲು, ಟ್ರಾಫಿಕ್ಕು, ಕಾಂಕ್ರೀಟು ಬರೀ ಧೂಳು
ಬರಡು ಕಾಂಕ್ರೀಟು ಕಾಡಿನಲ್ಲಿ ಎಲ್ಲಿ ಹುಡುಕಲಿ ನಿನ್ನ
ಬುದ್ಧ ಎಲ್ಲಿ ಹುಡುಕಲಿ ನಿನ್ನ?
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...