Home / ಕವನ / ಕವಿತೆ / ಅಭ್ಯುದಯ

ಅಭ್ಯುದಯ

ಇಳೆಯನೆಲ್ಲ ತುಂಬಿನಿಂತು
ನಾಟ್ಯವಾಡುತಿರುವ ರೂಹೆ !
ಅಲ್ಲಿ-ಇಲ್ಲಿ ಎಲ್ಲೆಡೆಯಲಿ
ಇದ್ದ ನಿನ್ನ ನಿಲುಕದೂಹೆ !
ಮನವ ಸೆಳೆದುಕೊಳ್ಳುವ ಶಕ್ತಿ !
ನಿನ್ನ ಮಿರುಗಮಿಂಚಿದೇನು ?
ಬಣ್ಣ ಬಣ್ಣಗಳನ್ನು ತೋರ್‍ವ
ನಿನ್ನ ಸಹಜ ಸೃಷ್ಟಿಯೇನು ?
ಬಂದ ಮಾವಿನಡಿಗೆ ನಿಂತು
ನಿನ್ನ ಚೆಲುವ ನೋಡಬಹುದು
ನಿನ್ನ ಲತೆಗಳೊಡನೆ ಕೂಡಿ
ಕೇಳ್ದ ವರವ ಪಡೆಯಬಹುದು
ಅಲ್ಲಿ ಇಲ್ಲಿ ನೋಡಿದಲ್ಲಿ
ಎಸೆಯುತಿಹುದು ನಿನ್ನ ಬಳ್ಳಿ !

ನಿಜ ಮನೋಜವಿಹ ವಿಶಾಲ
ದೃಷ್ಟಿಯೊಂದು ಕೊನರುತಿಹುದು.
ಬುದ್ಧಿಗಿರುವ ಕಣ್ಣಿನಲ್ಲಿ
ಮತ್ತೆ ಮತ್ತೆ ಹೊಳೆಯುತಿಹುದು.
ಬಿದ್ದು ನಿದ್ರೆಗೈವ ದಿನ್ನೆ
ಯಮನ ಕೋಣವಾಗಬಹುದು.
ಬಳಿಗೆ ಸುಳಿವ ಮರ್‍ತ್ಯಕನ್ಯೆ
ಸ್ವರ್‍ಲಲನೆಯೆ ಆಗಬಹುದು.
ಸನಿಯಕಿರುವ ಗೆಳೆಯನೆದೆಯು
ಅಲ್ಲವೇನು ಸ್ಪರ್‍ಶಮಣಿಯು ?
ತಿಳಿದು ನೋಡೆ,- ಭುವನವಿದು
ಅಲ್ಲವೇನು ಮುದ್ದು ಕಣಿಯು !
ಅಲ್ಲಿ- ಇಲ್ಲಿ- ನೋಡಿದಲ್ಲಿ
ಎಸೆಯುತಿಹುದು ನಿನ್ನ ಬಳ್ಳಿ !

ಆದರಿಂಧ ದೃಷ್ಟಿ ಕಳೆದು
ಹುಟ್ಟುಗುರುಡ ಕಂಗಳೇಕೆ ?
ದಿವ್ಯಧಾಮವನ್ನು ಕಂಡ
ಮನವ, ಮಾಯೆ ಸೆಳೆಯಬೇಕೆ ?
ಮತ್ತೆ ನಿಶೆಯು ಕವಿದು ಹಿರಿಯ
ನೋಟವಿಲ್ಲದಾಗುತಿಹುದು
ನೋಡಿದತ್ತ ಕಾಳ್ಗತ್ತಲೆ
ಮೇರೆವರಿದು ಘೂರ್‍ಣಿಸುವದು
ಮತ್ತೆ ಕಾಮ-ಮೋಹ ಬೆರಸಿ
ಸೃಜಿಸಿದ ಪುತ್ತಳಿಯು,-ಹೆಣ್ಣು.
ಪ್ರಕೃತಿಯತುಲ ಸೌಂದರ್‍ಯ-
ಕಿರುವ ಸ್ಫುರಣ, ಬರಿಯ ಮಣ್ಣು
ಅಲ್ಲಿ-ಇಲ್ಲಿ ನೋಡಿದಲ್ಲಿ
ಕಾಳರೂಪವೆಸೆವುದಿಲ್ಲಿ !

ಮಾನವಾಭ್ಯುದಯದ ದೇವಿ !
ನಿನ್ನ ಪ್ರೀತಿಗೆಂದು ಲಲ್ಲೆ-
ಯಿಂದ ಬುವಿಯ ಹಿರಿಯಣುಗರು
ತಮ್ಮ ಬಾಳ ತೊರೆಯಲಿಲ್ಲೆ
ಆತ್ಮಯಜ್ಞವನ್ನೆ ಹೂಡಿ
ನಿನ್ನ ಹಸಿವ ಹಿಂಗಿಸಿದರು.
‘ಏಕೆ ತೆರೆಯನೆತ್ತಲೊಲ್ಲೆ?’
ಎಂದು ನಿನ್ನ ಹಂಗಿಸಿದರು
‘ಮುಂದೆ ಬರುವ ವಂಶಕಿರಲಿ
ಶಾಂತಿ ಕಾಂತಿಯಮಿತವಾಗಿ,
ತಾಯೆ ! ರಜನಿ ಮುಗಿಯಲೆ ’ಂದು
ಪ್ರಾರ್ಥಿಸಿದರು ಪ್ರಾಣ ನೀಗಿ.
ಆದರೇನು? ನೋಡಿದಲ್ಲಿ
ಕಾಳರೂಪವೆಸೆವುದಿಲ್ಲಿ !

ವ್ಯರ್‍ಥವವರ ತ್ಯಾಗ ಮತ್ತೆ
ನೀ ಕೇಳಲು ಬಲಿಯನಿಂದು !
ವ್ಯಕ್ತಿಯೊಳನುರಕ್ತಳೆನುವೆ.
ಇಡಿ ಕುಲಕೀ ಭಾಗ್ಯವೆಂದು !
ಆಡಿದಾಟವನ್ನೆ ಆಡಿ
ಬರೆದುದನ್ನೆ ಬರೆಯುತಿರುವೆ.
ಒಂದೆ ಲಿಪಿಯ ನೀ ಪುನರಪಿ
ಬರೆಯುತಳಿಸಿ ಬರೆಯುತಿರುವೆ !
ಗೆದ್ದುದನ್ನೆ ಮತ್ತೆ ಗೆಲಲು
ಮುನ್ನಡೆಯುವರೇನು ? ತಾಯೆ !
ಇಹೆಯಾ ಮಾಯೆಯಂಕಿತದಲಿ ?
ನಿನ್ನೂಳಿಗದವಳು ಮಾಯೆ !
ಆದರೇನು ? ಬೆಳಕು, ನಿಶೆಯು,-
ಇದುವೆ ನಿನ್ನ ಗಮನದಿಶೆಯು !
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...