Home / ಕವನ / ಅನುವಾದ / ಇನ್ನಿಸ್ ಫ್ರೀ ದ್ವೀಪ

ಇನ್ನಿಸ್ ಫ್ರೀ ದ್ವೀಪ

ಇದೋ ಎದ್ದೆ ನಾನೀಗಲೆ ಹೋಗುವೆ ಇನ್ನಿಸ್ ಫ್ರೀ ದ್ವೀಪಕ್ಕೆ
ಕಟ್ಟುವೆನಲ್ಲಿ ಮಣ್ಣಿನದೊಂದು ಪುಟ್ಟ ಮನೆಯನ್ನು ವಾಸಕ್ಕೆ;
ಚಪ್ಪರದವರೆಯ ಬಳ್ಳಿಮಾಡಗಳ, ಜೇನುಗೂಡಗಳ ಹಬ್ಬಿಸುವೆ
ತುಂಬಿಯ ಗುಂಜಾರವದಲಿ ತುಂಬಿದ ಬಯಲಲ್ಲೊಬ್ಬನೆ ವಾಸಿಸುವೆ.

ಶಾಂತಿ ಸಿಕ್ಕುವುದು ಅಂಥಲ್ಲೇ, ಅದು ತುಂತುರು ಹನಿಯುವ ಬಾಳಿನಲೇ
ನಸುಕನು ಕವಿದ ಮುಸುಕಿನಿಂದ ಜೀರುಂಡೆಯ ಜಿರ್ರನೆ ದನಿವರೆಗೆ;
ಮಬ್ಬು ಮಿನುಗುವುದು ನಟ್ಟಿರುಳು ಮಧ್ಯಾಹ್ನಕೆ ನೇರಳೆ ಹೊಳಪಲ್ಲಿ
ತುಂಬಿ ನಿಲ್ಲುವುವು ಸಂಜೆಗಳು ಕೋಗಿಲೆಗಳ ರೆಕ್ಕೆಯ ಬಡಿತದಲಿ.

ಹೋಗುವೆನೀಗಲೆ ಅಲ್ಲಿಗೆಂದು, ಯಾಕೆಂದರೆ ಹಗಲಿರುಳೂ ಅಲ್ಲಿ
ಸರೋವರದ ತೆರೆ ಗುಣುಗುಣಿಸುವುವು ಸವರುತ ದಡವನು ಅಂಚಿನಲಿ;
ನಿಲ್ಲುವೆ ದಾರಿಯ ನಡುವೆಯೆ, ಇಲ್ಲವೆ ಪಾದಚಾರಿಗಳ ಹಾದಿಯಲಿ,
ಹೃದಯದಿಂದಲೇ ಎದ್ದು ಬರುವ ಆ ಸದ್ದನು ಆಲಿಸಿ ಕೇಳುತಲಿ.
*****
ಮೂಲ: ವಿಲಿಯಂ ಬಟ್ಲರ್ ಏಟ್ಸ್

ಟಿಪ್ಪಣಿ:
ಏಟ್ಸ್ ತನ್ನ ಕಾವ್ಯಜೀವನದ ಆರಂಭದ ದಿನಗಳಲ್ಲಿ ಬರೆದ ಭಾವಗೀತಾತ್ಮಕವಾದ ಕವಿತೆ. ರೊಮ್ಯಾಂಟಿಕ್ ಮನೋಧರ್‍ಮವನ್ನು ಬಿಂಬಿಸುವ ಈ ಕವನ ಏಟ್ಸ್ ಮುಂದೆ ಬರೆದ ಪ್ರಸಿದ್ಧ ಕವನಗಳ ಶೈಲಿ ರುಚಿಗಳಿಗೆ ಹೊರತಾದದ್ದು. ಆದರೂ ಕವಿಗೆ ಮುಜುಗರ ತರುವಷ್ಟು ಜನಪ್ರಿಯವಾದದ್ದು. ‘ನನ್ನದೇ ಆದ ಗೀತಲಯ ಕೊಂಚವಾದರೂ ಇರುವ ನನ್ನ ಮೊದಲ ಭಾವಗೀತೆ’ ಎಂದು ಏಟ್ಸ್ ಅದರ ಬಗ್ಗೆ ಹೇಳುತ್ತಾನೆ. ಕವಿಯ ಸ್ವಂತ ಪದ್ಯಗಳ ವಾಚನದ ಧ್ವನಿಸುರುಳಿಯೊಂದರಲ್ಲಿ ಈ ಪದ್ಯವೂ ಸೇರಿದೆ.

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...