Home / ಕವನ / ಕವಿತೆ / ಅಭ್ಯುದಯ

ಅಭ್ಯುದಯ

ಇಳೆಯನೆಲ್ಲ ತುಂಬಿನಿಂತು
ನಾಟ್ಯವಾಡುತಿರುವ ರೂಹೆ !
ಅಲ್ಲಿ-ಇಲ್ಲಿ ಎಲ್ಲೆಡೆಯಲಿ
ಇದ್ದ ನಿನ್ನ ನಿಲುಕದೂಹೆ !
ಮನವ ಸೆಳೆದುಕೊಳ್ಳುವ ಶಕ್ತಿ !
ನಿನ್ನ ಮಿರುಗಮಿಂಚಿದೇನು ?
ಬಣ್ಣ ಬಣ್ಣಗಳನ್ನು ತೋರ್‍ವ
ನಿನ್ನ ಸಹಜ ಸೃಷ್ಟಿಯೇನು ?
ಬಂದ ಮಾವಿನಡಿಗೆ ನಿಂತು
ನಿನ್ನ ಚೆಲುವ ನೋಡಬಹುದು
ನಿನ್ನ ಲತೆಗಳೊಡನೆ ಕೂಡಿ
ಕೇಳ್ದ ವರವ ಪಡೆಯಬಹುದು
ಅಲ್ಲಿ ಇಲ್ಲಿ ನೋಡಿದಲ್ಲಿ
ಎಸೆಯುತಿಹುದು ನಿನ್ನ ಬಳ್ಳಿ !

ನಿಜ ಮನೋಜವಿಹ ವಿಶಾಲ
ದೃಷ್ಟಿಯೊಂದು ಕೊನರುತಿಹುದು.
ಬುದ್ಧಿಗಿರುವ ಕಣ್ಣಿನಲ್ಲಿ
ಮತ್ತೆ ಮತ್ತೆ ಹೊಳೆಯುತಿಹುದು.
ಬಿದ್ದು ನಿದ್ರೆಗೈವ ದಿನ್ನೆ
ಯಮನ ಕೋಣವಾಗಬಹುದು.
ಬಳಿಗೆ ಸುಳಿವ ಮರ್‍ತ್ಯಕನ್ಯೆ
ಸ್ವರ್‍ಲಲನೆಯೆ ಆಗಬಹುದು.
ಸನಿಯಕಿರುವ ಗೆಳೆಯನೆದೆಯು
ಅಲ್ಲವೇನು ಸ್ಪರ್‍ಶಮಣಿಯು ?
ತಿಳಿದು ನೋಡೆ,- ಭುವನವಿದು
ಅಲ್ಲವೇನು ಮುದ್ದು ಕಣಿಯು !
ಅಲ್ಲಿ- ಇಲ್ಲಿ- ನೋಡಿದಲ್ಲಿ
ಎಸೆಯುತಿಹುದು ನಿನ್ನ ಬಳ್ಳಿ !

ಆದರಿಂಧ ದೃಷ್ಟಿ ಕಳೆದು
ಹುಟ್ಟುಗುರುಡ ಕಂಗಳೇಕೆ ?
ದಿವ್ಯಧಾಮವನ್ನು ಕಂಡ
ಮನವ, ಮಾಯೆ ಸೆಳೆಯಬೇಕೆ ?
ಮತ್ತೆ ನಿಶೆಯು ಕವಿದು ಹಿರಿಯ
ನೋಟವಿಲ್ಲದಾಗುತಿಹುದು
ನೋಡಿದತ್ತ ಕಾಳ್ಗತ್ತಲೆ
ಮೇರೆವರಿದು ಘೂರ್‍ಣಿಸುವದು
ಮತ್ತೆ ಕಾಮ-ಮೋಹ ಬೆರಸಿ
ಸೃಜಿಸಿದ ಪುತ್ತಳಿಯು,-ಹೆಣ್ಣು.
ಪ್ರಕೃತಿಯತುಲ ಸೌಂದರ್‍ಯ-
ಕಿರುವ ಸ್ಫುರಣ, ಬರಿಯ ಮಣ್ಣು
ಅಲ್ಲಿ-ಇಲ್ಲಿ ನೋಡಿದಲ್ಲಿ
ಕಾಳರೂಪವೆಸೆವುದಿಲ್ಲಿ !

ಮಾನವಾಭ್ಯುದಯದ ದೇವಿ !
ನಿನ್ನ ಪ್ರೀತಿಗೆಂದು ಲಲ್ಲೆ-
ಯಿಂದ ಬುವಿಯ ಹಿರಿಯಣುಗರು
ತಮ್ಮ ಬಾಳ ತೊರೆಯಲಿಲ್ಲೆ
ಆತ್ಮಯಜ್ಞವನ್ನೆ ಹೂಡಿ
ನಿನ್ನ ಹಸಿವ ಹಿಂಗಿಸಿದರು.
‘ಏಕೆ ತೆರೆಯನೆತ್ತಲೊಲ್ಲೆ?’
ಎಂದು ನಿನ್ನ ಹಂಗಿಸಿದರು
‘ಮುಂದೆ ಬರುವ ವಂಶಕಿರಲಿ
ಶಾಂತಿ ಕಾಂತಿಯಮಿತವಾಗಿ,
ತಾಯೆ ! ರಜನಿ ಮುಗಿಯಲೆ ’ಂದು
ಪ್ರಾರ್ಥಿಸಿದರು ಪ್ರಾಣ ನೀಗಿ.
ಆದರೇನು? ನೋಡಿದಲ್ಲಿ
ಕಾಳರೂಪವೆಸೆವುದಿಲ್ಲಿ !

ವ್ಯರ್‍ಥವವರ ತ್ಯಾಗ ಮತ್ತೆ
ನೀ ಕೇಳಲು ಬಲಿಯನಿಂದು !
ವ್ಯಕ್ತಿಯೊಳನುರಕ್ತಳೆನುವೆ.
ಇಡಿ ಕುಲಕೀ ಭಾಗ್ಯವೆಂದು !
ಆಡಿದಾಟವನ್ನೆ ಆಡಿ
ಬರೆದುದನ್ನೆ ಬರೆಯುತಿರುವೆ.
ಒಂದೆ ಲಿಪಿಯ ನೀ ಪುನರಪಿ
ಬರೆಯುತಳಿಸಿ ಬರೆಯುತಿರುವೆ !
ಗೆದ್ದುದನ್ನೆ ಮತ್ತೆ ಗೆಲಲು
ಮುನ್ನಡೆಯುವರೇನು ? ತಾಯೆ !
ಇಹೆಯಾ ಮಾಯೆಯಂಕಿತದಲಿ ?
ನಿನ್ನೂಳಿಗದವಳು ಮಾಯೆ !
ಆದರೇನು ? ಬೆಳಕು, ನಿಶೆಯು,-
ಇದುವೆ ನಿನ್ನ ಗಮನದಿಶೆಯು !
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...