ಕಣ್ಣನ್ನರೆ ಮುಚ್ಚಿಕೊ, ಹಾಯಾಗಿ ಸಡಿಲಿಸಿಕೊ ತಲೆಗೂದಲನ್ನು,
ಹಿರಿಜೀವಗಳ, ಅವರ ಹೆಮ್ಮೆಗಳ ಕುರಿತು ಕನಸು ಕಾಣು
ಅಲ್ಲಸಲ್ಲದ್ದೆಲ್ಲ ಆಡಿದ್ದಾರೆ ಜನ ಎಲ್ಲ ಕಡೆ ನಿನ್ನನ್ನು ಹಳಿದು,
ಆದರೀ ಗೀತವನು ಹಿರಿಜೀವಗಳ ಜೊತೆ, ಅವರ ಹೆಮ್ಮೆಗಳ ಜೊತೆ ಇಟ್ಟು ತೂಗು;
ಒಂದೇ ಉಸಿರಿನಲ್ಲಿ ಹೆಣೆದು ತಂದಿದ್ದೇನೆ ಈ ಗೀತವನ್ನು ನಿನಗೆಂದು,
ಆಡಿಕೊಂಡವರ ಮೊಮ್ಮಕ್ಕಳೇ ಹೇಳುವರು ಅಜ್ಜಂದಿರಾಡಿದ್ದು ಸುಳ್ಳು ಎಂದು.
*****
ಮೂಲ: ವಿಲಿಯಂ ಬಟ್ಲರ್ ಏಟ್ಸ್
ಲಕ್ಷ್ಮೀನಾರಾಯಣ ಭಟ್ಟರು ಕನ್ನಡ ಕಾವ್ಯದ ಜೀವಂತಿಕೆಯನ್ನು ಹೆಚ್ಚಿಸುತ್ತ ಆಧುನಿಕ ಕನ್ನಡ ಕಾವ್ಯವನ್ನು ಬೆಳೆಸುತ್ತ ಬಂದಿರುವ ಪ್ರಮುಖ ಕವಿಗಳಲ್ಲಿ ಒಬ್ಬರು. ಅವರ ಅನುವಾದಗಳು ಕನ್ನಡ ಕಾವ್ಯಕ್ಕೆ ಕೊಟ್ಟ ಬೆಲೆಬಾಳುವ ಉಡುಗೊರೆಗಳು ಮಾತ್ರವಾಗಿರದೆ ಸ್ವಂತಕ್ಕೆ ಪಡೆದ ರಕ್ತದಾನವೂ ಆಗಿದೆ. ಸ್ವಂತ ಪ್ರತಿಭೆ, ಶ್ರೇಷ್ಠಕವಿಗಳ ಆಪ್ತ ಅಧ್ಯಯನ ಎರಡೂ ಅವರನ್ನೂ ಎತ್ತರಕ್ಕೆ ಹತ್ತಿಸಿವೆ. ಅಧ್ಯಯನ, ಚಿಂತನೆ ಇವು ಅವರಲ್ಲಿ ಹಾಸು ಹೊಕ್ಕಾಗಿ ಒಂದನ್ನು ಮತ್ತೊಂದು ಬಲಗೊಳಿಸುತ್ತ ಬಂದಿವೆ.