Home / ಕವನ / ಕವಿತೆ / ಕೇಳಿಸದ ಕರೆ

ಕೇಳಿಸದ ಕರೆ

(ಹಾಡು)

ಗಿಳಿಬಾಗಿಲ ತೆರೆಯೆಯಾ? ಹೂ
ದನಿಯಿನೆನ್ನ ಕರೆಯೆಯಾ?
ಬದಲು ಬಿದುವ ತೋರೆಯಾ? ತಾ
ರಾಕಟಾಕ್ಷ ಬೀರೆಯಾ? ೪

ಹಣತೆಹುಳವ ನಂದಿಸಿ, ಬಾ
ವಲಿಯ ತಕ್ಕಡಿಯೊಂದಿಸಿ,
ಇರುಳ ಮಳಿಗೆ ಮುಗಿಯಿತು, ನೈ
ದಿಲೆಯ ಬೀಗ ಬಿಗಿಯಿತು. ೮

ಪಡುಹಾಸಂಗಿಯೆಡೆಯಲಂ
ಗಾತ ಬಿದ್ದ ಕವಡೆಯ
ಬಗೆವಳೆ ಉಷೆ ದಾಯಮಂ
ನಿನಗುಲಿಸಲೆಲರ ಗೇಯಮಂ? ೧೨

ನಿನಗೆ ತೆತ್ತು ನೆನಸನು, ನಿ
ನ್ನಿಂದ ಕೊಳಲು ಕನಸನು,
ನಿನ್ನ ಕಣ್ಣ ಸಂತೆಗೆ ರವಿ
ಬಂದನಿದೊ ಕದಂ ತೆಗೆ! ೧೬

ನಲಿನಿಯ ನನೆಮುನಿಸಿನ, ಕೋ
ಗಿಲೆಯ ಕೊರಳ ಕನಸಿನ,
ಮುಗಿಲಿನ ೧ಮಿರುವರಿಕೆಯ ಸ
ಲ್ಲುತಿದೆ ನೋಡ ಹರಕೆಯ! ೨೦

೨ಪತಂಗದಂಚೆಗರಿಯಲಿ, ವಿ
ಹಂಗದೆಲರ ತರಿಯಲಿ,
ಅಲರ ಪರಿಸೆಯಲಿ ನಿನ್ನ ನಾ
ಪಾರ್‍ವೆನೊಸಗೆಯನುದಿನ! ೨೪

ನೆನವ ಮೊಗ್ಗೆಯಲಿ ನಿನ್ನ
೩ಸೂವರಿಪಾಸೆಯನೆನ್ನ
ಸೆರೆಬಿಡಿಸೆಯ ನೆಟ್ಟಗೆನ್ನ
ಕಾವ ಕಣ್ಣಿನ ೪ಹುಟ್ಟಿಗೆ ? ೨೮

ಎದುರು ಕನ್ನಡಿಯಿಲ್ಲದೆ
ಕಣ್ಣು ಕಣ್ಣನು ಬಲ್ಲುದೆ?
ಹೆರದೆ ಬಸಿರ ಮಗುವನು ತಾ
ಯರಿಯಳದರ ಮೊಗವನು! ೩೨

ಕಣ್ಣ ನಗೆಯ ಸೆಲೆಯೊಲು, ಬಿರಿ
ವೂಗಳ ೫ಕಾದಲೆಯೊಲು,
ಉಲಿಸಾಲದ ಬಾಸೆಯಂ ಕೇ
ಳಿಸಿ ತುಂಬೆನ್ನಾಸೆಯಂ! ೩೬

ಬದುಕು ಗಾಳಿಪಟವೆನ್ನ ಮುಂ
೬ಬೆಳೆಯದೆಳೆಯನೆಳೆವನ್ನ,
ಕಡಿಯೆ-ಕತ್ತಲ ಕಾಡಿಗೊ? ನೀ
ನಿರುವ ನೇಸರ ನಾಡಿಗೊ? ೪೦
*****
೧ ಮಿರ್ರನೆ ಓಡುವಿಕೆ
೨ ಅಂಚೆ=ಟಪ್ಪಾಲು
೩ ಸೂ ಎಂದು ಮೊರೆವ
೪ ಜೇನ ಹುಟ್ಟಿ
೫ ಕಾದಲ್ಮೆ
೬ ಯೆಳೆ=ನೂಲು

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...