Home / ಕವನ / ಕವಿತೆ / ಅವನು-ಅವಳು

ಅವನು-ಅವಳು

ಕಲನಾದಿನಿ ಕಾವೇರಿಯ ತೀರದಿ
ತನ್ನನೆ ನೆನೆಯುತಲವನಿದ್ದ;
ತನ್ನ ಬಿಜ್ಜೆ ಕುಲ ಶೀಲ ಸಂಪತ್ತು
ತನ್ನ ರೂಪು ತನ್ನೊಳೆ ಇದ್ದ.

ತನ್ನವರೊಲ್ಲದ ಸರಸತಿ ನವವಧು
ಗಂಡನ ಮಡಿವಾಳಿತಿಯಾಗಿ
ಹಿಂಡುಬಟ್ಟೆಗಳ ಹಿಂಡಲು ಬಂದಳು
ಜವ್ವನದುಲ್ಲಸದೊಳು ತೂಗಿ.

ಕರೆಯೊಳಗಿಬ್ಬರೆ-ಆರೋ ಎನ್ನುತ
ಸೆರಗೆದೆಗೆಳೆವಳು ನಾಚುತಲಿ,
ಬಳಿಕಿವನೇ-ಸರಿ-ಭಯವೇನೆನ್ನುತ
ಹೊಳೆಗಿಳಿವಳು ನಿರ್ಲಕ್ಷ್ಯದಲಿ.

ಬಿಂಕದವನೀತ, ಬಿಂಕದವಳಾಕೆ,
ಮೌನ ನೆರವು ಮನ ಮಾತಾಡೆ;
ಕಣ್ ಕಣ್ ಕೂಟವೆ ಸಾಕಾಯ್ತವರಿಗೆ
ಬೇಟದ ಬಿರುನುಡಿ ಸಿಡಿದಾಡೆ.

“ಆಹಾ ನೀ ಸುಂದರಿ, ದಿಟ, ಆದೊಡೆ
ಮರುಕವ ತರುವುದು ಈ ಚೆಲುವು;
ಇದರಿಂಬಿಗೆ ನಿರ್ಭಾಗ್ಯರ ಮನೆಯೇ?
ಎನ್ನುತ ಸುಯ್ಯುವುದೆನ್ನೊಲವು.”

ಎನಲಾಕೆಯು ತಾತ್ಸಾರದಿ ನುಡಿವಳು:
“ನಿನ್ನ ಮರುಕವಾರಿಗೆ ಬೇಕು!
ಸುಮ್ಮನಿರೈ ನನ್ನಿದಿರೇ ಈ ಹಿಡಿ-
ಹೊನ್ನಳತೆಯ ನೇಹದ ಕಾಕು”

ಎನೆ ಅವನಿಂತೆಂದನು ನಸು ನಾಚುತ:
“ತಪ್ಪು ತಪ್ಪು ನಮ್ಮಪ್ಪನದೊಪ್ಪಿದೆ;
ಹಣಕೂ ಮಿಗಿಲಾಯ್ತಭಿಮಾನ
ಕೇಳಿದ ತಪ್ಪಿಗೆ ಕೊಡೆನೆನ್ನುವ ತ-
ಪ್ಪೀ ಹೋರಾಟದಿ ಸೊಗವೂನ.”

ಸರಸತಿ ಮೌನದೊಳೇ ಮರನುಡಿದಳು:
“ತಪ್ಪೋ ಒಪ್ಪೋ ಸೊಗವೋ ಸುಯ್ಯಲೊ
ನಿನ್ನದು ನಿನಗೆನ್ನದು ನನಗೆ-
ನಿನ್ನವರ ಬಿಂಕಕೆನ್ನೊಲವೆ ಸುಂಕ?
ಪೋ, ಇನ್ನಾ ಮಾತೇಕೆಮಗೆ!

ನಿನ್ನ ರೂಪ ಸಿರಿ ಬಿಚ್ಚೆ ಬಿಗುಮಾನ
ನಿನಗೆಯೆ ಇರಲೇ ಪಿತೃಭಕ್ತಿ-
ಇದೆ ಸಾಕಿದೆಸಾಕಿದೆಸಾಕೆನಗೀ
ಬಡವರ ನೆರವಿನೊಳೇ ಮುಕ್ತಿ.”

ಬಿರುಸಿನೊಳೊಗೆಯುವ ಬಟ್ಟೆಯ ಸದ್ದಿನೊ-
ಳೀ ತೆರ ಬಿರುನುಡಿಗಳ ನುಡಿದು
ಕಜ್ಜ ತೀರೆ ಮೇಲೆದ್ದು ನಡೆದಳು
ರೂಪಶೀಲದಿಂದೆದೆ ಕಡೆದು.

ಹುಸಿಮರುಕದ ಹೊಗೆಯಾರುತಲಾಸೆಯ
ಕಿಡಿಯುರಿದೊಲುಮೆಯ ಬೆಳಕಾಗಿ
ಬಿಂಕವ ಸುಟ್ಟು ನಿರಾಸೆಯ ತೋರಲು
ಎಂತು ಸುಯ್ದನವ ನಿಡಿದಾಗಿ!
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...