Home / ಕವನ / ಕವಿತೆ / ಪಾಲುಮಾರಿಕೆ

ಪಾಲುಮಾರಿಕೆ

ಯಾವಳೊಬ್ಬ ಹಾಲುಗಿತ್ತಿ
ಹಾಲ ಕೊಡವ ತಲೆಯೊಳೆತ್ತಿ
ಹೊಳೆಯಾಚೆಗೆ ಕಡೆಯಲೊತ್ತಿ
ಕಡಕೆ ಬಂದಳು ೪

ತಡವಿನಿಸಿರೆ ಕಡವ ತೆರೆಯೆ,
ಕೊಡವನಿಳಿಸಿ ನೀರನೆರೆಯೆ,
ಹಾಲಿನರಕೆ ನೆರೆದು ನೊರೆಯೆ
ತುಂಬಿತಾ ಕೊಡಂ ೮

ಅವಸರದಿಂ ದೋಣಿ ಹತ್ತಿ
ಕುಳಿತಳಾಕೆ ೧ಬಾಣಿಗೊತ್ತಿ;
ತಿರುಗಲಂಬಿ ಹಗಲು ಮುತ್ತಿ
ತಾಕೆಯ ಮೊಗದಿ. ೧೨

ಮುಂಬಿಸಿಲಲಿ ಬೆಮರು ತುರುಗೆ,
ಸೂಸಿತು ಕಿರುನಗೆಯ ನಿರಿಗೆ-
ಜಾಲಾಕ್ಷದಿ ನುಸುಳಿ ಹೊರಗೆ
ಸುಳಿವ ಗಾಳಿಯೊ? ೧೬

ಅನಿಬರ ಗಂಡಸರ ಮುಂತು
ಮೊಗವ ತೊಳೆಯದಿರುವಳೆಂತು?
ಸೆರಗ ಸರಿಸಿ ನಿರಿಯೊಳಾಂತು
ತೊರೆಗೆ ಬಗ್ಗಲು, ೨೦

ಸಡಲಿದ ತಿರುಗಣೆಯ ತಿಳಿಯ
ದವಳ ಬಲದ ಕಿವಿಯ ಗಿಳಿಯ
ವಾಲೆ ಜಗುಳುವೊಡನೆ ಹೊಳೆಯ
ಗುಳುಗುಳೊರೆದುದು. ೨೪

ಕಿವಿಯ ಮುಟ್ಟಲೋಲೆಯಿಲ್ಲ!
ಕಿವಿಯೆ ಕುಸಿದು ಕೆಡೆದುದಲ್ಲ!
ಕಣ್ಣಿಗುಕ್ಕುವೆದೆಯ ಗುಲ್ಲ
ನಿಂತು ಹುಯ್ದಳು- ೨೮

‘ಇದ್ದುದೆಲ್ಲ ಪೋದುದಲ್ಲ!
ಮನದ ನೆಲುಹು ಹರಿದುದಲ್ಲ!
ದೇವರೆ, ಕೆಯ್ಬಿಟ್ಟೆಯಲ್ಲ
ನಟ್ಟನೀರಲಿ! ೩೨

‘ಪೋದುದೆ ಕಟ ಕಣ್ಣಮುಂದೆ?
ನೀರೆ ನನ್ನನದ್ದಿ ಕೊಂದೆ!
ಗಳಿಸಿದೆನೇನ್ನೀರಿಗೆಂದೆ
ವಾಲೆಯಿದನ್ನ? ೩೬

‘ಅಮ್ಮನೆನಗೆ ಕೊಟ್ಟುದಲ್ಲ,
ಗಂಡನಿದಂ ಕೊಂಡುದಲ್ಲ,
ಅಕಟ ನಾನೆ ದುಡಿದೆನಲ್ಲ
ಮೆಯ್ಯ ಮುರಿತದಿಂ? ೪೦

‘ಗೊಲ್ಲರೆಮ್ಮ ಪಾಳ್ಯದಲ್ಲಿ
ನನ್ನೊಬ್ಬಳ ಕಿವಿಗಳಲ್ಲಿ
ಅಲ್ಲದೆ ಮತ್ತಾರಿಗಲ್ಲಿ
ಇಂತಹ ವಾಲೆ? ೪೪

‘ಇದರ ಚಿನ್ನದೇನು ಬಣ್ಣ ?
ಕೆತ್ತನೆಯಿದರಾರ ಕಣ್ಣ
ಕುಕ್ಕದು? ಪದೆದೆದೆಯ ಹುಣ್ಣ
ಬೆಲೆಯ ತೆತ್ತೆನೆ? ೪೮

‘ಯಾವ ಕೆಟ್ಟ ಶನಿಯೊ ಕಣ್ಣ
ಕಟ್ಟುತ ತನಿಸುಖದ ಗಿಣ್ಣ
ಮುಕ್ಕುವೆನ್ನ ಬಾಯ್ಗೆ ಮಣ್ಣ
ನಕಟ ಹೆಟ್ಟಿತು? ೫೨

‘ನಾದಿನಿ ಇದನೆರೆಯಲೊಂದು
ದಿನಕಿತ್ತೆನೆ ಅವಳಿಗಿಂದು?
೨ನತ್ತೆ ಕರಿಯ ಕೊತ್ತಿಗೆಂದು
ಮನದಿ ನಕ್ಕೆನೆ? ೫೬

‘ಹರಿದೆನಾರ ವಾಲೆಯನ್ನ
ಮುನ್ನ ಹುಟ್ಟೊಳಲ್ಲಡೆನ್ನ
ಹಾಲೆ ಹರಿವ ಹರಕೆಯನ್ನ
ಹೊಳೆಗೆ ಹೊತ್ತೆನೆ? ೬೦

‘ಯಾರ ಸೊಟ್ಟ ಮೋರೆಯನ್ನ
ಕಂಡೆನೊ ಹೊತ್ತಾರೆಯನ್ನ?
ಜೀವಕೆ ಗಂಟಿಕ್ಕಿದೆನ್ನ
ತೊಡವೆ ಪೋದುದೆ? ೬೪

‘ಕಳೆದು ಹೋದ ವಾಲೆಗಳಲೊ?
ಅಣಕುವ ನೆರೆಯವರಿಗಳಲೊ?
ತವರಂ ತಿವಿವತ್ತೆಗಳಲೊ?
ನನಗಾನಳಲೊ? ೬೮

‘ಇನ್ನೆನಗಿದು ಬರುವುದುಂಟೆ?
ಬರಿದಿನ್ನೇಕಿದರ ತಂಟೆ?’
ತಿರುಪತಿಯಲಿ ಹಣದ

ಮನಸಿನ ೩ತನೆ ಕರಗಲಿಂತೆ
ಯಾರ ಮನಂ ಕೊರಗದಂತೆ?-
ಹಾಲುನಗೆಗೆ ಹನಿಯೆ ಚಿಂತೆ
ಹೆಪ್ಪುಗೊಳಿಸದೆ? ೭೬

ಮೊಳಕಾಲಲಿ ಮೊಗವಸೂರಿ
ಕುಳಿತಳಾಕೆ ತರಿಯ ಗೀರಿ,
ದಿನಮುಖದೆಲಿವನಿಯೊ? ಸೋರಿ
ತಾಕೆಯಂಬಕಂ. ೮೦

ದೋಣಿಯೆಲ್ಲ ಮರುಗಿತಲ್ಲಿ-
ನುಡಿಗಳ ಬಾಯ್ಮರುಕವೆಲ್ಲಿ?
೪ಜಲ್ಲೆ ತಗಲದಾಳವೆಲ್ಲಿ?
ಓಡವೋಡಿತು. ೮೪

ತೊರೆಯನೊಬ್ಬ ರಸಿಕನಂತೆ,
ನಗುತ ನುಡಿದನವಳಿಗಿಂತೆ-
ಹೆರರ ಚಿಂತೆ ನಗೆಯ ಸಂತೆ
ಯಾರಿಗೊಲ್ಲದು? ೮೮

‘ಏತಕಮ್ಮ ಬರಿದೆ ಚಿಂತೆ?
ಹೂವೆಯನಿತೆ ನನೆಯಿನಿಂತೆ,
ದುಡಿದಂತೆಯೆ ದುಡಿವೆಯಂತೆ
ಹರೆಯವಿಲ್ಲವೆ? ೯೨

‘ಊರೊಳಿರಲು ನೀರಿನೊರತೆ
ಚಿನ್ನಕೆ ನಿನಗೇನು ಕೊರತೆ?
ಹಾಲಿಗೈಸೆ ನೀರ ಬೆರತೆ
ಎಣ್ಣೆ ತುಪ್ಪಕೇಂ? ೯೬

‘ನೀರಿಗಾಯ್ತು ನೀರ ಪಾಲು,
ಉಳಿದುದಿನ್ನು ಹಾಲ ಪಾಲು;
ಗೆಯ್ದ ಗೆಯ್ಮೆ ತನ್ನ ಪಾಲು
ಕೊಳ್ಳದಿರುವುದೆ? ೧೦೦
*****
೧ ದೋಣಿಯ ಒಂದು ಭಾಗ
೨ ನತ್ತು = ಮೂಗಿನದೊಂದು ಆಭರಣ
೩ ಆಕಳ ಗಬ್ಬ
೪ ಜಲ್ಲು=ದೋಣಿಯನ್ನು ನಡಸುವ ಗಳ

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...