ಅಭ್ಯುದಯ

ಇಳೆಯನೆಲ್ಲ ತುಂಬಿನಿಂತು
ನಾಟ್ಯವಾಡುತಿರುವ ರೂಹೆ !
ಅಲ್ಲಿ-ಇಲ್ಲಿ ಎಲ್ಲೆಡೆಯಲಿ
ಇದ್ದ ನಿನ್ನ ನಿಲುಕದೂಹೆ !
ಮನವ ಸೆಳೆದುಕೊಳ್ಳುವ ಶಕ್ತಿ !
ನಿನ್ನ ಮಿರುಗಮಿಂಚಿದೇನು ?
ಬಣ್ಣ ಬಣ್ಣಗಳನ್ನು ತೋರ್‍ವ
ನಿನ್ನ ಸಹಜ ಸೃಷ್ಟಿಯೇನು ?
ಬಂದ ಮಾವಿನಡಿಗೆ ನಿಂತು
ನಿನ್ನ ಚೆಲುವ ನೋಡಬಹುದು
ನಿನ್ನ ಲತೆಗಳೊಡನೆ ಕೂಡಿ
ಕೇಳ್ದ ವರವ ಪಡೆಯಬಹುದು
ಅಲ್ಲಿ ಇಲ್ಲಿ ನೋಡಿದಲ್ಲಿ
ಎಸೆಯುತಿಹುದು ನಿನ್ನ ಬಳ್ಳಿ !

ನಿಜ ಮನೋಜವಿಹ ವಿಶಾಲ
ದೃಷ್ಟಿಯೊಂದು ಕೊನರುತಿಹುದು.
ಬುದ್ಧಿಗಿರುವ ಕಣ್ಣಿನಲ್ಲಿ
ಮತ್ತೆ ಮತ್ತೆ ಹೊಳೆಯುತಿಹುದು.
ಬಿದ್ದು ನಿದ್ರೆಗೈವ ದಿನ್ನೆ
ಯಮನ ಕೋಣವಾಗಬಹುದು.
ಬಳಿಗೆ ಸುಳಿವ ಮರ್‍ತ್ಯಕನ್ಯೆ
ಸ್ವರ್‍ಲಲನೆಯೆ ಆಗಬಹುದು.
ಸನಿಯಕಿರುವ ಗೆಳೆಯನೆದೆಯು
ಅಲ್ಲವೇನು ಸ್ಪರ್‍ಶಮಣಿಯು ?
ತಿಳಿದು ನೋಡೆ,- ಭುವನವಿದು
ಅಲ್ಲವೇನು ಮುದ್ದು ಕಣಿಯು !
ಅಲ್ಲಿ- ಇಲ್ಲಿ- ನೋಡಿದಲ್ಲಿ
ಎಸೆಯುತಿಹುದು ನಿನ್ನ ಬಳ್ಳಿ !

ಆದರಿಂಧ ದೃಷ್ಟಿ ಕಳೆದು
ಹುಟ್ಟುಗುರುಡ ಕಂಗಳೇಕೆ ?
ದಿವ್ಯಧಾಮವನ್ನು ಕಂಡ
ಮನವ, ಮಾಯೆ ಸೆಳೆಯಬೇಕೆ ?
ಮತ್ತೆ ನಿಶೆಯು ಕವಿದು ಹಿರಿಯ
ನೋಟವಿಲ್ಲದಾಗುತಿಹುದು
ನೋಡಿದತ್ತ ಕಾಳ್ಗತ್ತಲೆ
ಮೇರೆವರಿದು ಘೂರ್‍ಣಿಸುವದು
ಮತ್ತೆ ಕಾಮ-ಮೋಹ ಬೆರಸಿ
ಸೃಜಿಸಿದ ಪುತ್ತಳಿಯು,-ಹೆಣ್ಣು.
ಪ್ರಕೃತಿಯತುಲ ಸೌಂದರ್‍ಯ-
ಕಿರುವ ಸ್ಫುರಣ, ಬರಿಯ ಮಣ್ಣು
ಅಲ್ಲಿ-ಇಲ್ಲಿ ನೋಡಿದಲ್ಲಿ
ಕಾಳರೂಪವೆಸೆವುದಿಲ್ಲಿ !

ಮಾನವಾಭ್ಯುದಯದ ದೇವಿ !
ನಿನ್ನ ಪ್ರೀತಿಗೆಂದು ಲಲ್ಲೆ-
ಯಿಂದ ಬುವಿಯ ಹಿರಿಯಣುಗರು
ತಮ್ಮ ಬಾಳ ತೊರೆಯಲಿಲ್ಲೆ
ಆತ್ಮಯಜ್ಞವನ್ನೆ ಹೂಡಿ
ನಿನ್ನ ಹಸಿವ ಹಿಂಗಿಸಿದರು.
‘ಏಕೆ ತೆರೆಯನೆತ್ತಲೊಲ್ಲೆ?’
ಎಂದು ನಿನ್ನ ಹಂಗಿಸಿದರು
‘ಮುಂದೆ ಬರುವ ವಂಶಕಿರಲಿ
ಶಾಂತಿ ಕಾಂತಿಯಮಿತವಾಗಿ,
ತಾಯೆ ! ರಜನಿ ಮುಗಿಯಲೆ ’ಂದು
ಪ್ರಾರ್ಥಿಸಿದರು ಪ್ರಾಣ ನೀಗಿ.
ಆದರೇನು? ನೋಡಿದಲ್ಲಿ
ಕಾಳರೂಪವೆಸೆವುದಿಲ್ಲಿ !

ವ್ಯರ್‍ಥವವರ ತ್ಯಾಗ ಮತ್ತೆ
ನೀ ಕೇಳಲು ಬಲಿಯನಿಂದು !
ವ್ಯಕ್ತಿಯೊಳನುರಕ್ತಳೆನುವೆ.
ಇಡಿ ಕುಲಕೀ ಭಾಗ್ಯವೆಂದು !
ಆಡಿದಾಟವನ್ನೆ ಆಡಿ
ಬರೆದುದನ್ನೆ ಬರೆಯುತಿರುವೆ.
ಒಂದೆ ಲಿಪಿಯ ನೀ ಪುನರಪಿ
ಬರೆಯುತಳಿಸಿ ಬರೆಯುತಿರುವೆ !
ಗೆದ್ದುದನ್ನೆ ಮತ್ತೆ ಗೆಲಲು
ಮುನ್ನಡೆಯುವರೇನು ? ತಾಯೆ !
ಇಹೆಯಾ ಮಾಯೆಯಂಕಿತದಲಿ ?
ನಿನ್ನೂಳಿಗದವಳು ಮಾಯೆ !
ಆದರೇನು ? ಬೆಳಕು, ನಿಶೆಯು,-
ಇದುವೆ ನಿನ್ನ ಗಮನದಿಶೆಯು !
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಶ್ರಾವಣಸಮೀರ!
Next post ಏಡಿರಾಜ

ಸಣ್ಣ ಕತೆ

  • ಕಲ್ಪನಾ

    ಚಿತ್ರ: ಟಾಮ್ ಬಿ ಇದು ಇಪ್ಪತ್ತು ವರ್ಷಗಳ ಹಿಂದಿನ ಕಥೆ! ಮಾತನಾಡುವ ಸಿನಿಮಾ ಪ್ರಪಂಚ ಅದೇ ಆಗ ದಕ್ಷಿಣ ಭಾರತದಲ್ಲಿ ತಲೆಯೆತ್ತಿದ್ದಿತು! ಸಿನಿಮಾದಲ್ಲಿ ಪಾತ್ರವಹಿಸುವ ನಟಿನಟಿಯರನ್ನು ಅಚ್ಚರಿಯ… Read more…

  • ಹೃದಯದ ತೀರ್ಪು

    ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…

  • ಕಳ್ಳನ ಹೃದಯಸ್ಪಂದನ

    ಅದು ಅಪರಾತ್ರಿ ೨ ಘಂಟೆ ಸಮಯ. ಎಲ್ಲರೂ ಗಾಢ ನಿದ್ರೆಯಲ್ಲಿದ್ದರು. ಊರಿನಿಂದ ಸ್ವಲ್ಪ ದೂರವಾಗಿದ್ದ ಕಲ್ಯಾಣ ನಗರದ ಬಡಾವಣೆ, ಅಷ್ಟಾಗಿ ಹತ್ತಿರ ಹತ್ತಿರವಲ್ಲದ ಮನೆಗಳು, ಒಂದು ವರ್ಷದ… Read more…

  • ಮಲ್ಲೇಶಿಯ ನಲ್ಲೆಯರು

    ಹೇಮರಡ್ಡಿ ಪ್ರಭುಗಳು ಒಂದು ಊರಿನ ದೇಸಾಯರು. ಆ ಗ್ರಾಮದ ಉತ್ಪನ್ನವು ಆರೇಳು ಸಾವಿರ ರೂಪಾಯಿ ಇರುವದಲ್ಲದೆ ದೇಸಾಯರಿಗೆ ತೋಟ ಪಟ್ಟಿ ಮನೆಯ ಒಕ್ಕಲತನಗಳಿಂದಾದರೂ ಪ್ರಾಪ್ತಿಯು ಚನ್ನಾಗಿತ್ತು. ಅವರೊಂದು… Read more…

  • ಅಜ್ಜಿಯ ಪ್ರೇಮ

    ಎರಡನೆಯ ಹೆರಿಗೆಯಲ್ಲಿ ಅಸು ನೀಗಿದ ಮಗಳು ಕಮಲಳನ್ನು ಕಳಕೊಂಡ ತೊಂಬತ್ತು ವರ್ಷದ ಜಯಮ್ಮನಿಗೆ ಸಹಿಸಲಾಗದ ಸಂಕಟವಾಗಿತ್ತು. ಹೆಣ್ಣು ಮಗುವಿಗೆ ಜನ್ಮವಿತ್ತು ತನ್ನ ಇಹದ ಯಾತ್ರೆಯನ್ನು ಮುಗಿಸಿ ಹೋದ… Read more…