Home / ಕವನ / ಕವಿತೆ / ಹಸಿವು

ಹಸಿವು

ಅಲ್ಲಿ ಝಗಝಗಿಸುವ ಸೂರ್ಯ ಉರಿನಾಲಿಗೆ ಚಾಚುತ್ತಾನೆ
ಅವನಂತೆ ತಿರುಗಣಿಯ ಗೋಳಾಟವಾಡುವ
ಉರಿಯುಂಡೆಗಳು ಯಾವ ಒಡಲಿಗಾಗಿ ತಿರುಗುತ್ತಿವೆಯೋ?
ಎರವಲಿಗೆ ಮೈತೊರೆದು ಗೂಟಕೊಡನಾಡುತಿವೆ
ಗಣನೆಯಿಲ್ಲದ ಮಣ್ಣ ಗುಂಡುಗಳು, ನೆರಳ ಬಂಡುಗಳು
ಇಲ್ಲಿ ಕೆಳಗೆ ಹಸಿದ ಮಣ್ಣು ಬಾಯ್ಬಿಟ್ಟು ನಾಲಗೆ ಜೊಲ್ಲುತ್ತಿದೆ
ಎಳೆಯುತಿದೆ ಮುಗಿಲ ಸೆರಗನ್ನು
ಜಾರಿ ಬೀಳುತ್ತದೆ ನಾಚಿಕೆ ನೀರಾಗಿ
ಹಸಿದ ನೀರು ಹರಿಹರಿದು ಓಡುತಿದೆ ತಳ ಕಾಣುವನಕ
ತಳಹೊಟ್ಟೆತಗ್ಗುಗಳು ತುಂಬಿದರೂ ಒಳಕರುಳು ಕಳವಳಿಸುತ್ತವೆ
ಆಸೆ ಹೆಡೆ ಒಡೆತೆನೆಯೆತ್ತಿ ಚಾಚುತ್ತದೆ ಆಗಸಕ್ಕಾಯೆಂದು ಬಾಯಿ
ತುರೀಯ ಚುಂಬನದ ಸವಿಜೇನಿಗಾಗಿ
ಇಲ್ಲಿ ಕೆಳಗಿನೊಳಗೆ ಜೀವ ಜೀವಗಳು ಚರ್ಮಸುಲಿದು
ರಕ್ತ ಕುಡಿದು ಮಾಂಸ ನೆಣ ಕಿತ್ತು ತಿನ್ನುತ್ತಿವೆ
ಒಂದರ ಜೀವ ಇನ್ನೊಂದರ ಸಾವು
ಗಂಡು ಹೆಣ್ಣಿಗಾಗಿ ಹೆಣ್ಣು ಗಂಡಿಗಾಗಿ
ಹಸಿದು ಹಸಿವಿಂಗಿಸಲೆಂದೇ ಹಬ್ಬಿಸಿಕೊಂಡಿವೆ ಹೊಕ್ಕುಳಬಳ್ಳಿಗಳ
ತೆರೆದುಕೊಂಡಿವೆ ಬಸಿರು ಭಾವಗಳ
ಹೊಸೆಯುತ್ತಿವೆ ಒಡಲ ಹಗ್ಗಕಗ್ಗಗಳ
ಈ ಹಸಿವಿಗಿಲ್ಲ ತಿಂದು ತೇಗಿದ ತೃಪ್ತಿ
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...