Home / ಕವನ / ಕವಿತೆ / ಅಭ್ಯುದಯ

ಅಭ್ಯುದಯ

ಇಳೆಯನೆಲ್ಲ ತುಂಬಿನಿಂತು
ನಾಟ್ಯವಾಡುತಿರುವ ರೂಹೆ !
ಅಲ್ಲಿ-ಇಲ್ಲಿ ಎಲ್ಲೆಡೆಯಲಿ
ಇದ್ದ ನಿನ್ನ ನಿಲುಕದೂಹೆ !
ಮನವ ಸೆಳೆದುಕೊಳ್ಳುವ ಶಕ್ತಿ !
ನಿನ್ನ ಮಿರುಗಮಿಂಚಿದೇನು ?
ಬಣ್ಣ ಬಣ್ಣಗಳನ್ನು ತೋರ್‍ವ
ನಿನ್ನ ಸಹಜ ಸೃಷ್ಟಿಯೇನು ?
ಬಂದ ಮಾವಿನಡಿಗೆ ನಿಂತು
ನಿನ್ನ ಚೆಲುವ ನೋಡಬಹುದು
ನಿನ್ನ ಲತೆಗಳೊಡನೆ ಕೂಡಿ
ಕೇಳ್ದ ವರವ ಪಡೆಯಬಹುದು
ಅಲ್ಲಿ ಇಲ್ಲಿ ನೋಡಿದಲ್ಲಿ
ಎಸೆಯುತಿಹುದು ನಿನ್ನ ಬಳ್ಳಿ !

ನಿಜ ಮನೋಜವಿಹ ವಿಶಾಲ
ದೃಷ್ಟಿಯೊಂದು ಕೊನರುತಿಹುದು.
ಬುದ್ಧಿಗಿರುವ ಕಣ್ಣಿನಲ್ಲಿ
ಮತ್ತೆ ಮತ್ತೆ ಹೊಳೆಯುತಿಹುದು.
ಬಿದ್ದು ನಿದ್ರೆಗೈವ ದಿನ್ನೆ
ಯಮನ ಕೋಣವಾಗಬಹುದು.
ಬಳಿಗೆ ಸುಳಿವ ಮರ್‍ತ್ಯಕನ್ಯೆ
ಸ್ವರ್‍ಲಲನೆಯೆ ಆಗಬಹುದು.
ಸನಿಯಕಿರುವ ಗೆಳೆಯನೆದೆಯು
ಅಲ್ಲವೇನು ಸ್ಪರ್‍ಶಮಣಿಯು ?
ತಿಳಿದು ನೋಡೆ,- ಭುವನವಿದು
ಅಲ್ಲವೇನು ಮುದ್ದು ಕಣಿಯು !
ಅಲ್ಲಿ- ಇಲ್ಲಿ- ನೋಡಿದಲ್ಲಿ
ಎಸೆಯುತಿಹುದು ನಿನ್ನ ಬಳ್ಳಿ !

ಆದರಿಂಧ ದೃಷ್ಟಿ ಕಳೆದು
ಹುಟ್ಟುಗುರುಡ ಕಂಗಳೇಕೆ ?
ದಿವ್ಯಧಾಮವನ್ನು ಕಂಡ
ಮನವ, ಮಾಯೆ ಸೆಳೆಯಬೇಕೆ ?
ಮತ್ತೆ ನಿಶೆಯು ಕವಿದು ಹಿರಿಯ
ನೋಟವಿಲ್ಲದಾಗುತಿಹುದು
ನೋಡಿದತ್ತ ಕಾಳ್ಗತ್ತಲೆ
ಮೇರೆವರಿದು ಘೂರ್‍ಣಿಸುವದು
ಮತ್ತೆ ಕಾಮ-ಮೋಹ ಬೆರಸಿ
ಸೃಜಿಸಿದ ಪುತ್ತಳಿಯು,-ಹೆಣ್ಣು.
ಪ್ರಕೃತಿಯತುಲ ಸೌಂದರ್‍ಯ-
ಕಿರುವ ಸ್ಫುರಣ, ಬರಿಯ ಮಣ್ಣು
ಅಲ್ಲಿ-ಇಲ್ಲಿ ನೋಡಿದಲ್ಲಿ
ಕಾಳರೂಪವೆಸೆವುದಿಲ್ಲಿ !

ಮಾನವಾಭ್ಯುದಯದ ದೇವಿ !
ನಿನ್ನ ಪ್ರೀತಿಗೆಂದು ಲಲ್ಲೆ-
ಯಿಂದ ಬುವಿಯ ಹಿರಿಯಣುಗರು
ತಮ್ಮ ಬಾಳ ತೊರೆಯಲಿಲ್ಲೆ
ಆತ್ಮಯಜ್ಞವನ್ನೆ ಹೂಡಿ
ನಿನ್ನ ಹಸಿವ ಹಿಂಗಿಸಿದರು.
‘ಏಕೆ ತೆರೆಯನೆತ್ತಲೊಲ್ಲೆ?’
ಎಂದು ನಿನ್ನ ಹಂಗಿಸಿದರು
‘ಮುಂದೆ ಬರುವ ವಂಶಕಿರಲಿ
ಶಾಂತಿ ಕಾಂತಿಯಮಿತವಾಗಿ,
ತಾಯೆ ! ರಜನಿ ಮುಗಿಯಲೆ ’ಂದು
ಪ್ರಾರ್ಥಿಸಿದರು ಪ್ರಾಣ ನೀಗಿ.
ಆದರೇನು? ನೋಡಿದಲ್ಲಿ
ಕಾಳರೂಪವೆಸೆವುದಿಲ್ಲಿ !

ವ್ಯರ್‍ಥವವರ ತ್ಯಾಗ ಮತ್ತೆ
ನೀ ಕೇಳಲು ಬಲಿಯನಿಂದು !
ವ್ಯಕ್ತಿಯೊಳನುರಕ್ತಳೆನುವೆ.
ಇಡಿ ಕುಲಕೀ ಭಾಗ್ಯವೆಂದು !
ಆಡಿದಾಟವನ್ನೆ ಆಡಿ
ಬರೆದುದನ್ನೆ ಬರೆಯುತಿರುವೆ.
ಒಂದೆ ಲಿಪಿಯ ನೀ ಪುನರಪಿ
ಬರೆಯುತಳಿಸಿ ಬರೆಯುತಿರುವೆ !
ಗೆದ್ದುದನ್ನೆ ಮತ್ತೆ ಗೆಲಲು
ಮುನ್ನಡೆಯುವರೇನು ? ತಾಯೆ !
ಇಹೆಯಾ ಮಾಯೆಯಂಕಿತದಲಿ ?
ನಿನ್ನೂಳಿಗದವಳು ಮಾಯೆ !
ಆದರೇನು ? ಬೆಳಕು, ನಿಶೆಯು,-
ಇದುವೆ ನಿನ್ನ ಗಮನದಿಶೆಯು !
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...