ಸಫಲ

‘ನಮ್ಮ ಸೊಡರನುರಿಸುವಿರೇಂ
ಮಿಣುಕಲಿಂತು ಬರಿಯೆ?
ಪರರ ಬೆಳಕನಳುಪುವಿರೇಂ?
ಸುಡದೆ ನಿಮ್ಮ ಗರಿಯೆ?’-
ಜಂಕಿಸಿತಿಂತುಡು ಸಂಕುಳ
ಹೊಂಚುವ ಮಿಂಚುಹುಳಂಗಳ
ಬೇಸಗೆ ಕೊನೆವರಿಯೆ. ೭

‘ಕುರುಡಾದಿರೆ ಬೆಳಕಿನಿಂದ?
ನಿಮ್ಮ ಬೆಳಕಿದಲ್ಲ;
ನಿಮಗೆತ್ತಣಿನತ್ತಣಿಂದ
ನಮಗಿದು ಬಂತಲ್ಲ?
ಹಿರಿದು ಕಿರಿದು ಬೆಳಕಿಗಿಲ್ಲ.
ಪರರ ಬೆಳಕು ತನಗೆ ಸಲ್ಲ-
ಬೆಳಕು ಸಫಲವೆಲ್ಲ’ ೧೪

‘ಹಾಡುವಿರೇನೆಮ್ಮ ಹಾಡ
ಕಿರಿಚಲಿಂತು ಬರಿಯೆ?
ಹಿರಿಯ ಮರುಳು ಕೊಳದೆ ಸೇಡ
ಕಿರಿಯ ಗರಿಯ ಬಿರಿಯೆ?’-
ಜರೆದುದಿಂತು ತೆರೆಯ ದಳಂ
ಪಲ್ಲನಿಸುವ ಝಿಲ್ಲಿಗಳಂ
ಮೊದಲ ಮುಗಿಲ್ಗರೆಯೆ. ೨೧

‘ಕಿವುಡಾದಿರೆ ಹಾಡಿನಿಂದ?
ನಿಮ್ಮ ಹಾಡಿದಲ್ಲ;
ನಿಮಗೆತ್ತಣಿನತ್ತಣಿಂದ
ನಮಗಿದು ಬಂತಲ್ಲ?
ಹಿರಿದು ಕಿರಿದು ಹಾಡಿಗಿಲ್ಲ,
ಪರರ ಹಾಡು ತನಗೆ ಸಲ್ಲ-
ಹಾಡು ಸಫಲವೆಲ್ಲ. ೨೮

ಮಿಂಚಿನ ಮರಿ ಮುಂಚಿ ಮೆರಸೆ
ಹೃದಯ ಶಿಖೆಯ ಹೊನ್ನ,
ಗುಡುಗಿನ ಮಗು ಮುಡುಗಿ ಮೊರಸೆ
ಕಿನ್ನರಿಗರಿಯನ್ನ,
ಹತ್ತೆ ಹತ್ತೆಯುರುಳೆ ಮೊಳಗು,
ಸುತ್ತು ಸುತ್ತು ಕುರುಳೆ ತೊಳಗು,
ಬೆಳೆಯಿತು ಮಳೆ ಮುನ್ನ ೩೫

೧ಆಟಿಯ ನಟ್ಟಿರುಳೊಳಂದು
ಬೀಸುವ ಮಳೆಯಲ್ಲಿ,
ಬಾನವೆ ತಾನೊಂಟಿಯೆಂದು
ನೆಡಗುವಡಗುವಲ್ಲಿ;
ತೂಕಡಿಸುವ ಬೆಟ್ಟದಲ್ಲಿ,
ಆಕಳಿಸುವ ತೊಟ್ಟಿಯಲ್ಲಿ,
ಮೇಕೆದಾರಿಯಲ್ಲಿ, ೪೨

ಪಥಿಕನೊಬ್ಬನೂರಿ ಮುಟ್ಟೆ
ಮುಟ್ಟೆ ಮೆಟ್ಟಿ ನಡೆಯೆ,
ಎದೆಯ ಬೆಪ್ಪು ಕಿವಿಯ ತಟ್ಟೆ,
ಜತೆಯ ನೆರಳೆ ಕೆಡೆಯೆ-
ಮಿರ್ರನೊಂದು ತಾರೆಯಿಲ್ಲ,
ಭೋರೆಂಬ ತರಂಗವಿಲ್ಲ
ಉಸುರಿಗೆ ಸಿಡಿಮಿಡಿಯೆ; ೪೯

ಮಿಂಚುಹುಳವ ಕಂಡನೆಂತು,
ಝಿಲ್ಲಿಯ ಗಾನವಂ
ಕೇಳ್ದನೆಂತು, ಮೂಡಿತಂತು
ಕಂತಿದೆಳವೆ ನವಂ-
ಕಂಗೆ ಸುಳಿಯಲೆಳೆಯ ಸೊಂಪು,
ಕಿವಿಗೆ ನುಸುಳೆ ಹಸುಳೆಯಿಂಪು,
ಪಧವ ಹಿಡಿದನವಂ ೫೬
*****
೧ ಆಷಾಢಮಾಸ

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...