ಅವನು-ಅವಳು

ಕಲನಾದಿನಿ ಕಾವೇರಿಯ ತೀರದಿ
ತನ್ನನೆ ನೆನೆಯುತಲವನಿದ್ದ;
ತನ್ನ ಬಿಜ್ಜೆ ಕುಲ ಶೀಲ ಸಂಪತ್ತು
ತನ್ನ ರೂಪು ತನ್ನೊಳೆ ಇದ್ದ.

ತನ್ನವರೊಲ್ಲದ ಸರಸತಿ ನವವಧು
ಗಂಡನ ಮಡಿವಾಳಿತಿಯಾಗಿ
ಹಿಂಡುಬಟ್ಟೆಗಳ ಹಿಂಡಲು ಬಂದಳು
ಜವ್ವನದುಲ್ಲಸದೊಳು ತೂಗಿ.

ಕರೆಯೊಳಗಿಬ್ಬರೆ-ಆರೋ ಎನ್ನುತ
ಸೆರಗೆದೆಗೆಳೆವಳು ನಾಚುತಲಿ,
ಬಳಿಕಿವನೇ-ಸರಿ-ಭಯವೇನೆನ್ನುತ
ಹೊಳೆಗಿಳಿವಳು ನಿರ್ಲಕ್ಷ್ಯದಲಿ.

ಬಿಂಕದವನೀತ, ಬಿಂಕದವಳಾಕೆ,
ಮೌನ ನೆರವು ಮನ ಮಾತಾಡೆ;
ಕಣ್ ಕಣ್ ಕೂಟವೆ ಸಾಕಾಯ್ತವರಿಗೆ
ಬೇಟದ ಬಿರುನುಡಿ ಸಿಡಿದಾಡೆ.

“ಆಹಾ ನೀ ಸುಂದರಿ, ದಿಟ, ಆದೊಡೆ
ಮರುಕವ ತರುವುದು ಈ ಚೆಲುವು;
ಇದರಿಂಬಿಗೆ ನಿರ್ಭಾಗ್ಯರ ಮನೆಯೇ?
ಎನ್ನುತ ಸುಯ್ಯುವುದೆನ್ನೊಲವು.”

ಎನಲಾಕೆಯು ತಾತ್ಸಾರದಿ ನುಡಿವಳು:
“ನಿನ್ನ ಮರುಕವಾರಿಗೆ ಬೇಕು!
ಸುಮ್ಮನಿರೈ ನನ್ನಿದಿರೇ ಈ ಹಿಡಿ-
ಹೊನ್ನಳತೆಯ ನೇಹದ ಕಾಕು”

ಎನೆ ಅವನಿಂತೆಂದನು ನಸು ನಾಚುತ:
“ತಪ್ಪು ತಪ್ಪು ನಮ್ಮಪ್ಪನದೊಪ್ಪಿದೆ;
ಹಣಕೂ ಮಿಗಿಲಾಯ್ತಭಿಮಾನ
ಕೇಳಿದ ತಪ್ಪಿಗೆ ಕೊಡೆನೆನ್ನುವ ತ-
ಪ್ಪೀ ಹೋರಾಟದಿ ಸೊಗವೂನ.”

ಸರಸತಿ ಮೌನದೊಳೇ ಮರನುಡಿದಳು:
“ತಪ್ಪೋ ಒಪ್ಪೋ ಸೊಗವೋ ಸುಯ್ಯಲೊ
ನಿನ್ನದು ನಿನಗೆನ್ನದು ನನಗೆ-
ನಿನ್ನವರ ಬಿಂಕಕೆನ್ನೊಲವೆ ಸುಂಕ?
ಪೋ, ಇನ್ನಾ ಮಾತೇಕೆಮಗೆ!

ನಿನ್ನ ರೂಪ ಸಿರಿ ಬಿಚ್ಚೆ ಬಿಗುಮಾನ
ನಿನಗೆಯೆ ಇರಲೇ ಪಿತೃಭಕ್ತಿ-
ಇದೆ ಸಾಕಿದೆಸಾಕಿದೆಸಾಕೆನಗೀ
ಬಡವರ ನೆರವಿನೊಳೇ ಮುಕ್ತಿ.”

ಬಿರುಸಿನೊಳೊಗೆಯುವ ಬಟ್ಟೆಯ ಸದ್ದಿನೊ-
ಳೀ ತೆರ ಬಿರುನುಡಿಗಳ ನುಡಿದು
ಕಜ್ಜ ತೀರೆ ಮೇಲೆದ್ದು ನಡೆದಳು
ರೂಪಶೀಲದಿಂದೆದೆ ಕಡೆದು.

ಹುಸಿಮರುಕದ ಹೊಗೆಯಾರುತಲಾಸೆಯ
ಕಿಡಿಯುರಿದೊಲುಮೆಯ ಬೆಳಕಾಗಿ
ಬಿಂಕವ ಸುಟ್ಟು ನಿರಾಸೆಯ ತೋರಲು
ಎಂತು ಸುಯ್ದನವ ನಿಡಿದಾಗಿ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮಗು ಮಲಗಿದಂತೆ

ಸಣ್ಣ ಕತೆ

  • ಕತೆಗಾಗಿ ಜತೆ

    ರಾಜರ ಮನಿಲಿ ವಂದ್ ಮಡವಾಳವ ಬಟ್ಟೆ ಶೆಳೀಲಿಕ್ಕಿದಿದ್ದ. ಅವನಿಗೆ ನೆಂಟ್ರ ಮನಿಗೆ ವಂದಿವ್ಸ ಹೋಗಬೇಕು ಹೇಳಿರೆ ಸೌಡಾಗುದಿಲ್ಲ. ನಿತ್ಯೆ ಬಟ್ಟೆ ಶೆಳುದ್ ವಂದೇಯ. ವಂದಾನೊಂದ ದಿವಸ ಇವತ್… Read more…

  • ಆ ರಾಮ!

    ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…

  • ಸ್ನೇಹಲತಾ

    ೧೫-೯-೧೯.. ಈಗ ಮನಸ್ಸಿಗೆ ನೆಮ್ಮದಿಯೆನಿಸುತ್ತಿದೆ. ಇಂದಿನಿಂದ ಮತ್ತೆ ನನ್ನ ದಿನಚರಿ ಬರೆಯುವ ಕಾರ್ಯಕ್ರಮವನ್ನು ಆರಂಭಿಸಬೇಕು. ದಿನಚರಿಯೆ ನನ್ನ ಸಹಧರ್ಮಿಣಿ; ನನ್ನ ಸಹ-ಸಂಚಾರಿ; ಅದೆ ನನಗೆ ಸಂತಸ ಕೊಡುವುದು.… Read more…

  • ಎರಡು ಪರಿವಾರಗಳು

    ಇದು ಎರಡು ಪರಿವಾರದ ಕತೆ. ಒಂದು ಹಕ್ಕಿ ಪರಿವಾರ, ಇನ್ನೊಂದು ಮನುಷ್ಯ ಪರಿವಾರದ್ದು. ಒಂದು ಸುಂದರ ತೋಟ; ವಿಧವಿಧದ ಗಿಡ ಮರಗಳು; ಅವುಗಳ ಕವಲು ಬಿಟ್ಟ ರೆಂಬೆಗಳಲ್ಲಿ… Read more…

  • ಧರ್ಮಸಂಸ್ಥಾಪನಾರ್ಥಾಯ

    ಕಪಿಲಳ್ಳಿಯ ಏಕೈಕ ಸಂರಕ್ಷಕ ಕಪಿಲೇಶ್ವರನ ವಾರ್ಷಿಕ ರಥೋತ್ಸವದ ಮುನ್ನಾದಿನ ಧಾರ್ಮಿಕ ಪ್ರವಚನವೊಂದನ್ನು ಏರ್ಪಡಿಸಲೇಬೇಕೆಂದೂ, ಇಲ್ಲದಿದ್ದರೆ ಜಾತ್ರಾ ಮಹೋತ್ಸವಕ್ಕೆ ತನ್ನ ಸಪೋರ್ಟು ಮತ್ತು ಕೋ-ಆಪರೇಶನ್ನು ಬಿಲ್ಲು ಕುಲ್ಲು ಸಿಗಲಾರದೆಂದೂ,… Read more…